Monday, May 10, 2010

ಕತ್ತೆ ಕಾಣದ ಜಿಲ್ಲೆ

ಕತ್ತೆ ಕಾಣದ ಜಿಲ್ಲೆ

1956ರ ಪ್ರಥಮ ರಾಜ್ಯೋತ್ಸವದಂದು ವಿಶೇಷ ಪುರವಣಿಯನ್ನು ಹೊರಡಿಸಿದ ಬೆಂಗಳೂರಿನ ದೈನಿಕವೊಂದು “ಕತ್ತೆಗಳಿಲ್ಲದ ಏಕೈಕ ಜಿಲ್ಲೆ” ಎಂದು ದಕ್ಷಿಣ ಕನ್ನಡವನ್ನು ಹೆಸರಿಸಿತು. ಮೇಲ್ನೋಟಕ್ಕೆ ಅದು ಲೇವಡಿಯಂತೆ ಕಂಡರೂ, ಮಾತು ನಿಜ. ದಕ್ಷಿಣ ಕನ್ನಡದಲ್ಲಿ ಕತ್ತೆಗಳಿಲ್ಲ. ಕತ್ತೆಯ ದುಡಿತ ಮಾಡಬಲ್ಲವರಿದ್ದರೆ.

ಬರಗಾಲವನ್ನು ಕಂಡರಿಯದ ಜಿಲ್ಲೆ ಎನ್ನುತ್ತಾರೆ. ಅದು ನಿಜ. ದಕ್ಷಿಣ ಕನ್ನಡಕ್ಕೆ ಇದುವರೆಗೂ ಬರಗಾಲದ ಭೀತಿ ಸೋಕಿಲ್ಲ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಮಾತ್ರ ಅದು ಎಂದಿಗೂ ‘ಡಿಫ಼ಿಸಿಟ್’. ಆದರೆ, ನೆರೆಯ ಶಿವಮೊಗ್ಗದಲ್ಲಿ ಅವರು ಉಣ್ಣದೆ ಇರುವ ಕುಸುಬಲು ಅಕ್ಕಿಯನ್ನು ದಕ್ಷಿಣ ಕನ್ನಡಕ್ಕೆ ಕಳುಹಿಸಲು ಸಾಧ್ಯವಿರುವವರೆಗೆ ಆಹಾರದ ಅಭಾವ ಇಲ್ಲಿಗೆ ಬರುವ ಕಾರಣವಿಲ್ಲ.

ಇತರರೆಲ್ಲ ಅಮ್ಮನನ್ನು ‘ಅಮ್ಮ’ ಎಂದೂ, ಅಪ್ಪನನ್ನು ‘ಅಪ್ಪ’ ಎಂದೂ ಕರೆದರೆ ದ.ಕ. ದ ಬಹ್ವಂಶ ಜನ ಅಮ್ಮನನ್ನು ‘ಅಪ್ಪೆ’ ಎಂದೂ ಅಪ್ಪನನ್ನು ‘ಅಮ್ಮೆ’ ಎಂದೂ ಕರೆಯುತ್ತಾರೆ - ಅವರ ತುಳು ಭಾಷೆಯಲ್ಲಿ ಅದು ಆ ಭಾಷೆಯ ಸೊಗಸು.

ಮಂಗಳೂರಿನ ಪ್ರಸಿದ್ದ ಛಾಯಾಗ್ರಹಕ ಎಸ್. ಆರ್. ಬಾಲಗೋಪಾಲರು ಹೇಳುವಂತೆ ತುಳು ಭಾಷೆಯನ್ನು ವಾಸ್ಕೋ ಡ ಗಾಮಾ ಮತ್ತು ಕೊಲಂಬಸರೂ ಕಲಿತಿದ್ದ ಕಾರಣ ‘ಅಪ್ಪೆರಿಕಾ’ವನ್ನು ಮತ್ತು ಅಮ್ಮೆರಿಕಾ’ವನ್ನು ಕಂಡು ಹಿಡಿದು ಅವುಗಳಿಗೆ ತಾಯಿ-ತಂದೆಯರ ಹೆಸರುಗಳ ಕೊಡುಗೆಯನ್ನಿತ್ತರು. ಪಾಪ, ಪರಂಗಿಗಳ ಉಚ್ಚಾರ ದೋಷದಿಂದ ಅವುಗಳು ಆಫ಼್ರಿಕಾ , ಅಮೇರಿಕಾಗಳಾದವು.

ಕಚ್ಚಾವಸ್ತುಗಳು ಎಲ್ಲವನ್ನೂ ಹೊರಗಿನಿಂದಲೇ ತರಿಸಿ, ಸಿದ್ದವಸ್ತುವಿನ ‘ಉತ್ಪಾದನೆ’ ಮಾಡಿ, ಅದನ್ನೇ ತಿರುಗಿ ಹೊರಗೆ ಮಾರಟಕ್ಕೆ ಕಳುಹಿಸುವ ‘ಜಪಾನಿ ಸಾಹಸ’ವೂ ದಕ್ಷಿಣ ಕನ್ನಡದಲ್ಲಿದೆ. ದಿನಕ್ಕೆ ಎಂಟು ಕೋಟಿಗಳಷ್ಟು ಬೀಡಿಯನ್ನು ಮನೆ ಮನೆಗಳಲ್ಲಿ ತಯಾರಿಸಲು ಅಗತ್ಯವಿರುವ ತಂಬಾಕು ನಿಪ್ಪಾಣಿಯತ್ತಣಿಯಿಂದ ಇಲ್ಲಿಗೆ ಬರಬೇಕು. ಬೀಡಿ ಕಟ್ಟಲು ಬೇಕಾದ ‘ಕೆಂಡು’ ಎಲೆಗಳ ಆಯಾತ ಒರಿಸ್ಸಾ, ಮಧ್ಯಪ್ರದೇಶ, ಮಹಾರಾಷ್ಟ್ರಗಳಿಂದ ಆಗಬೇಕು. ಕಟ್ಟಲು ಬೇಕಾದ ದಾರವು ಹಾಗೆಯೇ. ಎಲ್ಲವನ್ನೂ ಸಂಗ್ರಹಿಸಿ, ಇಲ್ಲಿ ತಯಾರಿಸಲಾದ ಬೀಡಿಗಳು ದೇಶದ ಹಲವು ರಾಜ್ಯಗಳಿಗೆ ನಿರ್ಯಾತವಾಗುತ್ತದೆ.

-ಪ.ಗೋಪಾಲಕೃಷ್ಣ.
















ಒಂದು ಹಿನ್ನೋಟ...

ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತರಾಗಿದ್ದು, ಆದರ್ಶ, ಸರಳ ಪತ್ರಕರ್ತರೆನಿಸಿಕೊಂಡಿದ್ದ ಶ್ರೀಯುತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.1928 -1997) ಅವರು ದಿನಾಂಕ 7 ಆಗಸ್ಟ್ 1979 ರಂದು ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟಗೊಂಡ ಅಂದಿನ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಬರೆದ ಲೇಖನ ಇದು.

ಶ್ರೀ.ಎಸ್.ಆರ್. ಬಾಲಗೋಪಾಲ್ ಅವರು ಮಂಗಳೂರಿನ ಹಿರಿಯ ಹಾಸ್ಯ ಕಲಾವಿದರು. ಅವರ ಬಗ್ಗೆ ಶ್ರೀ. ಪ. ಗೋ. ತಮ್ಮ ಅಂಕಣ ‘ನೋ ಚೇಂಜ್ ಕಥೆಗಳು’ 21 (ಹೊಟ್ಟೆ ಹುಣ್ಣಾಗಿಸುವುದು ಅಂದರೆ..) ಇದರಲ್ಲಿ ತಿಳಿಸಿದ್ದು ಈ ರೀತಿಯಲ್ಲಿ.

ಅವರ ‘ಜಲ್ಸಿ’ನ ಕಾಲ ಒಂದಿತ್ತು. 60 ರ ದಶಕದಲ್ಲಿ, ತಮ್ಮ ಕಾರ್ಯಕ್ರಮಗಳಿಗೆ ಶ್ರೀ.ಎಸ್.ಆರ್. ಬಾಲಗೋಪಾಲ್ ಅವರನ್ನು ಕರೆಸಲೇ ಬೇಕು ಎಂದು ಹಟ ಹಿಡಿಯುವ ಜನರೂ ಮಂಗಳೂರಿನಲ್ಲಿ ಇದ್ದರು. ಸ್ಟೇಜಿನಲ್ಲಿ ಬಂದು ನಿಂತ ಮೇಲೆ ಅವರು ಯಾವ ಸುದ್ದಿ ತೆಗೆದರೂ, ಯಾವ ವಿಷಯ ಎತ್ತಿಕೊಂಡರೂ, ಹಾಸ್ಯದ ಲಾಸ್ಯ ಅವುಗಳಲ್ಲಿರುತ್ತಿತ್ತು. ಅವರ ನಟನೆಯೂ ಅಷ್ಟೇ ‘ಸ್ವಾಭಾವಿಕ’, ಭಾಷೆ ಗೊತ್ತಿಲ್ಲದವರಿಗೂ ಅರ್ಥವಾಗುವಂಥಾದ್ದು.

Visitors to this page