ದಕ್ಷಯಜ್ಞ ಯಕ್ಷಗಾನ ನೋಡಿ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು
ಪ್ರಸಂಗವನ್ನು ಎರಡು ಗಂಟೆಗಳ ಮಿತಿಯಲ್ಲಿ ಪ್ರದರ್ಶಿಸಿದ್ದಾಯಿತು. ಆಟ ಚೆನ್ನಾಗಿ ಆಯಿತು. ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು-ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ 'ಜಯಜಯಾ' ಎನ್ನಿಸಿತು.(ಆ ಪ್ರಸಂಗದಲ್ಲಿ ನಾನು ಹಾಸ್ಯ ಪಾತ್ರವಹಿಸಿದ್ದೆ) ಮರುದಿನ ಒಂದು ತಾಳಮದ್ದಲೆ ಕಾರ್ಯಕ್ರಮ. ಪಿಟೀಲು ಚೌಡಯ್ಯನವರ 'ಅಯ್ಯನಾರ್ ಕಲಾಶಾಲೆ'ಯಲ್ಲಿ ನಡೆಯಿತು. ಹಿರಿಯ ಕವಿ ಪ್ರೊ.ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದರು. ಆಗ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಎಂ.ಬಿ.ಮರಕಿಣಿ ಮತ್ತು ಕೆ.ಆರ್.ಗೋಪಾಲ ಕೃಷ್ಣಯ್ಯ(ಕೀಲಾರು) ಇವರ ಕೋಣೆಯಲ್ಲಿ ಪ.ಗೋ.ತಾತ್ಕಾಲಿಕವಾಗಿ ಠಿಕಾಣಿ ಹೂಡಿದ್ದು ಈ ಎಲ್ಲ ಸಾಧನೆಗಳ ಹಿಂದೆ ಅವರ ಪೂರ್ಣ ಸಹಯೋಗವಿತ್ತು.
ದಸರೆಯ ಆಟದ ಯಶಸ್ಸಿನ ಸುದ್ದಿ ಬೆಂಗಳೂರಿಗೆ ತಲುಪುವುದು ತಡವಾಗಲಿಲ್ಲ. ಇಷ್ಟರಲ್ಲೇ ರಷ್ಯಾದೇಶದ (ಆಗಿನ ಯು.ಎಸ್.ಎಸ್.ಆರ್.) ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲು ಆಹ್ವಾನ ಬರಲು ಮತ್ತೊಮ್ಮೆ ಪ.ಗೋ.ಚುರುಕಾಗಿ ಓಡಾಡಿದ. ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ನಡೆದ ಸಾಂಸ್ಕೃಕ ಸಂಜೆಯಲ್ಲಿ 'ದಕ್ಷಯಜ್ಞ' ಪ್ರಸಂಗವನ್ನು ಆಡಿ ತೋರಿಸುವುದಕ್ಕೆ 10 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಿದ್ದರು! ( ಆ ರಸ ಸಂಜೆಯಲ್ಲಿನ ಕಾರ್ಯಕ್ರಮಗಳಲ್ಲಿ 10 ನಿಮಿಷದ ಕಾಲಾವಧಿ ವೀಣೆ ದೊರೆಸ್ವಾಮಿಯವರ ಪಂಚವೀಣಾವಾದನಕ್ಕೂ, ಜೌಡಯ್ಯನವರ ಪಿಟೀಲಿಗೂ ದೊರಕಿದ್ದು. ಮೂರನೇ 10 ನಿಮಿಷ ಅವಧಿಯ ಕಾರ್ಯಕ್ರಮವೆಂದರೆ ನಮ್ಮ ದಕ್ಷಯಜ್ಞ ಬಯಲಾಟವೇ).
ದಿವಂಗತ ಪದ್ಯಾಣ ಭೀಮ ಭಟ್ಟ ಮತ್ತು ಶ್ರೀಮತಿ ಗುಣವತಿ ಅಮ್ಮ ಅವರ ದ್ವಿತೀಯ ಪುತ್ರ 1927ರಲ್ಲಿ ಜನಿಸಿದ ಪೆರುವೋಡಿ ನಾರಾಯಣ ಭಟ್ಟರು ಹಿರಿಯ ಯಕ್ಷಾಗನ ಕಲಾವಿದ ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಯವರಿಂದ ಪ್ರಭಾವಿತರಾಗಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 49 ವರ್ಷಗಳ ಯಕ್ಷಗಾನ ಯಾತ್ರೆಯಲ್ಲಿ ಶ್ರೀ ಧರ್ಮಸ್ಥಳ ಮೇಳ, ಮೂಲ್ಕಿ ಮೇಳ, ಕೂಡ್ಲು ಮೇಳ, ಸುರತ್ಕಲ್ ಮೇಳ, ಬಡಗಿನ ಅಮೃತೇಶ್ವರೀ ಮೇಳ, ನಂದಾವರ ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಬಪ್ಪನಾಡು...ಹೀಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಶೇಣಿ ದತ್ತಿ ಪುರಸ್ಕಾರ, ಕುರಿಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಕರ್ಗಲ್ಲು ಸುಬ್ಬಣ್ಣ ಭಟ್ ಪ್ರಶಸ್ತಿ, ಪಾತಾಳ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳ ಜೊತೆಗೆ ಪೆರುವೋಡಿ ನಾರಾಯಣ ಭಟ್ಟರು 2010 ರಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತರು. ಲೇಖಕ , ಪತ್ರಕರ್ತ-ಯಕ್ಷಗಾನ ಪ್ರೇಮಿ ನಾ. ಕಾರಂತ ಪೆರಾಜೆಯವರು ಬರೆದು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದ ನಾರಾಯಣ ಭಟ್ಟರ ಜೀವನಗಾಥೆ `ಹಾಸ್ಯಗಾರನ ಅಂತರಂಗ' .









