Tuesday, March 22, 2011

ಪತ್ರಕರ್ತರಲ್ಲಿ ಸಕಾರಾತ್ಮಕ ಧೋರಣೆಯ ಅಗತ್ಯವಿದೆ- ಲಕ್ಷ್ಮೀ ಮಚ್ಚಿನ ಅವರಿಗೆ ಪ.ಗೋ.ಪ್ತಶಸ್ತಿ ಪ್ರದಾನಿಸಿ ಸಚಿವ ಆಚಾರ್ಯ

ಮಂಗಳೂರು: ಪತ್ರಕರ್ತರು ಸರಕಾರದ ಯಾವುದೇ ಯೋಜನೆಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಮೊದಲು ವ್ಯಾಪಕ ಅಧ್ಯಯನ ನಡೆಸಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ವಿ.ಎಸ್.ಆಚಾರ್ಯ ಅವರು ಹೇಳಿದ್ದಾರೆ.

ಅವರು ಮಾ.೨೦ ರಂದು ಅಪರಾಹ್ಣ ಮಂಗಳೂರಿನ ಪತ್ರಿಕಾಭವನದಲ್ಲಿ ಉದಯವಾಣಿ ಪತ್ರಿಕೆಯ ಬೆಳ್ತಂಗಡಿ ತಾಲೂಕು ವರದಿಗಾರ,ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಸದಸ್ಯ ಲಕ್ಷ್ಮೀ ಮಚ್ಚಿನ ಅವರಿಗೆ ಗ್ರಾಮೀಣ ವರದಿಗಾರಿಕೆಗೆ ಕೊಡಮಾಡುವ ಪ.ಗೋ.ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡುತ್ತಿದ್ದರು.

ಸರಕಾರ ಎಷ್ಟೇ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡರೂ ಅದರಲ್ಲಿ ಕಳಚುತ್ತಿರುವ ಕೊಂಡಿಗಳು ಇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟವರು ಪತ್ರಕರ್ತರು.ನನಗೆ ಪತ್ರಿಕಾರಂಗದ ಬಗ್ಗೆ ಅಪಾರ ಗೌರವವಿದೆ. ಆದರೆ ಇಂದಿನ ಫ್ರೀ ಪ್ರೆಸ್ ವರದಿಗಾರಿಕೆಯ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಎಲ್ಲಿಯವರೆಗೆ ಮುಟ್ಟಿದೆ ಎಂಬುದರ ಬಗ್ಗೆ ಚಿಂತೆಯಾಗುತ್ತದೆ. ಇಂದು ನಾವೊಂದು ವಿಕ್ಷಿಪ್ತ ವಾತಾವರಣದಲ್ಲಿದ್ದೇವೆ. ಸರಕಾರಗಳು ಇನ್ನೂ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸುವಲ್ಲಿ ಇನ್ನೂ ಹಿಂದೆ ಬಿದ್ದಿದೆ ಎಂದು ಆಚಾರ್ಯ ಹೇಳಿದರು.

ಪತ್ರಕರ್ತರು ಅಭಿವೃದ್ಧಿಯ ಬಗೆಗಿನ ಕಲ್ಪನೆಗಳನ್ನು ವಸ್ತುಸ್ಥಿತಿಗೆ ತಕ್ಕಂತೆ ಬಿಂಬಿಸಬೇಕು. ಸಕಾರಾತ್ಮಕ ಧೋರಣೆಯ ಅಗತ್ಯವಿದೆ. ಒಂದು ಸುದ್ದಿಗೆ ಅನೇಕ ಮಗ್ಗಲುಗಳು ಇರುತ್ತವೆ ಎಂಬುದನ್ನು ಗಮನಿಸಬೇಕು. ಸರಕಾರಕ್ಕೆ ಅಭಿವೃದ್ಧಿಗೆ ಅಪಾರ ಅವಕಾಶಗಳಿದ್ದರೂ ಆಡಳಿತಾತ್ಮಕ ಇತಿಮಿತಿಗಳಿವೆ ಮತ್ತು ಆದ್ಯತೆ ಮತ್ತು ಸಾಧ್ಯತೆಗಳ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಆಚಾರ್ಯ ವಿವರಿಸಿದರು.

ಲಕ್ಷ್ಮೀ ಮಚ್ಚಿನ ಅವರು ಸಣ್ಣ ವಯಸ್ಸಿನಲ್ಲೇ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇತರ ಪತ್ರಕರ್ತರು ಇವರಿಂದ ಸ್ಪೂರ್ತಿ ಪಡೆಯಲಿ ಎಂದು ಸಚಿವರು ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು ವಿವಿಧ ಸಮಸ್ಯೆಗಳ ಬಗ್ಗೆ ವರದಿಗಾರರು ಪತ್ರಿಕೆಯ ಮೂಲಕ ಬರೆಯುತ್ತಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಅಗ ಮಾತ್ರ ಈ ಪ್ರಶಸ್ತಿಗಳಿಗೆ ಗೌರವ ಬರುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹರ್ಷ,ಪ್ರಧಾನ ಕಾರ್ಯದರ್ಶಿ ಗುರುವಪ್ಪ ಟಿ.ಬಾಳೇಪುಣಿ, ಪ.ಗೋ.ಪ್ರಶಸ್ತಿ ಟ್ರಸ್ಟ್ ಸ್ಥಾಪಕ ಹಿರಿಯ ಪತ್ರಕರ್ತ ನರಸಿಂಹ ರಾವ್ ವೇದಿಕೆಯಲ್ಲಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ ಪ್ರಶಸ್ತಿ ಬಗ್ಗೆ ಪ್ರಸ್ತಾವಿಸಿದರು. ಸದಸ್ಯ ಪಿ.ಬಿ.ಹರೀಶ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಪದ್ಯಾಣ ಗೋಪಾಲಕೃಷ್ಣ ಭಟ್ ಹೆಸರಿನಲ್ಲಿ ನೀಡುತ್ತಿರುವ ಪ.ಗೋ ಪ್ರಶಸ್ತಿಯನ್ನು ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುತ್ತಿದ್ದು ಪ್ರಶಸ್ತಿಯು ಸ್ಮರಣಿಕೆ ಹಾಗೂ ರೂ.೫೦೦೧ ನ್ನು ಒಳಗೊಂಡಿದೆ. ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾಯೋಜಿಸುತ್ತಿದ್ದಾರೆ. ಲಕ್ಷ್ಮೀ ಮಚ್ಚಿನ ಅವರಿಗೆ ಉದಯವಾಣಿ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟಗೊಂಡ ಬಾಂಜಾರು ಮಲೆ ಅಭಿವೃದ್ಧಿ ಕನಸು- ಕಾಡಿನಲ್ಲಿ ಕಾಯುತ್ತಿವೆ ಕುಟುಂಬಗಳು ಎಂಬ ಅವರ ವರದಿಗೆ ಪ್ರಶಸ್ತಿ ಬಂದಿದೆ. ಪ್ರಶಸ್ತಿಯು ಇದೀಗ ಎರಡನೇ ಬಾರಿಗೆ ಬೆಳ್ತಂಗಡಿ ತಾಲೂಕಿನ ವರದಿಗಾರರಿಗೆ ಸಂದಿದೆ.

ವರದಿ – ದೀಪಕ್ ಆಠವಳೆ

No comments:

Visitors to this page