Wednesday, May 27, 2009

’ನೋ ಚೇಂಜ್ ಕಥೆಗಳು’ -- ೧೯...ನಿಸ್ವಾರ್ಥ ಸೇವೆ ಅಂದರೇನ್ರಿ ?


















ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹತ್ತೊಂಬತ್ತನೇ ಅಂಕಣ.



ನಿಸ್ವಾರ್ಥ ಸೇವೆ ಅಂದರೇನ್ರಿ ?

ಯಾರು ಹಾಗೆ ಕೇಳಿದವರು ? ಹಾಂ ನೆನಪಾಯಿತು. ಬೇರೆ ಇನ್ಯಾರೂ ಅಲ್ಲ. ಅವಳು, ನಮ್ಮ ಉದ್ಗಾರಿ ನಂಬರ್ ವನ್‍ರವರ ಮೊಮ್ಮಗಳು. ಅದೇ ಹೆಲ್ಮೆಟ್ ಹಾಕಿ ಟಿ.ವಿ.ಎಸ್. ಹಾರಿಸುವ ಕಾಲೇಜ್ ಕನ್ಯೆ, ಅವಳು ತನ್ನ ಫ್ರೆಂಡ್ ಕೈಯಲ್ಲಿ ಕೇಳಿದ ಪ್ರಶ್ನೆ ಅದು.

ಅಪರೂಪಕ್ಕೊಮ್ಮೆ ಅವಳೂ ಅವಳ ಸ್ನೇಹಿತೆಯೂ ಆ ಟಿ.ವಿ.ಎಸ್.ನಲ್ಲಿ ಡಬಲ್ ರೈಡ್ ಸವಾರಿ ಮಾಡುವ ಅಭ್ಯಾಸವಿದೆ. ಹಾಗೇ ಮೊನ್ನೆಯೂ ಹೋಗುತ್ತಾ ಇದ್ದರು - ನಮ್ಮ ಮನೆ ಎದುರಿನಿಂದಲೇ. ವಿಷಯ ಬಹಳ ಸೀರಿಯಸ್ಸಾಗಿತ್ತೂಂತ ಕಾಣುತ್ತದೆ. ಇಲ್ಲವಾದರೆ ಮನೆ ಗೇಟಿನ ಮುಂದೆಯೇ ನಿಂತು ರಸ್ತೆ ನೋಡುತ್ತಾ ಇದ್ದ ಈ ‘ಅಂಕಲ್’ಗೆ “ಹಲ್ಲೋ” ಕೂಡಾ ಹೇಳದೆ, ಹೋಗಲಿ ನನ್ನತ್ತ ತಿರುಗಿ ಕೂಡಾ ನೋಡದೆ, ಹೇಗೆ ಹೊರಟು ಹೋದಳು ?

ಅದೇ ಸಂಜೆ, ಗೇಟಿನ ಎದುರಿಗೇ ನಿಂತಿದ್ದೆ. ಬೆಳಗಿನ ಅದೇ ವಿಷಯವನ್ನು ಯೋಚಿಸುತ್ತಾ ಇದ್ದೆ. (ಮಾಡಲು ಬೇರೆ ಕೆಲಸವೇನೂ ಇಲ್ಲವಲ್ಲ ?)

ನಿರೀಕ್ಷಿಸಿದಂತೆ ಆ ಹೊತ್ತಿಗೇ, ಟಿ.ವಿ.ಎಸ್. ನಮ್ಮ ರಸ್ತೆಗೆ ಬಂತು. ಅನಿರೀಕ್ಷಿತವಾಗಿ ನನ್ನ ಮುಂದೆಯೇ ನಿಂತಿತು. (ಹಾಗಾದರೆ, ಮಗು ನಾನು ಬೆಳಗ್ಗೆ ನಿಂತಿದ್ದುದನ್ನು ಗಮನಿಸಿದ್ದಾಳೆ!)

ಮೊದಲು, ಅವಳ ಹಿಂದೆ ಅವಳ ಫ್ರೆಂಡ್ ಕುಳಿತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. ಧೈರ್ಯವಾಗಿ “ಏನ್ರೀ, ಏನು ಸಮಾಚಾರ?” ಅಂತ ಕೇಳಿಯೂ ಬಿಟ್ಟೆ.

“ವ್ಹಾಟ್ ಅಂಕಲ್? ನಾನು ರೀ... ಅಂತ ಹೇಳಿದ್ದಕ್ಕೆ ತಮಾಷೆ ಮಾಡ್ತೀರಾ?” ಎಂಬ ಪ್ರಶ್ನಾ-ಉತ್ತರದ ಜೊತೆಗೆಯೇ “ಅವಳು ಬೆಂಗ್ಳೂರಿನವಳು. ಹಾಗಾಗಿ ರೀ ಅಂತ ಸೇರಿಸ್ದೆ. ಅಷ್ಟೆ, ಬೇರೇನೂ ಇಲ್ಲ” ಎಂಬ ವಿವರಣೆಯೂ ಸೇರಿತು.

ಸರಿಯಮ್ಮಾ ಗೊತ್ತಾಯಿತು. ಆದರೆ, ನಾನು ಕೇಳಬೇಕೂಂತ ಇದ್ದದ್ದು ಅದನ್ನಲ್ಲ, ನಿನ್ನ ‘ನಿಸ್ವಾರ್ಥ’ದ ಪ್ರಶ್ನೆಗೆ ಉತ್ತರ ಸಿಕ್ಕಿತೋಂತ ಕೇಳುವ ಅಂದಾಜು ಮಾಡಿದ್ದೆ.

ಬಿಡಿ ಅಂಕಲ್, ಅದೆಲ್ಲ ಟೆಕ್ಸ್‍ಟ್ ಬುಕ್ಸ್ ಒಳಗಿನ ಬದನೆಕಾಯಿ. ಏನೂ ಫಲ ನಿರೀಕ್ಷಿಸದೆ ಸೇವೆ ಮಾಡುವವರು ಯಾರಿದ್ದಾರೆ ಈ ಕಾಲದಲ್ಲಿ ? ಸುಮ್ಮನೆ ನಿಸ್ವಾರ್ಥ ಸೇವೆ ಅಂತ ಬಾಯಲ್ಲಿ ಬಡಾಯಿ ಕೊಚ್ಚಿಕೊಳ್ಳುವವರು ಮಾತ್ರ ಇರುವುದು.

ಅಂಥಾದ್ದೇನಾದ್ರೂ ಅನುಭವ ಆಗಿದೆಯಾ ನಿನಗೆ ?

ಅವಳು “ಇಲ್ಲ -ಇಲ್ಲ -ಇಲ್ಲ” ಎಂದಾಗಲೇ ಅರ್ಥವಾಯಿತು.“ಅದನ್ನು ಬೇಕಾದರೆ ಇನ್ನು ಯಾವಾಗಲಾದರೂ ಹೇಳು. ಆದರೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರು ಇಲ್ಲವೇ ಇಲ್ಲ ಅಂತ ಮಾತ್ರ ಹೇಳಬೇಡ”

-ಹೋ,ಗೊತ್ತಾಯಿತು. ಮುಂದಿನ ಸೆಂಟೆನ್ಸ್ ‘ಅಂಥವರು ಹಿಂದೆ ಇದ್ದರು,ಆ ನಂತರವೂ ಇದ್ದರು. ಈಗ್ಲೂ ಇದ್ದಾರೆ’ ಅಂತ ಅಲ್ವಾ ?

ನಿಜ ಮರೀ, ಸರಿಯಾಗಿಯೇ ಹೇಳಿದೆ. ಯಾರಾದ್ರೂ ಅಂಥವರ ಕಥೆ ಗೊತ್ತಾ? ನಿನಗೆ ಗೊತ್ತಿರಲಾರದು -ಅನ್ನುವುದು ನನಗೂ ಗೊತ್ತು. ಕೇಳ್ತೀಯಾ ಒಂದೆರಡನ್ನು ?

.......... ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ತನ್ನ ಫೋಟೊ ಅಥವಾ ಹೆಸರಾದ್ರೂ ಪೇಪರಿನಲ್ಲಿ ಬರಲಿ ಎನ್ನುವ ಆಸೆಯೂ ಇಲ್ಲದೆ, ಸಲ್ಲಿಸಿದ್ದ ಕಿರುಸೇವೆಗಳ ಕಥೆ -

ಸುಮಾರು ೧೯೫೯ರಲ್ಲಿ ಪಟ್ಟಣ ಪರಿಸರದಲ್ಲಿ ಒಬ್ಬ ಭಿಕ್ಷುಕನ ದಿನನಿತ್ಯ ಸಂಚಾರ ಇತ್ತು. ಅವನಿಗೆ ಎರಡು ಕಾಲುಗಳೂ ಇರಲಿಲ್ಲ. ಒಂದು ಸಣ್ಣ ಹಲಿಗೆಗೆ ನಾಲ್ಕು ಹಳೆ ಬೇರಿಂಗ್‍ಗಳು ಜೋಡಿಸಿದ್ದ ಒಂದು ತಳ್ಳುಗಾಡಿ ಮಾತ್ರ ಅವನ ಆಸ್ತಿ.ಅದರಲ್ಲಿ ಕುಳಿತು,ಕೈಗಳನ್ನು ನೆಲಕ್ಕೆ ಊರಿ ತಳ್ಳಿದರೆ ಸಾಕು ‘ಗಾಡಿ’ ಸರಾಗವಾಗಿ ಓಡುತ್ತಾ ಇತ್ತು. ಅದರಲ್ಲಿ ಕುಳಿತೇ ಅವನ ಭಿಕ್ಷಾಟನೆ.

ಒಂದು ದಿನ ಅವನ ಸಂಚಾರದ ವೇಳೆಯಲ್ಲಿ ಆಕಸ್ಮಿಕವಾಗಿ ರಸ್ತೆ ಬದಿಯಿಂದ ನಡು ರಸ್ತೆಗೆ ಬಂದ ಒಂದು ಮಗು ಬಸ್ಸಿನ ಅಡಿಗೆ ಬೀಳಲಿರುವುದನ್ನು ಗಮನಿಸಿದ ಆ ಭಿಕ್ಷುಕ. ತನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೆ ರಸ್ತೆಯ ನಡುವಿಗೆ ತನ್ನ ಗಾಡಿ ಚಲಾಯಿಸಿ, ಮಗುವನ್ನು ‘ಸೆಳೆದುಕೊಂಡು’ ತನ್ನ ಗಾಡಿಗೆ ಏರಿಸಿ, ಇನ್ನೇನು ಬಸ್ ಮೈಮೇಲೆ ಹರಿಯಿತು ಎನ್ನುವ ಮೊದಲು ಫುಟ್‍ಪಾತಿಗೆ ತಂದುಬಿಟ್ಟ. ಕೂಡಲೆ ಬ್ರೇಕ್ ಹಾಕಿದ್ದ ಬಸ್ಸಿನ ಡ್ರೈವರ್ ಸಹಿತ ಇದ್ದ ಎಲ್ಲರೂ, ಆಚೆಗೆ ಮಗುವಿನ ಹೆತ್ತವರೂ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ಹಾಗೆ, ಮಗುವನ್ನು ಅದರ ತಂದೆ ತಾಯಿಗಳಿಗೆ ಒಪ್ಪಿಸಿದ. ತಂದೆ, ಬಹುಮಾನವಾಗಿ ಕೊಡಲು ಎರಡು ರೂಪಾಯಿಯ ಒಂದು ನೋಟನ್ನು ಮುಂದೆ ಚಾಚಿದಾಗ “ಇದು ದುಡ್ಡಿಗಾಗಿ ಮಾಡಿದ ಕೆಲಸವಲ್ಲ, ಮನುಷ್ಯನಾಗಿ ಮಾಡಿದ್ದು,” ಎಂದು (ತುಳುವಿನಲ್ಲಿ) ಹೇಳಿ, ಬಹುಮಾನವನ್ನು ನಿರಾಕರಿಸಿ ಹೊರಟು ಹೋದ.

...... ಸಾಮಾನ್ಯ ೧೯೭೨ರಲ್ಲಿ ಒಂದು ಬಾರಿ ಫಳ್ನೀರ್ ರಸ್ತೆ (ಮಳೆಯಿಂದಾಗಿ) ಹೊಂಡ ಬಿದ್ದು ಕುಲಗೆಟ್ಟು ಹೋಗಿತ್ತು. ಮೋತಿ ಮಹಲ್ ಎದುರಿಗೆ ಇದ್ದ ಹೊಂಡಗಳಲ್ಲಿ ಕೆಲವು ಯುವಕರು ಬಾಳೆಸಸಿ (ಯಾಕಾಗಿ ಅಂತ ಅಂದಾಜು ಇದೆಯಲ್ಲ ?) ನೆಡುತ್ತಾ ಇದ್ದುದನ್ನು ತಿಳಿದ ಒಬ್ಬ ಪೇಪರಿನವರು ಅದರ ಫೋಟೋ ತೆಗೆಸಿದರು. ಆದರೆ ಫೋಟೋದಲ್ಲಿ ಹೊಂಡಗಳ ‘ಗಾತ್ರ’ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಒಬ್ಬರು ‘ಫಿಯೆಟ್’ ಕಾರ್ ಮಾಲಕರು, ತನ್ನ ಕಾರನ್ನೇ ಒಂದು ಹೊಂಡಕ್ಕೆ ಇಳಿಸಿ ಒಳಕ್ಕೆ ಸಿಕ್ಕಿಸಿ “ಮಿಸ್ಟರ್ ಈಗ ಒಂದು ಫೋಟೋ ತೆಗೆಯಿರಿ” ಎಂದರು. ಚಿತ್ರ ತೆಗೆದಾದ ಮೇಲೆ, ಕಾರನ್ನು ಮೇಲಕ್ಕೆತ್ತಲು ಸುಮಾರು ಅರ್ಧ ಗಂಟೆ ಬೇಕಾಯಿತು. ಆಗ, ಅವರಿಗಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿದಾಗ “ಛೆ ! ಅದರಲ್ಲಿ ಏನಿದೆ, ನೀವು ಮಾಡುತ್ತಾ ಇರುವುದು ಪಬ್ಲಿಕ್ ಸರ್ವಿಸ್ ಅಂತ ಗೊತ್ತು. ಈ ಫೋಟೋ ಪೇಪರಿನಲ್ಲಿ ಬಂದ ಕಾರಣದಿಂದಲಾದರೂ ಈ ರೋಡ್ ಸರಿ ಆದರೆ ಸಾಕು” ಎಂದು ಹೇಳಿ, ಕಾರ್ ಮೇಲಕ್ಕೆತ್ತಿದ ನಂತರ ಹೊರಟು ಹೋದರು. (ಫೋಟೋ ಪೇಪರಿನಲ್ಲಿ ಪ್ರಕಟವಾದ ಮೇಲೆ ಅದೇ ರಸ್ತೆ ಕಾಂಕ್ರೀಟ್ ಲೇಪ ಆಯಿತೆನ್ನುವುದು ಮತ್ತಿನ ಸುದ್ದಿ).

ಇಂಥಾದ್ದೇ ‘ನಿಸ್ವಾರ್ಥ’ ಘಟನೆಗಳು ಇಂದಿಗೂ ನಡೆಯುತ್ತಾ ಇಲ್ವಾ ?

“ಇದೆ ಅಂಕಲ್” ಎಂದ ಹುಡುಗಿ, ತನ್ನ ಅನುಭವವನ್ನು ಹೇಳಲು ಸಂಕೋಚಪಟ್ಟವಳ ಹಾಗೆ ವರ್ತಿಸಿ, ನಿಧಾನವಾಗಿ ಟಿ.ವಿ.ಎಸ್. ತಳ್ಳಿಕೊಂಡು ಹೋಗುವ ಮೊದಲು, ರಸ್ತೆಯಲ್ಲಿ ಬಿದ್ದಿದ್ದ ಬಾಟ್ಲಿ ತುಂಡು ಒಂದನ್ನು ಹೆಕ್ಕಿ ಬದಿಯ ಚರಂಡಿಗೆ ಎಸೆದುದು ಕಂಡಿತು.

---
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)


ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.

----
ಶೀರ್ಷಿಕೆಯ ೧೯೭೦ರ ದಶಕದ ಛಾಯಚಿತ್ರ:

ದಿನಾಂಕ ೧೨ ಜುಲೈ ೧೯೭೮ರಂದು ಡ್ರೆಜಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕ್ಯಾಪ್ಟನ್. ಎಸ್. ಕೆ. ಸೋಮಯಾಜುಲು ಅವರು ನವ ಮಂಗಳೂರು ಬಂದರಿನಲ್ಲಿ ಕಾರ್ಯ ನಿರ್ವಹಿಸುತಿದ್ದ " ಎಂ. ಒ. ಟಿ.- VIII ಡ್ರೆಜ್ "ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ನವ ಮಂಗಳೂರು ಬಂದರಿನ ಚೀಫ್ ಎಂಜಿನಿಯರ್ ಶ್ರೀ. ಪಂಡಿತಾರಾದ್ಯ ಅವರೊಂದಿಗೆ ಅಂದಿನ " ಸಂಯುಕ್ತ ಕರ್ನಾಟಕ" ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ.

----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6804.html

---

Sunday, May 24, 2009

’ನೋ ಚೇಂಜ್ ಕಥೆಗಳು’ -- ೧೮... ಬಾಲ ಸೇರಿಸಿ ಬದಲಾವಣೆ !




















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೆಂಟನೇ ಅಂಕಣ.


ಬಾಲ ಸೇರಿಸಿ ಬದಲಾವಣೆ !


ಸರ್, ಸಂಪಾದಕರಿಗೆ ಬಾಲ ಬೇಡವಾ ? ಎಂಬ ಪ್ರಶ್ನೆ ಬಹಳ ಹಿಂದೊಮ್ಮೆ ನವಭಾರತ ಪತ್ರಿಕೆಯ ನೌಕರಿಯಲ್ಲಿದ್ದಾಗ ಎದುರಿಸಿದ್ದು.

ಈಗ ನಾಲ್ಕು ದಿನಗಳ ಮೊದಲು `ತ್ರಿಪಾಠಿ'ಯವರ ಜೊತೆಗೆ ಹರಟೆ ಹೊಡೆಯತ್ತಿದ್ದಾಗ ನೆನಪಿಗೆ ಬಂತು.
ಆ ನೆನಪಿಗೆ ಸಂದರ್ಭ ಒದಗಿಸಿದವರು ``ಮಿಸ್ಟರ್ ಪ.ಗೋ. ಇಂಗ್ಲಿಷ್‍ನಲ್ಲಿ ಗ್ರಾಮರ್ ಅಂತ ಇರೋ ಹಾಗೆ ನಮ್ಮ ಕನ್ನಡದಲ್ಲಿ ಏನೂ ಇಲ್ವಾ ?'' ಎಂದಿದ್ದರು.

(ಗ್ರಾಮರ್ - ವ್ಯಾಕರಣಗಳ ಬಗ್ಗೆ ಪ್ರಶ್ನೆಯನ್ನು ನಿಜವಾಗಿ ಕೇಳಬೇಕಾಗಿದ್ದ ಪಂಡಿತರ ಬದಲಿಗೆ ಇವರು ಯಾಕೆ ಕೇಳುತ್ತಿದ್ದಾರೆ ? ಬಹುಶಃ ಅವರ ಎಂದಿನ ಅಭ್ಯಾಸದಂತೆ `ತಿಳುಕೊಳ್ಬೇಕೂ ಅಂತ' ಕೇಳುತ್ತಿರಬೇಕು)

``ಇಲ್ಲದೆ ಏನು ತ್ರಿಪಾಠಿ ಸಾಹೇಬರೇ, ಗ್ರಾಮರ್ ಅಂದರೆ ವ್ಯಾಕರಣ ಅಲ್ವಾ? ಯಾಕೆ ಕೇಳಿದ್ರಿ?'' ಅವರ ಒಂದು ಪ್ರಶ್ನೆಗೆ ಎರಡು ಮರುಪ್ರಶ್ನೆ ಹಾಕಿದೆ.

`ಹೌದಲ್ವಾ, ಭಾಷೆಯ ಯೂಸಿಗೆ ಇಂಪೋಸ್ ಮಾಡಿದ ರೂಲ್ಸಿಗೇ ಕನ್ನಡದಲ್ಲಿ ವ್ಯಾಕರಣ ಅಂತ ಹೇಳ್ತಾರೆ...... ಈಗ ನೆನಪಾಯಿತು. ಆದ್ರೆ ಅದೂ...... ಮಾತಿಗಿಂತಲೂ ಮುಖ್ಯವಾಗಿ ಬರಹಕ್ಕಲ್ವಾ ಬೇಕಾಗೋದೂ ?'

- ಹೌದು ಸ್ವಾಮೀ, ಯಾವ ನಿಯಮವಾದರೂ ಹಾಗೇ. ಎಲ್ಲರೂ ಅವುಗಳನ್ನು ತಿಳಿದುಕೊಂಡು - ಎಲ್ಲರಿಗೂ ತಿಳಿಯುವ - ಬರಹದಲ್ಲಿ ಉಪಯೋಗಿಸಿದ್ರೆ ನಿಯಮಕ್ಕೊಂದು ಬೆಲೆ ಬರ್‍ತದೆ. ಅಂಥಾ ನಿಯಮಗಳು ಇದ್ದವು. ಇವೆ, ಇರುತ್ತವೆ, ನೋಡಿ, ಈಗ ನಾನು ಮಾತನಾಡಿದ್ದೂ -ಭೂತ- ವರ್ತಮಾನ- ಭವಿಷ್ಯತ್ ಎನ್ನುವ ಕಾಲನಿಯಮದ ಪ್ರಕಾರ ಅಂತ ಇಟ್ಟುಕೊಳ್ಳಿ. ಇಂಥಾ ವಿವರ ಎಲ್ಲಾ ನೆನಪಿಟ್ಟುಕೊಳ್ಳಲಿಕ್ಕೆ ಮನಸ್ಸಿಲ್ಲದವರು ಅಥವಾ ಸಾಧ್ಯವಿಲ್ಲದವರು, ಕಾಲನಿಯಮವನ್ನು ಬರಹದಲ್ಲಿ ಅನುಸರಿಸದೆ ಇರುವುದೂ ಇದೆ.

ಅಂಥವರಿಗಾಗಿಯೇ ಹುಟ್ಟಿಕೊಂಡ ಅಥವಾ ಅವರೇ ಹುಟ್ಟಿಸಿಕೊಂಡ ಇನ್ನೊಂದು ನಿಯಮದ ಹ್ರಸ್ವವಿಧಾನ ಒಂದರ ಕಥೆ ಕೇಳಿ.

ವ್ಯಾಕರಣದಲ್ಲಿ ವ್ಯಂಜನಾಕ್ಷರಗಳನ್ನು ಅಲ್ಪಪ್ರಾಣ - ಮಹಾಪ್ರಾಣ ಅಂತ ವಿಂಗಡಿಸುತ್ತಾರಂತೆ, (ಸಂಪಾದಕರಿಗೆ ಬಾಲ ಬೇಡವೆ ? ಎಂಬ ಪ್ರಶ್ನೆಯ ಪ್ರಕರಣ ಮತ್ತು ಆ ಪ್ರಶ್ನೆ ಎತ್ತಿದವರ ಸಮಸ್ಯೆಯ ಹಿನ್ನೆಲೆಗಳೆಲ್ಲ ಆ ಹೊತ್ತಿಗೆ ನೆನಪಿಗೆ ಬಂದಿದ್ದವು.) ಅಷ್ಟೆಲ್ಲವನ್ನೂ ಉಚ್ಚರಿಸಿ ವಿವರಿಸಿ ಮನದಟ್ಟು ಮಾಡುವಷ್ಟು ತಾಳ್ಮೆ - ಅಥವಾ ಮನಸ್ಸು - ಇಲ್ಲದಿದ್ದ ಉಪಾಧ್ಯಾಯರಿಂದ ಶಿಕ್ಷಣ ಪಡೆದ ಒಬ್ಬರ ಉದಾಹರಣೆ, ಇದು:

- ಹಿಂದೆ, ನಾನು ನವಭಾರತದಲ್ಲಿ ಇದ್ದಾಗ ಒಮ್ಮೆ ``ಸಂಪಾದಕರಿಗೆ ಬಾಲ ಬೇಡವಾ ಸರ್ ?'' ಎಂದು ಒಬ್ಬರು ಪ್ರೂಫ್ ರೀಡರ್ ಕೇಳಿದ್ದರು. ಅವರ ಹೆಸರು ರಘುರಾಮ ಅಂತ. ಅವರ ಉಪಾಧ್ಯಾಯರು ಅವರಿಗೆ ``ಅಲ್ಪಪ್ರಾಣದ ಅಕ್ಷರವನ್ನು ಮಹಾಪ್ರಾಣವಾಗಿ ಬದಲಾಯಿಸಬೇಕಾದರೆ ಅದಕ್ಕೊಂದು `ಬಾಲ' ಕೊಟ್ಟರಾಯಿತು. ನಿನ್ನ ಹೆಸರಿನಲ್ಲಿ ಇದೆಯಲ್ಲಾ ಅಂಥಾದ್ದೇ ಒಂದು `ದ'ಕ್ಕೆ ಬಾಲ ಕೊಟ್ಟರೆ ಅದು `ಧ' ಆಗುತ್ತದೆ'' ಎಂದು ಸರಳವಾಗಿ ವಿವರಿಸಿದ್ದರಂತೆ.

ಆ ಸರಳ ವಿವರಣೆ ಅವರ ಎಳೆಯ ಮನಸ್ಸಿಗೆ ನಾಟಿತು. ದ-ಧ ಅಕ್ಷರಗಳು ನೆನಪಿನಲ್ಲಿ ಗಟ್ಟಿಯಾಗಿ ಉಳಿದವು. ಕ್ರಮೇಣ, ಅವೆರಡರ ಒಳಗಿನ ವ್ಯತ್ಯಾಸದ ಬಗ್ಗೆ ಗೊಂದಲವೂ ಹುಟ್ಟಿಕೊಂಡಿತು. ಬಾಲ ಬೇಕಾದ `ಧ' ಯಾವುದು? ಬೇಧ ಅಥವಾ ಭೇದ ? ದರ್ಮ -ಧರ್ಮ,ಭದ್ರ -ಭಧ್ರ ?? ಇಂಥವುಗಳ ಜೊತೆಗೆ ಆಗಾಗ ಅಲ್ಲಲ್ಲಿ ಕಾಣುತ್ತಿದ್ದ ಜನಾರ್ದನರ ಹೆಸರುಗಳಿಗೆ ಬಾಲ ಸೇರಿಕೊಂಡು ಅವು `ಜನಾರ್ಧನ'ರಾದ ನಿದರ್ಶನಗಳೂ ಗೊಂದಲವನ್ನು ಹೆಚ್ಚಿಸಿದವು. ಬಹಳಷ್ಟು ಯೋಚಿಸಿ ಅವರು `ಬಹುಶಃ ಹೆಚ್ಚಿನ ಎಲ್ಲ ದ- ಗಳಿಗೂ ಬಾಲ ಬೇಕಾಗಬಹುದು' ಎಂದು ಭಾವಿಸಿದ ಕಾರಣ ಸಂಪಾದಕರಿಗೆ ಬಾಲದ ಅಗತ್ಯವಿಲ್ಲವೆ ? ಎಂಬ ಪ್ರಶ್ನೆ ಎತ್ತಿದ್ದರು.

ರಘುರಾಮರವರು ಕಿಡಿಗೇಡಿಯಲ್ಲ. ಅವರ ಸಮಸ್ಯೆ ಪ್ರಾಮಾಣಿಕವಾದುದು ಎಂದು ತಿಳಿದಿತ್ತು. ಆದ್ದರಿಂದ, ಸಂಪಾದಕ ಶಬ್ದದಲ್ಲಿ ಇರುವ `ದ'ಕ್ಕೆ ಬಾಲದ ಅಗತ್ಯವಿಲ್ಲ ಎಂದು ಹಿರಿಯರೊಬ್ಬರು ಅವರಿಗೆ ತಿಳಿಸಿದ ಮೇಲೆ ``ಸ್ವಾಮೀ ರಘುರಾಮರೇ. ಸಂಪಾದಕರಿಗೆ ಬೇರೆಯವರು ಬಾಲ ಬಿಚ್ಚದ ಹಾಗೆ ನೋಡಿಕೊಳ್ಳುವಷ್ಟು ಸ್ವಂತ ಶಕ್ತಿ ಇದೆ. ಅವರ ಸ್ವಂತಕ್ಕೆ ಆ ಬಾಲ ಬೇಕಾಗಿಲ್ಲ'' ಎಂದು ನಾನೂ ಮಾತು ಸೇರಿಸಿದೆ.

ಆ ನಂತರದ ವರ್ಷಗಳಲ್ಲಿ ಒಮ್ಮೆ ಎದುರಾದ್ದು ಇನ್ನೊಂದು ರೀತಿಯ ಅಕ್ಷರಗಳಿಗೆ ಅಂಟಿರದ `ವಕ್ರಬಾಲ'ಗಳ ಸಮಸ್ಯೆ. ರ -ಒತ್ತು ಮತ್ತು ಋ ಒತ್ತುಗಳದ್ದು. ಆವ ಅಕ್ಷರಕ್ಕೆ ಯಾವ ಒತ್ತು ? ಶೃತಿಯನ್ನು ಶ್ರುತಿ ಎಂದು ಬರೆಯಬೇಕೊ ? ಶ್ರುತಿ ಮತ್ತೆ ಶೃತಿ ಎರಡರ ಅರ್ಥವೂ ಒಂದೆಯೋ ? ಗೃಹವನ್ನು ಗ್ರಹ ಅಂತ ಬರೆದರೆ ತಪ್ಪೇನು ?

ಅಂಥಾ ಪ್ರಶ್ನೆಗಳನ್ನು ಕೇಳುತ್ತಿದ್ದ ವ್ಯಕ್ತಿ `ಇನ್ನಿಲ್ಲ' ಹಾಗಾಗಿ ಹೆಸರು - ವಿವರ ಇಲ್ಲಿ ಬೇಡ.

ನಿಯಮಗಳನ್ನೂ ಅವುಗಳನ್ನು ಅನುಸರಿಸಿದರೆ ಆಗುವ ಅನುಕೂಲಗಳನ್ನೂ ತಿಳಿದುಕೊಳ್ಳುವಷ್ಟು ಬಿಡುವಿಲ್ಲದವರು `ನಾನು ಮಾಡಿದ್ದೇ ಸರಿ' ಎನ್ನುವ ಪ್ರವೃತ್ತಿ ಹಿಂದೆಯೂ ಇತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ, ಕೆಲಸದಲ್ಲಿರುವ ಅವಸರವೂ ಆ ಪ್ರವೃತ್ತಿಗೆ ಕೆಲವೊಮ್ಮೆ ಒತ್ತಾಸೆ ಕೊಡುತ್ತದೆ ( ಈ ಬರಹದ ಅಕ್ಷರ ಜೋಡಿಸುತ್ತಿರುವವರು ದಯಮಾಡಿ ಕ್ಷಮಿಸಿ ). ಇಂದಿನ ವೇಗದ ಯುಗದಲ್ಲಿ ಅದು ಮಹಾಪರಾಧವೇನೂ ಆಗುವುದಿಲ್ಲ.

ಭಾಷೆ ಒಂದು ಸಂವಹನದ ಮಾಧ್ಯಮ. ಅದು ಬದಲಾಗುತ್ತಲೇ ಇರುತ್ತದೆ. ಬಹುಶಃ ಬೆಳೆದೂ ಬೆಳೆಯುತ್ತದೆ. ಅಲ್ಲವೆ ತ್ರಿಪಾಠಿಜಿ ?

``ನೀವು ಹೇಳೋದು ಪ್ರೊಬೆಬ್ಲಿ ರಾಯಿಟ್'' ಎಂದು `ಪ್ಯೂರ್' ಕನ್ನಡದಲ್ಲಿ ಉತ್ತರಿಸಿ ತ್ರಿಪಾಠಿಯವರು ಎದ್ದು ಹೋದರು.


--------

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.


ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.
----

ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

೧೯೮೦ರ ದಶಕದಲ್ಲಿ ಧರ್ಮಸ್ಥಳದಲ್ಲಿ ನಡೆದ ಶ್ರೀ.ಬಾಹುಬಲಿ ಮಹಾ ಮಸ್ತಕಾಭಿಷೇಕದ ಶ್ರೀ ಪ.ಗೋ. ಅವರು ಸಂಯೋಜಿಸಿದ ಈ ಛಾಯಾಚಿತ್ರ ಪತ್ರಿಕೋದ್ಯಮಕ್ಕೆ ಪೂರಕವಾದ ಎಲ್ಲ ವಿಭಾಗಗಳ ಪರಿಣತ ಶ್ರೀ. ಪ. ಗೋಪಾಲಕೃಷ್ಣರು ಛಾಯಾಚಿತ್ರದ ದೃಶ್ಯ ಸಂಯೋಜನೆಯಲ್ಲಿ ನಿಪುಣರು ಎಂದು ದೃಢಪಡಿಸುತ್ತದೆ.
---
ಕೃಪೆ: ಗಲ್ಫ್ ಕನ್ನಡಿಗ

Sunday, May 17, 2009

’ನೋ ಚೇಂಜ್ ಕಥೆಗಳು’ - ೧೭.ತೇಮಾನು ಮಂತ್ರ ಜಪಿಸುತ್ತೀರಮ್ಮಾ !














ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೇಳನೇ ಅಂಕಣ.




ತೇಮಾನು ಮಂತ್ರ ಜಪಿಸುತ್ತೀರಮ್ಮಾ !
ಚಿಕ್ಕವನಾಗಿದ್ದಾಗಿನಿಂದಲೂ ನಾನು ಕೇಳುತ್ತಿದ್ದ ಒಂದು ಶಬ್ದ ಕಳೆದ ವಾರವೂ ಕೇಳಿಸಿತು. ಆ ಶಬ್ದದ ಮೂಲ ಅಂದೂ ಗೊತ್ತಿರಲಿಲ್ಲ. ಈಗಲೂ ಗೊತ್ತಿಲ್ಲದಿರಲು ಅದರ ಪರಿಚಯ ಗಂಡಸರಿಂದಲೂ ಹೆಚ್ಚಾಗಿ ಹೆಂಗಸರಿಗೇ ಇರುವುದು ಒಂದು ಕಾರಣ - ಆಗಿರಲೂ ಬಹುದೆನ್ನಿ.

ಶಬ್ದ ಯಾವುದು ಅಂತ ಕೇಳ್ತೀರಾ ? ಅಂಥಾ ದೊಡ್ಡ ಅಥವಾ ಕಠಿಣ ಶಬ್ದವೇನೂ ಅಲ್ಲ. ಬರೇ ಮೂರಕ್ಷರದ ಶಬ್ದ ಅದು. ತೇ -ಮಾ-ನು ಎಂಬ ಅಕ್ಷರಗಳು ಮಾತ್ರ ಅದರಲ್ಲಿ ಇರುವುದು.

ಆ ಮೂರಕ್ಷರ ಏನಾದರೂ ಕೇಳಿದರೆ ಬಂದ ಮೈನಡುಕ ಕಡಿಮೆಯಾಗಲು ಕಡಿಮೆ ಎಂದರೆ ಮೂರು ಗಂಟೆಗಳ ಹೊತ್ತು ಆದರೂ ಬೇಕು ಎಂಬುದು ನನ್ನ ಅನುಭವ. ಆದರೆ ನಾನು ಮೈನಡುಕ ಬರಿಸಿಕೊಂಡ ಸಂದರ್ಭಗಳು ಹೆಚ್ಚಿರಲಿಲ್ಲ - ಕಳೆದ ಮೂವತ್ತು ವರ್ಷಗಳಲ್ಲಿ ಮೂರು ಬಾರಿ ಮಾತ್ರ ಹಾಗಾಗಿತ್ತಷ್ಟೇ. ಇತ್ತೀಚೆಗೆ ಹಾಗಾದುದು, ಅದೇ ಹೇಳಿದೆನಲ್ಲಾ ಕಳೆದ ವಾರ.

ಈ ಶಬ್ದ ಎಲ್ಲಿಂದ ಬಂತು ? ಯಾವ ಭಾಷೆಯಲ್ಲಿ ಹುಟ್ಟಿಕೊಂಡು ಕರಾವಳಿ ಕನ್ನಡದಲ್ಲಿ ಬಂದು ನೆಲೆಸಿತು ? ಎಂದು
ತಿಳಿಯಲೇಬೇಕೆಂಬ ಹಠ ಮೂರನೆ ಬಾರಿ ಅದನ್ನು ಕೇಳಿಸಿಕೊಂಡಾಗ ಮೂಡಿತು. ಬೇರೆಲ್ಲಿ ಅಲ್ಲವಾದರೂ ಕಿಟೆಲ್ ಶಬ್ದಕೋಶದಲ್ಲಿ ಅದು ಇರಬಹುದು. ಆ ಕಿಟೆಲ್ ಡಿಕ್ಷನರಿ ಇನ್ನೆಲ್ಲಿಯೂ ಇಲ್ಲವಾದರೂ ನಮ್ಮ ಪಂಡಿತರಲ್ಲಿ ಇದ್ದೇ ಇದ್ದೀತು. ಅದನ್ನು ನೋಡಲೇಬೇಕು ಎಂದೆ. ಪಂಡಿತರಲ್ಲಿಗೆ ಓಡಿದೆ -ಅಲ್ಲ ಧಾವಿಸಿದೆ.

ಅವರಲ್ಲಿನನ್ನ ಡಿಕ್ಷನರಿಯ ಅಗತ್ಯವನ್ನು ಹೇಳಿಕೊಂಡೆ, ‘ಯಾವ ಶಬ್ದದ ಅರ್ಥ ಬೇಕಾಗಿದೆ ನಿಮಗೆ ?’ ಎಂದವರು ಸಹಜವಾಗಿ ಕೇಳಿದರೂ ಉತ್ತರ ಕೊಡದೆ “ಡಿಕ್ಷನರಿ ಇದ್ದರೆ ಕೊಡಿ ಸ್ವಾಮಿ, ಶಬ್ದ ಆಮೇಲೆ ಹೇಳ್ತೇನೆ” ಎಂದು ಬಿಗುಮಾನ ತೋರಿಸಿದೆ. ಪಾಪ ! ಹುಡುಕಿ ತಂದುಕೊಟ್ಟರು. ಸ್ವಾಭಾವಿಕ ಕುತೂಹಲದಿಂದ ನನ್ನೆದುರಿನ ಕುರ್ಚಿಯಲ್ಲೇ ಕುಳಿತು ನನ್ನತ್ತ ನೋಡುತ್ತಲೇ ಉಳಿದರು.

ಅವಸರವಸರವಾಗಿ ಪುಟ ಮಗುಚಿದೆ. ೧೮೯೪ರಲ್ಲಿ ಪ್ರಕಟವಾಗಿದ್ದ ಪುಸ್ತಕದ ೧೯೯೪ರ ಮರು ಮುದ್ರಣದ ಆವೃತ್ತಿಯ ೭೪೭ನೇ ಪುಟದಲ್ಲಿ ಅದನ್ನು ಕಂಡೊಡನೆ ‘ಹೋ ಸಿಕ್ಕಿತು !’ ಎಂದು ಕೂಗಿಕೊಂಡೆ.

“ಸಿಕ್ಕಿದ್ದಾದರೂ ಏನು ಮಹರಾಯರೆ ? ಸ್ವಲ್ಪ ಬಿಡಿಸಿ ಹೇಳಿ” ಎಂದು ಕೇಳಿಕೊಂಡ ಪಂಡಿತರಿಗೆ -

“ಬಿಡಿಸಿದ್ದೇನೆ -ಪುಸ್ತಕ. ಈಗ ಹೇಳುತ್ತೇನೆ-ಓದಿ” ಎಂದು ಹೆಮ್ಮೆಯಿಂದ ಹೇಳಿ, ಓದಿದ್ದೇನು ? ಕೇಳಿ.

“....... ತೇಮಾನ - Waste from rubbing especially metals (ತೇಗಡೆ) loss in assaying metals (ತೇಯ್ಮಾನ) the state of being wasted,above work..afraid of work or lazy (hesitation, delay,sluggishness, ತೇಯ್ಮಾನಕ್ಕಾರ, a mean, penurious man,fond of living at other people's cost) ತೇಮಾನದಿನ್ದ ಹೋಮಾ ಮಾಡಿ, ಗುಮಾನ ಪಟ್ಟ (ಗಾದೆ) ಎಂದೆಲ್ಲ ಏಳು ಪಂಕ್ತಿಯಿಡೀ ಬರದಿದ್ದುದೆಲ್ಲವನ್ನೂ ಪಟಪಟನೆ ಓದಿದೆ. ಕೂಡಲೇ ಕೇಳಿಸಿದ ಪಂಡಿತರ ‘ಪಕ-ಪಕ-ಪಕ-ಪಕ’ ನಗುವಲ್ಲದಿದ್ದರೆ ನನ್ನ ‘ಪಟ ಪಟ’ ಮತ್ತೂ ಮುಂದುವರಿಯುತ್ತಿತ್ತು. ನಗು ಕೇಳಿಸಿತು - ಆದ್ದರಿಂದ ನನ್ನ ಪಟ ಪಟ (ಅಥವಾ ಪಿಟಿಪಿಟಿ ಅಂದುಕೊಳ್ಳಿ) ನಿಂತಿತು.

ನಗುವನ್ನು ಕಷ್ಟಪಟ್ಟು ತಡೆದುಕೊಂಡ ಪಂಡಿತರು “ನಿಮ್ಮ ಗಡಿಬಿಡಿ ಇಷ್ಟಕ್ಕೆಯೋ ? ನನ್ನತ್ರ ಕೇಳಿದ್ದರೆ ಆಗಲೇ ಹೇಳ್ತಿದ್ದೆ. ನಮ್ಮವರೊಟ್ಟಿಗೆ ನಿಮ್ಮವರೂ ಸೇರಿ, ನಮಗಿಬ್ಬರಿಗೂ ತೇಮಾನಿನ ಬಿಸಿ ಮುಟ್ಟಿಸಿದ್ದಾರೆ. ನಿಮ್ಮ ತಲೆಗೆ ಹೊಳೀಲಿಕ್ಕೆ ಅದಕ್ಕೆ ಏಳು ದಿನ ಬೇಕಾಯಿತಾ ?” ಎಂದೇ ಬಿಟ್ಟರು.

ಅವರು ಹೇಳಿದ್ದು ನಿಜ. ಹಾಗಾಗಿ ನನ್ನ ಎಂದಿನ ಅಭ್ಯಾಸ ಬದಲಾಯಿಸಿ, “ತೇಮಾನು -ಬಿಸಿ ಕಥೆ ಯಾವುದಾದರೂ ನೆನಪಿದ್ದರೆ ಹೇಳಿ ಪಂಡಿತರೇ. ಏನಾದ್ರೂ ಹೋಲಿಕೆ ಸಿಕ್ಕೀತೋ ಅಂತ ನೋಡ್ತೇನೆ” ಎಂದೆ ದೈನ್ಯವಾಗಿ.

“ಪ. ಗೋಪಾಲಕೃಷ್ಣರೇ...... (ಹೂಂ, ತಮಾಷೆ ಮಾಡಿ !) ಈ ತೇಮಾನು ಶಬ್ದಕ್ಕೂ ಹೆಂಗಸರಿಗೂ, ಇರುವ ನಂಟು ಬಹಳ ಹಳೆಯ ಕಾಲದ್ದು, ನನಗೆ ಗೊತ್ತಿದ್ದ ಹಾಗೆ ನಮ್ಮ ಅಜ್ಜಿಯ ಕಾಲದಲ್ಲೇ ಅದು ಇತ್ತು. ತೇಮಾನು ಎಲ್ಲದರಲ್ಲೂ ಸಾಮಾನ್ಯವಾಗಿ ಬರುತ್ತದಂತೆ. ಎಣ್ಣೆಗೆ ಕೊಟ್ಟ ಕೊಬ್ಬರಿಯಲ್ಲೂ ಬೀಸಿದ ಗೋದಿಯಲ್ಲೂ. ಆದರೆ ಅದನ್ನು ನಮ್ಮಂಥವರು ಗಣ್ಯ ಮಾಡುವುದಿಲ್ಲ. ಹೆಂಗಸರು ಗಣ್ಯ ಮಾಡಿದರೂ ಹೇಳುವುದಿಲ್ಲ. ಅದನ್ನು ಸಹಿಸಿಕೊಳ್ತಾರೆ. ನಮ್ಮ ವಿಚಾರ ಎಲ್ಲಾ ಹೊಟ್ಟೆಗೆ ಹೋಗಿ ಮಾಯವಾಗ್ತದೆ. ಆದ್ರಿಂದ ಮರ್‍ತು ಹೋಗ್ತದೆ. ಅವರದಾದ್ರೆ ಕುತ್ತಿಗೆ, ಕೈಕಿವಿಗಳಲ್ಲಿ ಮೆರೀತಾ ಇರ್‍ತದೆ. ಹಾಗೆಯೇ ಯಾವಾಗಲೂ ಮೆರೀಬೇಕು ಅನ್ನುವ ಆಸೆ ಅವರಿಗೆ ಇದೆ. ಹಾಗಾಗಿ, ತೇಮಾನು ಮಂತ್ರವನ್ನು ಅವರು ಯಾವಾಗಲೂ ಗುಟ್ಟಾಗಿ ಜಪಿಸುತ್ತಾ ಇರುತ್ತಾರೆ”

“ಹಾಂ... ಹಾಂ... ಈಗ ನೆನಪಾಯಿತು ನಮ್ಮ ತಾಯಿ ಕೂಡಾ ಹೇಳ್ತಾ ಇದ್ದರು. ಅಕ್ಕಸಾಲಿಗರಲ್ಲಿ ಹೋದರೆ, ಅವರು ಹೇಳುವ ಚಿನ್ನ ತೇಮಾನಿನ ಲೆಕ್ಕವನ್ನು ಒಪ್ಪಲೇ ಬೇಕಾಗುತ್ತದೆ ಅಂತ. ಆದರೆ ಒಂದು ಪ್ರಶ್ನೆ. ಈ ತೇಮಾನು ಬಿಸಿನೆಸ್ಸು ಹೊಸತಾಗಿ ಖರೀದಿ ಮಾಡಿದ ಚಿನ್ನದ ಆಭರಣಗಳಿಗೆ ಕೂಡಾ ಲಗಾವಾಗ್ತದಾ ಹೇಗೆ ?”

“ಖಂಡಿತಾ ಆದೀತು ಸ್ವಾಮೀ - ಹೊಸ ಆಭರಣ ಹದಿನೈದು ದಿನ ಮೈಮೇಲೆ ಇದ್ರೆ ಸಾಕು. ತೇಮಾನು ಅದಕ್ಕೆ ಬಂದೇ ಬರ್‍ತದೆ. ಆ ಮಾತಿಗೆ ಬಾಗಿಲಿನಾಚೆ ನಿಂತುಕೊಂಡು ನಮ್ಮ ಹರಟೆ ಕಿವಿ ಕೊಡುತ್ತಾ ಇರುವ ನನ್ನ ಗೃಹಲಕ್ಷ್ಮಿಯೇ ಸಾಕ್ಷಿ. ಅವಳ ಅವಲಕ್ಕಿ ಮಾಲೆಯಲ್ಲಿ ಖರೀದಿ ಮಾಡಿದ ಹದಿನಾಲ್ಕು ದಿನಗಳಲ್ಲಿ ಏನೋ ಕಲೆ ಕಾಣಿಸಿತು. ಅದನ್ನು ತೆಗೆದುಕೊಂಡ ಅಂಗಡಿಯಲ್ಲೇ ‘ಕ್ಲೀನು’ ಮಾಡಲಿಕ್ಕೆ ಕೊಟ್ಟಳು. ವಾಪಾಸು ತರಲಿಕ್ಕೆ ಹೋದಾಗ, ಕ್ಲೀನ್ ಮಾಡಿದ ಮಜೂರಿ ಕೊಟ್ಟು ತೂಗಿಸಿದಳು. ಕಡಿಮೆಯಾಗಿ ಕಂಡ ‘ಗುಲಗಂಜಿ ತೂಕ’ ಯಾಕೇಂತ ವಿಚಾರಿದ್ದಕ್ಕೆ ಅದು ತೇಮಾನಮ್ಮಾ ಅನ್ನುವ ಉತ್ತರ ಸಿಕ್ಕಿತು. ಬಾಯ್ಮುಚ್ಚಿ ಕೇಳಿಕೊಂಡು ಬಂದಿದ್ದಾಳೆ”

(ಪಂಡಿತರ ಮಾತಿನ ಕೊನೆಗೆ ಒಳಗಿನಿಂದ ಒಂದು ಹೂಂಕಾರ ಯಾಕೆ ಕೇಳಿಸಿತು ?)

“ಬಂಗಾರ ಮೈಮೇಲೆಯೇ ಇದ್ದರೆ ಸ್ವಲ್ಪಸ್ವಲ್ಪವಾಗಿ ಕರಗುತ್ತಾ ಇರ್‍ತದೆ ಅಂತ ನಮ್ಮವಳೂ ಹೇಳುವುದನ್ನು ಕೇಳಿದ್ದೇನೆ ಪಂಡಿತರೇ. ಅದು, ಅವಳು ಎಲ್ಲಿಂದ ಸಂಪಾದಿಸಿದ ಇನ್‍ಫಾರ್ಮೇಶನ್ ಅಂತ ಇಷ್ಟರವರೇಗೆ ಗೊತ್ತಿರಲಿಲ್ಲ. ಈಗ ಗೊತ್ತಾಯಿತು. ಮೈಮೇಲೆ ಚಿನ್ನ ಕರಗುತ್ತದೋ, ಇಲ್ಲವೋ, ಅದು ಬೇರೆ ಮಾತು. ಚಿನ್ನದ ಡಿಮಾಂಡ್ ಪೂರೈಸುವವನ ಕಿಸೆಯಂತೂ ಕರಗುವುದರಲ್ಲಿ ಯಾವ ಸಂದೇಹವೂ ಇಲ್ಲ”

ಬೇಗನೆ (ಮಾತು ಮುಗಿಸಿ ಶ್ರೀಮತಿ ಪಂಡಿತರು ಒಗ್ಗರಣೆ ಸೌಟು ಹಿಡಿದುಕೊಂಡು ಬಾಗಿಲಿನಿಂದ ಈಚೆಗೆ ಬರುವ ಮೊದಲೇ ಅಲ್ಲಿಂದ ಹೊರಗೆ ಓಡಿ -ಅಲ್ಲಲ್ಲ ಧಾವಿಸಿ) ಬಂದು ಮನೆಮುಟ್ಟಿದ ನಂತರ -

ತೇಮಾನೂ ಮಂತ್ರವ ಜಪಿಸೀ ಮಾನಿನಿಯರೆ ! ಜಪಿಸುತ್ತ ! ಹೇಮಾವಿಕ್ರಯ ಬೆಳೆಸೀ ! ! ಎಂಬ ಪದ್ಯದ ಮೊದಲ ಸಾಲು ಬರೆದಿಟ್ಟೆ. ಒಂದು ಚೆಂಬು ನೀರು ಕುಡಿದು ಸುಮ್ಮನೆ ಕುಳಿತೆ. ( ಮುಂದಿನ ಸಾಲು ನೀವು ಬರೆಯುತ್ತೀರಾ ? ಬರೆಯಿರಿ - ಸಂತೋಷ).




ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
------
ಶೀರ್ಷಿಕೆಯ ೧೯೯೦ರ ದಶಕದ ಛಾಯಚಿತ್ರ:

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ಎ.ವಿವೇಕ ರೈ ಅವರು ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರು ಶ್ರೀ. ದೇವರಾಜ್ ಜೊತೆ ದಿನಾಂಕ ೨೦ ಜುಲೈ ೧೯೯೪ ರಂದು ಮಂಗಳೂರಿನಲ್ಲಿ ಏರ್ಪಡಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಮಂಗಳೂರಿನ ಪತ್ರಕರ್ತರೊಂದಿಗೆ ಶ್ರೀ. ಪ. ಗೋಪಾಲಕೃಷ್ಣ.
-----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6278.html

Tuesday, May 12, 2009

’ನೋ ಚೇಂಜ್ ಕಥೆಗಳು’ --೧೬..ಅವರು ಬಿದ್ದರು - ಇವರು ನಕ್ಕರು....



















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನಾರನೇ ಅಂಕಣ.

ಅವರು ಬಿದ್ದರು - ಇವರು ನಕ್ಕರು....




ನಿನ್ನೆ ಬೆಳಿಗ್ಗೆ, ಸುಮಾರು ಎಂಟೂವರೆ ಹೊತ್ತಿಗೆ, ಮೆಯಿನ್ ರೋಡಿನ ಬಸ್ ಸ್ಟಾಪ್ ಹತ್ತಿರ ಹೋಗಬೇಕಾಗಿ ಬಂತು. “ನಮ್ಮ ಅಣ್ಣ -ಅತ್ತಿಗೆ ಈವತ್ತು ಎಂಟೂಮುಕ್ಕಾಲರ ಬಸ್ಸಿನಲ್ಲಿ ಬರ್‍ತಾರೆ, ನೆನಪಿದೆಯಲ್ಲ ? ಹೋಗಿ ಕರ್‍ಕೊಂಡು ಬನ್ನಿ” ಅಂತ ಗೃಹಮಂತ್ರಿ ಆಜ್ಞೆಯಾಗಿತ್ತು. ತಪ್ಪಿಸಿಕೊಳ್ಳಲಾಗುತ್ತದೆಯೆ ? ಹೋಗಿದ್ದೆ.

ಅವರು ಊರಿಂದ ಬರುತ್ತಿದ್ದುದು ಕೆಂಪು ಬಸ್ಸಿನಲ್ಲಿ. ಹೇಗೂ ಆ ಬಸ್ ಲೇಟಾಗಿಯೇ ಬರುತ್ತದೆ ಅಂತ ಸ್ವಲ್ಪ ಧೈರ್ಯವಿದ್ದರೂ, ನನ್ನ ಗ್ರಹಚಾರಕ್ಕೆ ಈವತ್ತೆಲ್ಲಾದರೂ ಸಮಯಕ್ಕೆ ಸರಿಯಾಗಿ ಬಂದುಬಿಟ್ಟರೆ ಎಂಬ ಅಳುಕೂ ಇತ್ತು. ನನ್ನ (ಪ್ರಾಯಕ್ಕೆ ಸಲ್ಲದ) ಬೀಸುನಡಿಗೆಗೆ ಅದೇ ಕಾರಣ.

‘ಬೀಸ -ಬೀಸ’ ಹೋಗಬೇಕಾದರೂ,ಕತ್ತೆತ್ತಿ ನಡೆಯಲು ನನ್ನಿಂದ ಆಗುವುದಿಲ್ಲ. ಕತ್ತು ಬಗ್ಗಿಸಿ, ನನ್ನಷ್ಟಕ್ಕೆ ಹೋಗುತ್ತಿದ್ದೆ. ಇನ್ನೇನು ಬಸ್ ಸ್ಟಾಪ್ ಬಂತು ಅನ್ನುವಾಗ, ಯಾರೋ ‘ಢಾಬ್ಬೆಂ’ದು ಬಿದ್ದ ಶಬ್ದ -ಅದರ ಹಿಂದೆಯೇ ಹತ್ತಾರು ಮಕ್ಕಳ ನಗುವಿನ ಬೊಬ್ಬೆ -ಕೇಳಿ, ಪ್ರಯತ್ನಪಟ್ಟು ಕತ್ತೆತ್ತಿದೆ. ಬಿದ್ದ ಶಬ್ದ ಕೇಳಿದ ಕಡೆ ನೋಡಿದೆ.

ಪಾಪ ! ಯಾರೋ ಒಬ್ಬ ಠಾಕೋಠೀಕ್ ದಿರುಸು ಹಾಕಿಕೊಂಡಿದ್ದ ತರುಣ. ನಡುರಸ್ತೆಯಲ್ಲಿ ಎಸೆದಿದ್ದ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿಬಿದ್ದವನು, ಮೆಲ್ಲನೆ ಏಳಲು ಪ್ರಯತ್ನಿಸುತ್ತಿದ್ದ. ಬಿದ್ದ ರಭಸಕ್ಕೆ ಕೈಯಿಂದ ಹಾರಿಹೋಗಿದ್ದ ಬ್ರೀಫ್‍ಕೇಸನ್ನು ಎಳೆಯುವ ಮತ್ತು ಬಟ್ಟೆಗೆ ಮೆತ್ತಿದ್ದ ಮಣ್ಣನ್ನು ಕೊಡವುವ ಕೆಲಸವೂ ಒಟ್ಟೊಟ್ಟಿಗೆ ನಡೆದಿತ್ತು

ಅವನ ಒದ್ದಾಟದ ಸಮಯವಿಡೀ, ರಸ್ತೆಯಾಚೆಯ ಶಾಲೆಯ ಮಕ್ಕಳು ಗಹಗಹಿಸಿ ನಗುತ್ತಲೇ ಇದ್ದರು. ಎಲ್ಲರಿಗಿಂತ ಜೋರಾಗಿ ನಗುತ್ತಿದ್ದ ಒಬ್ಬ ‘ಲೀಡರ್’ ಹುಡುಗನೇ ಬಾಳೆಹಣ್ಣಿನ ಸಿಪ್ಪೆಯನ್ನು ‘ತಮಾಷೆ ನೋಡಲು’ ಅಲ್ಲಿ ಎಸೆದಿದ್ದನೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ನಾನು ರಸ್ತೆ ದಾಟಿ ಮಕ್ಕಳಿದ್ದ ಕಡೆ ತಲಪುವ ಹೊತ್ತಿಗೆ, ಮಕ್ಕಳ ನಗುವಿನ ಅಟ್ಟಹಾಸ - ಆ ಶಾಲೆಯ ಸಿಸ್ಟರ್ ಅಲ್ಲಿ ಬಂದ ಕಾರಣ - ಒಮ್ಮೆಲೇ ನಿಂತಿತು. “ಯಾರಾದರೂ ಜಾರಿ ಬಿದ್ದರೆ ಅವರ ಸಹಾಯಕ್ಕೆ ಹೋಗುವುದು ಬಿಟ್ಟು, ಅವರನ್ನು ನೋಡಿ ನಗುತ್ತೀರಾ ? ನಾಟೀ ಬಾಯ್ಸ್ !” ಎಂದು ಅವರು ಮಕ್ಕಳಿಗೆ ಹೇಳುತ್ತಿದ್ದ ಬುದ್ಧಿವಾದವೂ ಕೇಳಿಸಿದ್ದರಿಂದ, ಅದನ್ನು ಕೇಳಿದ ಹುಡುಗರ ಮುಂದಿನ ವರ್ತನೆಯ ಬಗ್ಗೆ ಕುತೂಹಲ ಮೂಡಿತು. ಅವರೆದುರಿನಲ್ಲೇ ನಿಂತುಕೊಂಡೆ.

ಕಣ್ಣು -ಕಿವಿ - ಮನಸ್ಸು ಎಲ್ಲವೂ ಅಲ್ಲೇ ನೆಟ್ಟಿತ್ತು. ಬೇರೆ ಎಲ್ಲಾ ವಿಚಾರವೂ ಮರೆತು ಹೋಗಿತ್ತು. “ನೋಡು -ನೋಡು ಭಾವನ ಬಸ್ ಸ್ಟಾಂಡ್ ಇಲ್ಲಿಯೇ ಇದೆ” ಎಂಬ ಮಾತಿನ ಧ್ವನಿ ಕೇಳುವ, ಬೆನ್ನಿಗೆ ಬಿದ್ದ ಒಂದು ಪ್ರೀತಿಯ ಹೊಡೆತ ಬೀಳುವ-ವರೆಗೆ.
“ಅಲ್ಯಾಕೆ ನಿಂತಿದ್ದಿರಿ ಭಾವಾ ?” ಎಂಬ ಪ್ರಶ್ನೆ ಬಂದಿಳಿದ ಭಾವ -ಅಂದರೆ ಗೃಹಮಂತ್ರಿಯವರ ಅಣ್ಣ -ನಿಂದ ನಾವೆಲ್ಲ ಮೆಯಿನ್ ರೋಡ್ ದಾಟಿದ ಮೇಲೆ ಬಂತು.

ಆ ಮೊದಲು ಆಗಿದ್ದುದನ್ನು ವಿವರಿಸಿ, “ನಾನು ಕೂಡಾ ನನ್ನ ಪ್ರಾಯದಲ್ಲಿ ‘ನಾಟಿಬಾಯ್’ ಆಗಿದ್ದುದು ನೆನಪಾಯಿತು. ಕಾಲ ಬದಲಿದ್ದು ಕೂಡಾ ಗೊತ್ತಾಗದ ಹಾಗೆ” ಎಂದೆ, ಯಾವ ಮುಚ್ಚುಮರೆಯೂ ಇಲ್ಲದೆ.

ಕಾಲವೇನೋ ಬದಲಿದೆ. ಬದಲಾವಣೆ ಆಗದಿರುವುದು ಮನುಷ್ಯ ಸ್ವಭಾವದಲ್ಲಿ ಅನ್ನಿ. ಅಲ್ಲಾ, ನಿಮ್ಮ ನೆನಪಿನಲ್ಲಿ ಅಷ್ಟೊಂದು ಆಳವಾಗಿ ಉಳಿದಿದ್ದ ಘಟನೆ ಯಾವುದು ? ಎಂಬ ಪ್ರಶ್ನೆಗೆ ನನ್ನ ಅತಿಥಿ ದಂಪತಿಯಿಂದ ಒಟ್ಟಿಗೇ ಬಂತು. ಕಥೆ ಹೇಳಲೇಬೇಕಾಯಿತು.

“ಎದ್ದೂ ಬಿದ್ದೂ ನಡೆಯಲು ಕಲಿಯುವ ಪ್ರಾಯದಲ್ಲಿ”, ಇನ್ನೊಬ್ಬರು ಬಿದ್ದು ಎದ್ದರೆ ಅಥವಾ ಬೇರೇನಾದರೂ ತೊಂದರೆ ಅನುಭವಿಸಿದರೆ ಅದನ್ನು ನೋಡಿ ನಗುವ ಅಭ್ಯಾಸ ಸಹಜವಾಗಿ ಬಂದಿರುತ್ತದೆ. ಆ ಅಭ್ಯಾಸ ಬೆಳೆಸಿಕೊಂಡವರು ಮುಂದೆ ಪ್ರಾಯಸ್ಥರಾದಾಗ, ನಗುವನ್ನು ಪಡೆದುಕೊಳ್ಳಲು ಕಲಿಯುತ್ತಾರೆ. ಹಾಗೆ ನಗುವುದು ತಪ್ಪು ಎಂದು ಕೆಲವರು ತಿಳಿದುಕೊಳ್ಳಲು ಕಲಿಯುತ್ತಾರೆ. ಹಾಗೆ ನಗುವುದು ತಪ್ಪು‍ಎಂದು ಕೆಲವರು ತಿಳಿದುಕೊಳ್ಳುವುದೂ ಇದೆ.

ನಾವು ಶಾಲೆಗೆ ಹೋಗುತ್ತಿದ್ದಾಗ ಒಂದು ದಿನ, ಶಾಲೆಯ ಮಕ್ಕಳೆಲ್ಲ ಎದುರಿನ ರಸ್ತೆಬದಿಯ ಎತ್ತರದ ಸ್ಥಳದಲ್ಲಿ ಸಾಲಾಗಿ ನಿಂತುಕೊಂಡಿದ್ದೆವು. ರಸ್ತೆಯಲ್ಲಿ ಸತ್ತುಬಿದ್ದಿದ್ದ ಒಂದು ಕೇರೆಹಾವಿನ ಮರಿಯನ್ನು ನೋಡಿ ಹರಟುತ್ತಾ ಇದ್ದೆವು. ದಾರಿಹೋಕರು ಒಬ್ಬರು ಬರುವುದನ್ನು ಕಂಡಾಗ ಹರಟೆ ನಿಲ್ಲಿಸಿ, ಮೌನವಾದೆವು. ದಾರಿ ಸಾಗುವವರು ಅವರ ಪಾಡಿಗೆ ವೇಗವಾಗಿ ನಡೆದು ಹೋಗುತ್ತಾ ಇದ್ದರು. ಸತ್ತ ಹಾವಿನ ಮರಿಯನ್ನು ಅವರು ತುಳಿಯುತ್ತಾರೊ ಇಲ್ಲವೊ ಎಂಬ ಕುತೂಹಲ ನಮಗೆ. ಆದ್ದರಿಂದಲೇ ಸದ್ದು ಮಾಡದೆ ನಾವು ನಿಂತುಕೊಂಡಿದ್ದುದು.

ನಾವು ನಿರೀಕ್ಷಿಸಿದ ಹಾಗೆ, ಅವರು ಅದನ್ನು ತುಳಿದೇ ಬಿಟ್ಟರು. ಅನಿರೀಕ್ಷಿತವಾಗಿ ತುಳಿದು, ತುಳಿದ ಮತ್ತೆ ‘ವಿಷಜಂತು’ವನ್ನು ನೋಡಿ, ಬೆಚ್ಚಿಬಿದ್ದರು. ನಮ್ಮೆಲ್ಲರ ಪರಿಹಾಸದ ನಗು ಕೇಳಿಸಿತು. ನಮ್ಮತ್ತ ತಲೆ ಎತ್ತಿ ನೋಡಿ “ನೀವು ಶಾಲೆ ಮಕ್ಕಳು ಕಲ್ತ ಬುದ್ಧಿ ಇದುವೆಯೋ ?” ಎಂದು ಬೈದು ಹೊರಟುಹೋದರು...

“ಅಂದು ನನ್ನ(ಮ್ಮ)ಲ್ಲಿದ್ದ ಮನೋಭಾವವೇ ಇಂದೂ ಆ ಮಕ್ಕಳಲ್ಲಿ ಕಾಣಿಸಿ ನನ್ನ ನೆನಪನ್ನು ಕೆದಕಿತು” ಎಂದು ವಿವರಿಸಿದೆ.
“ಆ ಪ್ರಾಯದಲ್ಲಿ ನಾವು ಕೂಡಾ ಹಾಗೆಯೇ ಇದ್ದೆವು ಭಾವಾ.ನಮ್ಮ ಮನೆ ಎದುರಿನ ಮಾರ್ಗದಲ್ಲಿ ಒಂದು ದಿನ, ಒಂದು ‘ಪೆರ್ಚಿ’ದನ ಮೋಟರ್ ಸೈಕಲಿನಲ್ಲಿ ಹೋಗುತ್ತಿದ್ದ ಒಬ್ಬರನ್ನು ಅಡ್ಡಗಟ್ಟಿ ಬೀಳಿಸಿದ್ದಾಗ ನಾವೆಲ್ಲ ದೂರನಿಂತು ನೋಡಿ ನಗುತ್ತಾ ಇದ್ದೆವು. ಬಿದ್ದವರ ಸಹಾಯಕ್ಕೆ ಹೋಗುವ ಮನಸ್ಸು ಯಾರಿಗೂ ಬರಲಿಲ್ಲ. ಮನಸ್ಸು ಮಾಡಿದ್ದರೆ,ಬಿದ್ದವರನ್ನು, ಅಲ್ಲಿದ್ದ ನಾವು ಹತ್ತು ಮಂದಿ ಹುಡುಗರು ಎತ್ತಬಹುದಿತ್ತು. ದನವನ್ನೂ ಅಲ್ಲಿಂದ ಓಡಿಸಬಹುದಿತ್ತು. ನಮಗೆ ಆ ತಮಾಷೆ ನೋಡುವುದೇ ಮುಖ್ಯವಾಗಿತ್ತಲ್ಲ ? ಕೊನೆಗೆ, ಬಿದ್ದ ಮೋಟರ್ ಸೈಕಲಿನವರನ್ನು ಎಬ್ಬಿಸಿ ರಸ್ತೆ ಬದಿಗೆ ತಂದು ಪ್ರಥಮ ಚಿಕಿತ್ಸೆ ಮಾಡಿದ ಹಿರಿಯರು ಒಬ್ಬರು ನಮಗೆ ಛೀಮಾರಿ ಹಾಕಿದಾಗ ಎಷ್ಟು ಸಿಟ್ಟು ಬಂದಿತ್ತು ಗೊತ್ತೇ ?”

“ಹುಡುಗರ ಸ್ವಭಾವವೇ ಹಾಗೆ” ಎಂದು ಇದ್ದಕ್ಕಿದ್ದ ಹಾಗೆ ಮೌನವಾಗಿ ದಾರಿ ಸವೆಸುತ್ತುದ್ದ ನಮ್ಮ ತಂಡದ ಮಹಿಳಾಸದಸ್ಯೆಯಿಂದ ಬಂದ ಮಾತು, ಗಂಭೀರ ಚರ್ಚೆಯನ್ನು ಲಘು ಧಾಟಿಗೆ ತಿರುಗಿಸಿತು.

“ಮತ್ತೆ ಹುಡುಗಿಯರ ಸ್ವಭಾವ ಹೇಗಿರುತ್ತದಮ್ಮಾ, ಹೇಳ್ತೀಯಾ ?” ಎಂದು ಅವಳನ್ನು ಕೇಳಿದೆ.

ಅವಳು ಉತ್ತರ ಕೊಡುವ ಮೊದಲೇ ನಮ್ಮ ಮನೆ ಸಮೀಪಿಸಿತ್ತು. ಬಾಗಿಲಲ್ಲೇ ಕಾಯುತ್ತಿದ್ದ ಹೋಮ್ ಮಿನಿಸ್ಟರ್ ಕೂಡಾ ಕಾಣಿಸಿದರು. ಹತ್ತಿರ ಬರುತ್ತಿದ್ದ ಹಾಗೆ “ಏನು ಭಾರಿ ನಿಧಾನವಾಗಿ ಬರುತ್ತಾ ಇದ್ದೀರಿ ? ಇಲ್ಲಿಗೆ ಬರುವ ಮೊದಲು ಬೇರೆಲ್ಲಿಗಾದರೂ ಹೋಗಿಬಂದಿರಾ, ಹ್ಯಾಗೆ ?” ಕಮೆಂಟೂ ಕೇಳಿಸಿತು.

ಬಾಯ್ಮುಚ್ಚಿಕೊಂಡು ಕರೆತಂದಿದ್ದವರನ್ನು ಮನೆಯೊಳಗೆ ಕಳುಹಿಸಿದೆ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)







ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

-----

ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಂಗಳೂರಿನ ಪತ್ರಕರ್ತ ಶ್ರೀ. ಪ. ಗೋಪಾಲಕೃಷ್ಣರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ .ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ.
-----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6060.html

Tuesday, May 5, 2009

’ನೋ ಚೇಂಜ್ ಕಥೆಗಳು’ --೧೫.. ಮಾಮೂಲಿನ ಮಾಮೂಲು ಸುದ್ದಿ




















ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೈದನೇ ಅಂಕಣ.


ಮಾಮೂಲಿನ ಮಾಮೂಲು ಸುದ್ದಿ



ಮಾಮೂಲು ಬಿಚ್ಚದೆ ಯಾವ ಕೆಲಸವೂ ಆಗುವುದಿಲ್ಲ ಅಂದವರು ಯಾರು ?



ಕೂಡಲೇ ನೆನಪಾಗಲಿಲ್ಲ, ತಲೆ ತುರಿಸಿಕೊಂಡೆ. ತಲೆಯಲ್ಲಿ ಇನ್ನೂ ಸ್ವಲ್ಪ ಕೂದಲು ಉಳಿದಿತ್ತು. ತುರಿಸಿಕೊಳ್ಳಲು ಏನೂ ತೊಂದರೆಯಾಗಲಿಲ್ಲ. ಒಂದು ಮೂರಾನಲ್ಕು ಬಾರಿ ತುರಿಸಿಕೊಳ್ಳುವಾಗ -


ನನಗೆ ಯಾವುದಾದರೂ ಒಂದು ವಿಷಯ ಮರೆತು ಹೋಗುವುದೂ ಅದನ್ನು ನೆನಪು ಮಾಡಲು ನಾನು ತಲೆ ತುರಿಸಿಕೊಳ್ಳುವುದೂ ಮಾಮೂಲು ಕ್ರಮ ಎಂದಾಗಿಬಿಟ್ಟಿದೆ. ತುರಿಸುವುದು ಹೆಚ್ಚಾದ ಹಾಗೆ ತಲೆಯಲ್ಲಿ ಇರುವ ಅಲ್ಪ ಸ್ವಲ್ಪ ಅರೆ ಬಿಳಿ ಕೂದಲು ಉದುರುತ್ತಾ ಹೋಗುವುದೂ ಮಾಮೂಲಾಗಿ ಹೋಗಿದೆ,ಎಂದೆಲ್ಲಾ ನೆನಪಾಯಿತು.


ಅದು ಸರಿ, ಆಗ ಹೇಳಿದ ಮಾಮೂಲಿನ ಮಾತೆತ್ತಿದವರು ಯಾರು ? ಹೇಳುತ್ತೇನೆ. ಕಳೆದ ಶನಿವಾರ -


ನಮ್ಮ ನೆರೆಯ ‘ಉದ್ಗಾರಿ ನಂಬರ್ ವನ್’ ರವರ ಮನೆ ಗೇಟಿನ ಎದುರು ಮಹಾನಗರಪಾಲಿಕೆಯ ಕಂದಾಯ ಅಧಿಕಾರಿ ಒಬ್ಬರು ಬಂದು ನಿಂತರಂತೆ.ಅಲ್ಲಿಂದಲೇ, ಮನೆ ಮಾಲಿಕರನ್ನು ಕರೆದು “ನಿಮ್ಮ ಮನೆ ಎಷ್ಟು ಚದರ ಅಡಿ ವಿಸ್ತಾರದ್ದು ? ಎಷ್ಟು ಕೋಣೆಗಳಿವೆ ? ಎಷ್ಟು ಬಾಡಿಗೆ ಬರುತ್ತಿತ್ತು - ಈಗೆಷ್ಟು ಬರುತ್ತದೆ ?” ಎಂದೆಲ್ಲಾ ಪ್ರಶ್ನೆ ಕೇಳಿ,ಅವರ ಉತ್ತರಕ್ಕೂ ಕಾಯದೆ, ಏನೇನನ್ನೋ ತನ್ನ ನೋಟ್‍ಬುಕ್‍ನಲ್ಲಿ ಬರೆದುಕೊಂಡು ಹೋದರಂತೆ.


ತಾನು ಯಾರೆಂದು ಅವರು ಮೊದಲೇ ಹೇಳಿದ್ದಾರೆ -ಇನ್ನು ಮುಂದೆ ಏನಾಗುತ್ತದೆ ಅಂತ ನಾನು ಈಗಲೇ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದುಕೊಂಡು ಸುಮ್ಮನಿದ್ದ ಮನೆಯವರಿಗೆ - ಮುಂದಿನ ವಾರದಲ್ಲೇ ಶ್ಯೋಕ್ ಆಯಿತು.
ಅದುವರೆಗೂ ಬರೇ ಇಪ್ಪತ್ತನಾಲ್ಕು ರೂ. ಇದ್ದ ಮನೆ ತೆರಿಗೆಯನ್ನು ಏಕ್‍ದಂ ನೂರ ಇಪ್ಪತ್ತೇಳಕ್ಕೆ ಏರಿಸಿದ ನೋಟಿಸ್ ಅವರಿಗೆ ಜಾರಿಯಾಗಿತ್ತು. (ಆಗ, ನಾನೂ ಅವರ ಮನೆಯಲ್ಲಿದ್ದೆ. ಆದ್ದರಿಂದ ಅದು ನನಗೆ ಗೊತ್ತು).


ನೋಟಿಸ್ ಕೈಯಲ್ಲಿ ಹಿಡಿದು, ಅವರು ಹೇಳಿದ್ದು “ಈಗ ಮಾಮೂಲು ಬಿಚ್ಚದೆ ಏನೂ ನಡಿಯೋದಿಲ್ಲಾ” ಅಂತ.
ಆ ಅಧಿಕಾರಿ ನಿಮ್ಮಲ್ಲಿ ಏನೂ ಮಾತನಾಡಿಲ್ಲ. ಬರೇ ಬರ್‍ಕೊಂಡು ಹೋದರೂಂತ ಹೇಳ್ತೀರಿ. ಹಾಗಾದ್ರೆ ಮಾಮೂಲಿನ ಮಾತು ಅಲ್ಲಿ ಹೇಗೆ ಬರ್‍ತದೆ ? ಎಂದು ಅವರಲ್ಲಿ ಆಗ ಕೇಳಿದ್ದೆ.


ಅದನ್ನೆಲ್ಲಾ ಈಗ ನನ್ನ ಬಾಯಿಯಿಂದ ಹೊರಡಿಸುವ ಕೆಲಸ ನಿಮಗೆ ಬೇಡ. ಅದೆಲ್ಲ ಹೇಗೆ ನಡೆಯುತ್ತದೆ ಅನ್ನುವುದು ನಿಮಗೆ - ಪೇಪರಿನವರಿಗೆ ಚೆನ್ನಾಗಿ ಗೊತ್ತು. ನಿಜಾ ಹೇಳಿ, ಈ ಮಾಮೂಲು ವ್ಯವಹಾರಗಳ ಕೆಲವು ಕಥೆಗಳಾದರೂ ನಿಮ್ಮ ಸ್ಟಾಕ್‍ನಲ್ಲಿ ಇವೆಯೋ ಇಲ್ಲವೋ ? ಎಂದು ಅವರು ಹೇಳಿದ ಸತ್ಯವನ್ನು ಒಪ್ಪಿ ಹೌದೆಂದು ತಲೆಯಾಡಿಸಿದ್ದೆ.


ಹಾಗಾದರೆ, ಬರಲಿ ಒಂದೆರಡು ಕಥೆಯಾದ್ರೂ - ಹೇಗೂ ನನಗೆ ಈಗ ಪುರುಸೊತ್ತು ಇದೆ, ಎಂದು ಅವರ ಅಪ್ಪಣೆಯಾಯಿತು.
ಹಾಗೆಲ್ಲ, ಕೇಳಿದ ಕೂಡಲೆ ಕಥೆ ಹೇಳ್ಲಿಕ್ಕೆ ನಾನೇನು ಚೀಪ್ ರೇಟ್ ಜರ್ನಲಿಸ್ಟ್ ಅಂತ ತಿಳ್ಕೊಂಡಿದ್ದೀರಾ ? ಇಲ್ಲ -ಇಲ್ಲ, ನನ್ನ ರೇಟ್ ತುಂಬಾ ಜಾಸ್ತಿ. ಮತ್ತೆ, ಯಾವಾಗಾದ್ರೂ ಬಿಡುವಾದರೆ ಹೇಳ್ತೇನೆ, ಎಂದು ಅಲ್ಲಿಂದ ಜಾರಿಕೊಂಡಿದ್ದೆ.


ಅದೇ ಈವತ್ತು, ಮಾಮೂಲಿನ ಕಥೆಯನ್ನು ಅವರಿಗೆ ಮಾತ್ರ ಯಾಕೆ ಹೇಳಬೇಕು ? ಪತ್ರಿಕೆಯಲ್ಲಿ ಪ್ರಕಟಿಸಿದರೆ ಅವರಲ್ಲದೆ ಮತ್ತೂ ಕೆಲವರಿಗೆ ಗೊತ್ತಾಗುತ್ತದೆ. ನನಗೂ ಏನಾದರೂ ‘ಪ್ರಯೋಜನ’ ಆಗುತ್ತದೆ, ಎಂಬ ಯೋಚನೆ ಮನಸ್ಸಿನ ಆಳದಲ್ಲಿ ಮೂಡಿತ್ತು. ಅದು ಬರಹದಲ್ಲಿ ಬರುವ ಹೊತ್ತಿಗೆ ಸರಿಯಾಗಿ ನೆನಪು ಕೈಕೊಟ್ಟ ಕಾರಣ, ತಲೆ ತುರಿಕೆ ಆರಂಭವಾಗಿತ್ತು.


ಈಗ ಎಲ್ಲಾ ಸರಿಹೋಯಿತು, ಇನ್ನು ಆರಂಭ ಮಾಡೋಣ.


ನಗರವಾಸಿಗಳಿಗೆ ತೆರಿಗೆ ಒಂದು ಅನಿವಾರ್ಯ ಕಿರುಕುಳ. ಮನೆ ಕಟ್ಟಿಕೊಂಡು ಬದುಕುವವರಿಗಾದರೂ ವ್ಯಾಪಾರದಿಂದ ಬಾಳು ನಡೆಸುವವರಿಗಾದರೂ,ಮುನಿಸಿಪಾಲಿಟಿ ತೆರಿಗೆಯಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಹೆಚ್ಚೆಂದರೆ ಬೀಳುವ ತೆರಿಗೆಯಲ್ಲಿ ಒಂದಷ್ಟು ಕಡಿತ ಮಾಡಿಸಿಕೊಳ್ಳಬಹುದು. ಅಷ್ಟೆ, ಗೊತ್ತಲ್ಲ ?


ಮುನ್ಸಿಪಾಲ್ಟಿ ಕಂದಾಯ ಇಲಾಖೆಯ ಗುಟ್ಟು ಹಾಗೆ. ಅದೇ ಮುನ್ಸಿಪಾಲ್ಟಿ ಆರೋಗ್ಯ ಇಲಾಖೆಯ ವಿಧಾನ ಇನ್ನೊಂದು. ತಮ್ಮ ಗಿರಾಕಿಗಳ ಆರೋಗ್ಯ ರಕ್ಷಣೆಗೆ ಕೈಗೊಳ್ಳಲೇ ಬೇಕಾದ ಶುಚಿತ್ವದ ನಿಯಮಗಳನ್ನು ಹೋಟೆಲುಗಳು ಜಾರಿಗೆ ತರಲೇ ಬೇಕು. ಇಲ್ಲವಾದರೆ ಅವುಗಳ ಲೈಸನ್ಸ್ ರದ್ದು ಮಾಡುವುದಲ್ಲದೆ ದಂಡವನ್ನೂ ವಿಧಿಸುವ ಅಧಿಕಾರ ಆ ಇಲಾಖೆಗೆ ಇದೆ.


ಇವೆರಡು ಇಲಾಖೆಗಳೂ, ತಮ್ಮ ನಿಯಮಗಳನ್ನು ಪಾಲಿಸಲೂ ಸಾಧ್ಯವಿದೆ. ಬೇರೆಯವರು ಪಾಲಿಸದೆ ಪಾರಾಗುವಂತೆ ನೋಡಿಕೊಳ್ಳಲೂ ಸಾಧ್ಯವಿದೆ. ಎರಡು ಇಲಾಖೆಗಳಿಗೂ ಇರುವ ದಾರಿ ಒಂದೇ.


ಅದೇ, ನಮ್ಮ ‘ಮಾಮೂಲು’ ದಾರಿ, ಮೊದಲಿನಿಂದಲೂ ದಾರಿ ಹಾಗೇ ಇತ್ತು. ಈಗಲೂ ಇದೆ.ಮಾಮೂಲಿನ ರೇಟ್ ಮಾತ್ರ ಸ್ವಲ್ಪ ಹೆಚ್ಚಾಗಿದೆ. ಅದೇನೂ ಅಂಥಾ ದೊಡ್ಡ ವಿಷಯ ಅಲ್ಲ. ಹೋಟೆಲಿನವರು ರೇಟಿನ ಹೊರೆಯನ್ನು ಗಿರಾಕಿಗಳ ನೊರೆಗೆ ಸೇರಿಸಿ ಸರಿಮಾಡಿಕೊಳ್ಳುತ್ತಾರೆ. ಮನೆಗಳವರು ಹೇಗಾದರೂ ‘ಅಡ್ಜಸ್ಟ್’ ಮಾಡಿಕೊಳ್ಳುತ್ತಾರೆ.


ಆ ದಾರಿಯಲ್ಲಿ, ೧೯೫೮ರ ಸಮಯ, ಮಂಗಳೂರು ಮುನಿಸಿಪಾಲಿಟಿಯ ಒಬ್ಬರು ಉನ್ನತ ಅಧಿಕಾರಿ, ನಗರದ ಹಲವು ಹೋಟೆಲುಗಳಿಂದ ಪ್ರತಿ ತಿಂಗಳೂ ಮೂವತ್ತರಿಂದ ಹಿಡಿದು ನೂರ ಇಪ್ಪತ್ತು ರೂಪಾಯಿಗಳ ವರೆಗೆ ವಸೂಲು ಮಾಡುತ್ತಿದ್ದರು. ಆ ಮೇಲೆ ‘ಸಂಬಂಧಿಸಿದ’ ಇಲಾಖೆಗಳ ಸಹೋದ್ಯೋಗಿಗಳಿಗೆ ‘ಕ್ರಮದಲ್ಲಿ’ ವಿತರಿಸುತ್ತಿದ್ದರು. ಎಲ್ಲ ಕಡೆಯಿಂದಲೂ ಬರುವ ಮಾಮೂಲು ಒಂದೇ ಜಾಗದಲ್ಲಿ ಬಂದು ಸೇರುತ್ತಿದ್ದ ಕಾರಣ, ಯಾರಿಗೂ ತೊಡಕಾಗುವ ಪ್ರಶ್ನೆ ಇರಲಿಲ್ಲ.


ಹೋಟೆಲುಗಳ ಕೊಳೆಯ ಹೊಳೆ ಹರಿದು ಗಿರಾಕಿಗಳ ಹೊಟ್ಟೆಯೊ, ಚರಂಡಿಗಳ ‘ಮನುಷ್ಯರಂಧ್ರ’ (ಮ್ಯಾನ್ ಹೋಲ್)ದ ಬದಿಯೋ ಸೇರುತ್ತಲೇ ಇತ್ತು.ಮಾಮೂಲು ಕಿಸೆಗಳು ತುಂಬುತ್ತಲೇ ಇದ್ದುವು.


ಮತ್ತೆ, ೧೯೭೨ರ ಹೊತ್ತಿಗೆ, ಆ ಮಾಮೂಲು ದಾರಿಗೆ ಕಾರ್ಮಿಕ ಇಲಾಖೆಯೂ ಸೇರಿಕೊಂಡ ಸೂಚನೆ ಸಿಕ್ಕಿತು. ಇರುವ ಕೆಲಸಗಾರರ ದಾಖಲೆಗಳನ್ನು ತಮಗೆ ಬೇಕಾದ ಹಾಗೆ ತಿರುಚಿ, ಕಾನೂನಿನ ದಾರಿ ತಪ್ಪಿಸುವ ಕ್ರಮವನ್ನು ಕೆಲವು ಹೋಟೆಲುಗಳು ಅನುಸರಿಸುತ್ತಾ ಇದ್ದಾಗ, ಅದಕ್ಕೇ ಹೊಂಚು ಹಾಕುತ್ತಿದ್ದ ಕಾರ್ಮಿಕ ನಿರೀಕ್ಷಕರೊಬ್ಬರು ‘ತಿಂಗಳ ಮಾಮೂಲು ಕೊಟ್ಟರೆ ಸರಿ, ನಾನು ಬೇಕಾದರೆ ಕಣ್ಣು ಮುಚ್ಚಿ ರಿಪೋರ್ಟಿಗೆ ಸೈನ್ ಮಾಡ್ತೇನೆ’ ಎಂದು ಎಲ್ಲಾ ಹೋಟೆಲುಗಳಿಗೂ ಸೂಚನೆ ಮುಟ್ಟಿಸಿದರು.


ಸೂಚನೆಯನ್ನು ಕ್ರಮಬದ್ಧವಾಗಿ ಹಲವು ಹೋಟೆಲುಗಳವರು ಪಾಲಿಸಲೂ ತೊಡಗಿದರು. ತಿಂಡಿ-ತೀರ್ಥಗಳ ಬೆಲೆಯನ್ನು ಆಗಲೇ ಏರಿಸಿದ್ದರಿಂದ ಅವರಿಗೆ ಮಾಮೂಲು ಒಂದು ಹೆಚ್ಚಿನ ಹೊರೆ ಎಂದು ಕಾಣಿಸಲೇ ಇಲ್ಲ. ‘ಆರೋಗ್ಯ ಹೇಗೂ ಕಾಪಾಡಿಕೊಳ್ಳಬೇಕು. ಕಾರ್ಮಿಕ ರಕ್ಷೆಯನ್ನೂ ಕಾಪಾಡಿಕೊಳ್ಳೋಣ’ ಎಂದು ಅವರು ಸುಮ್ಮನಿದ್ದುಬಿಟ್ಟರು.


ಹಾಗಿರುವಾಗ ಒಂದು ದಿನ, ಒಂದು ಹೋಟೆಲಿನಲ್ಲಿ-


ಗಲ್ಲಾದಲ್ಲಿದ್ದವರು ಮಾಲೀಕರ ತಮ್ಮ. ಮಾಮೂಲು(ಬೇಟೆ ಮತ್ತು) ಭೇಟಿ-ಗೆ ಬಂದ ಕಾರ್ಮಿಕ ನಿರೀಕ್ಷಕರ ಗುರುತು ಅವರಿಗೆ ಇರಲಿಲ್ಲ. ಗುರುತು ಹೇಳಿದ ಮೇಲೆ ಸಲ್ಲಿಸಬೇಕಾದ ಕಾಣಿಕೆಯ ಮೊತ್ತವೂ ಗೊತ್ತಿರಲಿಲ್ಲ. ಅದರೊಟ್ಟಿಗೆ, “ಅಣ್ಣನವರು ಇಲ್ಲ. ಇನ್ನೊಮ್ಮೆ ಬನ್ನಿ” ಎಂದು ಹೇಳುವ ಧೈರ್ಯವೂ ಇರಲಿಲ್ಲ, ಹಾಗೂ ಹೀಗೂ ಜಗ್ಗಾಡಿ, ಇಪ್ಪತ್ತು ರೂಪಾಯಿಯ ನೋಟು (ಹತ್ತರ ಎರಡು) ಮಾತ್ರ ಕೊಟ್ಟು, ನಿರೀಕ್ಷಕರನ್ನು ಒಮ್ಮೆಗೆ ಸಾಗಹಾಕಿದರು. (ಅಡ್ಜಸ್ಟ್‍ಮೆಂಟ್ ಮತ್ತೆ ಆದುದು, ಬೇರೆಯೇ ಸುದ್ದಿ).


ಇಂಥಾ ಮಾಮೂಲು ಕ್ರಮ ಈಗಲೂ ಇಲ್ಲವೆ ? ಇರಲೇ ಬೇಕು. ಎಲ್ಲಿದೆ ? ಹೇಳಿ ತೋರಿಸು ಅನ್ನುತ್ತೀರಾ ? ಹೇಳುತ್ತೇನೆ. ನೆನಪಾಗಲಿ ಅಂತ ತಲೆ ತುರಿಸುತ್ತಾ ‍ಇದ್ದೇನೆ. ಅದಕ್ಕೆ ಮೊದಲು, ನಿಮಗೇ ನೆನಪಾದರೆ ನೀವೂ ಹೇಳಬಹುದು. ನನ್ನಿಂದ ಅಡ್ಡಿಯಿಲ್ಲ.



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

------

ಶೀರ್ಷಿಕೆಯ ೧೯೯೦ರ ದಶಕದ ವರ್ಣಚಿತ್ರ:

ದ.ಕ.ಟೆಲಿಕಾಂ ಜನರಲ್ ಮ್ಯಾನೇಜರ್ ಶ್ರೀ. ಕೆ. ರಾಮ ಅವರ ಸಮ್ಮುಖದಲ್ಲಿ ಸಮೀಪದಿಂದ 'ದೂರ'ವಾಣಿಯಲ್ಲಿ ಪತ್ರಿಕಾ ಸಹೋದ್ಯೋಗಿ ಶ್ರೀ.ಎ.ವಿ.ಮಯ್ಯ ಅವರ ಜೊತೆ ಶ್ರೀ ಪ.ಗೋಪಾಲಕೃಷ್ಣರ ಮೊದಲ ಸಂಭಾಷಣೆಯೊಂದಿಗೆ ನೂತನ ತಂತ್ರಜ್ಞಾನದ ನವೀಕೃತಗೊಂಡ ಮಂಗಳೂರಿನ ದೂರವಾಣಿ ಕೇಂದ್ರವೊಂದರ ಪ್ರಾರಂಭ.

------

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-5678.html

Visitors to this page