Blog Archive

Saturday, September 5, 2009

ಕನ್ನಡ ಪ್ರಭದ ಪತ್ರಕರ್ತ ಹೃಷಿಕೇಶ್ ಗೆ ಪ.ಗೋ. ಪ್ರಶಸ್ತಿ: ಪಾಲೆಮಾರ್ ರಿಂದ ಪ್ರದಾನ











ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನೀಡಲಾಗುವ ೨೦೦೮ರ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಕನ್ನಡ ಪ್ರಭದ ಉಜಿರೆ ವರದಿಗಾರ ಹೃಷಿಕೇಷ್ ಧರ್ಮಸ್ಥಳ ಅವರಿಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ ೨೫ ಆಗಸ್ಟ್ ೨೦೦೯ರಂದು ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರು ಪ್ರದಾನ ಮಾಡಿದರು.

ಹಿರಿಯ ಪತ್ರಕರ್ತ ಯು.ನರಸಿಂಹರಾವ್ ಅವರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಸಚಿವ ಕೃಷ್ಣ ಪಾಲೇಮಾರ್ ಸಭೆಯನ್ನು ಉದ್ದೇಶಿಸಿ ಸಚಿವ ಪಾಲೇಮಾರ್ ಅವರು ಗ್ರಾಮೀಣ ಪತ್ರಿಕೋದ್ಯಮದ ಕೊಡುಗೆ ಕುರಿತು ಮಾತನಾಡಿದರು. ಹಿಂದಿನ ಪತ್ರಕರ್ತರಂತೆ ಇಂದಿನ ಯುವ ಪತ್ರಕರ್ತರೂ ನಿಷ್ಠುರವಾಗಿದ್ದು ಗ್ರಾಮೀಣ ಸಮಸ್ಯೆಗಳನ್ನು ಬೆಳಕಿಗೆ ತರಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಗಳಲ್ಲಿ ಆಗುವಂತಹ ಸಮಸ್ಯೆಗಳನ್ನು ವರದಿಗಾರರು ಗಮನಕ್ಕೆ ತಂದಾಗ ಸರ್ಕಾರಕ್ಕೂ ತಿಳಿಯುತ್ತದೆ, ಆ ಮೂಲಕ ಅವುಗಳನ್ನು ಬಗೆಹರಿಸಬಹುದು ಹಾಗೂ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಮಹತ್ವವನ್ನು ಹೆಚ್ಚಿಸುವಂತೆ ಕರ್ತವ್ಯ ನಿರ್ವಹಿಸಲು ಕರೆ ನೀಡಿದ ಅವರು ನಿಷ್ಪಕ್ಷಪಾತ ಮತ್ತು ನಿಷ್ಠುರ ಪತ್ರಿಕೋದ್ಯಮದಿಂದ ಸಮಾಜಕ್ಕೆ ಲಾಭ ಎಂದರು.

ಹಿರಿಯ ಪತ್ರಕರ್ತ ನರಸಿಂಹ ರಾವ್ ಅವರು ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಅವರ ಬಗ್ಗೆ ಹಾಗೂ ಸದರಿ ಪ್ರಶಸ್ತಿಯ ಬಗ್ಗೆ ಮಾಹಿತಿ ನೀಡಿದರು.

ದಿವಂಗತರಾಗಿರುವ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ನೆನಪಿನಲ್ಲಿ ನೀಡುವ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಕನ್ನಡಪ್ರಭದಲ್ಲಿ ಅಕ್ಟೋಬರ್ ೩, ೨೦೦೮ ರಂದು ಪ್ರಕಟಗೊಂಡ ಹೃಷಿಕೇಷ್ ಧರ್ಮಸ್ಥಳ ಅವರ "ಬಾರದ ಸವಲತ್ತಿಗೆ ಕಾದಿದೆ ಜನತೆ" ಎಂಬ ವರದಿ ಪ್ರಶಸ್ತಿ ಗಳಿಸಿದೆ. ಗ್ರಾಮೀಣಮಟ್ಟದಲ್ಲಿ ಇರುವ ಅನೇಕ ಸಮಸ್ಯೆಗಳು, ಅಭಿವೃದ್ಧಿಗೆ ಗ್ರಾಮೀಣ ಭಾಗದಲ್ಲಿರುವ ಮಾದರಿಗಳು ಇತ್ಯಾದಿಗಳ ಬಗ್ಗೆ ಬರೆಯಲಾದ ಅತ್ಯುತ್ತಮ ವರದಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪ.ಗೋ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆ ಸುವ ನಿರ್ಣಯವನ್ನು ಹಮ್ಮಿಕೊಂಡಿದೆ. ಈ ವರ್ಷ ಮೊದಲ ಬಾರಿಗೆ ಪತ್ರಕರ್ತರ ಸಂಘ ಪ್ರಶಸ್ತಿ ನೀಡುತ್ತಿದೆ.೫ ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ.

೨೦೦೪ರಿಂದಲೇ ಪ್ರಶಸ್ತಿ ಮೊತ್ತವನ್ನು ಪ್ರಾಯೋಜಿಸುವ ಮೂಲಕ ಪ.ಗೋ ಟ್ರಸ್ಟ್ ಗೆ ನೆರವಾಗುತ್ತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಈ ಬಾರಿ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವಂತೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ ಪ್ರಶಸ್ತಿ ಮೊತ್ತ ಕಡಮೆಯಾಗಿದ್ದು, ಅದನ್ನು ಏರಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೆಗ್ಗಡೆಯವರು ಪ್ರಶಸ್ತಿ ಮೊತ್ತವನ್ನು ೫ ಸಾವಿರ ರುಪಾಯಿಗೆ ಏರಿಕೆ ಮಾಡಿರುತ್ತಾರೆ.

ಕನ್ನಡ ಪ್ರಭ ಪತ್ರಿಕೆಯ ಮಡಿಕೇರಿ ಜಿಲ್ಲಾ ವರದಿಗಾರರಾದ ಶ್ರೀ. ಎಚ್. ಟಿ. ಅನಿಲ್ ಅವರು ೧೯೯೯ರಲ್ಲಿ ಪ್ರಾರಂಭಿಸಿದ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯ ಮೊದಲ ವಿಜೇತರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್‌.ಟಿ ಬಾಳೆಪುಣಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಹರೀಶ್ ರೈ, ಸಂಘದ ಖಜಾಂಚಿ ಯೋಗೀಶ ಹೊಳ್ಳ ಪಾಲ್ಗೊಂಡರು. ಪ.ಗೋ ಕುಟುಂಬದವರು, ನರಸಿಂಹರಾವ್ ಕುಟುಂಬಸ್ಥರೂ ಕಾರ್ಯಕ್ರಮದಲ್ಲಿ ಹಾಜರಿದ್ದರು

Thursday, August 13, 2009

'ಕನ್ನಡ ಪ್ರಭ' ಉಜಿರೆ ವರದಿಗಾರ ಹೃಷಿಕೇಶ ಧರ್ಮಸ್ಥಳ ಇವರಿಗೆ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನೀಡ ಲಾಗುವ ೨೦೦೮ರ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ `ಕನ್ನಡ ಪ್ರಭ' ದ.ಕ. ಜಿಲ್ಲೆಯ ಉಜಿರೆ ವರದಿಗಾರ ಹೃಷಿಕೇಶ ಧರ್ಮಸ್ಥಳ ಇವರಿಗೆ ಲಭಿಸಿದೆ. ೨೦೦೮ ಅಕ್ಟೋಬರ್ ೩ `ಕನ್ನಡ ಪ್ರಭ'ದಲ್ಲಿ ಪ್ರಕಟವಾದ `ಬಾರದ ಸವಲತ್ತಿಗೆ ಕಾದಿದೆ ಜನತೆ' ವರದಿಗೆ ಈ ಪ್ರಶಸ್ತಿ ಲಭಿಸಿದೆ.

೫ ಸಾವಿರ ರು. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿ ದೆ. ಪ್ರಶಸ್ತಿ ಪ್ರದಾನ ಶೀಘ್ರವೇ ಮಂಗಳೂರಿನಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ ಬಾಳೆಪುಣಿ ತಿಳಿಸಿದ್ದಾರೆ.

Thursday, July 2, 2009

’ನೋ ಚೇಂಜ್ ಕಥೆಗಳು’- ೨೪... ನೋವಾದರೆ ಬೇರೆಯವರಿಗೆ ಹೇಳಿ !
















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ನಾಲ್ಕನೇ ಅಂಕಣ ಹಾಗೂ ಈ ಲೇಖನ ಮಾಲಿಕೆಯ ಕೊನೆಯ ಅಂಕಣ.


ನೋವಾದರೆ ಬೇರೆಯವರಿಗೆ ಹೇಳಿ !

ಕಳೆದ ಶನಿವಾರ. ಬಿಡುವಾಗಿದ್ದೆ. ಬೆಳಗಿನ ಹೊತ್ತೇ ತ್ರಿಪಾಠಿಯವರು ಬಂದು ಹರಟೆ ಹೊಡೆಯಲು ತೊಡಗಿದ್ದು, ಬಿಡುವಿಗೆ ಹೆಚ್ಚಿನ ಗೆಲುವು ಒದಗಿಸಿತ್ತು.

ನಮ್ಮ ಹರಟೆಗೆ ವಿಷಯ ಹುಡುಕುವ ಪ್ರಮೇಯ ಯಾವಾಗಲೂ ಇರುವುದಿಲ್ಲ. ವಿಷಯ ಯಾವುದೂ ಆಗುತ್ತದೆ. ಮಾತು ಆಡುತ್ತಾ ಆಡುತ್ತಾ, ವಿಷಯಕ್ಕೆ ಕಾವೇರಿದಾಗ ನಮ್ಮ ಇಬ್ಬರ ಧ್ವನಿಗಳೂ ಏರುತ್ತವೆ. ಆಗ ಒಂದೋ ನಮ್ಮ ಗೃಹಮಂತ್ರಿಯವರು, ಅಲ್ಲವಾದರೆ ಶ್ರೀಮತಿ ತ್ರಿಪಾಠಿಯವರು ನಾವಿದ್ದಲ್ಲಿಗೆ ಬರುತ್ತಾರೆ. “ಏನು ನಿಮ್ಮ ಗಲಾಟೆ ? ಆಚೆ ಮನೆ ಮಕ್ಕಳ ಓದಿಗೆ ತೊಂದರೆಯಾಗ್ತಾ ಇದೆ” ಅಂತ ದಬಾಯಿಸ್ತಾರೆ. (ಇಬ್ಬರ ದಬಾವಣೆಯೂ ಒಂದೇ ರೀತಿ ಇರುವುದೊಂದು ಆಶ್ಚರ್ಯ !)

ಆ ಕೂಡಲೆ ನಾವು ನಮ್ಮ ನಮ್ಮ ಬೊಬ್ಬೆ ಕಡಿಮೆ ಮಾಡುತ್ತೇವೆ. ಅವರೂ ಸುಮ್ಮನಾಗುತ್ತಾರೆ. ತಮ್ಮ ಕೆಲಸದ ಮೇಲೆ ಹೊರಟು ಹೋಗುತ್ತಾರೆ. ಪುನಃ ಸ್ವಲ್ಪ ಹೊತ್ತಿನಲ್ಲೇ, ನಮ್ಮ ಚರ್ಚೆ ಪಿಸುಮಾತಿನಲ್ಲಿ ಆರಂಭವಾಗಿ ಕ್ರಮೇಣ ಕಾವೇರುತ್ತದೆ. ಗೃಹಮಂತ್ರಿಣಿಯವರ ಪೈಕಿ ಯಾರಾದರೂ ಒಬ್ಬರು ಮತ್ತೆ ಬಂದು ಜೋರು ಮಾಡುವುದೂ ನಡೆಯುತ್ತದೆ. ಎಲ್ಲರಿಗೂ ಹಸಿವಾಗುವವರೆಗೂ. ಕಳೆದ ಶನಿವಾರವೂ ಹಾಗೇ ಆಗಬೇಕಿತ್ತು. ಆಗಲಿಲ್ಲ.

ಶ್ರೀಮತಿ ತ್ರಿಪಾಠಿಯವರು “ಏನು ನಿಮ್ಮ-” ಎನ್ನುವಾಗಲೇ - ಶ್ರೀ ತ್ರಿಪಾಠಿ “ನೋಡಿ, ನೋಡಿ, ಸುಮ್ಮನೆ ಜೋರು ಮಾಡುತ್ತಾ ಇದ್ದಾಳೆ -ಒಳ್ಳೆ ಗ್ಯಾಸ್ ಅಂಡೆ ಅಂಗಡಿಯವರ ಹಾಗೆ” ಎಂದೇ ಬಿಟ್ಟರು. “ಇವಳಿಗೆ ಈಚೆಗೆ ಬಂದ ಹೊಸ ಅಭ್ಯಾಸ ಇದು” ಎಂದೂ ಸೇರಿಸಿದರು.

ಕೂಡಲೆ ಶ್ರೀಮತಿಯವರ ಮುಖ ಕೆಂಪಾಯಿತು. ಅವರಿಬ್ಬರೂ ಮನೆಯಲ್ಲಿ ಮಾಡಿಕೊಳ್ಳುವ ಜಗಳ ಇದ್ದರೆ, ಅದು ನಮ್ಮಲ್ಲೇ ಆಗಿ ಮುಗಿಯುವುದು ಬೇಡ ಅಂತ “ತ್ರಿಪಾಠಿಜಿ! ಅದೇನು ಇದ್ದಕ್ಕಿದ್ದ ಹಾಗೆ ಗ್ಯಾಸ್ ಅಂಡೆ ಅಂಗಡಿ ಸುದ್ದಿ ಬಂತು ? ಭಾಬಿಯ ಕೋಪಕ್ಕೂ ಗ್ಯಾಸ್ ಅಂಗಡಿಗೂ ಏನು ಸಂಬಂಧ ?” ಎಂದು ಕೇಳಿದೆ.

ಸಿಟ್ಟಿನಲ್ಲಿದ್ದ ತಮ್ಮ ಶ್ರೀಮತಿ, ನಮ್ಮಲ್ಲಿಂದ ಹೊರಟು ಹೋಗುವವರೆಗೂ ಬಾಯಿಮುಚ್ಚಿ ಕುಳಿತಿದ್ದ ಆ ಮಹಾನುಭಾವ “ಹೇಗಾದರೂ ಮಾಡಿ, ಗ್ಯಾಸ್‍ನವರ ಪ್ರಸ್ತಾಪ ನಿಮ್ಮ ಹತ್ತಿರ ಎತ್ತಬೇಕೂಂತ ಇತ್ತು. ಬೇರೆ ಸಂದರ್ಭ ಸಿಕ್ಕಿರಲಿಲ್ಲ. ಅವಳ ದಬಾವಣೆ, ಅವಕಾಶ ಒದಗಿಸಿತು” ಎಂದು ಹೇಳಿ ಸತ್ಯಸಂಧರಾದರು.

ಶ್ರೀಮಾನ್‍ ಜೀ, ನೀವು ಅನುಭವಿಸಿದ ನೋವನ್ನು ಬೇರೆಯವರೊಡನೆ ಹಂಚಿಕೊಂಡರೆ ಮನಸ್ಸಿನ ಭಾರ ಇಳಿಯುತ್ತದೆ, ಮನಸ್ಸಿಗೆ ಹಿತವೂ ಆಗುತ್ತದೆ ಎನ್ನುತ್ತಾರೆ ಅನುಭವಿಗಳು. ಆ ಥಿಯರಿಯ ಸತ್ಯಪರೀಕ್ಷೆ ಮಾಡೋಣ. ಹೇಳಿ ನಿಮ್ಮ ಕಥೆ -ಎಂದೆ.

ನಮ್ಮ ಮನೆಗೆ ಗ್ಯಾಸ್ ಸಪ್ಲೈ ಮಾಡುವ ಅಂಗಡಿಗೆ ನಿನ್ನೆ ಹೋಗಿದ್ದೆ. ಹದಿನೇಳು ದಿವಸ ಹಿಂದೆ ಬುಕ್ ಮಾಡಿದ್ದ ಗ್ಯಾಸ್, ಯಾವಾಗ ಸಿಗ್ತದೆ ಅಂತ ಕೇಳಿದ್ದಕ್ಕೆ, ಆ ಮನುಷ್ಯ ನನಗೆ ಸೀದಾ ಉತ್ತರ ಕೊಡಲಿಲ್ಲ. ಅಲ್ಲಿದ್ದ ಎಲ್ಲರೆದುರಿನಲ್ಲೇ ದಬಾಯಿಸಿ ಬಿಟ್ಟ. ಬಹಳ ಬೇಜಾರಾಯಿತು. ಬೇಜಾರಿನಲ್ಲೇ ಮನೆಗೆ ಬಂದೆ. ಬಂದ ಕೂಡಲೆ “ಗ್ಯಾಸ್ ಯಾವಾಗ ಬರ್‍ತದೆ ?” ಅಂತ ಇವಳ ವಿಚಾರಣೆಯ ಜೋರೂ ನಡೆಯಿತು. ಬೇಜಾರು ಇನ್ನೂ ಹೆಚ್ಚಾಯಿತು.........(ತ್ರಿಪಾಠಿಯವರ ಸ್ವರ ನಡುಗತೊಡಗಿತೆ?)

ಆ ಕೂಡಲೆ, ಸಮಾಧಾನದ ಪೀಠಿಕೆ ನನ್ನಿಂದ ಆಗದಿದ್ದರೆ, ಮನುಷ್ಯ ಅತ್ತೇ ಬಿಡಬಹುದು ಎಂಬ ಭಯವಾಯಿತು. ಅದಕ್ಕೆ “ತ್ರಿಪಾಠಿಯವರೇ, ಇದೊಂದು ಸರ್ವಸಾಮಾನ್ಯ ಸಮಸ್ಯೆ. ಅಂಥಾದ್ದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಶಕ್ತಿ ನಮ್ಮಂಥ ಸಣ್ಣ ಮನುಷ್ಯರಿಗೆ ಇಲ್ಲ.

ನಮಗೆ ಅತೀ ಅಗತ್ಯವಿರುವ ವಸ್ತುಗಳನ್ನು ಒದಗಿಸುವ ಕೆಲಸ, ವ್ಯಾಪಾರಿಗಳಿಂದಲೇ ಆಗಬೇಕು. ನೋಡಿ, ಅಂಥಾ ವಸ್ತುಗಳ - ಉದಾಹರಣೆಗೆ ಅಕ್ಕಿ, ಅದನ್ನು ಬೇಯಿಸಲು ಕಟ್ಟಿಗೆ ಸೀಮೆ‍ಎಣ್ಣೆ ಅಥವಾ ಗ್ಯಾಸ್ - ಪೂರೈಕೆಗೆ ತೊಂದರೆ ಬಂದಾಗ, ಸರಕಾರದ ಮಧ್ಯಪ್ರವೇಶವಾಗುತ್ತದೆ. ವಸ್ತುಗಳನ್ನು ನಮಗೆ ನ್ಯಾಯಬೆಲೆಯಲ್ಲಿ ಒದಗಿಸುವ ವ್ಯವಸ್ಥೆಯನ್ನು ಸರಕಾರ ಯಾರಿಗಾದರೂ ವಹಿಸಿಕೊಡುತ್ತದೆ.

ನ್ಯಾಯ ಬೆಲೆ ಅಂದಾಗ ’ಯಾರಿಗೆ ನ್ಯಾಯ?’ ಎಂಬ ಪ್ರಶ್ನೆ ಕೇಳದೆ, ಊರಿನ ಬೇರೆ ಅಂಗಡಿಗಳಿಗಿಂತ ಸ್ವಲ್ಪ ಕಡಿಮೆ ಬೆಲೆಗೆ ಸಾಮಾನು ಸಿಕ್ಕುತ್ತದೆ ಎಂಬ ಸಮಾಧಾನಕ್ಕಾಗಿಯಾದರೂ ನ್ಯಾ. ಬೆ. ಅಂಗಡಿಗಳಿಗೆ ಜನರು ಹೋಗಲೇ ಬೇಕಾಗುತ್ತದೆ. ಕೆಲವೊಮ್ಮೆ ಕಡ್ಡಾಯವಾಗಿಯೂ ಹೋಗಬೇಕಾಗುತ್ತದೆ. ಹಾಗಾಗಿ, ಅಂಗಡಿಗಳವರು ‘ಇವನಿಗೆ ನಮ್ಮನ್ನು ಬಿಟ್ಟು ಬೇರೆ ಗತಿಯಿಲ್ಲ’ ಎಂಬ ವರ್ತನೆ ತೋರಿಸುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ತಾವು ಏನು ಕೊಟ್ಟರೂ, ಹೇಗೆ ಕೊಟ್ಟರೂ, ಜನ ಬಾಯಿಮುಚ್ಚಿಕೊಂಡು ತೆಗೆದುಕೊಂಡು ಹೋಗುತ್ತಾರೆ ಎಂಬ ಧೈರ್ಯ ಬರುವುದಕ್ಕೂ ಹೆಚ್ಚು ದಿನ ಬೇಕಾಗುವುದಿಲ್ಲ.

ಇತರರಿಗೆ ‘ಇಲ್ಲವೇ ಇಲ್ಲ’ ಎಂದು ಹೇಳಿದ ವಸ್ತುಗಳನ್ನು, ತಮಗೆ ಬೇಕಾದವರಿಗೆ ಸುಲಭವಾಗಿ ಒದಗಿಸುವ ಅಥವಾ ‘ಇಲ್ಲ’ವೆಂದು ಹೇಳಿಸಿಕೊಂಡವರು ದಮ್ಮಯ್ಯ ಹಾಕಿದಾಗ ಹೆಚ್ಚಿಸಿದ ಬೆಲೆಯಲ್ಲಿ ಅವರಿಗೆ ವಸ್ತು ಒದಗಿಸುವ -ಅಭ್ಯಾಸಗಳೆಲ್ಲ ‘ಸಾಮಾನ್ಯ’ ವೆಂಬ ಹಾಗೆ ಮೈಗೂಡುತ್ತವೆ.

ಅವುಗಳ ತಿಳುವಳಿಕೆ ಇಲ್ಲದ ನಮ್ಮಂಥ ಅಜ್ಞಾನಿಗಳು ‘ನ್ಯಾಯವಾಗಿ ನಮಗೆ ಸಿಗಬೇಕಾದ’ ವಸ್ತುಗಳನ್ನು ಪಡೆಯಲು ಹೋಗಿ, ಅವರ ಉದ್ಧಟತನದ ಬಲಿಪಶುಗಳಾಗಿ, ಬಾಯಿಮುಚ್ಚಿಕೊಂಡು ಹಿಂದೆ ಬರುತ್ತೇವೆ.

ರೇಶನ್ ಅಂಗಡಿಗಳು ಖಾಸಗಿಯವರ ಕೈಯಲ್ಲಿದ್ದರೂ ಒಂದೇ, ಸಹಕಾರಿ ಸೊಸೈಟಿಗಳ ಅಧೀನವಿದ್ದರೂ ಅಷ್ಟೆ. ಖಾಸಗಿಯವರಿಗೆ ಒಬ್ಬಿಬ್ಬರಾದರೂ ಹೇಳುವವರು -ಕೇಳುವವರು ಇದ್ದರೂ ಇರಬಹುದು. ಸೊಸೈಟಿಯವರಿಗೆ ಅವರೂ ಇಲ್ಲ -ಇವರೂ ಇಲ್ಲ. ಅಂಥಾದ್ದೊಂದು ಸೊಸೈಟಿಯ ದರ್ಬಾರು ಹಂಪನಕಟ್ಟೆಯಲ್ಲಿ ೧೯೫೮ರಿಂದ ಸುಮಾರು ಹತ್ತು ವರ್ಷ ನಡೆಯುತ್ತಿದ್ದುದನ್ನು ನಾನೇ ನೋಡಿದ್ದೇನೆ. ಆ ದರ್ಬಾರನ್ನು ಈಗಲೂ ನೀವು ಬೇರೆ ಬೇರೆ ಕಡೆಗಳಲ್ಲಿ ನೋಡಬಹುದು. ಹಿಂದೆ ಅಲ್ಲಿ ಆಗಿದ್ದ ಹಾಗೆ - ಸೊಸೈಟಿಗಳ ಕೆಲವು ಅಧಿಕಾರಸ್ಥರು ರಾತ್ರೆ ಬೆಳಗಾಗುವುದರೊಳಗೆ - ಶ್ರೀಮಂತರಾದ್ದನ್ನು ಕಾಣಬಹುದು.

ಹಸಿವೆಯ ಅನ್ನಕ್ಕೆ ಅಕ್ಕಿ ಪಡಿ ನೀಡುವವರ ಕಥೆ ಹಾಗೆ. ಅಕ್ಕಿ ಬೇಯಿಸಲು ಸೀಮೆ ಎಣ್ಣೆ ಕೊಡುವವರೂ ಅವರೇ. ಆದ್ದರಿಂದ, ಕಥೆಯ ಇನ್ನೊಂದು ತುಂಡು ಇಲ್ಲಿ ಬೇಡ. ಅದನ್ನು ಅಲ್ಲಿಗೇ ಬಿಟ್ಟು, ಸೀಮೆ ಎಣ್ಣೆ ಬದಲಿಗೆ (ಕಳೆದ ೧೬ ವರ್ಷಗಳಿಂದ) ಉರಿಸಲು ಗ್ಯಾಸ್ ಕೊಡುತ್ತಾ ಇರುವವರ ಕಥೆಯನ್ನು ಕೇಳಿ.

ಗ್ಯಾಸ್‍ನವನದು ಮೋನೋಪಲಿ-ಅಥವಾ ನನ್ನಂಥವರು ಹೇಳುವ ಹಾಗೆ - ಏಕಸ್ವಾಮ್ಯದ ವ್ಯವಹಾರ. ಏಕಸ್ವಾಮ್ಯ ಅಂದರೆ ಗೊತ್ತಲ್ಲ. ಅವರು ಆ ವಸ್ತುವಿನ ವಿತರಣೆಗೆ ಮಾತ್ರವೇ ಸ್ವಾಮಿಗಳಲ್ಲ. ಅದನ್ನು ಕೊಳ್ಳುವವರ ಸ್ವಾಮಿ (ಅಂದರೆ ಒಡೆಯರು ಅಥವಾ ಯಜಮಾನರು)ಗಳು ಕೂಡಾ.

ಏನು ಕೇಳಿದರೂ ಇಲ್ಲ, ಆಗುವುದಿಲ್ಲ, ಸಾಧ್ಯವಿಲ್ಲ ಎನ್ನುವುದು ಅವರಿಗೆ ಬೀರ್ ಕುಡಿದಷ್ಟೇ ಸುಲಭ. ಬಳಕೆದಾರರೊಂದಿಗಿನ ಒರಟು ವರ್ತನೆಯೂ ಕುಡಿದದ್ದನ್ನು ಖಾಲಿ ಮಾಡಿದಷ್ಟೇ ಸುಲಭ. ಗ್ಯಾಸ್ ಅಂಡೆ ನಿನ್ನ ಮನೆಗೆ ತಂದು ಕೊಡಲು ಸಾಧ್ಯವಿಲ್ಲ. ಬೇಕಾದರೆ ಇಲ್ಲಿಗೆ ಬಂದು ತೆಗೆದುಕೊಂಡು ಹೋಗು ಎಂದು ಜಬರಿಸಲು ಅವರಿಗೆ ಯಾವ ಸಂಕೋಚವೂ ಇಲ್ಲ -

“ಸಾಕು ಸಾಕು ನಿಲ್ಲಿಸು ಮಹರಾಯ !” ತ್ರಿಪಾಠಿಯವರ ಕೂಗು ಕೇಳಿ ಬಂತು. ಹಿಂದಿನ ದಿನದ ನೆನಪು ಕುಕ್ಕಿತ್ತೋ ಏನೊ, ಪಾಪ, ಮುಖ ಮತ್ತೊಮ್ಮೆ ಸಪ್ಪೆಯಾಗಿತ್ತು. ಆದರೂ ಒಮ್ಮೆ ಸಾವರಿಸಿಕೊಂಡು “ಹಾಗಾದರೆ ನಮ್ಮಂಥವರ ಈ ಸಮಸ್ಯೆಗೆ, ಏನೇನೂ ಪರಿಹಾರವಿಲ್ಲ. ಇಲ್ಲವೇ ಇಲ್ಲ. ಅಲ್ಲವೆ ?” ಎಂದು ಹೊರಡುವ ಮೊದಲು ಕೇಳಿಯೇ ಬಿಟ್ಟರು. ಧೈರ್ಯ ಎಲ್ಲಿಂದ ಬಂದಿತ್ತೊ, ಪಾಪ !

ಒಂದು ಪರಿಹಾರ ಇದೆ ಸ್ವಾಮಿ, ನಾವು ಕೈಲಾಗದರು ತಾನೆ ? ಮೈಯಾದರೂ ಪರಚಿಕೊಳ್ಳಬಹುದಲ್ಲ ? ಮಾಡೋಣವೆ? ಎಂದೆ.

ನೀವಾಗಿದ್ದರೆ ಆಗ, ಏನು ಹೇಳುತ್ತಿದ್ದಿರೋ, ನೀವೇ ಹೇಳುವವರೆಗೆ ಗೊತ್ತಾಗುವುದಿಲ್ಲ.
----

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)


ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.
ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ೨೦೦೫ರ ವರ್ಣಚಿತ್ರ :
೨೦೦೫ರ ಮಾರ್ಚ್ ನಲ್ಲಿ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಶ್ರೀ.ಪ.ಗೋ ಅವರ ಪತ್ನಿ ಶ್ರೀಮತಿ ಸಾವಿತ್ರಿ ಗೋಪಾಲಕೃಷ್ಣ , ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ. ರವೀಂದ್ರ ಶೆಟ್ಟಿ ಮತ್ತು ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಅವರ ಉಪಸ್ಥಿತಿಯಲ್ಲಿ ನಿಟ್ಟೆ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀ. ಎನ್ .ವಿನಯ ಹೆಗ್ಡೆ ಅವರಿಂದ ೨೦೦೪ರ ಪ.ಗೋ. ಸಂಸ್ಮರಣ ಉತ್ಕೃಷ್ಟ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಸ್ವೀಕರಿಸುತ್ತಿರುವ ಉದಯೋನ್ಮುಖ ಪತ್ರಕರ್ತ ಶ್ರೀ ಗುರುವಪ್ಪ ಎನ್.ಟಿ.ಬಾಳೇಪುಣಿ.
ಶ್ರೀ. ಪ.ಗೋಪಾಲಕೃಷ್ಣ ಅವರ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉದಯೋನ್ಮುಖ ಯುವ ಪತ್ರಕರ್ತರ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆಸುವ ನಿರ್ಣಯವನ್ನು ಹಮ್ಮಿಕೊಂಡಿದೆ.
----
ಕೃಪೆ: ಗಲ್ಫ್ ಕನ್ನಡಿಗ

Thursday, June 25, 2009

’ನೋ ಚೇಂಜ್ ಕಥೆಗಳು’-೨೩..ಅರ್ಜೆಂಟ್ ಅನ್ನೋದು ಆಗಲೂ ಇತ್ತು !
















ಹೊಸಸಂಜೆ ಪತ್ರಿಕೆಗಾಗಿ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ಮೂರನೇ ಅಂಕಣ.

ಅರ್ಜೆಂಟ್ ಅನ್ನೋದು ಆಗಲೂ ಇತ್ತು !

ನೀವು ಹೀಗೆ ಅರ್ಜೆಂಟ್ ಮಾಡಿದರೆ ಹೇಗೆ ರಾಯರೆ ? ಕೆಲಸ ಮಾಡ್ಲಿಕ್ಕೆ ಕೊಟ್ಟಿದ್ದೇ ನಿನ್ನೆ. ಆಗಲೂ ನಿಮಗೆ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇದು ಅರ್ಜೆಂಟಿಗೆ ಆಗುವ ಕೆಲಸ ಅಲ್ಲಾ....

ನಿನ್ನೆ ಹೇಳಿದಾಗ, ‘ಸ್ವಲ್ಪ ಕಷ್ಟ -ಆದರೂ ಹೇಗಾದರೂ ಮಾಡಿ ಕೊಡ್ತೇನೆ’ ಅಂತ ಹೇಳಿದ್ದೀರಲ್ಲ. ನಿಮ್ಮ ಮಾತಿನ ಮೇಲೆ ವಿಶ್ವಾಸ ಇಟ್ಟು ಈವತ್ತು ಬಂದಿದ್ದೇನೆ, ಈಗ ಹೀಗೆ ಹೇಳಿದರೆ ಹೇಗೆ ?

ಹೌದು ಹೇಳಿದ್ದೆ. ನೀವು ನನ್ನ ಖಾಯಂ ಗಿರಾಕಿ, ನಿಮ್ಮನ್ನು ಬಿಡ್ಲಿಕ್ಕೆ ಸಾಧ್ಯವಿಲ್ಲಾಂತ. ಆದ್ರೂ ನಿಮ್ಮ ಹಾಗೇ ಇನ್ನೂ ಇಬ್ಬರು ಬಂದ್ರು. ನಿಮಗೆ ಟ್ರಿಪ್ಪಿಗೆ ಹೋಗುವ ಅರ್ಜೆಂಟು -ಅವರಿಗೆ ಮದುವೆಗೆ ಹೋಗುವ ಅರ್ಜೆಂಟು ಇತ್ತು. ಯಾರ ಕೆಲಸವೂ ಆಗಿಲ್ಲ. ಏನು ಮಾಡೋದು ಹೇಳಿ !

ಅದೆಲ್ಲಾ ಈಗ ನನಗೆ ಗೊತ್ತಿಲ್ಲ. ನನಗೆ ಹೇಗಾದರೂ ಮಾಡಿ ಕೊಟ್ಟು ಬಿಡಿ ಮಾರಾಯ್ರೆ.... ನನ್ನ ಮರ್ಯಾದಿ ಪ್ರಶ್ನೆ. ಈ ಮಧ್ಯಾಹ್ನ ಅದು ಆಗಲೇ ಬೇಕು.

ಹಾಗಾದ್ರೆ ಅದನ್ನು ಕೊಡ್ಲಿಕ್ಕೆ ಇಷ್ಟು ದಿವಸ ತಡ ಯಾಕೆ ಮಾಡಿದ್ರಿ ? ಸ್ವಲ್ಪ ಮೊದಲೇ ಕೊಟ್ಟರೆ ಆಗಿ ಹೋಗ್ತಿತ್ತು. ನಿಮ್ಮ ಹಾಗೇ ಬೇರೆಯವರೂ ಅರ್ಜೆಂಟಿನಲ್ಲೇ ಇದ್ದಾರೆ. ಅವರ ಕೆಲಸ ನಾವು ಬಿಟ್ರೆ ನಮ್ಮ ದಿನ ಕಳಿಯೋದು ಹೇಗೆ ?

ಅದೆಲ್ಲ ನನಗೆ ಗೊತ್ತಿಲ್ಲ. ನಾನೇನು ಹೇಳ್ಲಿಕ್ಕೂ ಸಾಧ್ಯವಿಲ್ಲ. ನನಗೆ ಅದು ಈ ಮಧ್ಯಾಹ್ನಕ್ಕೆ ಆಗಲೇ ಬೇಕು. ಈಗ ಹತ್ತಿರ ಚರ್ಚೆ ಮಾಡಿ ಸುಮ್ಮನೆ ಸಮಯ ಕಳೆಯುವ ಬದಲು ಓ ಅವನ ಹತ್ತಿರ ಕೊಟ್ಟು ಬೇಗ ಕೆಲಸ ಮಾಡಿಸಿ. ಇನ್ನು ಅರ್ಧ ಗಂಟೆ ಒಳಗೆ ನನಗೆ ಅದು ಬೇಕೇ ಬೇಕು. ಅಷ್ಟರ ವರೆಗೂ ನಾನು ಇಲ್ಲೇ ಕೂತುಕೊಳ್ತೇನೆ.

ಹ್ಹಾ ! ಇದೊಳ್ಳೆ ಗ್ರಹಚಾರ ಆಯಿತು. ಬೇಡಬೇಡ - ನೀವು ಇಲ್ಲೇ ಕೂತುಕೊಂಡರೆ ನಮಗೆ ಮತ್ತೂ ತೊಂದರೆಯಾಗ್ತದೆ. ನಿಮ್ಮ ಬೇರೆ ಕೆಲಸ ಏನಾದರೂ ಇದ್ದರೆ, ಹೋಗಿ ಮಾಡಿ ಮುಗಿಸಿ ಬನ್ನಿ - ಇನ್ನು ಒಂದು ಗಂಟೆ ಬಿಟ್ಟು. ಅಷ್ಟೊತ್ತಿಗೆ ಹೇಗಾದರೂ ಮಾಡಿ ಇಡ್ತೇವೆ.
.............
ಅದು, ನಮ್ಮ ಬೀಡಿ ಅಂಗಡಿ (ನನ್ನ ಅಂಗಡಿಯಲ್ಲ, ನಾನು ಬೀಡಿ ತೆಗೆದುಕೊಳ್ಳುವ ಅಂಗಡಿ)ಯ ಪಕ್ಕದ ಟೈಲರ್ ಶಾಪ್‍ನಲ್ಲಿ ನಿನ್ನೆ ಅಲ್ಲ ಮೊನ್ನೆ-ನಡೆದ ಸಂಭಾಷಣೆ. ಬೀಡಿ ಅಂಗಡಿಯ ಬೂಬಣ್ಣನಿಗೂ, ಅಲ್ಲೇ ನಿಂತಿದ್ದ ನನಗೂ ಸ್ಪಷ್ಟವಾಗಿ ಕೇಳಿಸಿದ್ದು.

ಆ ಟೈಲರ್ ಅಂಗಡಿ ಒಳಗೆ ಹೊಕ್ಕರೆ, ಅದೇ ‘ಡೈಲಾಗ್’ ಯಾವಾಗಲೂ ಕೇಳುತ್ತದೆ. ಹೊರಗೆ ನಿಂತಿದ್ದವರಿಗೂ ಕೇಳಿಸುತ್ತದೆ. ಆದ್ದರಿಂದ ಅದು ನನಗೆ ಪರಿಚಿತ.

ಹಿಂದೆ ಒಮ್ಮೆ ನನ್ನ ಒಂದು ಶರ್ಟ್ ಹೊಲಿಗೆಗೆ ಕೊಟ್ಟಿದ್ದಾಗ, ನಾನೂ ಅಂಥದ್ದೇ ಮಾತು ಆಡಿದ್ದೆ. ನನಗೆ ಅಂಥದ್ದೇ‍ಉತ್ತರವೂ ಸಿಕ್ಕಿತ್ತು. ಹೇಳಿದ್ದ ಒಂದು ಗಂಟೆ ಹೊತ್ತಿನ ಬದಲು ಎರಡೂವರೆ ಗಂಟೆ ಹೊತ್ತು ಕಾಯಿಸಿದ ಮೇಲೆ ಶರ್ಟೂ ಸಿಕ್ಕಿತ್ತು. (ನಾನೊ, ಅದು ಸಿಕ್ಕದೆ ಬಿಡುವ ಗಿರಾಕಿ ? ಹೊಲಿಗೆ ಮಾತ್ರ ಹೇಗೇಗೋ ಆಗಿತ್ತು. ಅದು ಬೇರೆ ವಿಷಯ)

ಮೊನ್ನೆಯೂ ಅದೇ ‘ಟೇಪ್’ ಕೇಳಿಸಿದಾಗ,ಹಿಂದಿನ ಎಲ್ಲ ಅನುಭವಗಳೂ ನೆನಪಾದವು. ನಗು ಬಂತು.

ಇದ್ದಕ್ಕಿದ್ದ ಹಾಗೆ ಹ್ಹೆ ಹ್ಹೆ ಹ್ಹೆ ಎಂದ ನನ್ನನ್ನು ಗಾಬರಿಯಿಂದ ನೋಡಿದ ಬೂಬಣ್ಣ “ಏನು ರಾಯರೆ, ನಗಾಡಿದ್ದು?” ಎಂದು ಕೇಳಿಯೇ ಬಿಟ್ಟ. ಈ ಮುದುಕನಿಗೆಲ್ಲಾದರೂ ಗಿರ್ಮಿಟ್ ಶುರುವಾಗಿದೆಯೋ ಹೇಗೆ ಎಂದು ತಿಳಿಯುವ ಕುತೂಹಲ ಅವನಿಗೆ.

ಅಂಥಾದ್ದೇನೂ ಇಲ್ಲ ಬೂಬಣ್ಣ (ಅಂಥಾದ್ದು ಅಂದರೆ ಎಂಥಾದ್ದು ಅಂತ ಅವನಿಗೆ ಅರ್ಥವಾಗಿತ್ತು) ಎಂದೆ. ನಗುವಿನ ಹಿನ್ನೆಲೆ ವಿವರಿಸಿದೆ.

ಈ ಅರ್ಜೆಂಟಿನ ಕಿಟಿಪಿಟಿ ಎಲ್ಲ ಕಡೆಯೂ ಇದ್ದೇ ಇದೆ. ಯಾವಾಗಲೂ ಅದನ್ನು ನಾವು ಅನುಭವಿಸ್ತೇವೆ. ಮತ್ತೆ ಸುಮ್ಮನಾಗ್ತೇವೆ. ಅಲ್ವಾ ರಾಯ್ರೆ ? ಎಂದ ಬೂಬಣ್ಣನನ್ನು ಅಷ್ಟಕ್ಕೇ ಬಿಟ್ಟುಬಿಡಲು ಮನಸ್ಸಾಗಲಿಲ್ಲ.

ಅಂಥಾ ವಿಶೇಷ ಅನುಭವ ಯಾವುದಾದ್ರೂ ಆಗಿದೆಯಾ ನಿನಗೆ ? ಎಂದು (ಸುಮ್ಮನೆ ಇರಲಾರದೆ) ಕೇಳಿಯೇ ಕೇಳಿದೆ.

ಅಂಥದ್ದು ಒಂದಲ್ಲ - ನೂರು ಅನುಭವ ಇದೆ. ನಿಮಗೆ ಕೇಳುವ ಪುರುಸೊತ್ತು‍ಇದ್ದರೆ ಹೇಳ್ಲಿಕ್ಕೂ ನಾನು ರೆಡಿ, ಎಂದ. ಹೇಳಿಯೂ ಹೇಳಿದ.

ಅವನು ಹೇಳಿದ್ದನ್ನು ಅವನ ಮಾತಿನಲ್ಲೇ ವಿವರಿಸಿದರೆ ನಿಮ್ಮಲ್ಲಿ ಕೆಲವರಿಗಾದರೂ ಮುಜುಗರ ಮೂಡಬಹುದು. ಆದ್ದರಿಂದ, ಅದರ ಸಂಕ್ಷಿಪ್ತ ಸಾರ ಮಾತ್ರ ಕೊಡುತ್ತೇನೆ.........

ಸಣ್ಣಪುಟ್ಟ ರೀತಿಯಲ್ಲಿ ನಡೆಯುವ ಹೊಲಿಗೆ ಕೆಲಸ, ಚಿನ್ನದ ಕೆಲಸ ಅಥವಾ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಇನ್ವಿಟೇಶನ್ ಪ್ರಿಂಟ್ ಮಾಡುವ ಕೆಲಸ - ಯಾವುದಾದರೂ ಸರಿ, ಗಿರಾಕಿಗಳು ಬಂದಾಗ ಮಾತ್ರವೇ ನಡೆಯುತ್ತದೆ. ಅಂಥವರಿಗೆ ಖಾಯಂಆಗಿ ಏನೂ ಕೆಲಸ ಇರುವುದಿಲ್ಲ. ಬಂದರೆ ಒಂದರ ಹಿಂದೆ ಇನ್ನೊಂದು - ಇಲ್ಲವಾದರೆ ಏನೂ ಇಲ್ಲ ಅಂತ ಇರುವುದು ಸರ್ವಸಾಮಾನ್ಯ ಪರಿಸ್ಥಿತಿ. ದೊಡ್ಡ ಬಿಸಿನೆಸ್‍ನವರಾದರೆ ಅದು ಬೇರೆ ಮಾತು.

ಅಂಥದ್ದೊಂದು ದೊಡ್ಡ ಪ್ರೆಸ್ ಮಂಗಳೂರಿನ ಕೊಡಿಯಾಲಬೈಲಿನಲ್ಲಿ ಇತ್ತು. “ಸ್ವಾಮೀ, ನಾಡಿದ್ದು ೩೦ನೇ ತಾರೀಕಿಗೆ ಮದುವೆ - ಇದು, ಎರಡು ಸಾವಿರ ಇನ್ವಿಟೇಶನ್ ಆಗಬೇಕಿತ್ತಲ್ಲ” ಎಂದು ಅವರಲ್ಲಿ ಹೋಗಿ ಹೇಳಿದರೆ ಮುಂದಿನ ೩ನೇ ತಾರೀಕಿಗೆ ಪ್ರಿಂಟ್ ಮಾಡಿ ಕೊಡ್ತೇವೆ. - ಬೇಕಾದರೆ ಮಾಡಿಸಿ, ಎನ್ನುವ ನೌಕರರೂ ಅಲ್ಲಿ ಇದ್ದರು. ಅಂಥಾದ್ದೆಲ್ಲ, ಚರಿತ್ರೆ -ಕಥೆ.

ಆದರೆ -“ಟಿಕೆಟ್ ಎಲ್ಲ ಖಾಲಿಯಾಗಿದೆ. ಮುಂದಿನ ಟ್ರಿಪ್ ಹೋಗಬೇಕಾದರೆ ಟಿಕೆಟ್ ಪ್ರಿಂಟ್ ಮಾಡಿಸಿ ಹಿಡ್ಕೊಂಡು ಬಾ ಅಂತ ಧನಿ ಹೇಳಿದ್ದಾರೆ. ನಾಲ್ಕು ಟಿಕೆಟ್ ಬುಕ್ಕಾದರೂ ಈಗ್ಲೆ ಕೊಡಿ” ಎಂದು ಖಾಯಂ ಆಗಿ ಬಂದು ಹೋಗುವ ಕಂಡಕ್ಟರ್‍ರ ನುಡಿ, ಕಂಕನಾಡಿಯ ಒಂದು ಪ್ರೆಸ್‍ನಲ್ಲಿ ಈಗಲೂ ಆಗಾಗ ಕೇಳಿಸುತ್ತದೆ. “ಕೆಲವು ಪುಸ್ತಕವಾದರೂ ಪ್ರಿಂಟ್ ಮಾಡಿ ಇಟ್ಟುಬಿಡಬಹುದಲ್ಲ -ರಗಳೆ ತಪ್ಪುತ್ತದೆ” ಎಂದು ಯಾರಾದರೂ ಸಲಹೆ ಕೊಟ್ಟರೆ, ಆ ಪ್ರೆಸ್‍ನ ಮಾಲಿಕರು ಬೇರೆಯೇ ಕಥೆ ಹೇಳುತ್ತಾರೆ.

ಚಿನ್ನದ ಕೆಲಸದಲ್ಲಿ ಹಾಗೆಲ್ಲ ಗಲಾಟೆ ಆಗುವ ಚಾನ್ಸ್ ಇಲ್ಲ ಅಂತ ತಿಳಿದಿದ್ದೀರಾ ? ಅಲ್ಲಿಯದ್ದೂ ಒಂದು ಸಣ್ಣ ಕಥೆ ನನ್ನ ಹತ್ತಿರ ಇದೆ. ನನ್ನ ತಂಗಿ ಮದುವೆ ನಿಶ್ಚಯ -ಏನೋ ಸಂಬಂಧ ಕೂಡಿ ಬಂತೂಂತ - ಅವಸರದಲ್ಲಿ ಆಯಿತು. ಅಷ್ಟೇ ಅವಸರದಲ್ಲಿ ಒಡವೆ ಮಾಡಿಸಲಿಕ್ಕೆ ಕೊಟ್ಟೂ ಆಯಿತು. ಮಾಡಿಸಲಿಕ್ಕೆ ಕೊಟ್ಟದ್ದು ಆರು ದಿನ ಮೊದಲು, ಅದು ಸಿಕ್ಕಿದ್ದು ಮಾತ್ರ ಮುಹೂರ್ತಕ್ಕೆ ಅರ್ಧ ಗಂಟೆ ಬಾಕಿ ಇರುವಾಗ.

ಇದೆಲ್ಲ ಮಾಮೂಲಿ ಅನುಭವ, ಅಲ್ವಾ ? ಅವರು ಮಾಡುವುದೂ ಒಂದು ಲೆಕ್ಕದಲ್ಲಿ ಸರಿ ಅಂತಲೇ ಕಾಣುತ್ತದೆ. ಅವರಿಗೆ ಒಂದು ಕ್ರಮದಲ್ಲಿ ಕೆಲಸ ಬರುವುದೂ ಇಲ್ಲ - ಬಂದ, ಬರುವ ಕೆಲಸವನ್ನು ಅವರು ಬಿಡುವ ಹಾಗೂ ಇಲ್ಲ. ಹಾಗೆ, ಇಂತಿಷ್ಟು ದಿವಸ ಕಳೆದು ಬನ್ನಿ ಅಂತ ಕೆಲಸ ಕೊಟ್ಟವರಿಗೆ ಹೇಳೋದಿಕ್ಕೆ ಅದೇನು ರಿಜಿಸ್ಟ್ರಿ ಆಫೀಸಾ ? ಅಥವಾ, ಕೆಲಸ ಮಾಡಿಸುವವರಿಗೆ ಮೊದಲೇ ಎಲ್ಲ ಲೆಕ್ಕಾಚಾರ ಹಾಕಿ ಕೆಲಸ ಮಾಡಿಸ್ಲಿಕ್ಕೆ ಸಾಧ್ಯವಾದರೂ ಆಗ್ತದಾ ?

ಇದೆಲ್ಲ ‘ಪಿರಾಕ್’ನಿಂದಲೂ ನಡೆದು ಬಂದ ರಿವಾಜು. ಅದು ಈಗ ಬದಲಾಗಬೇಕೂ ಅಂದರೆ ಹೇಗೆ ಸಾಧ್ಯ ? ಅಲ್ವೊ ರಾಯರೆ ?

“ನಿಜ ಬೂಬಣ್ಣ. ನೀನು ಈಗ ಹೇಳಿದ ಮಾತನ್ನೇ ನಾನೂ ಹೇಳುತ್ತಾ ಬಂದಿದ್ದೇನೆ. ಹಾಗೆ ನೋಡಿದರೆ, ಅಂಥಾ ಯಾವ ತೊಂದರೆಯೂ ಇಲ್ಲದೆ ನಡಿಯುವ ವ್ಯವಹಾರ ನಿನ್ನಂಥವರದು ಮಾತ್ರ ಅಂತ ಕಾಣುತ್ತದೆ. ಸರಿಯೋ?”

ನನ್ನ ವಹಿವಾಟಿನ ಕಥೆ ಕೇಳ್ಬೇಡಿ. ಅದನ್ನು ಇನ್ನೊಮ್ಮೆ ಹೇಳ್ತೇನೆ, ಈಗ ನೀವು ಮನೆಗೆ ಹೋಗಿ ಎಂದ ಬೂಬಣ್ಣ ನನ್ನನ್ನು ಕಳುಹಿಸಿದ.

-----




ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

----

ಶೀರ್ಷಿಕೆಯ ೧೯೯೧ರ ವರ್ಣಚಿತ್ರ :

ಕುಟುಂಬದ ಸಮಾರಂಭದಲ್ಲಿ ಪಾಲ್ಗೊಂಡ ತಮ್ಮ ಭಾವ ನೆಂಟ ಶ್ರೀ.ನೂಜಿಬೈಲು ಗೋಪಾಲ್ ಭಟ್ ಜೊತೆ ಶ್ರೀ.ಪ.ಗೋ.

----

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-7943.html

Thursday, June 18, 2009

’ನೋ ಚೇಂಜ್ ಕಥೆಗಳು’ -೨೨... ಹಳೆ ಕಾಗದಗಳ ರಾಶಿಯಲ್ಲಿ













ಹೊಸಸಂಜೆ ಪತ್ರಿಕೆಗಾಗಿ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತೆರಡನೇ ಅಂಕಣ.


ಹಳೆ ಕಾಗದಗಳ ರಾಶಿಯಲ್ಲಿ

ಅಜ್ಜಾ -ಅಜ್ಜಾ, ಒಂದು ಪೇಪರ್ ಕೊಡಬೇಕಂತೆ,ಬೇಗ ಕೊಡಿ.

ಯಾವ ಪೇಪರ್ ಮಗೂ ? ಈವತ್ತಿನದ್ದಾ, ನಾನು ಇನ್ನೂ ಓದಿಲ್ಲ. ಓದಿ ಆದ ನಂತರ ಕೊಡ್ತೇನೆ ಅಂತ ನಿನ್ನ ತಂದೆಗೆ ಹೇಳು.

ಛಿ ! ಛಿ ! ಈವತ್ತಿಂದು ಅಲ್ಲಾ ನಾನು ಕೇಳಿದ್ದು, ಹಳೇ ಪೇಪರ್ ತರ್‍ಲಿಕ್ಕೆ ಹೇಳಿದ್ದಾರೆ ನನ್ನ ಮಮ್ಮಿ -ಡ್ಯಾಡ್ ಅಲ್ಲ. ಕೊಡಿ, ಕೊಡಿ ಬೇಗ.

ಕೇಳಲು ಬಂದ ನೆರೆಮನೆಯ ಮಗುವಿನೊಂದಿಗೆ ಸಲಿಗೆ ಇತ್ತು. ಮಕ್ಕಳ ಮಾತು ಕೇಳುವುದರಲ್ಲಿ ಖುಷಿಯೂ ಇತ್ತು.

ಅವರನ್ನು ತಮಾಷೆಯಲ್ಲಿ ಸತಾಯಿಸುವ(ಇಳಿ?) ಪ್ರಾಯದ ಅಭ್ಯಾಸವೂ ಇತ್ತು.ಹಾಗಾಗಿ -

ನಿನ್ನ ಮಮ್ಮಿಗೆ ಈಗ ಯಾಕೋ ಹಳೇ ಪೇಪರ್ - ಏನಾದರೂ ಕಟ್ಟಲಿಕ್ಕೆ ಇದೆಯಾ ?

ಸರಿಯಾಗಲಿ ತಪ್ಪಾಗಲಿ - ನನ್ನ ಪ್ರಶ್ನೆಗಳಿಗೆ ಯಾವಾಗಲೂ ಸಟಕ್ಕಂತ ಉತ್ತರ ಕೊಡುತ್ತಾ ಇದ್ದ ಮಗು, ಸಾಯಿಲೆಂಟ್ ಯಾಕೆ ?

ನಾನೇ ಸ್ವಲ್ಪ ಹೊತ್ತು ಕಾದೆ. ಆಗಲೂ ಮಾತಿಲ್ಲ. ಏನಾಯಿತು ?

ಭಾರೀ ಅರ್ಜೆಂಟ್ ಆಗ ಮಾಡಿದಿ.ಈಗ ಯಾಕೋ ಮಾತಾಡೋದಿಲ್ಲ. ನಿನಗೆ ಪೇಪರ್ ಬೇಕೂಂತಾದ್ರೆ ಮಾತಾಡು, ಎಂದೆ.

ಮಗು ತಲೆ ಕೆಳಗೆ ಹಾಕಿತ್ತು. ಎಂದೂ ಇಲ್ಲದ ನಾಚಿಕೆ ತೋರಿತ್ತು. ಕೊನೆಗೂ ಕಷ್ಟಪಟ್ಟು ‘ಕಾಯಿ ಹೋಳಿಗೆ ಕಟ್ಟಿ ಕೊಡ್ಲಿಕ್ಕೆ’ ಎಂಬ ಗುಟ್ಟನ್ನು ಹೊರ ಬಿಟ್ಟಾಗ ಬಿಳೀಯ ಮುಖ ಕೆಂಪಾಗಿ ಹೋಗಿತ್ತು.

ಯಾವಾಗಿನ ಅಭ್ಯಾಸದ ಹಾಗೆ, ತಿಂಡಿಯ ಹೆಸರೆತ್ತಿದರೆ ನನಗೂ ಕೊಡ್ತೀಯಾ ಎನ್ನುತ್ತಾನೆ ಈ ಮುದುಕ. ಈಗೇನು ಮಾಡಲಿ ? ಎಂಬ ಯೋಚನೆಯೇ ಮಗುವಿನ ಮೌನಕ್ಕೆ ಕಾರಣ ಎಂದು ತಿಳಿದೆ) ಹ್ಹೊ ! ಅಷ್ಟೆಯಾ, ಈಗ ಕೊಡ್ತೇನೆ. ಬಾ ಎಂದೆ. ನಾವು ಪೇಪರ್ ರಾಶಿ ಹಾಕುತ್ತಿದ್ದ ಸಣ್ಣ ಕೋಣೆಗೆ ಕರೆದೊಯ್ದೆ.

ತನ್ನ ಎತ್ತರಕ್ಕಷ್ಟೇ ಬಿದ್ದಿದ್ದ ಪೇಪರ್ ರಾಶಿ ನೋಡಿದ ಮಗುವಿಗೆ, ನೆಲದಲ್ಲಿದ್ದ ಕೆಲವು ವರ್ಣಮಯ ಪತ್ರಿಕೆಗಳೂ ಕಾಣಿಸಿದವು. ಓ ಇದನ್ನು ತೆಗೀಲಾ ? ಎಂದು ಒಂದು ಪತ್ರಿಕೆಯನ್ನು ತೋರಿಸಿ ಮಗು ಕೇಳಿಯೂ ಬಿಟ್ಟಿತು. ಕೇಳಿ ಎತ್ತಿಕೊಂಡೂ ಬಿಟ್ಟಿತು.

ಪತ್ರಿಕೆಯಲ್ಲಿದ್ದ ಕಾಮಿಕ್ಸ್ ನೋಡುತ್ತಾ ನೆಲದಲ್ಲೇ ಕುಳಿತುಬಿಟ್ಟಿದ್ದ ಮಗಿವಿನ ಸಂತೋಷಕ್ಕೆ - ತಾಯಿಗೆ ಅರ್ಜೆಂಟಾಗಿ ಬೇಕಾದ ಪೇಪರಿನ ನೆನಪು ಮಾಡಿ - ಭಂಗ ತರಲು ಯಾಕೋ ಮನಸ್ಸಾಗಲಿಲ್ಲ. ಅದರ ಪ್ರಸ್ತಾಪ ಹೇಗೆ ಮಾಡಲಿ ಎಂದು ಯೋಚಿಸುತ್ತಾ ಇರುವಾಗ ‘ಇಷ್ಟು ಹೊತ್ತಾದರೂ ಬಾರದೆ ಇದ್ದ’ ಮಗುವನ್ನು ಹುಡಿಕಿಕೊಂಡು ಮಗುವಿನ ತಾಯಿಯೇ ಬಂದಳು.ನಮ್ಮ ಮಗು ಎಲ್ಲಿ ? ಎಂದು ಗೃಹಮಂತ್ರಿಯವರನ್ನು ಪ್ರಶ್ನಿಸಿ ನನ್ನ ಯೋಚನೆಗೇ ಭಂಗ ತಂದಳು.

ಅರ್ಜೆಂಟಿನಲ್ಲೂ ಅಷ್ಟು ಹೊತ್ತು ಆ ಕಿರುಕೋಣೆಯಲ್ಲಿ ಕಳೆದುದಕ್ಕೆ ನಮ್ಮಿಬ್ಬರನ್ನೂ -ಮಗುವನ್ನು ಜೋರಾಗಿ ನನ್ನನ್ನು ಸ್ವಲ್ಪ ಮೆಲ್ಲಗೆ - ದಬಾಯಿಸಿ ಒಂದು ಇಡೀ ಪೇಪರನ್ನೂ ಮಗುವನ್ನೂ ಒಟ್ಟಿಗೇ ಎಳೆದುಕೊಂಡು ಬಿರುಗಾಳಿಯ ಹಾಗೆ ಹೊರಟು ಹೋಗಲು, ಇಷ್ಟನ್ನು ಹೇಳುವ ಹೊತ್ತು ಕೂಡಾ ಆ ತಾಯಿಗೆ ತಗಲಲಿಲ್ಲ.

ನನ್ನ ಅಮೌಲ್ಯ (ಅಮೂಲ್ಯವಲ್ಲ,ನೆನಪಿರಲಿ) ಪೇಪರ್ ರಾಶಿಯನ್ನೇ ನೋಡುತ್ತಾ ನಿಂತಿದ್ದ ನನಗೆ ಅವಳ ದಬಾವಣೆಯ ಮಾತುಗಳ ಕಡೆಗೆ ಗಮನವೂ ಇರಲಿಲ್ಲ.

‘ಏನ್ರೀ ಸಂಗ್ತಿ ? ಯಾಕೆಹೀಗೆ ನಿಂತಿದ್ದೀರಿ ? ಹೊರಗೆ ಬರೋದಿಲ್ವಾ ?’ ಇತ್ಯಾದಿ ಇತ್ಯಾದಿ ಪ್ರಶ್ನೆಗಳು ನಮ್ಮ ಹೋಮ್ ಮಿನಿಸ್ಟರ್ರಿಂದ ಬರತೊಡಗಿದಾಗ ನಾನೆಲ್ಲಿದ್ದೇನೆ ಎಂಬುದು ನೆನಪಾಯಿತು. ‘ಏನು ನೆನಪಾಗ್ತಿದೆ?’ ಎಂದು ಯಜಮಾನಿಯ ಪ್ರಶ್ನೆ ಹೊರಟಾಗ ಹಳೇ ಕಾಗದ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವವರ ನೆನಪುಗಳೂ ಮೂಡಿದವು.

‘ಏನು ನೆನಪಾಯಿತು ಅಂತ ಹೇಳ್ತೇನೆ ಬಾ’ ಎಂದೆ. ಕೋಣೆಯಿಂದ ಹೊರಗೆ ಬಂದು, ಆರಾಮವಾಗಿ ಕುಳಿತು, ನೆನಪಿನ ಕಥೆಗಳನ್ನು ಮನದಾಳದಿಂದ ಹೊರಗೆ ತೆಗೆದೆ.

(ನನ್ನ ಮನೆಯಾಕೆಗೆ ನಾನು ಕೇಳಿದ ಹಾಗೆ)

ಮುದ್ರಿಸಿದ ವಸ್ತುಗಳು ಸಿಗುವುದೇ ಅಪರೂಪವಾಗಿದ್ದ ಕಾಲದಲ್ಲಿ ಮುದ್ರಿತ ಸಾಮಗ್ರಿಗಳನ್ನೆಲ್ಲ ಸಂಗ್ರಹಿಸಿ ಇಡುವ ಅಭ್ಯಾಸ ಆರಂಭವಾಯಿತು. ಕೆಲವು ಗ್ರಂಥಗಳನ್ನಂತೂ ಉಳಿಸಿ ಇಟ್ಟುಕೊಳ್ಳಲೇ ಬೇಕಾಯಿತು. ಜೋಪಾನವಾಗಿಟ್ಟ ಗದುಗಿನ ಭಾರತ, ಭಗವದ್ಗೀತೆಗಳ ಪ್ರತಿಗಳನ್ನು ಕೆಲವು ಪತ್ರಿಕೆಗಳನ್ನು ಸಂಗ್ರಹಿಡುವ ಅಭ್ಯಾಸ ಬಂತು. ಆಗ ಪತ್ರಿಕೆಗಳ ಸಂಖ್ಯೆಯೂ ಕಡಿಮೆ. ಅವುಗಳಲ್ಲೂ ಹೆಚ್ಚಿನವು ವಾರಪತ್ರಿಕೆಗಳು, ಅದರಿಂದಾಗಿ ಸಂಗ್ರಹ ಬೆಳೆದು ದೊಡ್ಡ ರಾಶಿಯಾಗುವ ಯಾವ ಅಪಾಯವೂ ಇರಲಿಲ್ಲ. ಸಂಗ್ರಹಿಸಿದ್ದ ಹಳೆಯ ಪತ್ರಿಕೆಗಳ ಮಾರಾಟ(ಈಗಿನ ಹಾಗೆ) ಕಷ್ಟವಾಗಿರಲಿಲ್ಲ.

ಏನನ್ನಾದರೂ ಕಟ್ಟುವುದಕ್ಕೆ ಅಥವಾ ಸುತ್ತುವ ಕೆಲಸಕ್ಕೆ ದೊಡ್ಡ ಸೈಜಿನ ಕಾಗದವೇ ಬೇಕಾಗುತ್ತಿತ್ತು. ಅದರಿಂದ ಹಳೇ ಪೇಪರ್ ಕೊಳ್ಳುವವರ ತಂಡಗಳು ಎಲ್ಲ ಊರುಗಳಂತೆ ಮಂಗಳೂರಿನಲ್ಲೂ ಹುಟ್ಟಿಕೊಂಡವು. ಹಳೇ ಪೇಪರ್ ಮಾರುವವರ ಸಂಖ್ಯೆ ಹೆಚ್ಚಿದ ಹಾಗೆ ತಂಡಗಳು ಮೇಲುಗೈ ಸಾಧಿಸಿಕೊಂಡವು. ಒಂದೇ ರೀತಿಯ ಕಾಗದದಲ್ಲಿ ಮುದ್ರಣವಾಗಿದ್ದರೂ ಇಂಗ್ಲಿಷ್ ಪೇಪರಿಗೆ ಹೆಚ್ಚು ಬೆಲೆ -ಕನ್ನಡದ್ದಕ್ಕೆ ಕಡಿಮೆ ಎನ್ನುವ ಭೇದ ನೀತಿ ಜಾರಿಗೆ ಬಂತು. ಸಿಕ್ಕಿದಷ್ಟು ಸಾಕು ಎನ್ನುವವರು ಹೆಚ್ಚಾದರು. ರದ್ದಿ ಕಾಗದದ ಬೆಲೆಯನ್ನು ವ್ಯಾಪಾರಿಗಳು ಕುಗ್ಗಿಸುತ್ತಾ ಹೋದಾಗ ಬಾಯಿ ಬಡಿದುಕೊಂಡರು.

ಅಂಥ ಕಾಲದಲ್ಲೂ ಸಂಗ್ರಹಕ್ಕಾಗಿ ತಂದ ಯಾವ ಕಾಗದ ಚೂರನ್ನೂ ಮಾರುವುದಿಲ್ಲ ಎಂದು ಗಟ್ಟಿಯಾಗಿ ನಿಂತ ನಾಡಕರ್ಣಿ ಎಂಬ ಮಹಾಶಯರು ಮಂಗಳೂರಿನಲ್ಲಿ ಇದ್ದರು. ಮುದ್ರಣವಾದ ಪುಸ್ತಕ, ಪತ್ರಿಕೆ ಅಥವಾ ಬರೇ ಒಂದು ಕರಪತ್ರ( ಹ್ಯಾಂಡ್‍ಬಿಲ್) ಏನೇ ಇದ್ದರೂ ಅವರ ಸಂಗ್ರಹಕ್ಕೆ ಸೇರಿತೆಂದರೆ ಅವರ ಮನೆಯ ದೊಡ್ಡ ಕೋಣೆಯಿಂದ ಹೊರಬೀಳುವ ಪ್ರಶ್ನೆಯೇ ಇರಲಿಲ್ಲ. ಯಾವ ಅಪೂರ್ವ ದಾಖಲೆಯಾದರೂ ಅವರಲ್ಲಿ ಖಂಡಿತವಾಗಿಯೂ ಇದೆ ಎಂಬ ಪ್ರತೀತಿ ಇತ್ತು.

ಆದರೆ ಅವರು ‘ಇನ್ನಿಲ್ಲ’ ಎಂದಾದ ಮೇಲೆ ಅವರ ಕುಟುಂಬದವರು ಸಂಗ್ರಹವನ್ನೆಲ್ಲ ಹಳೇಪೇಪರ್ ಖಾಲಿ ಬಾಟ್ಲಿಯವರಿಗೆ ಸಿಕ್ಕಿದಷ್ಟಕ್ಕೆ ಮಾರಿದರು ಎನ್ನುತ್ತಾರೆ. ಅವರು ಅದನ್ನು ಉಳಿಸಿಕೊಂಡಿದ್ದರೆ, ಮಹಾತ್ಮಾಗಾಂಧಿಯವರ ಭಗವದ್ಗೀತೆಗೆ ಸಿಕ್ಕಿದ ಹಾಗೆ ಏಲಂ ಹಣವೇನೂ ಸಿಕ್ಕಲಾರದು ಎಂದು ಅವರು ಭಾವಿಸಿರಬೇಕು. ಅದರಿಂದಾಗಿ ಲಾಭ ಕೆಲವರಿಗೆ ಆಯಿತು, ನಷ್ಟ ಸಮಾಜಕ್ಕಾಯಿತು.

ಅಂತಹದೇ ಇನ್ನೊಂದು ಪ್ರಸಂಗ ಇತ್ತೀಚಿನ ದಶಕಗಳಲ್ಲಿ ನಡೆಯಿತು. ರೆಡಿಮೇಡ್ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದರೂ ಸಾಹಿತ್ಯ -ಪತ್ರಿಕೋದ್ಯಮ ಇವುಗಳಲ್ಲಿ ಆಸಕ್ತಿ ಉಳಿಸಿ ಕೊಂಡಿದ್ದ ಮಾಜಿ ಉಪಾಧ್ಯಾಯರೊಬ್ಬರು ಬಹಳ ವರ್ಷಗಳ ಕಾಲ ಒಳ್ಳೆಯ ವಾರಪತ್ರಿಕೆ - ಮಾಸಪತ್ರಿಕೆಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಆರಂಭದ ಸಂಚಿಕೆಯಿಂದ ಹಿಡಿದು ಇತ್ತೀಚಿನ ಸಂಚಿಕೆವರೆಗೂ ಅವರ ಸಂಗ್ರಹ ಬೆಳೆದಿತ್ತು. ಕ್ರಮವಾಗಿ ಇಟ್ಟುಕೊಂಡಿದ್ದ ಸಂಗ್ರಹಕ್ಕೆ ಇರುವ ಕಪಾಟುಗಳು ಸಾಲದೆನ್ನುವ ಸ್ಥಿತಿಗೆ ಬಂದಾಗ ಒಂದು ದಿನ ಇದ್ದಕ್ಕಿದ್ದಂತೆ ಅವರ ಸಂಗ್ರಹಕ್ಕೆ ಮನೆಯವರು ‘ಗಿರಾಕಿ’ ಹುಡುಕಿ, ಪತ್ರಿಕೆಗಳ ರಾಶಿಗಳನ್ನು ತೂಗಿಸಿ ಹೊರಹಾಕಿದರು. ಅವರು ಖರ್ಚು ಮಾಡಿದ್ದ ಒಟ್ಟು ಹಣದ ಹತ್ತನೇ ಒಂದಂಶವಾದರೂ ತಿರುಗಿ ಬಂತೋ ಇಲ್ಲವೋ - ಅದು ಬೇರೆ ಮಾತು.

ಈಗಿನ ನಮ್ಮ ಸಂಗ್ರಹದ ಪಾಡೇನು ? ಈಗ ಯಾವುದನ್ನು ಕಟ್ಟಲೂ ಕಾಗದ ಬೇಡ. ಇದು ಪ್ಲಾಸ್ಟಿಕ್ ಯುಗ. ಕೊಟ್ಟರೆ ತೆಕ್ಕೊಳ್ಳುವವರಿಲ್ಲ. ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಂಥಾದ್ರಲ್ಲಿ - ಹೋಳಿಗೆ ಕಟ್ಲಿಕ್ಕೆ ಕಾಗದ ಕೊಡಿ ಎಂದು ಆ ಮಗು ಕೇಳಿದಾಗ ಎಷ್ಟು ಸಂತೋಷವಾಯಿತು ಗೊತ್ತೆ ? ನಿಮಗೆ ಹೇಗೆ ಗೊತ್ತಾಗಬೇಕು ?






ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)







ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.




ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ಛಾಯಚಿತ್ರ:




೧೯೭೦ರ ದಶಕದ ಮಂಗಳೂರಿನ ಕಾರ್ಯನಿರತ ಪತ್ರಕರ್ತರು: ನವಭಾರತ ಪತ್ರಿಕೆಯ ವರದಿಗಾರ ಶ್ರೀ. ಮಂಜುನಾಥ ಭಟ್ , ಪ್ರಜಾವಾಣಿ ಮಂಗಳೂರು ಪ್ರತಿನಿಧಿ ಶ್ರೀ.ಆರ್.ಪಿ.ಜಗದೀಶ್, ಪಿ. ಟಿ.ಐ ಮಂಗಳೂರು ಪ್ರತಿನಿಧಿ ಶ್ರೀ. ಟಿ.ಪಿ. ಶಂಕರ್, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ, "ದಿ.ಹಿಂದೂ" ಮಂಗಳೂರು ಪ್ರತಿನಿಧಿ ಶ್ರೀ.ಯು. ನರಸಿಂಹ ರಾವ್ ,ಉದಯವಾಣಿ ಮಂಗಳೂರು ವರದಿಗಾರ ಶ್ರೀ. ಎ.ವಿ.ಮಯ್ಯರು. ಚಿತ್ರದ ಬಲ ತುದಿಯಲ್ಲಿ ಹೊಸದಿಗಂತ ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪಲಿಮಾರು ವಸಂತ ನಾಯಕ್.
----



ಕೃಪೆ: ಗಲ್ಫ್ ಕನ್ನಡಿಗ










Thursday, June 11, 2009

’ನೋ ಚೇಂಜ್ ಕಥೆಗಳು’ -- ೨೧... ಹೊಟ್ಟೆ ಹುಣ್ಣಾಗಿಸುವುದು ಅಂದರೆ..


















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತೊಂದನೆ ಅಂಕಣ.


ಹೊಟ್ಟೆ ಹುಣ್ಣಾಗಿಸುವುದು ಅಂದರೆ..

ಹೊಟ್ಟೆಯೊಳಗೆ ಹೇಗೆ ಹುಣ್ಣಾಗುತ್ತದೆ? ಹುಣ್ಣು “ಆಗಿಸುತ್ತಾರೆ” ಅಂತಾರಲ್ಲಾ ಅದಾದರೂ ಹೇಗೆ ಸಾಧ್ಯ? ನಮ್ಮ ಹೊಟ್ಟೆಯೊಳಗೆ ಬೇರೆಯವರು ಹುಣ್ಣು ಉಂಟು ಮಾಡುತ್ತಾರೆ ಎಂದಾದರೆ, ಆ ವಿಧಾನವಾದರೂ ಯಾವುದು?

ಏನಿದು? ಒಂದರ ಮೇಲೊಂದು ಪ್ರಶ್ನೆ, ಅಂತ ಗಾಬರಿಯಾಗಬೇಡಿ.

ನಗಿಸಿ ನಗಿಸಿ ಹೊಟ್ಟೆ ಹುಣ್ಣು ಮಾಡಿಸಿಬಿಡುತ್ತಾ ಇದ್ದರೂ ಅಂತ ಮೊನ್ನೆ ನಾನು ಒಬ್ಬರ ಸುದ್ದಿಯನ್ನು ಮನೆಗೆ ಬಂದ ಇಬ್ಬರ ಎದುರು ವರ್ಣಿಸುತ್ತಾ ಇದ್ದಾಗ -

ಆ ಇಬ್ಬರಲ್ಲಿ ಒಬ್ಬ (ಚಿದಾನಂದಾಂತ ಹೆಸರು ಬೇರೆ ಹೇಳಬೇಕೆ?) ಕೇಳಿಯೇ ಬಿಟ್ಟ - ಪ್ರಶ್ನೆಗಳು ಅವು. ನೀನು ಹೇಳಿದ್ದು ಸರಿಯಲ್ಲ, ಅಥವಾ ಸತ್ಯವೆಂದು ಕಾಣುವ ಹಾಗೆ ವರ್ಣಿಸಲು ನೀನು ತಿಳಿದಿಲ್ಲ ಎನ್ನುವ ಆಪಾದನೆಗಳೆಲ್ಲ ಅವನ ಪ್ರಶ್ನೆಗಳಲ್ಲಿ ಅಡಕವಾಗಿದ್ದವು.

ಕಳೆದ ವರ್ಷವಾಗಿದ್ದರೆ, ಅವನ ಪ್ರಶ್ನೆಗಳಿಗೆ ಒಂದೇ ಮಾತಿನ ಒರಟು ಉತ್ತರ ಕೊಡುತ್ತಿದ್ದೆ. ಮೊನ್ನೆ ಅಂಥ ಧೈರ್ಯ ಇರಲಿಲ್ಲ.

“ಅಣ್ಣಾ, ನಾನು ವರ್ಣಿಸುತ್ತಾ ಇದ್ದದ್ದು ತಮ್ಮ ಹಾಸ್ಯಪ್ರವೃತ್ತಿಯಿಂದ ಜನರನ್ನು ನಗಿಸುತ್ತಾ ಇದ್ದವರ ಥಾಕತ್ತನ್ನು. ವಿಚಾರವಾದದ ವೈಜ್ಞಾನಿಕ ಅಸತ್ಯವನ್ನಲ್ಲ” ಎಂದೆ.

ಇವನ್ಯಾಕೆ ಮೆತ್ತಗಾಗಿದ್ದಾನೆ, ದಬಾಯಿಸುವುದು ಸರಿಯಲ್ಲ (ಪಾಪ ಬದುಕಿಕೊಳ್ಳಲಿ) ಎನ್ನುವ ಭಾವನೆ ಚಿದ್ದನಲ್ಲಿ ಮೂಡಿರಬೇಕು. “ಓಹೋ ಹಾಗೋ ! ಸಾವಿರ ಜನರ ಸಭೆಯಲ್ಲೂ ಹಾಸ್ಯದ ಮನೋರಂಜನೆ ಒದಗಿಸಿ, ಸೇರಿದ್ದವರೆಲ್ಲರನ್ನೂ ‘ಹೊಟ್ಟೆ ಹುಣ್ಣಾಗುವಷ್ಟು’ ನಗಿಸುವ ಸಮರ್ಥರ ಸುದ್ದಿಯೋ ನೀವು ಹೇಳುವುದು ?” ಎಂದ ಚಿದ್ದ ‘ದಾರಿಗೆ ಬಂದ’

ಸಾವಿರ -ಗೀವಿರ ಜನರ ಸಭೆಯ ವಿಷಯ ಗೊತ್ತಿಲ್ಲ. ಆದರೆ ಕೆಲವು ನೂರು ಜನರ ಸಭೆಯ ‘ಸ್ಟೇಜ್’ನ ಮೇಲೆ ಇದ್ದಷ್ಟೂ ಹೊತ್ತು ನಗಿಸುತ್ತಾ ಇದ್ದವರ ಸುದ್ದಿಯಪ್ಪ ನಾನು ಹೇಳುವುದು, ಎಂದೆ.

ಚಿದಾನಂದನಲ್ಲಿ ಮೂಡಿದ್ದ ಕರುಣೆ ಒಂದು ಕ್ಷಣ ಮಾಯವಾಯಿತೆ? “ಅದೇನು ಮಹಾ ! ಹತ್ತು ಸಾವಿರ ಪ್ರೇಕ್ಷಕರಿದ್ದರೂ ಅವರೆಲ್ಲರನ್ನೂ ಏಕಕಾಲಕ್ಕೆ ನಗಿಸುವ ಪ್ರಸಿದ್ಧ ಯಕ್ಷಗಾನ ಹಾಸ್ಯಪಟುಗಳು ಈಗಲೂ ಇದ್ದಾರಲ್ಲ” ಎಂದಾಗ ‘ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ’ ರಾಜಕಾರಣಿಯನ್ನು ಅವನಲ್ಲಿ ನಾನು ಕಂಡೆ.

ಆದರೂ, “ಆ ಮಾತು ಬೇರೆ ಚಿದಣ್ಣ, ಅಲ್ಲಾದರೆ, ಮನರಂಜನೆಯ ವಾತಾವರಣ ಮೊದಲೇ ನಿರ್ಮಿತವಾಗಿದೆ. ಅಗತ್ಯವಿರುವಷ್ಟು ವೇಷಭೂಷಣ-ಮೇಕಪ್ ಎಲ್ಲಾ ಮಾಡಿಕೊಂಡಿರುವ ಹಾಸ್ಯಕಲಾವಿದರೇ ಇರುತ್ತಾರೆ. ನಾನು ಈಗ ವಿವರಿಸಿ ಹೇಳಲು ಪ್ರಯತ್ನಪಡುವ -ವಿಚಾರ ಅಂಥವರದಲ್ಲ...”

...ಅಣಕು, ವ್ಯಂಗ್ಯ ಇತ್ಯಾದಿಗಳನ್ನೆಲ್ಲಾ ಹದವರಿತು ಮಿಶ್ರ ಮಾಡಿ, ಯಾವುದೇ ರೀತಿಯ ‘ಮೇಕಪ್’ ಇಲ್ದೆ, ಸೇರಿದ ಜನರನ್ನು ತಮ್ಮ ಮಾತಿನ ಮೋಡಿಯಿಂದಲೇ ರಂಜಿಸುವ ಸಾಮರ್ಥ್ಯ ಇರುವವರದು.

“ಅಂದರೆ, ಈ ಮಿಮಿಕ್ರಿ ಅಂತಾ ಎಲ್ಲಾ ಮಾಡ್ತಾರಲ್ಲಾ. ಅಂಥವರಾ?” ಅವನ ಜೊತೆಗೆ ಬಂದವರು “ಚಿದಾ, ಅವರು ಹೇಳುವುದನ್ನು ಹೇಳಲಿಯಪ್ಪಾ!” ಎಂದು ಸೌಮ್ಯವಾಗಿ ಎಚ್ಚರಿಸಿದ ಕಾರಣ, ಚಿದಾ ಒಮ್ಮೆಗೆ ‘ಚಪ್ಪೆ’ಯಾದ. ಅವರ ಮುಖವನ್ನೇ ನೋಡುತ್ತಾ, ನನ್ನ ಕಡೆಗೂ ತಿರುಗದೆ ‘ಹೂಂ ಹೇಳಿ!’ ಎಂಬ ಅಪ್ಪಣೆ ದಯಪಾಲಿಸಿದ.

ಇಕೋ, ಒಬ್ಬಿಬ್ಬರ ಸುದ್ದಿ ಮಾತ್ರ ಹೇಳ್ತೇನೆ. ಎಸ್.ಆರ್. ಬಾಲಗೋಪಾಲ್ ಅಂತ ಒಂದು ಹೆಸರು ಕೇಳಿದ್ದಿಯಾ ?

ಅವರ ‘ಜಲ್ಸಿ’ನ ಕಾಲ ಒಂದಿತ್ತು. ೬೦ರ ದಶಕದಲ್ಲಿ, ತಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಸಲೇ ಬೇಕು ಎಂದು ಹಟ ಹಿಡಿಯುವ ಜನರೂ ಮಂಗಳೂರಿನಲ್ಲಿ ಇದ್ದರು. ಸ್ಟೇಜಿನಲ್ಲಿ ಬಂದು ನಿಂತ ಮೇಲೆ ಅವರು ಯಾವ ಸುದ್ದಿ ತೆಗೆದರೂ, ಯಾವ ವಿಷಯ ಎತ್ತಿಕೊಂಡರೂ, ಹಾಸ್ಯದ ಲಾಸ್ಯ ಅವುಗಳಲ್ಲಿರುತ್ತಿತ್ತು. ಅವರ ನಟನೆಯೂ ಅಷ್ಟೇ ‘ಸ್ವಾಭಾವಿಕ’, ಭಾಷೆ ಗೊತ್ತಿಲ್ಲದವರಿಗೂ ಅರ್ಥವಾಗುವಂಥಾದ್ದು.

ಒಮ್ಮೆ ನೆಹರೂ ಮೈದಾನಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಇಗೊರ್ ಬೋನಿ ಎಂಬ ರಶ್ಯನ್ ರಾಜತಾಂತ್ರಿಕ, ಬಾಲಗೋಪಾಲರು ಕೆಲವರ ಬಾಯಿಯಿಂದ ಹೊರಬೀಳುವ ಕಫದ ಮಾಲೆಯನ್ನು ‘ಚಿತ್ರಿಸಿ’ ತೋರಿಸುತ್ತಿದ್ದಾಗ, ನಕ್ಕು ನಕ್ಕು ತನ್ನ ಹೊಟ್ಟೆ ಹಿಡಿದುಕೊಂಡ ಚಿತ್ರ ಈಗಲೂ ನೆನಪಾಗುತ್ತದೆ.(ಅಂಥಾದ್ದೇ ಬೇರೆ ಕೆಲವು ಸನ್ನಿವೇಶಗಳೂ ನೆನಪಿದೆ.)

ಅವರಂತೆ ಇನ್ನೊಬ್ಬರು ರಾಮಣ್ಣ ರೈಗಳು. ರೈಗಳದು ಹೆಚ್ಚು ಮಾತಿನ ಮೋಡಿ. ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು ನ್ಯಾಯವಾದಿಗಳಾಗಿದ್ದಾಗ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದ ರೀತಿಯ ‘ಪ್ರತಿ ಮಾಡಿ’ರೈಗಳು ತೋರಿಸುತ್ತಿದ್ದುದನ್ನು ನೋಡಿ ಆನಂದಿಸಿದ ಪ್ರಸಿದ್ಧರು ಈಗಲೂ ಇದ್ದಾರೆ.

ಅವರಿಬ್ಬರಿಂದಲೂ ಸ್ಫೂರ್ತಿ ಪಡೆದು ಅವರನ್ನು ಅನುಕರಿಸಿದವರು ಸಾಧ್ಯವಿರುವಾಗಲೆಲ್ಲ ‘ತಮ್ಮತನ’ ತೋರಿಸಿ ವೈಶಿಷ್ಟ್ಯ ಸಾಧಿಸಿದವರು ಅನಂತರದ ದಶಕಗಳಲ್ಲಿ ಎಷ್ಟೋ ಮಂದಿ ಇದ್ದಾರೆ. ಅವಕಾಶ ಸಿಕ್ಕಿದರೆ,ಫಿಲ್ಮ್ ಟೀವಿಗಳಲ್ಲಿ ಕೂಡಾ ಮೆರೆಯುವಂಥ ಸಾಮರ್ಥ್ಯವೂ ಅವರಲ್ಲಿದೆ. (ಎಲ್ಲರ ಹೆಸರುಗಳನ್ನೂ ಹೇಳುವ ಅಗತ್ಯವಿಲ್ಲವಲ್ಲ ?)

ಮನುಷ್ಯನಲ್ಲಿರುವ ಹಾಸ್ಯ ಪ್ರವೃತ್ತಿಯನ್ನು ನೋವಾಗದಂತೆ ಕೆಣಕುವ ಅಭ್ಯಾಸ ಪುರಾಣಕಾಲದಿಂದಲೂ ಇದೆ. ಮುಂದೆಯೂ ಇರುತ್ತದೆ. ಅದು ಬದಲಾಗುವುದಿಲ್ಲ!

“ಹಾಗಾದರೆ,‘ಹೊಟ್ಟೆ ಹುಣ್ಣಾಗುವುದು’ ವ್ಯಂಗ್ಯಮಿಶ್ರಿತ ಉತ್ಪ್ರೇಕ್ಷೆಯ ನುಡಿ ಎನ್ನಿ”

“ಹೌದು. ಆ ಹೊಟ್ಟೆ ಹುಣ್ಣು ಅಲ್ಸರ್’ ಅಂತೂ ಅಲ್ಲ. ತಿಳಿಯಿತೇನಣ್ಣ...” ಎಂದು ರಾಗವೆಳೆದಾಗ, ನನ್ನಿಂದ ಎಷ್ಟೋ ವರ್ಷಗಳಿಗೆ ಕಿರಿಯವಾದ ಚಿದಾನಂದನಿಗೂ ‘ಅಣ್ಣಾ’ ಮಾತಿನ ಅರ್ಥವಾಗಿತ್ತು.

(ಅಂದ ಹಾಗೆ, ಅವನಿಗೆ ಸೌಮ್ಯಸೂಚನೆ ಇತ್ತು. ಅವನ ಪ್ರಶ್ನೆ ನಿಲ್ಲಿಸಿದವರು -ಅವನ ಭಾವೀ ಮಾವ, ಶ್ರೀಮಂತರೂ..............ಅಂತೆ.)


-----






ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

ಸಾಹಿತಿ,ರಾಜಕಾರಿಣಿ,ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಶ್ರೀ. ಎಂ.ವೀರಪ್ಪ ಮೊಯ್ಲಿಯವರ ಜೊತೆ ಸಂವಾದದಲ್ಲಿ ಉದಯವಾಣಿ ವರದಿಗಾರರಾದ ಶ್ರೀ. ಎ. ವಿ. ಮಯ್ಯ, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ.ಗೋಪಾಲಕೃಷ್ಣ, ಹೊಸದಿಗಂತ ಪತ್ರಿಕೆಯ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ನವಭಾರತ ಪತ್ರಿಕೆಯ ಶ್ರೀ. ಮಂಜುನಾಥ ಭಟ್.
-----
ಕೃಪೆ: ಗಲ್ಫ್ ಕನ್ನಡಿಗ

Thursday, June 4, 2009

’ನೋ ಚೇಂಜ್ ಕಥೆಗಳು’ -- ೨೦...ನಿಮ್ಮನ್ನೇ ರಿಪೇರಿ ಮಾಡುವವರು !














ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತನೇ ಅಂಕಣ.

ನಿಮ್ಮನ್ನೇ ರಿಪೇರಿ ಮಾಡುವವರು !

ನಿನ್ನೆಯಲ್ಲ ಮೊನ್ನೆ, ಹೆದ್ದಾರಿ ಪೂರ್ತಿ ಇದ್ದ ಹೊಂಡಗಳನ್ನೆಲ್ಲ ತಪ್ಪಿಸಿಕೊಂಡು ನಡೆದು ಹೋಗಲು ಪ್ರಯತ್ನಿಸುತ್ತಾ ಇದ್ದೆ. ತಲೆ ಎತ್ತಿ ನಡೆಯಲು ಸಾಧ್ಯವಿರಲಿಲ್ಲ. ಮಾರ್ಗದಲ್ಲಿ ‘ಹಾರಾಡುವ’ ಬಸ್ಸು ಕಾರು, ಸ್ಕೂಟರ್, ಬೈಕುಗಳ ಎಡೆಯಲ್ಲಿ ಸಿಕ್ಕಿ ಹಾಕಿಕೊಳ್ಳದೆ ಜೀವಸಹಿತ ಮನೆಗೆ ಹಿಂದಿರುಗಬೇಕಾಗಿತ್ತು. ಹಾಗಾಗಿ, ನಿಧಾನವಾಗಿ ಹೋಗುತ್ತಾ ಇದ್ದೆ.

ಇದ್ದಕ್ಕಿದ್ದ ಹಾಗೆ ಬಹಳ ಸಮೀಪದಿಂದ ಕಿಲಕಿಲ ನಗು ಕೇಳಿಸಿತು. ನಕ್ಕದ್ದು ಖಂಡಿತವಾಗಿಯೂ ಯಾರೋ ಹುಡುಗಿ ಎಂದು ನನ್ನ ಮುದಿಕಿವಿ ಕೂಡಾ ಪತ್ತೆ ಹಚ್ಚಿತು. “ಯಾರಾದರೂ ಇರಲಿ, ನನಗೇನು?” ಎಂದುಕೊಂಡೆ: ಬಗ್ಗಿಸಿದ ಕತ್ತೆತ್ತದೆ ನಡಿಗೆ ಮುಂದುವರಿಸಿದೆ.

“ಏನು ಅಂಕಲ್, ಹಾಗೇ ಹೋಗ್ತಾ ಇದ್ದೀರಿ ?” ಪ್ರಶ್ನೆಯೂ ಬಂತು. ನನ್ನನ್ನೇ ಕೇಳಿರಬೇಕು. ನೋಡಿಯೇ ಬಿಡೋಣ ಎಂದೆ. ಕತ್ತು ಹೊರಳಿಸಿ ನೋಡಿಯೂ ನೋಡಿದೆ.

ಅರೆ! ಹೆಲ್ಮೆಟ್ಟಿನಿಂದ ಮುಚ್ಚಿದ್ದ ತಲೆಯ ಗುರುತಾಗಲಿಲ್ಲವಾದರೂ ಧರಿಸಿದ್ದ ಚೂಡಿದಾರ್ ಸ್ಟೈಲ್ ಎಲ್ಲೋ ನೋಡಿದ ಹಾಗಿತ್ತು. ಬಾಯಿಬಿಟ್ಟೆ. ಧೈರ್ಯವಾಗಿ “ಏನಮ್ಮಾ?” ಎಂದು ವಿಚಾರಿಸಿಯೂ ಬಿಟ್ಟೆ. ಹುಡುಗಿ ಯಾರಾಗಿರಬಹುದು ?

“ಗುರ್‍ತು ಸಿಕ್ಲೇ ಇಲ್ಲ, ಅಲ್ವಾ ಅಂಕಲ್?” ಎನ್ನುತ್ತಾ ಹುಡುಗಿ ಹೆಲ್ಮೆಟ್ ಕಳಚಿ ಇನ್ನೊಮ್ಮೆ ನಕ್ಕಾಗ ನೋಡುತ್ತೇನೆ -

ಅವಳೇ ! ನಮ್ಮ ನೆರೆಯ ಉದ್ಗಾರಿ ನಂ.೧ ಮಹನೀಯರ ಮೊಮ್ಮಗಳು! ದಿನಂಪ್ರತಿ ಭುರ್‍ರಂತ ಟಿ.ವಿ.ಎಸ್.ಹಾರಿ ಏರಿ ಕಾಲೇಜಿಗೆ ಓಡಿಸುತ್ತಾ ಇದ್ದವಳು- ಇಲ್ಲಿ, ಈ ದಾರಿ ಬದಿಯಲ್ಲಿ, ಅದೂ ಇಷ್ಟು ಹೊತ್ತಿಗೆ, ಯಾಕೆ ನಿಂತಿದ್ದಾಳೆ?

ಆಚೀಚೆ ಕಣ್ಣು ಹಾಯಿಸಿದೆ. ಅವಳ ಉರುಳುಬಂಡಿ ಎಲ್ಲೂ ಕಾಣಿಸಲಿಲ್ಲ. ಮತ್ತೆ ಹೆಲ್ಮೆಟ್ ಯಾಕೆ ತಲೆಯಲ್ಲಿ?

ನನ್ನಲ್ಲೆದ್ದ ಸಮಸ್ಯಾಪ್ರಶ್ನೆಗಳೆಲ್ಲವನ್ನೂ ಊಹಿಸಿದವಳ ಹಾಗೆ -

“ಬೈಕ್ ಇಲ್ಲ ಅಂಕಲ್.. ರಿಪೇರಿಗೆ ಕೊಟ್ಟು ನಾಲ್ಕು ದಿವಸ ಆಯ್ತು. ಇನ್ನೂ ಆಗಿಲ್ಲ-ಆಗಿಲ್ಲ ಅಂತ ಹೇಳ್ತಾನೇ ಇದ್ದಾನೆ. ಈವತ್ತು ನಾಳೇ ಅಂತ ಪ್ರತಿ ದಿವ್ಸವೂ ಬಂದು ಹೋಗುವುದೇ ಕೆಲಸ ಆಯ್ತು. ಈ ಹೆಲ್ಮೆಟ್ ಆದರೂ ಬಿಟ್ಟು ಹೋಗ್ತೇನೆ ಅಂದ್ರೆ ಅದಕ್ಕೂ ಒಪ್ಲಿಲ್ಲ. ಅದನ್ನೂ ಕಾಲೆಜಿಗೆ ತೆಕ್ಕೊಂಡು ಹೋಗಿ ಫ್ರೆಂಢ್ಸ್ ಎಲ್ಲಾ ತಮಾಷೆ ಮಾಡುವ ಹಾಗಾಗಿದೆ...” ವರ್ಣನೆ ಮುಂದುವರಿಯುತ್ತಿದ್ದ ಹಾಗೆ ನಗುಮುಖ ಅಳುಮೂಂಜಿ ಆಗುತ್ತಾ ಬಂತು. ಆದರೂ ಉಪಾಯವಿಲ್ಲದೆ-

“ಅದನ್ನು ತಲೆಯಲ್ಲೇ ಯಾಕೆ ಹೊರ್‍ತಿಯಮ್ಮಾ ಕೈಯಲ್ಲಿ ಹಿಡ್ಕೊಳ್ಬಾರ್‍ದಾ?” ಎನ್ನಲೇ ಬೇಕಾಯಿತು. “ಇದೂ.... ನನ್ನನ್ನು ಯಾರೂ ಗುರ್‍ತು ಹಿಡಿಯದ ಹಾಗೆ ಮಾಡಿದ ಉಪಾಯ” ಎಂಬ ಉತ್ತರವೂ ಸಿಕ್ಕಿತು. ಇನ್ನೀಗ ಏನು ಮಾಡುವುದು ಕಾಲೇಜಿಗೆ ಹೋಗ್ತೀಯೋ -ಅಲ್ಲ ಮನೆಗೋ? ಎಂದು ವಿಚಾರಿಸಿದೆ.

ಇಷ್ಟು ಲೇಟಾಗಿ ಕಾಲೇಜಿಗೆ ಹೋಗಿ ಮಾಡುವುದೇನಿದೆ, ಮಣ್ಣು !

ಮನೆಗೇ ಹೋಗ್ತೇನೆ ಎಂದವಳಿಗೆ -ನಡಿ ಹಾಗಾದ್ರೆ ನಾನೂ ನಿನ್ನ ಜೊತೆಗೆ ಬರುತ್ತೇನೆ ಎಂದಾಗ ಖುಷಿಯೋ ಖುಷಿ. ಒಳ್ಳೇದಾಯ್ತು... ಬನ್ನಿ ಹೋಗುವಾ ಎಂದು ಹೊರಟೇ ಬಿಟ್ಟಳು. ಪಯಣದ ದಿಕ್ಕು ಬದಲಾಯಿಸಿ “ಸ್ವಲ್ಪ ನಿಧಾನ ನಡಿಯಮ್ಮಾ. ನಿನ್ನಷ್ಟು ಬೇಗ ನಡೀಲಿಕ್ಕೆ ಆಗುವುದಿಲ್ಲ” ಎಂದು ಅವಳೊಂದಿಗೆ ಹೆಜ್ಜೆ ಹಾಕಿದೆ.

ಅವಳ ಖುಷಿಯ ಹಿನ್ನೆಲೆ ಹೇಗೂ ಗೊತ್ತಿತ್ತು. ನನ್ನಿಂದ ಹಳೆ ಕಥೆಗಳನ್ನು ಕೇಳಿಸಿಕೊಳ್ಳುವ ಚಪಲ ಅವಳಿಗೂ ಇತ್ತು. ಬಹಳ ಹುಷಾರಾಗಿ ನನ್ನನ್ನು ರಸ್ತೆ ದಾಟಿಸಿ, ವಾಹನಗಳ ಭರಾಟೆ ಅಷ್ಟೊಂದಿಲ್ಲದ ನಮ್ಮ ಓಣಿ ಬರುವವರೆಗೂ ತಾಳ್ಮೆಯಿಂದ ಕಾದು, “ಇನ್ನು ಹೇಳಿ ಅಂಕಲ್, ನಿಮ್ಮ ಕಾಲದ ಗರಾಜಿನವರ ಕಥೆ - ಒಂದೆರಡು” ಎಂದಳು. ಅವಕಾಶಕ್ಕಾಗಿಯೇ ಕಾದಿದ್ದ ನಾನು - ಕಥೆ ಪ್ರಾರಂಭಿಸಿದೆ.

ಈ ‘ಗೇರೇಜು’ - ವರ್ಕುಶೋಪು - ಮೆಕ್ಯೇನಿಕ್ಕುಗಳ ಕಥೆಯೋ, ಹೇಳಿ ಪ್ರಯೋಜನ ಇಲ್ಲ ಮಗೂ... ಹಿಂದೆ... ಅಂದ್ರೆ ನಮ್ಮ ಹಾಗಿರುವವರೆಲ್ಲಾ ಮಂಗಳೂರು ಸೇರುವ ಬಹಾಳ ಮೊದಲು... ವಾಹನಗಳೂ ಬಹಳ ಕಡಿಮೆ ಇದ್ದುವು........ ಡಾಮಾರು ರಸ್ತೆಗಳೂ ಇಲ್ಲದಿದ್ದಾಗ -

ಹಂಪನಕಟ್ಟೆ, ಮೈದಾನ ರಸ್ತೆ, ಕೊಡಿಯಾಲಬೈಲು, ಜೆಪ್ಪುಗಳಲ್ಲಿ ಮೂರ್‍ನಾಲ್ಕು ದೊಡ್ಡ ವರ್ಕ್‍ಶಾಪ್‍ಗಳೂ, ಬೇರೆ ಕೆಲವು ಕಡೆ ಒಬ್ಬಿಬ್ಬರು ಚಿಲ್ಲರೆ ಮೆಕ್ಯಾನಿಕ್‍ಗಳೂ ಇದ್ದವು - ಇದ್ದರು ಅಂತ ಹೇಳುತ್ತಾರೆ. ಆಗ ಕೂಡಾ, ಕೆಟ್ಟುಹೋದ ವಾಹನಗಳು ಸರಿಯಾಗಬೇಕಾದರೆ, ಅವರ ಮರ್ಜಿ ಕಾಯದೆ ಬೇರೆ ದಾರಿಯೇ ಇರಲಿಲ್ಲವಂತೆ. ಕೂಡ್ಲೆ ಜಟ್‍ಪಟ್ ಆಗಿ ರಿಪೇರಿ ಮಾಡಿ ಕೊಡಲು ಒಪ್ಪಿದ ಕೆಲಸಗಳಿಗೂ ವಾರಗಟ್ಟಲೆ ಸಮಯ ತೆಗೆದುಕೊಳ್ಳುವ ಅಭ್ಯಾಸ ಆಗಲೂ ಇತ್ತಂತೆ. ಅಭ್ಯಾಸ, ಹತ್ತೈವತ್ತರಷ್ಟಿದ್ದ ಕಾರ್ -ಬಸ್‍ಗಳಿಗೇ ಆಗಲಿ, ಇದ್ದ ನಾಲ್ಕೈದು ಮೋಟರ್ ಸೈಕಲಿಗಾಗಲಿ, ಸಮಪ್ರಮಾಣದಲ್ಲೇ ಅನ್ವಯವಾಗುತ್ತಿತ್ತಂತೆ. ವಾಹನ ರಿಪೇರಿ ಮಾಡಿ ಯಾವಾಗ ಕೊಡಬಹುದು ಎಂದು ಹೇಳುವುದೇ ಕಷ್ಟ, ಒಂದು ವೇಳೆ ಹೇಳಿದರೆ - ಹೇಳಿದ ದಿನ ಕೊಡದೆ ಇರುವುದಂತೂ ಗ್ಯಾರಂಟಿ ಎಂಬ ಪರಿಸ್ಥಿತಿಯಂತೆ.

ಆದರೆ, ಏನು ಮಾಡುವುದು ಬೇರೆ ಯಾವ ದಾರಿಯೂ ಇಲ್ಲದೆ ವಾಹನಗಳ ಮಾಲೀಕರು ಅದನ್ನು ಸೊಲ್ಲೆತ್ತದೆ ಸಹಿಸಿಕೊಂಡಿದ್ದರಂತೆ.

ನಾವು ಮಂಗಳೂರು ಸೇರುವ ಹೊತ್ತಿಗೆ, ಕಾಲ ಬದಲಿತ್ತು. ರಸ್ತೆಗಳು ‘ತಾರು’ ಕಂಡಿದ್ದವು. ಕಾರು,ಬಸ್ಸುಗಳೂ ಹೆಚ್ಚಾಗಿದ್ದವು.ಡಾಕ್ಟ್ರ ಸರ್ಕಲಿನಲ್ಲಿದ್ದ ಸುಬ್ರಾಯ ನಾಯಕರ ‘ರೋಯಲ್ ಎನ್‍ಫೀಲ್ಡ್’ ಮೋಟರ್ ಸೈಕಲ್‍ಗಳ ಜೊತೆಗೆ ಸಂಜೀವ ನಾಯಕರ ‘ಲ್ಯಾಂಬ್ರೆಟ್ಟಾ’ಗಳೂ ರಸ್ತೆಗಳಲ್ಲಿ ಸುತ್ತಾಡತೊಡಗಿದ್ದವು. ಅಂಬಾಸಿಡರ್, ಫಿಯೆಟ್, ಸ್ಟೆಂಡಾರ್ಡ್‍ಗಳ ಹೆಸರುಗಳೇ ರಾರಾಜಿಸುತ್ತಿದ್ದವು.

ಎಡ್ವಾನ್ಸ್ ಬುಕಿಂಗ್ ಇತ್ಯಾದಿ ತರಳೆ ಮುಗಿಸಿದ ಗಿರಾಕಿಗೆ ಹೊಸ ವಾಹನ ಮಾರುವಾಗ ಕೊಟ್ಟ ಸರ್ವಿಸ್ ಗ್ಯಾರಂಟಿ -ಗೀರಂಟಿಗಳ ಅವಧಿಯಲ್ಲಿದ್ದ ‘ಸಿಸ್ಟಂ’ಗಳು, ವಾಹನಗಳು ಮಾಲಿಕರ ಸ್ವಂತ ಖರ್ಚಿನಲ್ಲೇ ರಿಪೇರಿಯಾಗಬೇಕಾದ ಹೊತ್ತು ವಾಹನಗಳಿಂದ ಮಾಯವಾಗುತ್ತಿದ್ದ ಅನುಭವ ಎಷ್ಟೋ ಮಂದಿಯಿಂದ ಕೇಳಿ ಬರುತ್ತಿತ್ತು. ‘ಜಾಬ್‍ಕಾರ್ಡ್’ - ‘ಡ್ಯೂ ಡೇಟ್’ ಇತ್ಯಾದಿ ಶಬ್ದಗಳೆಲ್ಲ, ಇಂಗ್ಲಿಷ್ ಅರ್ಥ ತಿಳಿಯದ ಮರಿ ಮೆಕ್ಯಾನಿಕ್‍ಗಳಿಗೂ ಬಾಯಿಪಾಠವಾಗಿತ್ತು - ಆಚರಣೆ ಅನಗತ್ಯವಾದ ಕಾರಣ - ಬರಹೇಳಿದ್ದ ದಿನವೇ ಹೋದರೆ “ಇನ್ನೂ ಸಣ್ಣ ಚಿಲ್ಲರೆ ಕೆಲಸ ಮಾತ್ರ ಬಾಕಿ ಇದೆ.... ನಾಳೆ ಬರುತ್ತೀರಾ” ಎನ್ನುವ ಧ್ವನಿಮುದ್ರಿಕೆ ಎಲ್ಲ ಕಡೆಯಲ್ಲೂ ಕೇಳಿಸುತ್ತಿತ್ತು.

ಅನಂತರದ ದಿನಗಳಲ್ಲಿ,ವಾಹನಕ್ಕಾಗಿ ದುಡ್ಡುಕಟ್ಟಿ ವರ್ಷಗಟ್ಟಲೆ ಕಾಯಬೇಕಾದ ತೊಂದರೆ ತಪ್ಪಿತು. ಕಾಯಲು ತಾಳ್ಮೆಯಿಲ್ಲದವರು ‘ಬ್ಲೇಕಿನಲ್ಲಿ’ ಖರೀದಿಸಬೇಕಾದ ಪರಿಸ್ಥಿತಿ ಬದಲಿ, “ಕಾಸು ಕೊಡಿ, ಕೀ ತೆಗೆದುಕೊಳ್ಳಿ” ಹಂತಕ್ಕೆ ಬಂದಾಗ ವಾಹನಗಳ ಬಿಡಿಭಾಗದ ಅಂಗಡಿಗಳ ಮತ್ತು ಮೆಕ್ಯಾನಿಕ್ ಗರಾಜ್‍ಗಳ ಸಂಖ್ಯೆಯೂ - ಕುಲಗೆಟ್ಟ.... ರಸ್ತೆಗಳ ಹೊರತಾಗಿಯೂ- ಹೆಚ್ಚುಹೆಚ್ಚಾಗುತ್ತಾ ಹೋಯಿತು.

“ಮತ್ತೆ ಬಾ - ಹೋಗಿ ಬಾ - ನಾಳೆ ಬಾ” ಧ್ವನಿಗಳು ಮಾತ್ರ ಉಳಿದವು. ಎಷ್ಟು ಅರ್ಜೆಂಟ್ ಮಾಡಿದರೂ, “ನೋಡಿ, ಇದೊಂದು ಗಾಡಿ ದೂರದಿಂದ ಬಂದು ಒಂದು ವಾರ ಆಯಿತು.ಇದರ ಕೆಲಸ ಮಾಡದೆ ಉಪಾಯವೇ ಇಲ್ಲ. ನೀವು ಇಲ್ಲಿಯವರೇ ಅಲ್ವಾ? ನಾಳೆ ಬನ್ನಿ. ಖಂಡಿತವಾಗಿಯೂ ನಿಮ್ಮ ಗಾಡಿ ರೆಡಿ ಇರ್‍ತದೆ.” ಎಂಬ ‘ಟೇಪ್’ಗಳೂ ಉಳಿದುಕೊಂಡವು.

“ನಿನಗಾದ ಅನುಭವವೂ ಅದೇ ಅಲ್ವಾ ಮಗೂ..” ಮನೆ ಸಮೀಪಿಸಿತ್ತು.

“ಹೌದು ಅಂಕಲ್, ನಿಮ್ಮ ಲಟಾರಿ ಸ್ಕೂಟರಿಗೂ ಅದೇ - ನನಗೂ ಅದೇ. ನೋ ಚೇಂಜ್ ಎಟಾಲ್ ! .. ಟಾ ಟಾ..ಬರ್‍ತೇನೆ” ಎಂದು ಮನೆಗೋಡಿದ ಕಾಲೇಜ್ ಕನ್ಯೆಯ ಹೆಸರು ನಿಮಗ್ಯಾಕೆ?

-----
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

ಮಾಧ್ಯಮ ಮಿತ್ರ ಬೆಂಗಳೂರಿನ ವಿಜ್ಞಾನಿಯ ಪ್ರತಿಸ್ಪಂದನ



ಈಗ ಬರೆದಿದ್ದೇನೆ, ಏನು ವಿಶೇಷ?


ಗೆಳೆಯ ನಾಗೇಶರಾಯರಿಗೆ - ನಮಸ್ಕಾರಗಳು.



ಅತ್ತ ಕಡೆ ಬರಲೂ ಇಲ್ಲ - ಪತ್ರವನ್ನೂ ಬರೆಯಲಿಲ್ಲ ಎಂಬ ಸಿಟ್ಟು ಸಹಜವಾಗಿ ಇರಬಹುದು. ಈಗ ಬರೆದಿದ್ದೇನೆ, ಏನು ವಿಶೇಷ?




ವಾರ್ತಾಲೋಕ - ಇದೆ. ನಾನು ಇದ್ದೇನೆ. ಶ್ರೀ ಅನಂತಸುಬ್ಬರಾಯರಿಗೆ ನಮಸ್ಕಾರ ತಿಳಿಸಿ, ದಯವಿಟ್ಟು


ನಿಮ್ಮ



ಪ.ಗೋಪಾಲಕೃಷ್ಣ

10.4.64



ಇ-ಮೇಲ್, ಬ್ಲಾಗ್ ಯುಗದ ನಮ್ಮಂಥವರೂ ಸಹಾ ಕೇವಲ ಇಪ್ಪತ್ತು ವರ್ಷಗಳ ಹಿಂದೆ ಅಂಚೆಯ ಮೂಲಕವೇ communicate ಮಾಡುತ್ತಿದ್ದೆವು. ನಮ್ಮ ಹಿಂದಿನ ತಲೆಮಾರಿನವರು ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದರು. ಗೌಪ್ಯತೆಗೆ ಅಲ್ಲಿ ಅವಕಾಶವೇ ಇಲ್ಲ. ಕಚೇರಿ ಅಥವಾ ಮನೆಯ ವಿಳಾಸಕ್ಕೆ ಬಂದ ಕಾರ್ಡು ಕೈ ದಾಟಿದವರೆಲ್ಲರಿಂದಲೂ ಓದಿಸಿಕೊಳ್ಳುತ್ತಿತ್ತು. ಕೆಲವು ಪೋಸ್ಟ್ ಮನ್ ಗಳು ಅಂಚೆ ಕಾರ್ಡುಗಳನ್ನು ಓದುವುದು ತಮ್ಮ ಹಕ್ಕೆಂದೇ ಭಾವಿಸುತ್ತಿದ್ದರು.


ಆ ಮಾತು ಬದಿಗಿರಲಿ. ನನ್ನಪ್ಪ (ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.


ಬೆಂಗಳೂರಿನ ಕನ್ನಡಪ್ರಭ, ಕಾರ್ಯನಿರ್ವಾಹಕ ಸಂಪಾದಕ ರವಿ ಹೆಗಡೆಯಂಥ ನನ್ನ ಮಾಜಿ ಕಂ ಹಾಲಿ ಮಿತ್ರರು (ಅವರ ಪ್ರಕಾರ ಆಲ್‍ಮೋಸ್ಟ್ ಮಾಜಿ, ನನ್ನ ಪ್ರಕಾರ ಇನ್ನೂ ಹಾಲಿ) ತಮ್ಮ Internet Inspectorಗಳ ನೆರವಿನಿಂದ ತನಿಖೆ ಆರಂಭಿಸಿ ಪತ್ತೆ ಹಚ್ಚುವ ಮೊದಲೇ ನನ್ನ ಆಸ್ತಿ declare ಮಾಡುತ್ತಿದ್ದೇನೆ!


ಹಿರಿಯ ಪತ್ರಕರ್ತ ಆತ್ಮೀಯ ಜಿ.ಎನ್.ಮೋಹನ್ ಪ.ಗೋ. ಬಗ್ಗೆ ಬರೆದಾಗಿನಿಂದ ಗುಂಗಿಹುಳವೊಂದು ನನ್ನನ್ನು ಕಾಡುತ್ತಿತ್ತು. ಪ.ಗೋ. ಬಗ್ಗೆ ನನ್ನ ತಂದೆ ಎಲ್ಲೋ, ಏನೋ ಹೇಳಿದ್ದ ನೆನಪು. ಡೀಟೇಲ್ಸ್, ರೆಫೆರೆಸ್ನ್ ಯಾವುದೂ ಸಿಕ್ತಾ ಇರ್ಲಿಲ್ಲ. ಜತೆಗೆ ಕಚೇರಿಯಲ್ಲಿ ಎಡೆಬಿಡದ ಕೆಲಸದ ಒತ್ತಡ, ಭಾನುವಾರವೂ ಸೇರಿದಂತೆ. ನಡುವೆ ಪಯಣದ ರೇಜಿಗೆ. ಒಂದು ಸಂಜೆ ಟ್ರಂಕಿನಲ್ಲಿ ಕಾಗದಗಳ ಬಂಚಿನ ನಡುವೆ ಸಿಕ್ಕದ್ದು ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆ. ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ.


ನಿನ್ನೆ ಸಂಜೆ ಯಾವುದೋ ರಟ್ಟಿನ ಡಬ್ಬ ಬುಡಮೇಲು ಮಾಡುತ್ತಿದ್ದಾಗ ಸಿಕ್ಕ ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖವಿತ್ತು. ತೆಗೆದರೆ ಹತ್ತು ಹದಿನೈದು ಪತ್ರಗಳ ಸರಮಾಲೆ. ಕೆಲವು ಅಂಚೆ ಕಾರ್ಡುಗಳು - ಮತ್ತೆ ಕೆಲವು ಸುದೀರ್ಘ ಇನ್‍ಲೆಂಡ್ ಲೆಟರುಗಳು. ಬಾಕಿಯಿದ್ದ ಕಚೇರಿ ಕೆಲಸದ ನಡುವೆ ಎರಡು ಪತ್ರಗಳನ್ನು ಓದಿದೆ. ಹಾಗೆಯೇ ಒಂದೆರಡು ಚಿತ್ರಗಳನ್ನು ತೆಗೆದೆ. ಎಪ್ಪತ್ತರ ದಶಕದ ಆರಂಭದಲ್ಲಿನ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಹೊಳಹು ಸಿಕ್ಕಿತು. ಕಣ್ಣೆಳೆಯುತ್ತಿತ್ತು ಮೇಜಿನ ಮೇಲೆ ಎಲ್ಲವನ್ನೂ ಹರಡಿ ಮಲಗಿದೆ.


ಕತ್ತಲೆ ಹರಿಯದ ಮುಂಜಾವು, ಕಚೇರಿಗೆ ಹೊರಡಲು ಅವಸರ. ತೋಚಿದಷ್ಟೇ ಗೀಚುತ್ತಿದ್ದೇನೆ.

ಸುದೀರ್ಘ ಪ್ರಸ್ತಾವನೆ, ಮುಂದೆ ಕಾದಿದೆ. ಪ.ಗೋ. ಪತ್ರಗಳಿಂದ ಹೆಕ್ಕಿ ತೆಗೆದ ಮಾಹಿತಿಯಿಂದ.

- ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.
















ಕನ್ನಡ ನಾಡಿನ ಹಿರಿಯ ಪತ್ರಕರ್ತ ’ಸುದ್ದಿಜೀವಿ’ ಶ್ರೀ. ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಶ್ರೀ. ಹಾಲ್ದೊಡ್ಡೇರಿ ಸುಧೀಂದ್ರ. ಇಪ್ಪತ್ತೆರಡು ವರ್ಷಗಳ ಕಾಲ ಡಿ.ಆರ್.ಡಿ.ಓ.ದಲ್ಲಿ ವಿಜ್ಞಾನಿಯಾಗಿ ವಿಮಾನ ಎಂಜಿನ್‍ ಕ್ಷೇತ್ರದಲ್ಲಿ ಕಾರ್ಯಭಾರ.ಸಲ್ಲಿಸಿದ ಶ್ರೀಯುತರು ಪ್ರಸ್ತುತ ಎಚ್.ಎ.ಎಲ್.ನ ವಿಮಾನ ಸಂಧೋಧನೆ ಮತ್ತು ವಿನ್ಯಾಸ ಕೇಂದ್ರದಲ್ಲಿ ವಿಮಾನ ಎಂಜಿನ್ ಹಾಗೂ ಇಂಧನ ಪೂರೈಕೆ ವ್ಯವಸ್ಥೆ ವಿಭಾಗದ ಉಪ ಮಹಾಪ್ರಬಂಧಕ ಹಾಗೂ ಮುಖ್ಯಸ್ಥರು . ವಿಜ್ಞಾನ, ತಂತ್ರಜ್ಞಾನ ವಿಷಯಗಳ ಬಗ್ಗೆ ಲೇಖನ, ಅಂಕಣ ಅವರ ಹವ್ಯಾಸಗಳಲ್ಲಿ ಒಂದು.

ತಂತ್ರಜ್ಞಾನ ಕುರಿತು ಹಲವಾರು ಪ್ರಬಂಧಗಳನ್ನು ಮತ್ತು ಉಪನ್ಯಾಸಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನಗಳಲ್ಲಿ ಮಂಡಿಸಿದ ಶ್ರೀಯುತರು ಕನ್ನಡ ಭಾಷೆಯಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ಪ್ರಜಾವಾಣಿ, ಸುಧಾ, ವಿಜಯ ಕರ್ನಾಟಕ ಮೊದಲಾದ ಕನ್ನಡ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.



ಶೀರ್ಷಿಕೆಯ ೧೯೬೦ರ ದಶಕದ ಛಾಯಚಿತ್ರ:


ನಾಡಿನ ಹಿರಿಯ ಪತ್ರಕರ್ತ ಶ್ರೀ. ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿ ಲಭ್ಯವಾದ ಶ್ರೀ. ಪ. ಗೋ.ಬರೆದ ದಿನಾಂಕ ೧೦ ಏಪ್ರಿಲ್ ೧೯೬೪ರ ಪತ್ರ.
---

ಕೃಪೆ: ಗಲ್ಫ್ ಕನ್ನಡಿಗ

Wednesday, May 27, 2009

’ನೋ ಚೇಂಜ್ ಕಥೆಗಳು’ -- ೧೯...ನಿಸ್ವಾರ್ಥ ಸೇವೆ ಅಂದರೇನ್ರಿ ?


















ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹತ್ತೊಂಬತ್ತನೇ ಅಂಕಣ.



ನಿಸ್ವಾರ್ಥ ಸೇವೆ ಅಂದರೇನ್ರಿ ?

ಯಾರು ಹಾಗೆ ಕೇಳಿದವರು ? ಹಾಂ ನೆನಪಾಯಿತು. ಬೇರೆ ಇನ್ಯಾರೂ ಅಲ್ಲ. ಅವಳು, ನಮ್ಮ ಉದ್ಗಾರಿ ನಂಬರ್ ವನ್‍ರವರ ಮೊಮ್ಮಗಳು. ಅದೇ ಹೆಲ್ಮೆಟ್ ಹಾಕಿ ಟಿ.ವಿ.ಎಸ್. ಹಾರಿಸುವ ಕಾಲೇಜ್ ಕನ್ಯೆ, ಅವಳು ತನ್ನ ಫ್ರೆಂಡ್ ಕೈಯಲ್ಲಿ ಕೇಳಿದ ಪ್ರಶ್ನೆ ಅದು.

ಅಪರೂಪಕ್ಕೊಮ್ಮೆ ಅವಳೂ ಅವಳ ಸ್ನೇಹಿತೆಯೂ ಆ ಟಿ.ವಿ.ಎಸ್.ನಲ್ಲಿ ಡಬಲ್ ರೈಡ್ ಸವಾರಿ ಮಾಡುವ ಅಭ್ಯಾಸವಿದೆ. ಹಾಗೇ ಮೊನ್ನೆಯೂ ಹೋಗುತ್ತಾ ಇದ್ದರು - ನಮ್ಮ ಮನೆ ಎದುರಿನಿಂದಲೇ. ವಿಷಯ ಬಹಳ ಸೀರಿಯಸ್ಸಾಗಿತ್ತೂಂತ ಕಾಣುತ್ತದೆ. ಇಲ್ಲವಾದರೆ ಮನೆ ಗೇಟಿನ ಮುಂದೆಯೇ ನಿಂತು ರಸ್ತೆ ನೋಡುತ್ತಾ ಇದ್ದ ಈ ‘ಅಂಕಲ್’ಗೆ “ಹಲ್ಲೋ” ಕೂಡಾ ಹೇಳದೆ, ಹೋಗಲಿ ನನ್ನತ್ತ ತಿರುಗಿ ಕೂಡಾ ನೋಡದೆ, ಹೇಗೆ ಹೊರಟು ಹೋದಳು ?

ಅದೇ ಸಂಜೆ, ಗೇಟಿನ ಎದುರಿಗೇ ನಿಂತಿದ್ದೆ. ಬೆಳಗಿನ ಅದೇ ವಿಷಯವನ್ನು ಯೋಚಿಸುತ್ತಾ ಇದ್ದೆ. (ಮಾಡಲು ಬೇರೆ ಕೆಲಸವೇನೂ ಇಲ್ಲವಲ್ಲ ?)

ನಿರೀಕ್ಷಿಸಿದಂತೆ ಆ ಹೊತ್ತಿಗೇ, ಟಿ.ವಿ.ಎಸ್. ನಮ್ಮ ರಸ್ತೆಗೆ ಬಂತು. ಅನಿರೀಕ್ಷಿತವಾಗಿ ನನ್ನ ಮುಂದೆಯೇ ನಿಂತಿತು. (ಹಾಗಾದರೆ, ಮಗು ನಾನು ಬೆಳಗ್ಗೆ ನಿಂತಿದ್ದುದನ್ನು ಗಮನಿಸಿದ್ದಾಳೆ!)

ಮೊದಲು, ಅವಳ ಹಿಂದೆ ಅವಳ ಫ್ರೆಂಡ್ ಕುಳಿತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. ಧೈರ್ಯವಾಗಿ “ಏನ್ರೀ, ಏನು ಸಮಾಚಾರ?” ಅಂತ ಕೇಳಿಯೂ ಬಿಟ್ಟೆ.

“ವ್ಹಾಟ್ ಅಂಕಲ್? ನಾನು ರೀ... ಅಂತ ಹೇಳಿದ್ದಕ್ಕೆ ತಮಾಷೆ ಮಾಡ್ತೀರಾ?” ಎಂಬ ಪ್ರಶ್ನಾ-ಉತ್ತರದ ಜೊತೆಗೆಯೇ “ಅವಳು ಬೆಂಗ್ಳೂರಿನವಳು. ಹಾಗಾಗಿ ರೀ ಅಂತ ಸೇರಿಸ್ದೆ. ಅಷ್ಟೆ, ಬೇರೇನೂ ಇಲ್ಲ” ಎಂಬ ವಿವರಣೆಯೂ ಸೇರಿತು.

ಸರಿಯಮ್ಮಾ ಗೊತ್ತಾಯಿತು. ಆದರೆ, ನಾನು ಕೇಳಬೇಕೂಂತ ಇದ್ದದ್ದು ಅದನ್ನಲ್ಲ, ನಿನ್ನ ‘ನಿಸ್ವಾರ್ಥ’ದ ಪ್ರಶ್ನೆಗೆ ಉತ್ತರ ಸಿಕ್ಕಿತೋಂತ ಕೇಳುವ ಅಂದಾಜು ಮಾಡಿದ್ದೆ.

ಬಿಡಿ ಅಂಕಲ್, ಅದೆಲ್ಲ ಟೆಕ್ಸ್‍ಟ್ ಬುಕ್ಸ್ ಒಳಗಿನ ಬದನೆಕಾಯಿ. ಏನೂ ಫಲ ನಿರೀಕ್ಷಿಸದೆ ಸೇವೆ ಮಾಡುವವರು ಯಾರಿದ್ದಾರೆ ಈ ಕಾಲದಲ್ಲಿ ? ಸುಮ್ಮನೆ ನಿಸ್ವಾರ್ಥ ಸೇವೆ ಅಂತ ಬಾಯಲ್ಲಿ ಬಡಾಯಿ ಕೊಚ್ಚಿಕೊಳ್ಳುವವರು ಮಾತ್ರ ಇರುವುದು.

ಅಂಥಾದ್ದೇನಾದ್ರೂ ಅನುಭವ ಆಗಿದೆಯಾ ನಿನಗೆ ?

ಅವಳು “ಇಲ್ಲ -ಇಲ್ಲ -ಇಲ್ಲ” ಎಂದಾಗಲೇ ಅರ್ಥವಾಯಿತು.“ಅದನ್ನು ಬೇಕಾದರೆ ಇನ್ನು ಯಾವಾಗಲಾದರೂ ಹೇಳು. ಆದರೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರು ಇಲ್ಲವೇ ಇಲ್ಲ ಅಂತ ಮಾತ್ರ ಹೇಳಬೇಡ”

-ಹೋ,ಗೊತ್ತಾಯಿತು. ಮುಂದಿನ ಸೆಂಟೆನ್ಸ್ ‘ಅಂಥವರು ಹಿಂದೆ ಇದ್ದರು,ಆ ನಂತರವೂ ಇದ್ದರು. ಈಗ್ಲೂ ಇದ್ದಾರೆ’ ಅಂತ ಅಲ್ವಾ ?

ನಿಜ ಮರೀ, ಸರಿಯಾಗಿಯೇ ಹೇಳಿದೆ. ಯಾರಾದ್ರೂ ಅಂಥವರ ಕಥೆ ಗೊತ್ತಾ? ನಿನಗೆ ಗೊತ್ತಿರಲಾರದು -ಅನ್ನುವುದು ನನಗೂ ಗೊತ್ತು. ಕೇಳ್ತೀಯಾ ಒಂದೆರಡನ್ನು ?

.......... ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ತನ್ನ ಫೋಟೊ ಅಥವಾ ಹೆಸರಾದ್ರೂ ಪೇಪರಿನಲ್ಲಿ ಬರಲಿ ಎನ್ನುವ ಆಸೆಯೂ ಇಲ್ಲದೆ, ಸಲ್ಲಿಸಿದ್ದ ಕಿರುಸೇವೆಗಳ ಕಥೆ -

ಸುಮಾರು ೧೯೫೯ರಲ್ಲಿ ಪಟ್ಟಣ ಪರಿಸರದಲ್ಲಿ ಒಬ್ಬ ಭಿಕ್ಷುಕನ ದಿನನಿತ್ಯ ಸಂಚಾರ ಇತ್ತು. ಅವನಿಗೆ ಎರಡು ಕಾಲುಗಳೂ ಇರಲಿಲ್ಲ. ಒಂದು ಸಣ್ಣ ಹಲಿಗೆಗೆ ನಾಲ್ಕು ಹಳೆ ಬೇರಿಂಗ್‍ಗಳು ಜೋಡಿಸಿದ್ದ ಒಂದು ತಳ್ಳುಗಾಡಿ ಮಾತ್ರ ಅವನ ಆಸ್ತಿ.ಅದರಲ್ಲಿ ಕುಳಿತು,ಕೈಗಳನ್ನು ನೆಲಕ್ಕೆ ಊರಿ ತಳ್ಳಿದರೆ ಸಾಕು ‘ಗಾಡಿ’ ಸರಾಗವಾಗಿ ಓಡುತ್ತಾ ಇತ್ತು. ಅದರಲ್ಲಿ ಕುಳಿತೇ ಅವನ ಭಿಕ್ಷಾಟನೆ.

ಒಂದು ದಿನ ಅವನ ಸಂಚಾರದ ವೇಳೆಯಲ್ಲಿ ಆಕಸ್ಮಿಕವಾಗಿ ರಸ್ತೆ ಬದಿಯಿಂದ ನಡು ರಸ್ತೆಗೆ ಬಂದ ಒಂದು ಮಗು ಬಸ್ಸಿನ ಅಡಿಗೆ ಬೀಳಲಿರುವುದನ್ನು ಗಮನಿಸಿದ ಆ ಭಿಕ್ಷುಕ. ತನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೆ ರಸ್ತೆಯ ನಡುವಿಗೆ ತನ್ನ ಗಾಡಿ ಚಲಾಯಿಸಿ, ಮಗುವನ್ನು ‘ಸೆಳೆದುಕೊಂಡು’ ತನ್ನ ಗಾಡಿಗೆ ಏರಿಸಿ, ಇನ್ನೇನು ಬಸ್ ಮೈಮೇಲೆ ಹರಿಯಿತು ಎನ್ನುವ ಮೊದಲು ಫುಟ್‍ಪಾತಿಗೆ ತಂದುಬಿಟ್ಟ. ಕೂಡಲೆ ಬ್ರೇಕ್ ಹಾಕಿದ್ದ ಬಸ್ಸಿನ ಡ್ರೈವರ್ ಸಹಿತ ಇದ್ದ ಎಲ್ಲರೂ, ಆಚೆಗೆ ಮಗುವಿನ ಹೆತ್ತವರೂ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ಹಾಗೆ, ಮಗುವನ್ನು ಅದರ ತಂದೆ ತಾಯಿಗಳಿಗೆ ಒಪ್ಪಿಸಿದ. ತಂದೆ, ಬಹುಮಾನವಾಗಿ ಕೊಡಲು ಎರಡು ರೂಪಾಯಿಯ ಒಂದು ನೋಟನ್ನು ಮುಂದೆ ಚಾಚಿದಾಗ “ಇದು ದುಡ್ಡಿಗಾಗಿ ಮಾಡಿದ ಕೆಲಸವಲ್ಲ, ಮನುಷ್ಯನಾಗಿ ಮಾಡಿದ್ದು,” ಎಂದು (ತುಳುವಿನಲ್ಲಿ) ಹೇಳಿ, ಬಹುಮಾನವನ್ನು ನಿರಾಕರಿಸಿ ಹೊರಟು ಹೋದ.

...... ಸಾಮಾನ್ಯ ೧೯೭೨ರಲ್ಲಿ ಒಂದು ಬಾರಿ ಫಳ್ನೀರ್ ರಸ್ತೆ (ಮಳೆಯಿಂದಾಗಿ) ಹೊಂಡ ಬಿದ್ದು ಕುಲಗೆಟ್ಟು ಹೋಗಿತ್ತು. ಮೋತಿ ಮಹಲ್ ಎದುರಿಗೆ ಇದ್ದ ಹೊಂಡಗಳಲ್ಲಿ ಕೆಲವು ಯುವಕರು ಬಾಳೆಸಸಿ (ಯಾಕಾಗಿ ಅಂತ ಅಂದಾಜು ಇದೆಯಲ್ಲ ?) ನೆಡುತ್ತಾ ಇದ್ದುದನ್ನು ತಿಳಿದ ಒಬ್ಬ ಪೇಪರಿನವರು ಅದರ ಫೋಟೋ ತೆಗೆಸಿದರು. ಆದರೆ ಫೋಟೋದಲ್ಲಿ ಹೊಂಡಗಳ ‘ಗಾತ್ರ’ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಒಬ್ಬರು ‘ಫಿಯೆಟ್’ ಕಾರ್ ಮಾಲಕರು, ತನ್ನ ಕಾರನ್ನೇ ಒಂದು ಹೊಂಡಕ್ಕೆ ಇಳಿಸಿ ಒಳಕ್ಕೆ ಸಿಕ್ಕಿಸಿ “ಮಿಸ್ಟರ್ ಈಗ ಒಂದು ಫೋಟೋ ತೆಗೆಯಿರಿ” ಎಂದರು. ಚಿತ್ರ ತೆಗೆದಾದ ಮೇಲೆ, ಕಾರನ್ನು ಮೇಲಕ್ಕೆತ್ತಲು ಸುಮಾರು ಅರ್ಧ ಗಂಟೆ ಬೇಕಾಯಿತು. ಆಗ, ಅವರಿಗಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿದಾಗ “ಛೆ ! ಅದರಲ್ಲಿ ಏನಿದೆ, ನೀವು ಮಾಡುತ್ತಾ ಇರುವುದು ಪಬ್ಲಿಕ್ ಸರ್ವಿಸ್ ಅಂತ ಗೊತ್ತು. ಈ ಫೋಟೋ ಪೇಪರಿನಲ್ಲಿ ಬಂದ ಕಾರಣದಿಂದಲಾದರೂ ಈ ರೋಡ್ ಸರಿ ಆದರೆ ಸಾಕು” ಎಂದು ಹೇಳಿ, ಕಾರ್ ಮೇಲಕ್ಕೆತ್ತಿದ ನಂತರ ಹೊರಟು ಹೋದರು. (ಫೋಟೋ ಪೇಪರಿನಲ್ಲಿ ಪ್ರಕಟವಾದ ಮೇಲೆ ಅದೇ ರಸ್ತೆ ಕಾಂಕ್ರೀಟ್ ಲೇಪ ಆಯಿತೆನ್ನುವುದು ಮತ್ತಿನ ಸುದ್ದಿ).

ಇಂಥಾದ್ದೇ ‘ನಿಸ್ವಾರ್ಥ’ ಘಟನೆಗಳು ಇಂದಿಗೂ ನಡೆಯುತ್ತಾ ಇಲ್ವಾ ?

“ಇದೆ ಅಂಕಲ್” ಎಂದ ಹುಡುಗಿ, ತನ್ನ ಅನುಭವವನ್ನು ಹೇಳಲು ಸಂಕೋಚಪಟ್ಟವಳ ಹಾಗೆ ವರ್ತಿಸಿ, ನಿಧಾನವಾಗಿ ಟಿ.ವಿ.ಎಸ್. ತಳ್ಳಿಕೊಂಡು ಹೋಗುವ ಮೊದಲು, ರಸ್ತೆಯಲ್ಲಿ ಬಿದ್ದಿದ್ದ ಬಾಟ್ಲಿ ತುಂಡು ಒಂದನ್ನು ಹೆಕ್ಕಿ ಬದಿಯ ಚರಂಡಿಗೆ ಎಸೆದುದು ಕಂಡಿತು.

---
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)


ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.

----
ಶೀರ್ಷಿಕೆಯ ೧೯೭೦ರ ದಶಕದ ಛಾಯಚಿತ್ರ:

ದಿನಾಂಕ ೧೨ ಜುಲೈ ೧೯೭೮ರಂದು ಡ್ರೆಜಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕ್ಯಾಪ್ಟನ್. ಎಸ್. ಕೆ. ಸೋಮಯಾಜುಲು ಅವರು ನವ ಮಂಗಳೂರು ಬಂದರಿನಲ್ಲಿ ಕಾರ್ಯ ನಿರ್ವಹಿಸುತಿದ್ದ " ಎಂ. ಒ. ಟಿ.- VIII ಡ್ರೆಜ್ "ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ನವ ಮಂಗಳೂರು ಬಂದರಿನ ಚೀಫ್ ಎಂಜಿನಿಯರ್ ಶ್ರೀ. ಪಂಡಿತಾರಾದ್ಯ ಅವರೊಂದಿಗೆ ಅಂದಿನ " ಸಂಯುಕ್ತ ಕರ್ನಾಟಕ" ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ.

----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6804.html

---

Sunday, May 24, 2009

’ನೋ ಚೇಂಜ್ ಕಥೆಗಳು’ -- ೧೮... ಬಾಲ ಸೇರಿಸಿ ಬದಲಾವಣೆ !




















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೆಂಟನೇ ಅಂಕಣ.


ಬಾಲ ಸೇರಿಸಿ ಬದಲಾವಣೆ !


ಸರ್, ಸಂಪಾದಕರಿಗೆ ಬಾಲ ಬೇಡವಾ ? ಎಂಬ ಪ್ರಶ್ನೆ ಬಹಳ ಹಿಂದೊಮ್ಮೆ ನವಭಾರತ ಪತ್ರಿಕೆಯ ನೌಕರಿಯಲ್ಲಿದ್ದಾಗ ಎದುರಿಸಿದ್ದು.

ಈಗ ನಾಲ್ಕು ದಿನಗಳ ಮೊದಲು `ತ್ರಿಪಾಠಿ'ಯವರ ಜೊತೆಗೆ ಹರಟೆ ಹೊಡೆಯತ್ತಿದ್ದಾಗ ನೆನಪಿಗೆ ಬಂತು.
ಆ ನೆನಪಿಗೆ ಸಂದರ್ಭ ಒದಗಿಸಿದವರು ``ಮಿಸ್ಟರ್ ಪ.ಗೋ. ಇಂಗ್ಲಿಷ್‍ನಲ್ಲಿ ಗ್ರಾಮರ್ ಅಂತ ಇರೋ ಹಾಗೆ ನಮ್ಮ ಕನ್ನಡದಲ್ಲಿ ಏನೂ ಇಲ್ವಾ ?'' ಎಂದಿದ್ದರು.

(ಗ್ರಾಮರ್ - ವ್ಯಾಕರಣಗಳ ಬಗ್ಗೆ ಪ್ರಶ್ನೆಯನ್ನು ನಿಜವಾಗಿ ಕೇಳಬೇಕಾಗಿದ್ದ ಪಂಡಿತರ ಬದಲಿಗೆ ಇವರು ಯಾಕೆ ಕೇಳುತ್ತಿದ್ದಾರೆ ? ಬಹುಶಃ ಅವರ ಎಂದಿನ ಅಭ್ಯಾಸದಂತೆ `ತಿಳುಕೊಳ್ಬೇಕೂ ಅಂತ' ಕೇಳುತ್ತಿರಬೇಕು)

``ಇಲ್ಲದೆ ಏನು ತ್ರಿಪಾಠಿ ಸಾಹೇಬರೇ, ಗ್ರಾಮರ್ ಅಂದರೆ ವ್ಯಾಕರಣ ಅಲ್ವಾ? ಯಾಕೆ ಕೇಳಿದ್ರಿ?'' ಅವರ ಒಂದು ಪ್ರಶ್ನೆಗೆ ಎರಡು ಮರುಪ್ರಶ್ನೆ ಹಾಕಿದೆ.

`ಹೌದಲ್ವಾ, ಭಾಷೆಯ ಯೂಸಿಗೆ ಇಂಪೋಸ್ ಮಾಡಿದ ರೂಲ್ಸಿಗೇ ಕನ್ನಡದಲ್ಲಿ ವ್ಯಾಕರಣ ಅಂತ ಹೇಳ್ತಾರೆ...... ಈಗ ನೆನಪಾಯಿತು. ಆದ್ರೆ ಅದೂ...... ಮಾತಿಗಿಂತಲೂ ಮುಖ್ಯವಾಗಿ ಬರಹಕ್ಕಲ್ವಾ ಬೇಕಾಗೋದೂ ?'

- ಹೌದು ಸ್ವಾಮೀ, ಯಾವ ನಿಯಮವಾದರೂ ಹಾಗೇ. ಎಲ್ಲರೂ ಅವುಗಳನ್ನು ತಿಳಿದುಕೊಂಡು - ಎಲ್ಲರಿಗೂ ತಿಳಿಯುವ - ಬರಹದಲ್ಲಿ ಉಪಯೋಗಿಸಿದ್ರೆ ನಿಯಮಕ್ಕೊಂದು ಬೆಲೆ ಬರ್‍ತದೆ. ಅಂಥಾ ನಿಯಮಗಳು ಇದ್ದವು. ಇವೆ, ಇರುತ್ತವೆ, ನೋಡಿ, ಈಗ ನಾನು ಮಾತನಾಡಿದ್ದೂ -ಭೂತ- ವರ್ತಮಾನ- ಭವಿಷ್ಯತ್ ಎನ್ನುವ ಕಾಲನಿಯಮದ ಪ್ರಕಾರ ಅಂತ ಇಟ್ಟುಕೊಳ್ಳಿ. ಇಂಥಾ ವಿವರ ಎಲ್ಲಾ ನೆನಪಿಟ್ಟುಕೊಳ್ಳಲಿಕ್ಕೆ ಮನಸ್ಸಿಲ್ಲದವರು ಅಥವಾ ಸಾಧ್ಯವಿಲ್ಲದವರು, ಕಾಲನಿಯಮವನ್ನು ಬರಹದಲ್ಲಿ ಅನುಸರಿಸದೆ ಇರುವುದೂ ಇದೆ.

ಅಂಥವರಿಗಾಗಿಯೇ ಹುಟ್ಟಿಕೊಂಡ ಅಥವಾ ಅವರೇ ಹುಟ್ಟಿಸಿಕೊಂಡ ಇನ್ನೊಂದು ನಿಯಮದ ಹ್ರಸ್ವವಿಧಾನ ಒಂದರ ಕಥೆ ಕೇಳಿ.

ವ್ಯಾಕರಣದಲ್ಲಿ ವ್ಯಂಜನಾಕ್ಷರಗಳನ್ನು ಅಲ್ಪಪ್ರಾಣ - ಮಹಾಪ್ರಾಣ ಅಂತ ವಿಂಗಡಿಸುತ್ತಾರಂತೆ, (ಸಂಪಾದಕರಿಗೆ ಬಾಲ ಬೇಡವೆ ? ಎಂಬ ಪ್ರಶ್ನೆಯ ಪ್ರಕರಣ ಮತ್ತು ಆ ಪ್ರಶ್ನೆ ಎತ್ತಿದವರ ಸಮಸ್ಯೆಯ ಹಿನ್ನೆಲೆಗಳೆಲ್ಲ ಆ ಹೊತ್ತಿಗೆ ನೆನಪಿಗೆ ಬಂದಿದ್ದವು.) ಅಷ್ಟೆಲ್ಲವನ್ನೂ ಉಚ್ಚರಿಸಿ ವಿವರಿಸಿ ಮನದಟ್ಟು ಮಾಡುವಷ್ಟು ತಾಳ್ಮೆ - ಅಥವಾ ಮನಸ್ಸು - ಇಲ್ಲದಿದ್ದ ಉಪಾಧ್ಯಾಯರಿಂದ ಶಿಕ್ಷಣ ಪಡೆದ ಒಬ್ಬರ ಉದಾಹರಣೆ, ಇದು:

- ಹಿಂದೆ, ನಾನು ನವಭಾರತದಲ್ಲಿ ಇದ್ದಾಗ ಒಮ್ಮೆ ``ಸಂಪಾದಕರಿಗೆ ಬಾಲ ಬೇಡವಾ ಸರ್ ?'' ಎಂದು ಒಬ್ಬರು ಪ್ರೂಫ್ ರೀಡರ್ ಕೇಳಿದ್ದರು. ಅವರ ಹೆಸರು ರಘುರಾಮ ಅಂತ. ಅವರ ಉಪಾಧ್ಯಾಯರು ಅವರಿಗೆ ``ಅಲ್ಪಪ್ರಾಣದ ಅಕ್ಷರವನ್ನು ಮಹಾಪ್ರಾಣವಾಗಿ ಬದಲಾಯಿಸಬೇಕಾದರೆ ಅದಕ್ಕೊಂದು `ಬಾಲ' ಕೊಟ್ಟರಾಯಿತು. ನಿನ್ನ ಹೆಸರಿನಲ್ಲಿ ಇದೆಯಲ್ಲಾ ಅಂಥಾದ್ದೇ ಒಂದು `ದ'ಕ್ಕೆ ಬಾಲ ಕೊಟ್ಟರೆ ಅದು `ಧ' ಆಗುತ್ತದೆ'' ಎಂದು ಸರಳವಾಗಿ ವಿವರಿಸಿದ್ದರಂತೆ.

ಆ ಸರಳ ವಿವರಣೆ ಅವರ ಎಳೆಯ ಮನಸ್ಸಿಗೆ ನಾಟಿತು. ದ-ಧ ಅಕ್ಷರಗಳು ನೆನಪಿನಲ್ಲಿ ಗಟ್ಟಿಯಾಗಿ ಉಳಿದವು. ಕ್ರಮೇಣ, ಅವೆರಡರ ಒಳಗಿನ ವ್ಯತ್ಯಾಸದ ಬಗ್ಗೆ ಗೊಂದಲವೂ ಹುಟ್ಟಿಕೊಂಡಿತು. ಬಾಲ ಬೇಕಾದ `ಧ' ಯಾವುದು? ಬೇಧ ಅಥವಾ ಭೇದ ? ದರ್ಮ -ಧರ್ಮ,ಭದ್ರ -ಭಧ್ರ ?? ಇಂಥವುಗಳ ಜೊತೆಗೆ ಆಗಾಗ ಅಲ್ಲಲ್ಲಿ ಕಾಣುತ್ತಿದ್ದ ಜನಾರ್ದನರ ಹೆಸರುಗಳಿಗೆ ಬಾಲ ಸೇರಿಕೊಂಡು ಅವು `ಜನಾರ್ಧನ'ರಾದ ನಿದರ್ಶನಗಳೂ ಗೊಂದಲವನ್ನು ಹೆಚ್ಚಿಸಿದವು. ಬಹಳಷ್ಟು ಯೋಚಿಸಿ ಅವರು `ಬಹುಶಃ ಹೆಚ್ಚಿನ ಎಲ್ಲ ದ- ಗಳಿಗೂ ಬಾಲ ಬೇಕಾಗಬಹುದು' ಎಂದು ಭಾವಿಸಿದ ಕಾರಣ ಸಂಪಾದಕರಿಗೆ ಬಾಲದ ಅಗತ್ಯವಿಲ್ಲವೆ ? ಎಂಬ ಪ್ರಶ್ನೆ ಎತ್ತಿದ್ದರು.

ರಘುರಾಮರವರು ಕಿಡಿಗೇಡಿಯಲ್ಲ. ಅವರ ಸಮಸ್ಯೆ ಪ್ರಾಮಾಣಿಕವಾದುದು ಎಂದು ತಿಳಿದಿತ್ತು. ಆದ್ದರಿಂದ, ಸಂಪಾದಕ ಶಬ್ದದಲ್ಲಿ ಇರುವ `ದ'ಕ್ಕೆ ಬಾಲದ ಅಗತ್ಯವಿಲ್ಲ ಎಂದು ಹಿರಿಯರೊಬ್ಬರು ಅವರಿಗೆ ತಿಳಿಸಿದ ಮೇಲೆ ``ಸ್ವಾಮೀ ರಘುರಾಮರೇ. ಸಂಪಾದಕರಿಗೆ ಬೇರೆಯವರು ಬಾಲ ಬಿಚ್ಚದ ಹಾಗೆ ನೋಡಿಕೊಳ್ಳುವಷ್ಟು ಸ್ವಂತ ಶಕ್ತಿ ಇದೆ. ಅವರ ಸ್ವಂತಕ್ಕೆ ಆ ಬಾಲ ಬೇಕಾಗಿಲ್ಲ'' ಎಂದು ನಾನೂ ಮಾತು ಸೇರಿಸಿದೆ.

ಆ ನಂತರದ ವರ್ಷಗಳಲ್ಲಿ ಒಮ್ಮೆ ಎದುರಾದ್ದು ಇನ್ನೊಂದು ರೀತಿಯ ಅಕ್ಷರಗಳಿಗೆ ಅಂಟಿರದ `ವಕ್ರಬಾಲ'ಗಳ ಸಮಸ್ಯೆ. ರ -ಒತ್ತು ಮತ್ತು ಋ ಒತ್ತುಗಳದ್ದು. ಆವ ಅಕ್ಷರಕ್ಕೆ ಯಾವ ಒತ್ತು ? ಶೃತಿಯನ್ನು ಶ್ರುತಿ ಎಂದು ಬರೆಯಬೇಕೊ ? ಶ್ರುತಿ ಮತ್ತೆ ಶೃತಿ ಎರಡರ ಅರ್ಥವೂ ಒಂದೆಯೋ ? ಗೃಹವನ್ನು ಗ್ರಹ ಅಂತ ಬರೆದರೆ ತಪ್ಪೇನು ?

ಅಂಥಾ ಪ್ರಶ್ನೆಗಳನ್ನು ಕೇಳುತ್ತಿದ್ದ ವ್ಯಕ್ತಿ `ಇನ್ನಿಲ್ಲ' ಹಾಗಾಗಿ ಹೆಸರು - ವಿವರ ಇಲ್ಲಿ ಬೇಡ.

ನಿಯಮಗಳನ್ನೂ ಅವುಗಳನ್ನು ಅನುಸರಿಸಿದರೆ ಆಗುವ ಅನುಕೂಲಗಳನ್ನೂ ತಿಳಿದುಕೊಳ್ಳುವಷ್ಟು ಬಿಡುವಿಲ್ಲದವರು `ನಾನು ಮಾಡಿದ್ದೇ ಸರಿ' ಎನ್ನುವ ಪ್ರವೃತ್ತಿ ಹಿಂದೆಯೂ ಇತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ, ಕೆಲಸದಲ್ಲಿರುವ ಅವಸರವೂ ಆ ಪ್ರವೃತ್ತಿಗೆ ಕೆಲವೊಮ್ಮೆ ಒತ್ತಾಸೆ ಕೊಡುತ್ತದೆ ( ಈ ಬರಹದ ಅಕ್ಷರ ಜೋಡಿಸುತ್ತಿರುವವರು ದಯಮಾಡಿ ಕ್ಷಮಿಸಿ ). ಇಂದಿನ ವೇಗದ ಯುಗದಲ್ಲಿ ಅದು ಮಹಾಪರಾಧವೇನೂ ಆಗುವುದಿಲ್ಲ.

ಭಾಷೆ ಒಂದು ಸಂವಹನದ ಮಾಧ್ಯಮ. ಅದು ಬದಲಾಗುತ್ತಲೇ ಇರುತ್ತದೆ. ಬಹುಶಃ ಬೆಳೆದೂ ಬೆಳೆಯುತ್ತದೆ. ಅಲ್ಲವೆ ತ್ರಿಪಾಠಿಜಿ ?

``ನೀವು ಹೇಳೋದು ಪ್ರೊಬೆಬ್ಲಿ ರಾಯಿಟ್'' ಎಂದು `ಪ್ಯೂರ್' ಕನ್ನಡದಲ್ಲಿ ಉತ್ತರಿಸಿ ತ್ರಿಪಾಠಿಯವರು ಎದ್ದು ಹೋದರು.


--------

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.


ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.
----

ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

೧೯೮೦ರ ದಶಕದಲ್ಲಿ ಧರ್ಮಸ್ಥಳದಲ್ಲಿ ನಡೆದ ಶ್ರೀ.ಬಾಹುಬಲಿ ಮಹಾ ಮಸ್ತಕಾಭಿಷೇಕದ ಶ್ರೀ ಪ.ಗೋ. ಅವರು ಸಂಯೋಜಿಸಿದ ಈ ಛಾಯಾಚಿತ್ರ ಪತ್ರಿಕೋದ್ಯಮಕ್ಕೆ ಪೂರಕವಾದ ಎಲ್ಲ ವಿಭಾಗಗಳ ಪರಿಣತ ಶ್ರೀ. ಪ. ಗೋಪಾಲಕೃಷ್ಣರು ಛಾಯಾಚಿತ್ರದ ದೃಶ್ಯ ಸಂಯೋಜನೆಯಲ್ಲಿ ನಿಪುಣರು ಎಂದು ದೃಢಪಡಿಸುತ್ತದೆ.
---
ಕೃಪೆ: ಗಲ್ಫ್ ಕನ್ನಡಿಗ

Sunday, May 17, 2009

’ನೋ ಚೇಂಜ್ ಕಥೆಗಳು’ - ೧೭.ತೇಮಾನು ಮಂತ್ರ ಜಪಿಸುತ್ತೀರಮ್ಮಾ !














ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೇಳನೇ ಅಂಕಣ.




ತೇಮಾನು ಮಂತ್ರ ಜಪಿಸುತ್ತೀರಮ್ಮಾ !
ಚಿಕ್ಕವನಾಗಿದ್ದಾಗಿನಿಂದಲೂ ನಾನು ಕೇಳುತ್ತಿದ್ದ ಒಂದು ಶಬ್ದ ಕಳೆದ ವಾರವೂ ಕೇಳಿಸಿತು. ಆ ಶಬ್ದದ ಮೂಲ ಅಂದೂ ಗೊತ್ತಿರಲಿಲ್ಲ. ಈಗಲೂ ಗೊತ್ತಿಲ್ಲದಿರಲು ಅದರ ಪರಿಚಯ ಗಂಡಸರಿಂದಲೂ ಹೆಚ್ಚಾಗಿ ಹೆಂಗಸರಿಗೇ ಇರುವುದು ಒಂದು ಕಾರಣ - ಆಗಿರಲೂ ಬಹುದೆನ್ನಿ.

ಶಬ್ದ ಯಾವುದು ಅಂತ ಕೇಳ್ತೀರಾ ? ಅಂಥಾ ದೊಡ್ಡ ಅಥವಾ ಕಠಿಣ ಶಬ್ದವೇನೂ ಅಲ್ಲ. ಬರೇ ಮೂರಕ್ಷರದ ಶಬ್ದ ಅದು. ತೇ -ಮಾ-ನು ಎಂಬ ಅಕ್ಷರಗಳು ಮಾತ್ರ ಅದರಲ್ಲಿ ಇರುವುದು.

ಆ ಮೂರಕ್ಷರ ಏನಾದರೂ ಕೇಳಿದರೆ ಬಂದ ಮೈನಡುಕ ಕಡಿಮೆಯಾಗಲು ಕಡಿಮೆ ಎಂದರೆ ಮೂರು ಗಂಟೆಗಳ ಹೊತ್ತು ಆದರೂ ಬೇಕು ಎಂಬುದು ನನ್ನ ಅನುಭವ. ಆದರೆ ನಾನು ಮೈನಡುಕ ಬರಿಸಿಕೊಂಡ ಸಂದರ್ಭಗಳು ಹೆಚ್ಚಿರಲಿಲ್ಲ - ಕಳೆದ ಮೂವತ್ತು ವರ್ಷಗಳಲ್ಲಿ ಮೂರು ಬಾರಿ ಮಾತ್ರ ಹಾಗಾಗಿತ್ತಷ್ಟೇ. ಇತ್ತೀಚೆಗೆ ಹಾಗಾದುದು, ಅದೇ ಹೇಳಿದೆನಲ್ಲಾ ಕಳೆದ ವಾರ.

ಈ ಶಬ್ದ ಎಲ್ಲಿಂದ ಬಂತು ? ಯಾವ ಭಾಷೆಯಲ್ಲಿ ಹುಟ್ಟಿಕೊಂಡು ಕರಾವಳಿ ಕನ್ನಡದಲ್ಲಿ ಬಂದು ನೆಲೆಸಿತು ? ಎಂದು
ತಿಳಿಯಲೇಬೇಕೆಂಬ ಹಠ ಮೂರನೆ ಬಾರಿ ಅದನ್ನು ಕೇಳಿಸಿಕೊಂಡಾಗ ಮೂಡಿತು. ಬೇರೆಲ್ಲಿ ಅಲ್ಲವಾದರೂ ಕಿಟೆಲ್ ಶಬ್ದಕೋಶದಲ್ಲಿ ಅದು ಇರಬಹುದು. ಆ ಕಿಟೆಲ್ ಡಿಕ್ಷನರಿ ಇನ್ನೆಲ್ಲಿಯೂ ಇಲ್ಲವಾದರೂ ನಮ್ಮ ಪಂಡಿತರಲ್ಲಿ ಇದ್ದೇ ಇದ್ದೀತು. ಅದನ್ನು ನೋಡಲೇಬೇಕು ಎಂದೆ. ಪಂಡಿತರಲ್ಲಿಗೆ ಓಡಿದೆ -ಅಲ್ಲ ಧಾವಿಸಿದೆ.

ಅವರಲ್ಲಿನನ್ನ ಡಿಕ್ಷನರಿಯ ಅಗತ್ಯವನ್ನು ಹೇಳಿಕೊಂಡೆ, ‘ಯಾವ ಶಬ್ದದ ಅರ್ಥ ಬೇಕಾಗಿದೆ ನಿಮಗೆ ?’ ಎಂದವರು ಸಹಜವಾಗಿ ಕೇಳಿದರೂ ಉತ್ತರ ಕೊಡದೆ “ಡಿಕ್ಷನರಿ ಇದ್ದರೆ ಕೊಡಿ ಸ್ವಾಮಿ, ಶಬ್ದ ಆಮೇಲೆ ಹೇಳ್ತೇನೆ” ಎಂದು ಬಿಗುಮಾನ ತೋರಿಸಿದೆ. ಪಾಪ ! ಹುಡುಕಿ ತಂದುಕೊಟ್ಟರು. ಸ್ವಾಭಾವಿಕ ಕುತೂಹಲದಿಂದ ನನ್ನೆದುರಿನ ಕುರ್ಚಿಯಲ್ಲೇ ಕುಳಿತು ನನ್ನತ್ತ ನೋಡುತ್ತಲೇ ಉಳಿದರು.

ಅವಸರವಸರವಾಗಿ ಪುಟ ಮಗುಚಿದೆ. ೧೮೯೪ರಲ್ಲಿ ಪ್ರಕಟವಾಗಿದ್ದ ಪುಸ್ತಕದ ೧೯೯೪ರ ಮರು ಮುದ್ರಣದ ಆವೃತ್ತಿಯ ೭೪೭ನೇ ಪುಟದಲ್ಲಿ ಅದನ್ನು ಕಂಡೊಡನೆ ‘ಹೋ ಸಿಕ್ಕಿತು !’ ಎಂದು ಕೂಗಿಕೊಂಡೆ.

“ಸಿಕ್ಕಿದ್ದಾದರೂ ಏನು ಮಹರಾಯರೆ ? ಸ್ವಲ್ಪ ಬಿಡಿಸಿ ಹೇಳಿ” ಎಂದು ಕೇಳಿಕೊಂಡ ಪಂಡಿತರಿಗೆ -

“ಬಿಡಿಸಿದ್ದೇನೆ -ಪುಸ್ತಕ. ಈಗ ಹೇಳುತ್ತೇನೆ-ಓದಿ” ಎಂದು ಹೆಮ್ಮೆಯಿಂದ ಹೇಳಿ, ಓದಿದ್ದೇನು ? ಕೇಳಿ.

“....... ತೇಮಾನ - Waste from rubbing especially metals (ತೇಗಡೆ) loss in assaying metals (ತೇಯ್ಮಾನ) the state of being wasted,above work..afraid of work or lazy (hesitation, delay,sluggishness, ತೇಯ್ಮಾನಕ್ಕಾರ, a mean, penurious man,fond of living at other people's cost) ತೇಮಾನದಿನ್ದ ಹೋಮಾ ಮಾಡಿ, ಗುಮಾನ ಪಟ್ಟ (ಗಾದೆ) ಎಂದೆಲ್ಲ ಏಳು ಪಂಕ್ತಿಯಿಡೀ ಬರದಿದ್ದುದೆಲ್ಲವನ್ನೂ ಪಟಪಟನೆ ಓದಿದೆ. ಕೂಡಲೇ ಕೇಳಿಸಿದ ಪಂಡಿತರ ‘ಪಕ-ಪಕ-ಪಕ-ಪಕ’ ನಗುವಲ್ಲದಿದ್ದರೆ ನನ್ನ ‘ಪಟ ಪಟ’ ಮತ್ತೂ ಮುಂದುವರಿಯುತ್ತಿತ್ತು. ನಗು ಕೇಳಿಸಿತು - ಆದ್ದರಿಂದ ನನ್ನ ಪಟ ಪಟ (ಅಥವಾ ಪಿಟಿಪಿಟಿ ಅಂದುಕೊಳ್ಳಿ) ನಿಂತಿತು.

ನಗುವನ್ನು ಕಷ್ಟಪಟ್ಟು ತಡೆದುಕೊಂಡ ಪಂಡಿತರು “ನಿಮ್ಮ ಗಡಿಬಿಡಿ ಇಷ್ಟಕ್ಕೆಯೋ ? ನನ್ನತ್ರ ಕೇಳಿದ್ದರೆ ಆಗಲೇ ಹೇಳ್ತಿದ್ದೆ. ನಮ್ಮವರೊಟ್ಟಿಗೆ ನಿಮ್ಮವರೂ ಸೇರಿ, ನಮಗಿಬ್ಬರಿಗೂ ತೇಮಾನಿನ ಬಿಸಿ ಮುಟ್ಟಿಸಿದ್ದಾರೆ. ನಿಮ್ಮ ತಲೆಗೆ ಹೊಳೀಲಿಕ್ಕೆ ಅದಕ್ಕೆ ಏಳು ದಿನ ಬೇಕಾಯಿತಾ ?” ಎಂದೇ ಬಿಟ್ಟರು.

ಅವರು ಹೇಳಿದ್ದು ನಿಜ. ಹಾಗಾಗಿ ನನ್ನ ಎಂದಿನ ಅಭ್ಯಾಸ ಬದಲಾಯಿಸಿ, “ತೇಮಾನು -ಬಿಸಿ ಕಥೆ ಯಾವುದಾದರೂ ನೆನಪಿದ್ದರೆ ಹೇಳಿ ಪಂಡಿತರೇ. ಏನಾದ್ರೂ ಹೋಲಿಕೆ ಸಿಕ್ಕೀತೋ ಅಂತ ನೋಡ್ತೇನೆ” ಎಂದೆ ದೈನ್ಯವಾಗಿ.

“ಪ. ಗೋಪಾಲಕೃಷ್ಣರೇ...... (ಹೂಂ, ತಮಾಷೆ ಮಾಡಿ !) ಈ ತೇಮಾನು ಶಬ್ದಕ್ಕೂ ಹೆಂಗಸರಿಗೂ, ಇರುವ ನಂಟು ಬಹಳ ಹಳೆಯ ಕಾಲದ್ದು, ನನಗೆ ಗೊತ್ತಿದ್ದ ಹಾಗೆ ನಮ್ಮ ಅಜ್ಜಿಯ ಕಾಲದಲ್ಲೇ ಅದು ಇತ್ತು. ತೇಮಾನು ಎಲ್ಲದರಲ್ಲೂ ಸಾಮಾನ್ಯವಾಗಿ ಬರುತ್ತದಂತೆ. ಎಣ್ಣೆಗೆ ಕೊಟ್ಟ ಕೊಬ್ಬರಿಯಲ್ಲೂ ಬೀಸಿದ ಗೋದಿಯಲ್ಲೂ. ಆದರೆ ಅದನ್ನು ನಮ್ಮಂಥವರು ಗಣ್ಯ ಮಾಡುವುದಿಲ್ಲ. ಹೆಂಗಸರು ಗಣ್ಯ ಮಾಡಿದರೂ ಹೇಳುವುದಿಲ್ಲ. ಅದನ್ನು ಸಹಿಸಿಕೊಳ್ತಾರೆ. ನಮ್ಮ ವಿಚಾರ ಎಲ್ಲಾ ಹೊಟ್ಟೆಗೆ ಹೋಗಿ ಮಾಯವಾಗ್ತದೆ. ಆದ್ರಿಂದ ಮರ್‍ತು ಹೋಗ್ತದೆ. ಅವರದಾದ್ರೆ ಕುತ್ತಿಗೆ, ಕೈಕಿವಿಗಳಲ್ಲಿ ಮೆರೀತಾ ಇರ್‍ತದೆ. ಹಾಗೆಯೇ ಯಾವಾಗಲೂ ಮೆರೀಬೇಕು ಅನ್ನುವ ಆಸೆ ಅವರಿಗೆ ಇದೆ. ಹಾಗಾಗಿ, ತೇಮಾನು ಮಂತ್ರವನ್ನು ಅವರು ಯಾವಾಗಲೂ ಗುಟ್ಟಾಗಿ ಜಪಿಸುತ್ತಾ ಇರುತ್ತಾರೆ”

“ಹಾಂ... ಹಾಂ... ಈಗ ನೆನಪಾಯಿತು ನಮ್ಮ ತಾಯಿ ಕೂಡಾ ಹೇಳ್ತಾ ಇದ್ದರು. ಅಕ್ಕಸಾಲಿಗರಲ್ಲಿ ಹೋದರೆ, ಅವರು ಹೇಳುವ ಚಿನ್ನ ತೇಮಾನಿನ ಲೆಕ್ಕವನ್ನು ಒಪ್ಪಲೇ ಬೇಕಾಗುತ್ತದೆ ಅಂತ. ಆದರೆ ಒಂದು ಪ್ರಶ್ನೆ. ಈ ತೇಮಾನು ಬಿಸಿನೆಸ್ಸು ಹೊಸತಾಗಿ ಖರೀದಿ ಮಾಡಿದ ಚಿನ್ನದ ಆಭರಣಗಳಿಗೆ ಕೂಡಾ ಲಗಾವಾಗ್ತದಾ ಹೇಗೆ ?”

“ಖಂಡಿತಾ ಆದೀತು ಸ್ವಾಮೀ - ಹೊಸ ಆಭರಣ ಹದಿನೈದು ದಿನ ಮೈಮೇಲೆ ಇದ್ರೆ ಸಾಕು. ತೇಮಾನು ಅದಕ್ಕೆ ಬಂದೇ ಬರ್‍ತದೆ. ಆ ಮಾತಿಗೆ ಬಾಗಿಲಿನಾಚೆ ನಿಂತುಕೊಂಡು ನಮ್ಮ ಹರಟೆ ಕಿವಿ ಕೊಡುತ್ತಾ ಇರುವ ನನ್ನ ಗೃಹಲಕ್ಷ್ಮಿಯೇ ಸಾಕ್ಷಿ. ಅವಳ ಅವಲಕ್ಕಿ ಮಾಲೆಯಲ್ಲಿ ಖರೀದಿ ಮಾಡಿದ ಹದಿನಾಲ್ಕು ದಿನಗಳಲ್ಲಿ ಏನೋ ಕಲೆ ಕಾಣಿಸಿತು. ಅದನ್ನು ತೆಗೆದುಕೊಂಡ ಅಂಗಡಿಯಲ್ಲೇ ‘ಕ್ಲೀನು’ ಮಾಡಲಿಕ್ಕೆ ಕೊಟ್ಟಳು. ವಾಪಾಸು ತರಲಿಕ್ಕೆ ಹೋದಾಗ, ಕ್ಲೀನ್ ಮಾಡಿದ ಮಜೂರಿ ಕೊಟ್ಟು ತೂಗಿಸಿದಳು. ಕಡಿಮೆಯಾಗಿ ಕಂಡ ‘ಗುಲಗಂಜಿ ತೂಕ’ ಯಾಕೇಂತ ವಿಚಾರಿದ್ದಕ್ಕೆ ಅದು ತೇಮಾನಮ್ಮಾ ಅನ್ನುವ ಉತ್ತರ ಸಿಕ್ಕಿತು. ಬಾಯ್ಮುಚ್ಚಿ ಕೇಳಿಕೊಂಡು ಬಂದಿದ್ದಾಳೆ”

(ಪಂಡಿತರ ಮಾತಿನ ಕೊನೆಗೆ ಒಳಗಿನಿಂದ ಒಂದು ಹೂಂಕಾರ ಯಾಕೆ ಕೇಳಿಸಿತು ?)

“ಬಂಗಾರ ಮೈಮೇಲೆಯೇ ಇದ್ದರೆ ಸ್ವಲ್ಪಸ್ವಲ್ಪವಾಗಿ ಕರಗುತ್ತಾ ಇರ್‍ತದೆ ಅಂತ ನಮ್ಮವಳೂ ಹೇಳುವುದನ್ನು ಕೇಳಿದ್ದೇನೆ ಪಂಡಿತರೇ. ಅದು, ಅವಳು ಎಲ್ಲಿಂದ ಸಂಪಾದಿಸಿದ ಇನ್‍ಫಾರ್ಮೇಶನ್ ಅಂತ ಇಷ್ಟರವರೇಗೆ ಗೊತ್ತಿರಲಿಲ್ಲ. ಈಗ ಗೊತ್ತಾಯಿತು. ಮೈಮೇಲೆ ಚಿನ್ನ ಕರಗುತ್ತದೋ, ಇಲ್ಲವೋ, ಅದು ಬೇರೆ ಮಾತು. ಚಿನ್ನದ ಡಿಮಾಂಡ್ ಪೂರೈಸುವವನ ಕಿಸೆಯಂತೂ ಕರಗುವುದರಲ್ಲಿ ಯಾವ ಸಂದೇಹವೂ ಇಲ್ಲ”

ಬೇಗನೆ (ಮಾತು ಮುಗಿಸಿ ಶ್ರೀಮತಿ ಪಂಡಿತರು ಒಗ್ಗರಣೆ ಸೌಟು ಹಿಡಿದುಕೊಂಡು ಬಾಗಿಲಿನಿಂದ ಈಚೆಗೆ ಬರುವ ಮೊದಲೇ ಅಲ್ಲಿಂದ ಹೊರಗೆ ಓಡಿ -ಅಲ್ಲಲ್ಲ ಧಾವಿಸಿ) ಬಂದು ಮನೆಮುಟ್ಟಿದ ನಂತರ -

ತೇಮಾನೂ ಮಂತ್ರವ ಜಪಿಸೀ ಮಾನಿನಿಯರೆ ! ಜಪಿಸುತ್ತ ! ಹೇಮಾವಿಕ್ರಯ ಬೆಳೆಸೀ ! ! ಎಂಬ ಪದ್ಯದ ಮೊದಲ ಸಾಲು ಬರೆದಿಟ್ಟೆ. ಒಂದು ಚೆಂಬು ನೀರು ಕುಡಿದು ಸುಮ್ಮನೆ ಕುಳಿತೆ. ( ಮುಂದಿನ ಸಾಲು ನೀವು ಬರೆಯುತ್ತೀರಾ ? ಬರೆಯಿರಿ - ಸಂತೋಷ).




ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
------
ಶೀರ್ಷಿಕೆಯ ೧೯೯೦ರ ದಶಕದ ಛಾಯಚಿತ್ರ:

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ಎ.ವಿವೇಕ ರೈ ಅವರು ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರು ಶ್ರೀ. ದೇವರಾಜ್ ಜೊತೆ ದಿನಾಂಕ ೨೦ ಜುಲೈ ೧೯೯೪ ರಂದು ಮಂಗಳೂರಿನಲ್ಲಿ ಏರ್ಪಡಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಮಂಗಳೂರಿನ ಪತ್ರಕರ್ತರೊಂದಿಗೆ ಶ್ರೀ. ಪ. ಗೋಪಾಲಕೃಷ್ಣ.
-----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6278.html

Tuesday, May 12, 2009

’ನೋ ಚೇಂಜ್ ಕಥೆಗಳು’ --೧೬..ಅವರು ಬಿದ್ದರು - ಇವರು ನಕ್ಕರು....



















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನಾರನೇ ಅಂಕಣ.

ಅವರು ಬಿದ್ದರು - ಇವರು ನಕ್ಕರು....




ನಿನ್ನೆ ಬೆಳಿಗ್ಗೆ, ಸುಮಾರು ಎಂಟೂವರೆ ಹೊತ್ತಿಗೆ, ಮೆಯಿನ್ ರೋಡಿನ ಬಸ್ ಸ್ಟಾಪ್ ಹತ್ತಿರ ಹೋಗಬೇಕಾಗಿ ಬಂತು. “ನಮ್ಮ ಅಣ್ಣ -ಅತ್ತಿಗೆ ಈವತ್ತು ಎಂಟೂಮುಕ್ಕಾಲರ ಬಸ್ಸಿನಲ್ಲಿ ಬರ್‍ತಾರೆ, ನೆನಪಿದೆಯಲ್ಲ ? ಹೋಗಿ ಕರ್‍ಕೊಂಡು ಬನ್ನಿ” ಅಂತ ಗೃಹಮಂತ್ರಿ ಆಜ್ಞೆಯಾಗಿತ್ತು. ತಪ್ಪಿಸಿಕೊಳ್ಳಲಾಗುತ್ತದೆಯೆ ? ಹೋಗಿದ್ದೆ.

ಅವರು ಊರಿಂದ ಬರುತ್ತಿದ್ದುದು ಕೆಂಪು ಬಸ್ಸಿನಲ್ಲಿ. ಹೇಗೂ ಆ ಬಸ್ ಲೇಟಾಗಿಯೇ ಬರುತ್ತದೆ ಅಂತ ಸ್ವಲ್ಪ ಧೈರ್ಯವಿದ್ದರೂ, ನನ್ನ ಗ್ರಹಚಾರಕ್ಕೆ ಈವತ್ತೆಲ್ಲಾದರೂ ಸಮಯಕ್ಕೆ ಸರಿಯಾಗಿ ಬಂದುಬಿಟ್ಟರೆ ಎಂಬ ಅಳುಕೂ ಇತ್ತು. ನನ್ನ (ಪ್ರಾಯಕ್ಕೆ ಸಲ್ಲದ) ಬೀಸುನಡಿಗೆಗೆ ಅದೇ ಕಾರಣ.

‘ಬೀಸ -ಬೀಸ’ ಹೋಗಬೇಕಾದರೂ,ಕತ್ತೆತ್ತಿ ನಡೆಯಲು ನನ್ನಿಂದ ಆಗುವುದಿಲ್ಲ. ಕತ್ತು ಬಗ್ಗಿಸಿ, ನನ್ನಷ್ಟಕ್ಕೆ ಹೋಗುತ್ತಿದ್ದೆ. ಇನ್ನೇನು ಬಸ್ ಸ್ಟಾಪ್ ಬಂತು ಅನ್ನುವಾಗ, ಯಾರೋ ‘ಢಾಬ್ಬೆಂ’ದು ಬಿದ್ದ ಶಬ್ದ -ಅದರ ಹಿಂದೆಯೇ ಹತ್ತಾರು ಮಕ್ಕಳ ನಗುವಿನ ಬೊಬ್ಬೆ -ಕೇಳಿ, ಪ್ರಯತ್ನಪಟ್ಟು ಕತ್ತೆತ್ತಿದೆ. ಬಿದ್ದ ಶಬ್ದ ಕೇಳಿದ ಕಡೆ ನೋಡಿದೆ.

ಪಾಪ ! ಯಾರೋ ಒಬ್ಬ ಠಾಕೋಠೀಕ್ ದಿರುಸು ಹಾಕಿಕೊಂಡಿದ್ದ ತರುಣ. ನಡುರಸ್ತೆಯಲ್ಲಿ ಎಸೆದಿದ್ದ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿಬಿದ್ದವನು, ಮೆಲ್ಲನೆ ಏಳಲು ಪ್ರಯತ್ನಿಸುತ್ತಿದ್ದ. ಬಿದ್ದ ರಭಸಕ್ಕೆ ಕೈಯಿಂದ ಹಾರಿಹೋಗಿದ್ದ ಬ್ರೀಫ್‍ಕೇಸನ್ನು ಎಳೆಯುವ ಮತ್ತು ಬಟ್ಟೆಗೆ ಮೆತ್ತಿದ್ದ ಮಣ್ಣನ್ನು ಕೊಡವುವ ಕೆಲಸವೂ ಒಟ್ಟೊಟ್ಟಿಗೆ ನಡೆದಿತ್ತು

ಅವನ ಒದ್ದಾಟದ ಸಮಯವಿಡೀ, ರಸ್ತೆಯಾಚೆಯ ಶಾಲೆಯ ಮಕ್ಕಳು ಗಹಗಹಿಸಿ ನಗುತ್ತಲೇ ಇದ್ದರು. ಎಲ್ಲರಿಗಿಂತ ಜೋರಾಗಿ ನಗುತ್ತಿದ್ದ ಒಬ್ಬ ‘ಲೀಡರ್’ ಹುಡುಗನೇ ಬಾಳೆಹಣ್ಣಿನ ಸಿಪ್ಪೆಯನ್ನು ‘ತಮಾಷೆ ನೋಡಲು’ ಅಲ್ಲಿ ಎಸೆದಿದ್ದನೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ನಾನು ರಸ್ತೆ ದಾಟಿ ಮಕ್ಕಳಿದ್ದ ಕಡೆ ತಲಪುವ ಹೊತ್ತಿಗೆ, ಮಕ್ಕಳ ನಗುವಿನ ಅಟ್ಟಹಾಸ - ಆ ಶಾಲೆಯ ಸಿಸ್ಟರ್ ಅಲ್ಲಿ ಬಂದ ಕಾರಣ - ಒಮ್ಮೆಲೇ ನಿಂತಿತು. “ಯಾರಾದರೂ ಜಾರಿ ಬಿದ್ದರೆ ಅವರ ಸಹಾಯಕ್ಕೆ ಹೋಗುವುದು ಬಿಟ್ಟು, ಅವರನ್ನು ನೋಡಿ ನಗುತ್ತೀರಾ ? ನಾಟೀ ಬಾಯ್ಸ್ !” ಎಂದು ಅವರು ಮಕ್ಕಳಿಗೆ ಹೇಳುತ್ತಿದ್ದ ಬುದ್ಧಿವಾದವೂ ಕೇಳಿಸಿದ್ದರಿಂದ, ಅದನ್ನು ಕೇಳಿದ ಹುಡುಗರ ಮುಂದಿನ ವರ್ತನೆಯ ಬಗ್ಗೆ ಕುತೂಹಲ ಮೂಡಿತು. ಅವರೆದುರಿನಲ್ಲೇ ನಿಂತುಕೊಂಡೆ.

ಕಣ್ಣು -ಕಿವಿ - ಮನಸ್ಸು ಎಲ್ಲವೂ ಅಲ್ಲೇ ನೆಟ್ಟಿತ್ತು. ಬೇರೆ ಎಲ್ಲಾ ವಿಚಾರವೂ ಮರೆತು ಹೋಗಿತ್ತು. “ನೋಡು -ನೋಡು ಭಾವನ ಬಸ್ ಸ್ಟಾಂಡ್ ಇಲ್ಲಿಯೇ ಇದೆ” ಎಂಬ ಮಾತಿನ ಧ್ವನಿ ಕೇಳುವ, ಬೆನ್ನಿಗೆ ಬಿದ್ದ ಒಂದು ಪ್ರೀತಿಯ ಹೊಡೆತ ಬೀಳುವ-ವರೆಗೆ.
“ಅಲ್ಯಾಕೆ ನಿಂತಿದ್ದಿರಿ ಭಾವಾ ?” ಎಂಬ ಪ್ರಶ್ನೆ ಬಂದಿಳಿದ ಭಾವ -ಅಂದರೆ ಗೃಹಮಂತ್ರಿಯವರ ಅಣ್ಣ -ನಿಂದ ನಾವೆಲ್ಲ ಮೆಯಿನ್ ರೋಡ್ ದಾಟಿದ ಮೇಲೆ ಬಂತು.

ಆ ಮೊದಲು ಆಗಿದ್ದುದನ್ನು ವಿವರಿಸಿ, “ನಾನು ಕೂಡಾ ನನ್ನ ಪ್ರಾಯದಲ್ಲಿ ‘ನಾಟಿಬಾಯ್’ ಆಗಿದ್ದುದು ನೆನಪಾಯಿತು. ಕಾಲ ಬದಲಿದ್ದು ಕೂಡಾ ಗೊತ್ತಾಗದ ಹಾಗೆ” ಎಂದೆ, ಯಾವ ಮುಚ್ಚುಮರೆಯೂ ಇಲ್ಲದೆ.

ಕಾಲವೇನೋ ಬದಲಿದೆ. ಬದಲಾವಣೆ ಆಗದಿರುವುದು ಮನುಷ್ಯ ಸ್ವಭಾವದಲ್ಲಿ ಅನ್ನಿ. ಅಲ್ಲಾ, ನಿಮ್ಮ ನೆನಪಿನಲ್ಲಿ ಅಷ್ಟೊಂದು ಆಳವಾಗಿ ಉಳಿದಿದ್ದ ಘಟನೆ ಯಾವುದು ? ಎಂಬ ಪ್ರಶ್ನೆಗೆ ನನ್ನ ಅತಿಥಿ ದಂಪತಿಯಿಂದ ಒಟ್ಟಿಗೇ ಬಂತು. ಕಥೆ ಹೇಳಲೇಬೇಕಾಯಿತು.

“ಎದ್ದೂ ಬಿದ್ದೂ ನಡೆಯಲು ಕಲಿಯುವ ಪ್ರಾಯದಲ್ಲಿ”, ಇನ್ನೊಬ್ಬರು ಬಿದ್ದು ಎದ್ದರೆ ಅಥವಾ ಬೇರೇನಾದರೂ ತೊಂದರೆ ಅನುಭವಿಸಿದರೆ ಅದನ್ನು ನೋಡಿ ನಗುವ ಅಭ್ಯಾಸ ಸಹಜವಾಗಿ ಬಂದಿರುತ್ತದೆ. ಆ ಅಭ್ಯಾಸ ಬೆಳೆಸಿಕೊಂಡವರು ಮುಂದೆ ಪ್ರಾಯಸ್ಥರಾದಾಗ, ನಗುವನ್ನು ಪಡೆದುಕೊಳ್ಳಲು ಕಲಿಯುತ್ತಾರೆ. ಹಾಗೆ ನಗುವುದು ತಪ್ಪು ಎಂದು ಕೆಲವರು ತಿಳಿದುಕೊಳ್ಳಲು ಕಲಿಯುತ್ತಾರೆ. ಹಾಗೆ ನಗುವುದು ತಪ್ಪು‍ಎಂದು ಕೆಲವರು ತಿಳಿದುಕೊಳ್ಳುವುದೂ ಇದೆ.

ನಾವು ಶಾಲೆಗೆ ಹೋಗುತ್ತಿದ್ದಾಗ ಒಂದು ದಿನ, ಶಾಲೆಯ ಮಕ್ಕಳೆಲ್ಲ ಎದುರಿನ ರಸ್ತೆಬದಿಯ ಎತ್ತರದ ಸ್ಥಳದಲ್ಲಿ ಸಾಲಾಗಿ ನಿಂತುಕೊಂಡಿದ್ದೆವು. ರಸ್ತೆಯಲ್ಲಿ ಸತ್ತುಬಿದ್ದಿದ್ದ ಒಂದು ಕೇರೆಹಾವಿನ ಮರಿಯನ್ನು ನೋಡಿ ಹರಟುತ್ತಾ ಇದ್ದೆವು. ದಾರಿಹೋಕರು ಒಬ್ಬರು ಬರುವುದನ್ನು ಕಂಡಾಗ ಹರಟೆ ನಿಲ್ಲಿಸಿ, ಮೌನವಾದೆವು. ದಾರಿ ಸಾಗುವವರು ಅವರ ಪಾಡಿಗೆ ವೇಗವಾಗಿ ನಡೆದು ಹೋಗುತ್ತಾ ಇದ್ದರು. ಸತ್ತ ಹಾವಿನ ಮರಿಯನ್ನು ಅವರು ತುಳಿಯುತ್ತಾರೊ ಇಲ್ಲವೊ ಎಂಬ ಕುತೂಹಲ ನಮಗೆ. ಆದ್ದರಿಂದಲೇ ಸದ್ದು ಮಾಡದೆ ನಾವು ನಿಂತುಕೊಂಡಿದ್ದುದು.

ನಾವು ನಿರೀಕ್ಷಿಸಿದ ಹಾಗೆ, ಅವರು ಅದನ್ನು ತುಳಿದೇ ಬಿಟ್ಟರು. ಅನಿರೀಕ್ಷಿತವಾಗಿ ತುಳಿದು, ತುಳಿದ ಮತ್ತೆ ‘ವಿಷಜಂತು’ವನ್ನು ನೋಡಿ, ಬೆಚ್ಚಿಬಿದ್ದರು. ನಮ್ಮೆಲ್ಲರ ಪರಿಹಾಸದ ನಗು ಕೇಳಿಸಿತು. ನಮ್ಮತ್ತ ತಲೆ ಎತ್ತಿ ನೋಡಿ “ನೀವು ಶಾಲೆ ಮಕ್ಕಳು ಕಲ್ತ ಬುದ್ಧಿ ಇದುವೆಯೋ ?” ಎಂದು ಬೈದು ಹೊರಟುಹೋದರು...

“ಅಂದು ನನ್ನ(ಮ್ಮ)ಲ್ಲಿದ್ದ ಮನೋಭಾವವೇ ಇಂದೂ ಆ ಮಕ್ಕಳಲ್ಲಿ ಕಾಣಿಸಿ ನನ್ನ ನೆನಪನ್ನು ಕೆದಕಿತು” ಎಂದು ವಿವರಿಸಿದೆ.
“ಆ ಪ್ರಾಯದಲ್ಲಿ ನಾವು ಕೂಡಾ ಹಾಗೆಯೇ ಇದ್ದೆವು ಭಾವಾ.ನಮ್ಮ ಮನೆ ಎದುರಿನ ಮಾರ್ಗದಲ್ಲಿ ಒಂದು ದಿನ, ಒಂದು ‘ಪೆರ್ಚಿ’ದನ ಮೋಟರ್ ಸೈಕಲಿನಲ್ಲಿ ಹೋಗುತ್ತಿದ್ದ ಒಬ್ಬರನ್ನು ಅಡ್ಡಗಟ್ಟಿ ಬೀಳಿಸಿದ್ದಾಗ ನಾವೆಲ್ಲ ದೂರನಿಂತು ನೋಡಿ ನಗುತ್ತಾ ಇದ್ದೆವು. ಬಿದ್ದವರ ಸಹಾಯಕ್ಕೆ ಹೋಗುವ ಮನಸ್ಸು ಯಾರಿಗೂ ಬರಲಿಲ್ಲ. ಮನಸ್ಸು ಮಾಡಿದ್ದರೆ,ಬಿದ್ದವರನ್ನು, ಅಲ್ಲಿದ್ದ ನಾವು ಹತ್ತು ಮಂದಿ ಹುಡುಗರು ಎತ್ತಬಹುದಿತ್ತು. ದನವನ್ನೂ ಅಲ್ಲಿಂದ ಓಡಿಸಬಹುದಿತ್ತು. ನಮಗೆ ಆ ತಮಾಷೆ ನೋಡುವುದೇ ಮುಖ್ಯವಾಗಿತ್ತಲ್ಲ ? ಕೊನೆಗೆ, ಬಿದ್ದ ಮೋಟರ್ ಸೈಕಲಿನವರನ್ನು ಎಬ್ಬಿಸಿ ರಸ್ತೆ ಬದಿಗೆ ತಂದು ಪ್ರಥಮ ಚಿಕಿತ್ಸೆ ಮಾಡಿದ ಹಿರಿಯರು ಒಬ್ಬರು ನಮಗೆ ಛೀಮಾರಿ ಹಾಕಿದಾಗ ಎಷ್ಟು ಸಿಟ್ಟು ಬಂದಿತ್ತು ಗೊತ್ತೇ ?”

“ಹುಡುಗರ ಸ್ವಭಾವವೇ ಹಾಗೆ” ಎಂದು ಇದ್ದಕ್ಕಿದ್ದ ಹಾಗೆ ಮೌನವಾಗಿ ದಾರಿ ಸವೆಸುತ್ತುದ್ದ ನಮ್ಮ ತಂಡದ ಮಹಿಳಾಸದಸ್ಯೆಯಿಂದ ಬಂದ ಮಾತು, ಗಂಭೀರ ಚರ್ಚೆಯನ್ನು ಲಘು ಧಾಟಿಗೆ ತಿರುಗಿಸಿತು.

“ಮತ್ತೆ ಹುಡುಗಿಯರ ಸ್ವಭಾವ ಹೇಗಿರುತ್ತದಮ್ಮಾ, ಹೇಳ್ತೀಯಾ ?” ಎಂದು ಅವಳನ್ನು ಕೇಳಿದೆ.

ಅವಳು ಉತ್ತರ ಕೊಡುವ ಮೊದಲೇ ನಮ್ಮ ಮನೆ ಸಮೀಪಿಸಿತ್ತು. ಬಾಗಿಲಲ್ಲೇ ಕಾಯುತ್ತಿದ್ದ ಹೋಮ್ ಮಿನಿಸ್ಟರ್ ಕೂಡಾ ಕಾಣಿಸಿದರು. ಹತ್ತಿರ ಬರುತ್ತಿದ್ದ ಹಾಗೆ “ಏನು ಭಾರಿ ನಿಧಾನವಾಗಿ ಬರುತ್ತಾ ಇದ್ದೀರಿ ? ಇಲ್ಲಿಗೆ ಬರುವ ಮೊದಲು ಬೇರೆಲ್ಲಿಗಾದರೂ ಹೋಗಿಬಂದಿರಾ, ಹ್ಯಾಗೆ ?” ಕಮೆಂಟೂ ಕೇಳಿಸಿತು.

ಬಾಯ್ಮುಚ್ಚಿಕೊಂಡು ಕರೆತಂದಿದ್ದವರನ್ನು ಮನೆಯೊಳಗೆ ಕಳುಹಿಸಿದೆ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)







ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

-----

ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಂಗಳೂರಿನ ಪತ್ರಕರ್ತ ಶ್ರೀ. ಪ. ಗೋಪಾಲಕೃಷ್ಣರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ .ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ.
-----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6060.html

Tuesday, May 5, 2009

’ನೋ ಚೇಂಜ್ ಕಥೆಗಳು’ --೧೫.. ಮಾಮೂಲಿನ ಮಾಮೂಲು ಸುದ್ದಿ




















ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೈದನೇ ಅಂಕಣ.


ಮಾಮೂಲಿನ ಮಾಮೂಲು ಸುದ್ದಿ



ಮಾಮೂಲು ಬಿಚ್ಚದೆ ಯಾವ ಕೆಲಸವೂ ಆಗುವುದಿಲ್ಲ ಅಂದವರು ಯಾರು ?



ಕೂಡಲೇ ನೆನಪಾಗಲಿಲ್ಲ, ತಲೆ ತುರಿಸಿಕೊಂಡೆ. ತಲೆಯಲ್ಲಿ ಇನ್ನೂ ಸ್ವಲ್ಪ ಕೂದಲು ಉಳಿದಿತ್ತು. ತುರಿಸಿಕೊಳ್ಳಲು ಏನೂ ತೊಂದರೆಯಾಗಲಿಲ್ಲ. ಒಂದು ಮೂರಾನಲ್ಕು ಬಾರಿ ತುರಿಸಿಕೊಳ್ಳುವಾಗ -


ನನಗೆ ಯಾವುದಾದರೂ ಒಂದು ವಿಷಯ ಮರೆತು ಹೋಗುವುದೂ ಅದನ್ನು ನೆನಪು ಮಾಡಲು ನಾನು ತಲೆ ತುರಿಸಿಕೊಳ್ಳುವುದೂ ಮಾಮೂಲು ಕ್ರಮ ಎಂದಾಗಿಬಿಟ್ಟಿದೆ. ತುರಿಸುವುದು ಹೆಚ್ಚಾದ ಹಾಗೆ ತಲೆಯಲ್ಲಿ ಇರುವ ಅಲ್ಪ ಸ್ವಲ್ಪ ಅರೆ ಬಿಳಿ ಕೂದಲು ಉದುರುತ್ತಾ ಹೋಗುವುದೂ ಮಾಮೂಲಾಗಿ ಹೋಗಿದೆ,ಎಂದೆಲ್ಲಾ ನೆನಪಾಯಿತು.


ಅದು ಸರಿ, ಆಗ ಹೇಳಿದ ಮಾಮೂಲಿನ ಮಾತೆತ್ತಿದವರು ಯಾರು ? ಹೇಳುತ್ತೇನೆ. ಕಳೆದ ಶನಿವಾರ -


ನಮ್ಮ ನೆರೆಯ ‘ಉದ್ಗಾರಿ ನಂಬರ್ ವನ್’ ರವರ ಮನೆ ಗೇಟಿನ ಎದುರು ಮಹಾನಗರಪಾಲಿಕೆಯ ಕಂದಾಯ ಅಧಿಕಾರಿ ಒಬ್ಬರು ಬಂದು ನಿಂತರಂತೆ.ಅಲ್ಲಿಂದಲೇ, ಮನೆ ಮಾಲಿಕರನ್ನು ಕರೆದು “ನಿಮ್ಮ ಮನೆ ಎಷ್ಟು ಚದರ ಅಡಿ ವಿಸ್ತಾರದ್ದು ? ಎಷ್ಟು ಕೋಣೆಗಳಿವೆ ? ಎಷ್ಟು ಬಾಡಿಗೆ ಬರುತ್ತಿತ್ತು - ಈಗೆಷ್ಟು ಬರುತ್ತದೆ ?” ಎಂದೆಲ್ಲಾ ಪ್ರಶ್ನೆ ಕೇಳಿ,ಅವರ ಉತ್ತರಕ್ಕೂ ಕಾಯದೆ, ಏನೇನನ್ನೋ ತನ್ನ ನೋಟ್‍ಬುಕ್‍ನಲ್ಲಿ ಬರೆದುಕೊಂಡು ಹೋದರಂತೆ.


ತಾನು ಯಾರೆಂದು ಅವರು ಮೊದಲೇ ಹೇಳಿದ್ದಾರೆ -ಇನ್ನು ಮುಂದೆ ಏನಾಗುತ್ತದೆ ಅಂತ ನಾನು ಈಗಲೇ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದುಕೊಂಡು ಸುಮ್ಮನಿದ್ದ ಮನೆಯವರಿಗೆ - ಮುಂದಿನ ವಾರದಲ್ಲೇ ಶ್ಯೋಕ್ ಆಯಿತು.
ಅದುವರೆಗೂ ಬರೇ ಇಪ್ಪತ್ತನಾಲ್ಕು ರೂ. ಇದ್ದ ಮನೆ ತೆರಿಗೆಯನ್ನು ಏಕ್‍ದಂ ನೂರ ಇಪ್ಪತ್ತೇಳಕ್ಕೆ ಏರಿಸಿದ ನೋಟಿಸ್ ಅವರಿಗೆ ಜಾರಿಯಾಗಿತ್ತು. (ಆಗ, ನಾನೂ ಅವರ ಮನೆಯಲ್ಲಿದ್ದೆ. ಆದ್ದರಿಂದ ಅದು ನನಗೆ ಗೊತ್ತು).


ನೋಟಿಸ್ ಕೈಯಲ್ಲಿ ಹಿಡಿದು, ಅವರು ಹೇಳಿದ್ದು “ಈಗ ಮಾಮೂಲು ಬಿಚ್ಚದೆ ಏನೂ ನಡಿಯೋದಿಲ್ಲಾ” ಅಂತ.
ಆ ಅಧಿಕಾರಿ ನಿಮ್ಮಲ್ಲಿ ಏನೂ ಮಾತನಾಡಿಲ್ಲ. ಬರೇ ಬರ್‍ಕೊಂಡು ಹೋದರೂಂತ ಹೇಳ್ತೀರಿ. ಹಾಗಾದ್ರೆ ಮಾಮೂಲಿನ ಮಾತು ಅಲ್ಲಿ ಹೇಗೆ ಬರ್‍ತದೆ ? ಎಂದು ಅವರಲ್ಲಿ ಆಗ ಕೇಳಿದ್ದೆ.


ಅದನ್ನೆಲ್ಲಾ ಈಗ ನನ್ನ ಬಾಯಿಯಿಂದ ಹೊರಡಿಸುವ ಕೆಲಸ ನಿಮಗೆ ಬೇಡ. ಅದೆಲ್ಲ ಹೇಗೆ ನಡೆಯುತ್ತದೆ ಅನ್ನುವುದು ನಿಮಗೆ - ಪೇಪರಿನವರಿಗೆ ಚೆನ್ನಾಗಿ ಗೊತ್ತು. ನಿಜಾ ಹೇಳಿ, ಈ ಮಾಮೂಲು ವ್ಯವಹಾರಗಳ ಕೆಲವು ಕಥೆಗಳಾದರೂ ನಿಮ್ಮ ಸ್ಟಾಕ್‍ನಲ್ಲಿ ಇವೆಯೋ ಇಲ್ಲವೋ ? ಎಂದು ಅವರು ಹೇಳಿದ ಸತ್ಯವನ್ನು ಒಪ್ಪಿ ಹೌದೆಂದು ತಲೆಯಾಡಿಸಿದ್ದೆ.


ಹಾಗಾದರೆ, ಬರಲಿ ಒಂದೆರಡು ಕಥೆಯಾದ್ರೂ - ಹೇಗೂ ನನಗೆ ಈಗ ಪುರುಸೊತ್ತು ಇದೆ, ಎಂದು ಅವರ ಅಪ್ಪಣೆಯಾಯಿತು.
ಹಾಗೆಲ್ಲ, ಕೇಳಿದ ಕೂಡಲೆ ಕಥೆ ಹೇಳ್ಲಿಕ್ಕೆ ನಾನೇನು ಚೀಪ್ ರೇಟ್ ಜರ್ನಲಿಸ್ಟ್ ಅಂತ ತಿಳ್ಕೊಂಡಿದ್ದೀರಾ ? ಇಲ್ಲ -ಇಲ್ಲ, ನನ್ನ ರೇಟ್ ತುಂಬಾ ಜಾಸ್ತಿ. ಮತ್ತೆ, ಯಾವಾಗಾದ್ರೂ ಬಿಡುವಾದರೆ ಹೇಳ್ತೇನೆ, ಎಂದು ಅಲ್ಲಿಂದ ಜಾರಿಕೊಂಡಿದ್ದೆ.


ಅದೇ ಈವತ್ತು, ಮಾಮೂಲಿನ ಕಥೆಯನ್ನು ಅವರಿಗೆ ಮಾತ್ರ ಯಾಕೆ ಹೇಳಬೇಕು ? ಪತ್ರಿಕೆಯಲ್ಲಿ ಪ್ರಕಟಿಸಿದರೆ ಅವರಲ್ಲದೆ ಮತ್ತೂ ಕೆಲವರಿಗೆ ಗೊತ್ತಾಗುತ್ತದೆ. ನನಗೂ ಏನಾದರೂ ‘ಪ್ರಯೋಜನ’ ಆಗುತ್ತದೆ, ಎಂಬ ಯೋಚನೆ ಮನಸ್ಸಿನ ಆಳದಲ್ಲಿ ಮೂಡಿತ್ತು. ಅದು ಬರಹದಲ್ಲಿ ಬರುವ ಹೊತ್ತಿಗೆ ಸರಿಯಾಗಿ ನೆನಪು ಕೈಕೊಟ್ಟ ಕಾರಣ, ತಲೆ ತುರಿಕೆ ಆರಂಭವಾಗಿತ್ತು.


ಈಗ ಎಲ್ಲಾ ಸರಿಹೋಯಿತು, ಇನ್ನು ಆರಂಭ ಮಾಡೋಣ.


ನಗರವಾಸಿಗಳಿಗೆ ತೆರಿಗೆ ಒಂದು ಅನಿವಾರ್ಯ ಕಿರುಕುಳ. ಮನೆ ಕಟ್ಟಿಕೊಂಡು ಬದುಕುವವರಿಗಾದರೂ ವ್ಯಾಪಾರದಿಂದ ಬಾಳು ನಡೆಸುವವರಿಗಾದರೂ,ಮುನಿಸಿಪಾಲಿಟಿ ತೆರಿಗೆಯಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಹೆಚ್ಚೆಂದರೆ ಬೀಳುವ ತೆರಿಗೆಯಲ್ಲಿ ಒಂದಷ್ಟು ಕಡಿತ ಮಾಡಿಸಿಕೊಳ್ಳಬಹುದು. ಅಷ್ಟೆ, ಗೊತ್ತಲ್ಲ ?


ಮುನ್ಸಿಪಾಲ್ಟಿ ಕಂದಾಯ ಇಲಾಖೆಯ ಗುಟ್ಟು ಹಾಗೆ. ಅದೇ ಮುನ್ಸಿಪಾಲ್ಟಿ ಆರೋಗ್ಯ ಇಲಾಖೆಯ ವಿಧಾನ ಇನ್ನೊಂದು. ತಮ್ಮ ಗಿರಾಕಿಗಳ ಆರೋಗ್ಯ ರಕ್ಷಣೆಗೆ ಕೈಗೊಳ್ಳಲೇ ಬೇಕಾದ ಶುಚಿತ್ವದ ನಿಯಮಗಳನ್ನು ಹೋಟೆಲುಗಳು ಜಾರಿಗೆ ತರಲೇ ಬೇಕು. ಇಲ್ಲವಾದರೆ ಅವುಗಳ ಲೈಸನ್ಸ್ ರದ್ದು ಮಾಡುವುದಲ್ಲದೆ ದಂಡವನ್ನೂ ವಿಧಿಸುವ ಅಧಿಕಾರ ಆ ಇಲಾಖೆಗೆ ಇದೆ.


ಇವೆರಡು ಇಲಾಖೆಗಳೂ, ತಮ್ಮ ನಿಯಮಗಳನ್ನು ಪಾಲಿಸಲೂ ಸಾಧ್ಯವಿದೆ. ಬೇರೆಯವರು ಪಾಲಿಸದೆ ಪಾರಾಗುವಂತೆ ನೋಡಿಕೊಳ್ಳಲೂ ಸಾಧ್ಯವಿದೆ. ಎರಡು ಇಲಾಖೆಗಳಿಗೂ ಇರುವ ದಾರಿ ಒಂದೇ.


ಅದೇ, ನಮ್ಮ ‘ಮಾಮೂಲು’ ದಾರಿ, ಮೊದಲಿನಿಂದಲೂ ದಾರಿ ಹಾಗೇ ಇತ್ತು. ಈಗಲೂ ಇದೆ.ಮಾಮೂಲಿನ ರೇಟ್ ಮಾತ್ರ ಸ್ವಲ್ಪ ಹೆಚ್ಚಾಗಿದೆ. ಅದೇನೂ ಅಂಥಾ ದೊಡ್ಡ ವಿಷಯ ಅಲ್ಲ. ಹೋಟೆಲಿನವರು ರೇಟಿನ ಹೊರೆಯನ್ನು ಗಿರಾಕಿಗಳ ನೊರೆಗೆ ಸೇರಿಸಿ ಸರಿಮಾಡಿಕೊಳ್ಳುತ್ತಾರೆ. ಮನೆಗಳವರು ಹೇಗಾದರೂ ‘ಅಡ್ಜಸ್ಟ್’ ಮಾಡಿಕೊಳ್ಳುತ್ತಾರೆ.


ಆ ದಾರಿಯಲ್ಲಿ, ೧೯೫೮ರ ಸಮಯ, ಮಂಗಳೂರು ಮುನಿಸಿಪಾಲಿಟಿಯ ಒಬ್ಬರು ಉನ್ನತ ಅಧಿಕಾರಿ, ನಗರದ ಹಲವು ಹೋಟೆಲುಗಳಿಂದ ಪ್ರತಿ ತಿಂಗಳೂ ಮೂವತ್ತರಿಂದ ಹಿಡಿದು ನೂರ ಇಪ್ಪತ್ತು ರೂಪಾಯಿಗಳ ವರೆಗೆ ವಸೂಲು ಮಾಡುತ್ತಿದ್ದರು. ಆ ಮೇಲೆ ‘ಸಂಬಂಧಿಸಿದ’ ಇಲಾಖೆಗಳ ಸಹೋದ್ಯೋಗಿಗಳಿಗೆ ‘ಕ್ರಮದಲ್ಲಿ’ ವಿತರಿಸುತ್ತಿದ್ದರು. ಎಲ್ಲ ಕಡೆಯಿಂದಲೂ ಬರುವ ಮಾಮೂಲು ಒಂದೇ ಜಾಗದಲ್ಲಿ ಬಂದು ಸೇರುತ್ತಿದ್ದ ಕಾರಣ, ಯಾರಿಗೂ ತೊಡಕಾಗುವ ಪ್ರಶ್ನೆ ಇರಲಿಲ್ಲ.


ಹೋಟೆಲುಗಳ ಕೊಳೆಯ ಹೊಳೆ ಹರಿದು ಗಿರಾಕಿಗಳ ಹೊಟ್ಟೆಯೊ, ಚರಂಡಿಗಳ ‘ಮನುಷ್ಯರಂಧ್ರ’ (ಮ್ಯಾನ್ ಹೋಲ್)ದ ಬದಿಯೋ ಸೇರುತ್ತಲೇ ಇತ್ತು.ಮಾಮೂಲು ಕಿಸೆಗಳು ತುಂಬುತ್ತಲೇ ಇದ್ದುವು.


ಮತ್ತೆ, ೧೯೭೨ರ ಹೊತ್ತಿಗೆ, ಆ ಮಾಮೂಲು ದಾರಿಗೆ ಕಾರ್ಮಿಕ ಇಲಾಖೆಯೂ ಸೇರಿಕೊಂಡ ಸೂಚನೆ ಸಿಕ್ಕಿತು. ಇರುವ ಕೆಲಸಗಾರರ ದಾಖಲೆಗಳನ್ನು ತಮಗೆ ಬೇಕಾದ ಹಾಗೆ ತಿರುಚಿ, ಕಾನೂನಿನ ದಾರಿ ತಪ್ಪಿಸುವ ಕ್ರಮವನ್ನು ಕೆಲವು ಹೋಟೆಲುಗಳು ಅನುಸರಿಸುತ್ತಾ ಇದ್ದಾಗ, ಅದಕ್ಕೇ ಹೊಂಚು ಹಾಕುತ್ತಿದ್ದ ಕಾರ್ಮಿಕ ನಿರೀಕ್ಷಕರೊಬ್ಬರು ‘ತಿಂಗಳ ಮಾಮೂಲು ಕೊಟ್ಟರೆ ಸರಿ, ನಾನು ಬೇಕಾದರೆ ಕಣ್ಣು ಮುಚ್ಚಿ ರಿಪೋರ್ಟಿಗೆ ಸೈನ್ ಮಾಡ್ತೇನೆ’ ಎಂದು ಎಲ್ಲಾ ಹೋಟೆಲುಗಳಿಗೂ ಸೂಚನೆ ಮುಟ್ಟಿಸಿದರು.


ಸೂಚನೆಯನ್ನು ಕ್ರಮಬದ್ಧವಾಗಿ ಹಲವು ಹೋಟೆಲುಗಳವರು ಪಾಲಿಸಲೂ ತೊಡಗಿದರು. ತಿಂಡಿ-ತೀರ್ಥಗಳ ಬೆಲೆಯನ್ನು ಆಗಲೇ ಏರಿಸಿದ್ದರಿಂದ ಅವರಿಗೆ ಮಾಮೂಲು ಒಂದು ಹೆಚ್ಚಿನ ಹೊರೆ ಎಂದು ಕಾಣಿಸಲೇ ಇಲ್ಲ. ‘ಆರೋಗ್ಯ ಹೇಗೂ ಕಾಪಾಡಿಕೊಳ್ಳಬೇಕು. ಕಾರ್ಮಿಕ ರಕ್ಷೆಯನ್ನೂ ಕಾಪಾಡಿಕೊಳ್ಳೋಣ’ ಎಂದು ಅವರು ಸುಮ್ಮನಿದ್ದುಬಿಟ್ಟರು.


ಹಾಗಿರುವಾಗ ಒಂದು ದಿನ, ಒಂದು ಹೋಟೆಲಿನಲ್ಲಿ-


ಗಲ್ಲಾದಲ್ಲಿದ್ದವರು ಮಾಲೀಕರ ತಮ್ಮ. ಮಾಮೂಲು(ಬೇಟೆ ಮತ್ತು) ಭೇಟಿ-ಗೆ ಬಂದ ಕಾರ್ಮಿಕ ನಿರೀಕ್ಷಕರ ಗುರುತು ಅವರಿಗೆ ಇರಲಿಲ್ಲ. ಗುರುತು ಹೇಳಿದ ಮೇಲೆ ಸಲ್ಲಿಸಬೇಕಾದ ಕಾಣಿಕೆಯ ಮೊತ್ತವೂ ಗೊತ್ತಿರಲಿಲ್ಲ. ಅದರೊಟ್ಟಿಗೆ, “ಅಣ್ಣನವರು ಇಲ್ಲ. ಇನ್ನೊಮ್ಮೆ ಬನ್ನಿ” ಎಂದು ಹೇಳುವ ಧೈರ್ಯವೂ ಇರಲಿಲ್ಲ, ಹಾಗೂ ಹೀಗೂ ಜಗ್ಗಾಡಿ, ಇಪ್ಪತ್ತು ರೂಪಾಯಿಯ ನೋಟು (ಹತ್ತರ ಎರಡು) ಮಾತ್ರ ಕೊಟ್ಟು, ನಿರೀಕ್ಷಕರನ್ನು ಒಮ್ಮೆಗೆ ಸಾಗಹಾಕಿದರು. (ಅಡ್ಜಸ್ಟ್‍ಮೆಂಟ್ ಮತ್ತೆ ಆದುದು, ಬೇರೆಯೇ ಸುದ್ದಿ).


ಇಂಥಾ ಮಾಮೂಲು ಕ್ರಮ ಈಗಲೂ ಇಲ್ಲವೆ ? ಇರಲೇ ಬೇಕು. ಎಲ್ಲಿದೆ ? ಹೇಳಿ ತೋರಿಸು ಅನ್ನುತ್ತೀರಾ ? ಹೇಳುತ್ತೇನೆ. ನೆನಪಾಗಲಿ ಅಂತ ತಲೆ ತುರಿಸುತ್ತಾ ‍ಇದ್ದೇನೆ. ಅದಕ್ಕೆ ಮೊದಲು, ನಿಮಗೇ ನೆನಪಾದರೆ ನೀವೂ ಹೇಳಬಹುದು. ನನ್ನಿಂದ ಅಡ್ಡಿಯಿಲ್ಲ.



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

------

ಶೀರ್ಷಿಕೆಯ ೧೯೯೦ರ ದಶಕದ ವರ್ಣಚಿತ್ರ:

ದ.ಕ.ಟೆಲಿಕಾಂ ಜನರಲ್ ಮ್ಯಾನೇಜರ್ ಶ್ರೀ. ಕೆ. ರಾಮ ಅವರ ಸಮ್ಮುಖದಲ್ಲಿ ಸಮೀಪದಿಂದ 'ದೂರ'ವಾಣಿಯಲ್ಲಿ ಪತ್ರಿಕಾ ಸಹೋದ್ಯೋಗಿ ಶ್ರೀ.ಎ.ವಿ.ಮಯ್ಯ ಅವರ ಜೊತೆ ಶ್ರೀ ಪ.ಗೋಪಾಲಕೃಷ್ಣರ ಮೊದಲ ಸಂಭಾಷಣೆಯೊಂದಿಗೆ ನೂತನ ತಂತ್ರಜ್ಞಾನದ ನವೀಕೃತಗೊಂಡ ಮಂಗಳೂರಿನ ದೂರವಾಣಿ ಕೇಂದ್ರವೊಂದರ ಪ್ರಾರಂಭ.

------

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-5678.html

Thursday, April 23, 2009

’ನೋ ಚೇಂಜ್ ಕಥೆಗಳು’ - ೧೪.. ಅಪ್ಪಟ ಸತ್ಯ - ಘೋಷಕರ ಪರಂಪರೆ

ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನಾಲ್ಕನೇ ಅಂಕಣ.

ಅಪ್ಪಟ ಸತ್ಯ - ಘೋಷಕರ ಪರಂಪರೆ
ನಮ್ಮ ಮನೆಯ ಬಳಿ ಸಣ್ಣದೊಂದು ಗುಡ್ಡವಿದೆ. ಆ ಗುಡ್ಡ ಒಂದಾನೊಂದು ಕಾಲದಲ್ಲಿ ಕಾಡಾಗಿತ್ತು ಎಂತಲೂ ಕೆಲವರು (ನನ್ನಿಂದಲೂ) ಹಳಬರು ಹೇಳುತ್ತಾರೆ. ಕಡಿದ ಮರಗಳ ಬೊಡ್ಡೆಗಳು ಕೆಲವು ಈಗಲೂ ಅಲ್ಲಿ ಕಾಣಿಸುತ್ತವೆ. ಆದ್ದರಿಂದ - ಈಗ ಬೋಳಾಗಿರುವ - ಆ ಗುಡ್ಡದಲ್ಲಿ ಹಿಂದೆ ಕಾಡು ಬೆಳೆದಿತ್ತು ಎಂತ ಒಪ್ಪಿಕೊಳ್ಳಬಹುದು.

ಸಂಜೆ ಸ್ವಲ್ಪ ಹೊತ್ತು ಆ ಗುಡ್ಡದಲ್ಲಿರುವ ಒಂದು ದೊಡ್ಡ ಬಂಡೆಯ ನೆರಳಿನಲ್ಲಿ ಕುಳಿತು, ಅಲ್ಲಿಂದ ಕಾಣಿಸುವ ಮಂಗಳೂರು ನಗರದ ನೋಟಗಳನ್ನು ನೋಡುವುದು, ನಾನು ಮತ್ತು ನೆರೆಮನೆಯ ಪಂಡಿತರು ಬೆಳೆಸಿಕೊಂಡ ಇತ್ತೀಚಿನ ಅಭ್ಯಾಸ.

ಒಂದು ಕಡೆಗೆ ದೃಷ್ಟಿ ಹಾಯಿಸುವುದು, ಹರಡಿರುವ ಹಸಿರಿನ ನಡುವೆ ಯಾವುದಾದರೂ ಒಂದು ದೊಡ್ಡ ಕಟ್ಟಡದ ತಲೆ ಕಂಡರೆ - ಆ ಸ್ಥಳ ಯಾವುದು ? ಕಟ್ಟಡ ಯಾವುದಿರಬಹುದು ? ಎಂದೆಲ್ಲಾ ಗುರುತಿಸಲು ಯತ್ನಿಸುವುದು - ಇಬ್ಬರೊಳಗೆ ಭಿನ್ನಾಭಿಪ್ರಾಯ ಬಂದರೆ - ಚರ್ಚೆಯನ್ನು ಮರುದಿನಕ್ಕೆ ಬಾಕಿಯಾಗಿಟ್ಟು ಮುಂದುವರಿಸುವುದು ನಮ್ಮ ವಾಡಿಕೆ.

ಕೆಲವೊಮ್ಮೆ -ದೂರದಲ್ಲಿ ಕಾಣುವ ರಾಷ್ಟೀಯ ಹೆದ್ದಾರಿ (ನ್ಯಾಷನಲ್ ಹೈವೇ)ಯ ಒಂದು ಭಾಗವನ್ನೇ ನೋಡುತ್ತಾ ಕುಳಿತು, ಆ ರಸ್ತೆಯ ಕಡೆಯಿಂದ ಕೇಳಿ ಬರುವ ಶಬ್ದಗಳನ್ನು ಗುರುತಿಸಲೂ ಹೊರಡುತ್ತೇವೆ. ಗುರುಗುಟ್ಟುವ ಲಾರಿ -ಬಸ್‍ಗಳ ಶಬ್ದವನ್ನಂತೂ ಸುಲಭವಾಗಿ ಗುರುತಿಸುತ್ತೇವೆ.

ಸದ್ದು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಸದ್ದು ಹೊರಡಿಸುವ ಮೂಲವನ್ನು ಕಾಣಲು ಸಾಧ್ಯವಾಗುವುದಿಲ್ಲ. (ಇಬ್ಬರಿಗೂ ಇರುವ ದೃಷ್ಟಿಮಾಂದ್ಯದಿಂದಾಗಿ ಆ ತೊಂದರೆ ಎಂದು ಒಪ್ಪಿಕೊಳ್ಳಲು ಇಬ್ಬರಿಗೂ ಮನಸ್ಸಿಲ್ಲ !) ಹಾಗಾಗಿ ಶಬ್ದವನ್ನು ಕಿವಿಯಿಂದ ಗುರುತಿಸುವ ಕೆಲಸಕ್ಕೇ ಹೆಚ್ಚಿನ ಒತ್ತು ಕೊಡುತ್ತೇವೆ. ಎಷ್ಟೋ ಬಾರಿ ಚಲಿಸುವ ವಾಹನಗಳಿಂದ ಕೇಳಿಬರುವ ಕ್ಯಾಸೆಟ್ ಸಂಗೀತವನ್ನೂ ಗುರುತಿಸಲು ನಮಗೆ ಸಾಧ್ಯವಾಗಿದೆ.

ನಾಲ್ಕು ದಿನಗಳ ಮೊದಲು ಒಂದು ಬಾರಿ “ಬನ್ನಿರಿ ! ನೋಡಿರಿ ! ಆನಂದಿಸಿರಿ ! ಈ ದಿನ ನೆಹರೂ ಮೈದಾನದಲ್ಲಿ ಏರ್ಪಡಿಸಿದ ಅಮೋಘ......” ಎಂಬ ಒಂದು (ಅರ್ಧ ?) ಮಾತು ‘ಮೈಕಿನಲ್ಲಿ’ ಹೆದ್ದಾರಿ ಕಡೆಯಿಂದ ಕೇಳಿಸಿತ್ತು. ಶಬ್ದ ಹೊರಡಿಸಿದ್ದ ಮೈಕ್ರೋಫೋನ್ ಕಟ್ಟಿದ ಕಾರ್ ಚಲಿಸಿ ಹೋದ ಕಾರಣ, ಘೋಷಣೆಯ ವಾಕ್ಯ ಸಂಪೂರ್ಣವಾಗಿ ಕೇಳಿಸಿರಲಿಲ್ಲ.

ಪಂಡಿತರೇ, ಮೊನ್ನೆ ಆ ರಸ್ತೆಯಿಂದ ಕೇಳಿ ಬಂದ ಘೋಷಣೆ ಏನಿದ್ದೀತು? ಎಂದು ನಾಲ್ಕು ದಿನ ಕಳೆದು ಪ್ರಶ್ನೆ ಹಾಕಿದ್ದೆ.

ಏನಿದ್ದೀತು ಸುಡುಗಾಡು ? ಯಾವುದೋ ಆಟ ಅಥವಾ ಎಕ್ಸಿಬಿಷನ್ ನ ಎಡ್ವಟೈಸ್‍ಮೆಂಟು ಇರಬೇಕು - ಎತ್ತರದಿಂದ ಹೇಳಿದರೆ ಎಲ್ಲರಿಗೂ ಕೇಳ್ತದೆ ಅಂತ ಹೇಳಿರಬೇಕು..... ಪಂಡಿತರು ತೋರಿಸಿದ ಅತೃಪ್ತಿ ಯಾಕೆಂದು ಅರ್ಥವಾಗಲಿಲ್ಲ. ಏನಾಯ್ತು ಪಂಡಿತರೆ ? ಯಾಕಿಷ್ಟು ನಿರಾಶೆ ? ಎಂದೆ.

ಮತ್ತಿನ್ನೇನು? ಕಾರ್ ಒಂದು ಕಡೆ ನಿಲ್ಲಿಸಿ ಹೇಳುವುದನ್ನೆಲ್ಲಾ ಹೇಳಿ ಮುಂದೆ ಹೋಗಬಾರದೆ ? ಸುಮ್ಮನೆ ಮೂಕರ ಎದುರಿಗೆ ಮೂಗು ತುರಿಸಿ ಹೋದ ಹಾಗೆ ಮಾಡಿದರೆ ಏನು ಪ್ರಯೋಜನ ? ಎಂದರು.

ಅವರು ಎಲ್ಲಾ ಕಡೆಯೂ ಹಾಗೆ ಮಾಡುವುದಿಲ್ಲ. ಹೆಚ್ಚಾಗಿ, ಕಾರ್ ಅಥವಾ ರಿಕ್ಷಾವನ್ನು ಒಂದು ಕಡೆ ನಿಲ್ಲಿಸಿ - ಹೊಡೆಸುವ ಬೊಬ್ಬೆಯನ್ನು ಸಂಪೂರ್ಣ ಹೊಡೆಸಿದ ನಂತರವೇ, ಮುಂದೆ ಹೋಗುತ್ತಾರೆ. ನಮ್ಮ ಕೃಷ್ಣಪ್ಪಣ್ಣ ಮಾಡುತ್ತಿದ್ದರಲ್ಲಾ,ಹಾಗೆ -ಎಂದ ಕೂಡಲೆ “ಯಾವ ಕೃಷ್ಣಪ್ಪಣ್ಣ ? ಆ ಎಡ್ವಟೈಸ್ ಕೃಷ್ಣಪ್ಪನ ಕಥೆಯೋ ನೀವು ಹೇಳುವುದು ?” ಪ್ರಶ್ನೆ ಸಿಡಿದುಬಂತು.

ಹೌದೌದು ಅವರನ್ನು ನೀವು ನೋಡಿದ್ದೀರಾ ? (ಇಲ್ಲ, ನೋಡಿಲ್ಲ - ಬೇರೆಯವರು ಹೇಳಿದ್ದನ್ನು ಕೇಳಿದ್ದು ಮಾತ್ರ.)

ಹಾಗಾದರೆ, ಅವರ ಕಥೆಯನ್ನೂ ಕೇಳಿ. ನೋಡಿ, ಸರಿ ಸುಮಾರು ೧೯೫೦ ರಲ್ಲಿ ಹಂಪನಕಟ್ಟೆ ,ಬಾವಟೆಗುಡ್ಡೆ ಇತ್ಯಾದಿ ಸ್ಥಳಗಳಲ್ಲಿ ಡಬ್ಬಿಯಿಂದ ಮಾಡಿದ ಒಂದು ‘ಸ್ಪೀಕರ್’ ಹಿಡಿದುಕೊಂಡು, “ಬನ್ನಿರಿ ನೋಡಿರಿ - ಆನಂದ ಪಡೆಯಿರಿ, ಎಲ್ಲಿ ಗೊತ್ತೆ? ಸೆಂಟ್ರಲ್ ಮೈದಾನಿನಲ್ಲಿ !” ಎಂದು ಆ ‘ಸ್ಪೀಕರ್’ ಒಳಗಿನಿಂದಲೇ ಬೊಬ್ಬೆ ಹೊಡೆದು ಹೇಳುತ್ತಾ ತಿರುಗುತ್ತಿದ್ದ ಕೃಷ್ಣಪ್ಪ ಎಂಬವರ ಜಾಹೀರಾತು ವೈಖರಿಯ ನೆನಪು ನನಗೆ ಚೆನ್ನಾಗಿ ಇದೆ.

ತಮ್ಮ ಅಂಗಡಿಯ ಜಾಹೀರಾತುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಅಭ್ಯಾಸ ಹೆಚ್ಚಿನ ಅಂಗಡಿಗಳವರಿಗೆ ಆಗ ಇರಲಿಲ್ಲ. ಅಂಥವರು ಕೂಡಾ ದಿನಗೂಲಿ ನಿರ್ಧರಿಸಿ, ತಮ್ಮ ಜಾಹೀರಾತನ್ನು ಕೃಷ್ಣಪ್ಪನವರ ಮೂಲಕವೇ ಮಾಡಿಸುತ್ತಾ ಇದ್ದರು.

ಕ್ರಮೇಣ ಜಾಹೀರಾತಿನ ಹೊಸ ಹೊಸ ವಿಧಾನಗಳು, ಸೌಕರ್ಯಗಳು ಬಳಕೆಗೆ ಬಂದವು. ಕೃಷ್ಣಪ್ಪನೂ ತೀರಿ ಹೋದರು. ಪತ್ರಿಕೆಗಳಿಗೆ ಜಾಹೀರಾತು ಕೊಡುವುದೂ ಅಭ್ಯಾಸವಾಯಿತು. ಟೇಪ್‍ರೆಕಾರ್ಡರಿಗೆ ಮೈಕ್ ಜೋಡಿಸಿ ವಾಹನಗಳಿಂದ ಜಾಹೀರಾತು ಗೀತೆಗಳ ಪ್ರಸಾರ, ವಾಹನದಲ್ಲೇ ಕುಳಿತು ಜಾಹೀರು ಘೋಷಣೆ ಇತ್ಯಾದಿಗಳೆಲ್ಲ ಬಂದುವು. ಈಗಲೂ ಬರುತ್ತಿವೆ....

ಅದೆಲ್ಲ,ಜಾಹೀರಾತು ಚರಿತ್ರೆ ಸರಿ. ನೀವು ಈ ವಿಷಯದ ಪ್ರಸ್ತಾಪ ಯಾಕೆ ಮಾಡಿದಿರಿ ?

ಮತ್ಯಾಕೂ ಇಲ್ಲ. ಜಾಹೀರು ಮಾಡುವ ಯಾರಲ್ಲೂ ಸತ್ಯ ಹೇಳುವ ಪ್ರವೃತ್ತಿ ಮಾತ್ರ ಇರುವುದಿಲ್ಲ ಅನ್ನುವ ಭಾವನೆ ಬೆಳೆಸಿಕೊಂಡಿದ್ದೆ. ಆ ಬಗ್ಗೆ ಕೃಷ್ಣಪ್ಪಣ್ಣನಲ್ಲೂ ಒಮ್ಮೆ ಪ್ರಶ್ನಿಸಿದ್ದೆ. “ಅದೇನು ಕೇಳ್ತೀರಿ ರಾಯರೆ ? ನಮ್ಮ ಕೂಲಿ ನಮಗೆ ಸಿಕ್ಕಿದ ಕೂಡಲೆ ನಾವು ಸತ್ಯಹರಿಶ್ಚಂದ್ರರೇ ಆಗುತ್ತೇವೆ, ಗೊತ್ತಲ್ಲ ?” ಎಂಬ ಉತ್ತರವೂ ಸಿಕ್ಕಿತು.

ನಾವು ನಡೆಸುವುದು ಮಾತ್ರವೇ ಅಮೋಘ ಪ್ರದರ್ಶನ ಎಂದು ಹೇಳುವುದಾಗಲಿ, ಈವತ್ತಿನದ್ದೇ ಕಡೇ ಆಟ ಎನ್ನುವುದಾಗಲಿ, ನಮ್ಮಲ್ಲಿಯ ಮಾಲು ಲೋಕದಲ್ಲೇ ಅತ್ಯುತ್ತಮ ಎಂದು ಸಾರುವುದಾಗಲಿ, ನಾವು ಏಳು ವರ್ಷಗಳ ಗ್ಯಾರಂಟಿ ಸೇವೆ ಕೊಡುತ್ತೇವೆ ಎಂಬ ಆಶ್ವಾಸನೆಯೇ ಆಗಲಿ -

ಜಾಹೀರಾಗಿ ಬರುವಾಗ, ಅದರಲ್ಲಿ ಸತ್ಯದ ಅಂಶ ಶೇಕಡಾ ಹದಿನೈದು -ಉಳಿದ ಎಂಬತ್ತೈದು ಉತ್ಪ್ರೇಕ್ಷೆ - ಎಂಬ ತೀರ್ಮಾನಕ್ಕೆ ನಾನು ನಲ್ವತ್ತೈದು ವರ್ಷಗಳ ಹಿಂದೆ ಬಂದಾಗ, ನನ್ನಿಂದಲೂ ಹಿಂದಿನವರು ಆ ಮಾತನ್ನು ಹೇಳುವುದನ್ನು ಕೇಳಿದ್ದೆ.

ಉತ್ಪ್ರೇಕ್ಷೆಯೇ ಇಲ್ಲದೆ ಮಾಡುವ ವ್ಯವಹಾರ ಯಾವುದೂ ಇಲ್ಲ ಎನ್ನುತ್ತೀರಾ ಹಾಗಾದರೆ ? ಎಂಬ ನಿರೀಕ್ಷಿತ ಪ್ರಶ್ನೆ ಪಂಡಿತರಿಂದ ಬಂದೇ ಬಂತು.

ಇರಬಹುದು ಪಂಡಿತರೇ, ಬೇಕಾದರೆ ‘ಇದೆ’ ಎಂದೇ ಹೇಳೋಣ. ಅಂಥಾ ಕ್ರಮ ಕೋರ್ಟು ಕಚೇರಿ ವ್ಯವಹಾರಕ್ಕೆ ಸಂಬಂಧಿಸಿದ ಅಥವಾ ಇತರ ಅಧಿಕೃತ ಮೂಲಗಳ ಪ್ರಕಟಣೆಗಳಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ವಾಣಿಜ್ಯ ವ್ಯವಹಾರದ ಪ್ರಕಟಣೆಗಳಿಗೆ ಅನ್ವಯವಾಗುವುದಿಲ್ಲ.

ಅತಿರಂಜಿತ ಪ್ರಕಟಣೆಗಳು ಮಾತ್ರವೇ ಜನರನ್ನು ಆಕರ್ಷಿಸುತ್ತವೆ ಎಂದು ಧೃಢವಾಗಿ ನಂಬಿರುವ ಒಂದು ವರ್ಗ ಬಹಳ ಹಿಂದಿನಿಂದಲೂ ಇದೆ. ಹಾಗೆಯೇ ಅಂಥಾ ಪ್ರಕಟಣೆಗಳನ್ನು ಸಾರಾಸಗಟಾಗಿ ನಂಬಬಾರದು -ಜೊಳ್ಳಿನಿಂದ ಕಾಳು ಪ್ರತ್ಯೇಕಿಸಲೇಬೇಕು ಎಂದೂ ನಂಬಿರುವ ಇನ್ನೊಂದು ವರ್ಗವೂ ಇದೆ.

“ಅವರವರ ನಂಬಿಕೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ - ಆಗುವುದೂ ಇಲ್ಲ”

ಆ ಮಾತು ಗುಡ್ಡದಿಂದ ಇಳಿದು ಬರುವಾಗ ಆಡಿದ್ದು.

ಪಂಡಿತರ ಪ್ರತಿಕ್ರಿಯೆ - ಇಳಿಯವಾಗ ಹಿಂತಿರುಗಿ ನೋಡಿದರೆ ಕಾಲು ಜಾರಿ ಬಿದ್ದೇನು ಭಯದಿಂದಾಗಿ, ನೋಡುವ ಧೈರ್ಯ ಬಾರದ ಕಾರಣ, ಕೂಡಲೇ ಗೊತ್ತಾಗಲಿಲ್ಲ.

ಅವರು ನನ್ನ ಮಾತನ್ನು ಒಪ್ಪಿದ್ದಿರಲೇಬೇಕು.

ನೀವೂ ! !
------
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
----------
ಶೀರ್ಷಿಕೆಯ ೧೯೯೦ರ ದಶಕದ ಛಾಯಾಚಿತ್ರ:

ದಿನಾಂಕ ೨೩ ಡಿಸೆಂಬರ್ ೧೯೯೩ ರಂದು ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆ ವಿಭಾಗದ ಮಂಗಳೂರಿನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶ್ರೀ. ಪ. ಗೋಪಾಲಕೃಷ್ಣ. ಅಂದಿನ ಹಿರಿಯ ಪತ್ರಕರ್ತ ಶ್ರೀ. ಪ.ಗೋ ಅವರ ಸಮೀಪದಲ್ಲಿ ಕುಳಿತಿರುವ, ಅವರ ಶೈಲಿಯನ್ನು ಅನುಕರಿಸುತ್ತಿರುವವರು ಶ್ರೀ. ಚಿದಂಬರ ಬೈಕಂಪಾಡಿ
-----
ಕೃಪೆ: ಗಲ್ಫ್ ಕನ್ನಡಿಗ

Visitors to this page