Thursday, April 23, 2009

’ನೋ ಚೇಂಜ್ ಕಥೆಗಳು’ - ೧೪.. ಅಪ್ಪಟ ಸತ್ಯ - ಘೋಷಕರ ಪರಂಪರೆ

ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನಾಲ್ಕನೇ ಅಂಕಣ.

ಅಪ್ಪಟ ಸತ್ಯ - ಘೋಷಕರ ಪರಂಪರೆ
ನಮ್ಮ ಮನೆಯ ಬಳಿ ಸಣ್ಣದೊಂದು ಗುಡ್ಡವಿದೆ. ಆ ಗುಡ್ಡ ಒಂದಾನೊಂದು ಕಾಲದಲ್ಲಿ ಕಾಡಾಗಿತ್ತು ಎಂತಲೂ ಕೆಲವರು (ನನ್ನಿಂದಲೂ) ಹಳಬರು ಹೇಳುತ್ತಾರೆ. ಕಡಿದ ಮರಗಳ ಬೊಡ್ಡೆಗಳು ಕೆಲವು ಈಗಲೂ ಅಲ್ಲಿ ಕಾಣಿಸುತ್ತವೆ. ಆದ್ದರಿಂದ - ಈಗ ಬೋಳಾಗಿರುವ - ಆ ಗುಡ್ಡದಲ್ಲಿ ಹಿಂದೆ ಕಾಡು ಬೆಳೆದಿತ್ತು ಎಂತ ಒಪ್ಪಿಕೊಳ್ಳಬಹುದು.

ಸಂಜೆ ಸ್ವಲ್ಪ ಹೊತ್ತು ಆ ಗುಡ್ಡದಲ್ಲಿರುವ ಒಂದು ದೊಡ್ಡ ಬಂಡೆಯ ನೆರಳಿನಲ್ಲಿ ಕುಳಿತು, ಅಲ್ಲಿಂದ ಕಾಣಿಸುವ ಮಂಗಳೂರು ನಗರದ ನೋಟಗಳನ್ನು ನೋಡುವುದು, ನಾನು ಮತ್ತು ನೆರೆಮನೆಯ ಪಂಡಿತರು ಬೆಳೆಸಿಕೊಂಡ ಇತ್ತೀಚಿನ ಅಭ್ಯಾಸ.

ಒಂದು ಕಡೆಗೆ ದೃಷ್ಟಿ ಹಾಯಿಸುವುದು, ಹರಡಿರುವ ಹಸಿರಿನ ನಡುವೆ ಯಾವುದಾದರೂ ಒಂದು ದೊಡ್ಡ ಕಟ್ಟಡದ ತಲೆ ಕಂಡರೆ - ಆ ಸ್ಥಳ ಯಾವುದು ? ಕಟ್ಟಡ ಯಾವುದಿರಬಹುದು ? ಎಂದೆಲ್ಲಾ ಗುರುತಿಸಲು ಯತ್ನಿಸುವುದು - ಇಬ್ಬರೊಳಗೆ ಭಿನ್ನಾಭಿಪ್ರಾಯ ಬಂದರೆ - ಚರ್ಚೆಯನ್ನು ಮರುದಿನಕ್ಕೆ ಬಾಕಿಯಾಗಿಟ್ಟು ಮುಂದುವರಿಸುವುದು ನಮ್ಮ ವಾಡಿಕೆ.

ಕೆಲವೊಮ್ಮೆ -ದೂರದಲ್ಲಿ ಕಾಣುವ ರಾಷ್ಟೀಯ ಹೆದ್ದಾರಿ (ನ್ಯಾಷನಲ್ ಹೈವೇ)ಯ ಒಂದು ಭಾಗವನ್ನೇ ನೋಡುತ್ತಾ ಕುಳಿತು, ಆ ರಸ್ತೆಯ ಕಡೆಯಿಂದ ಕೇಳಿ ಬರುವ ಶಬ್ದಗಳನ್ನು ಗುರುತಿಸಲೂ ಹೊರಡುತ್ತೇವೆ. ಗುರುಗುಟ್ಟುವ ಲಾರಿ -ಬಸ್‍ಗಳ ಶಬ್ದವನ್ನಂತೂ ಸುಲಭವಾಗಿ ಗುರುತಿಸುತ್ತೇವೆ.

ಸದ್ದು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಸದ್ದು ಹೊರಡಿಸುವ ಮೂಲವನ್ನು ಕಾಣಲು ಸಾಧ್ಯವಾಗುವುದಿಲ್ಲ. (ಇಬ್ಬರಿಗೂ ಇರುವ ದೃಷ್ಟಿಮಾಂದ್ಯದಿಂದಾಗಿ ಆ ತೊಂದರೆ ಎಂದು ಒಪ್ಪಿಕೊಳ್ಳಲು ಇಬ್ಬರಿಗೂ ಮನಸ್ಸಿಲ್ಲ !) ಹಾಗಾಗಿ ಶಬ್ದವನ್ನು ಕಿವಿಯಿಂದ ಗುರುತಿಸುವ ಕೆಲಸಕ್ಕೇ ಹೆಚ್ಚಿನ ಒತ್ತು ಕೊಡುತ್ತೇವೆ. ಎಷ್ಟೋ ಬಾರಿ ಚಲಿಸುವ ವಾಹನಗಳಿಂದ ಕೇಳಿಬರುವ ಕ್ಯಾಸೆಟ್ ಸಂಗೀತವನ್ನೂ ಗುರುತಿಸಲು ನಮಗೆ ಸಾಧ್ಯವಾಗಿದೆ.

ನಾಲ್ಕು ದಿನಗಳ ಮೊದಲು ಒಂದು ಬಾರಿ “ಬನ್ನಿರಿ ! ನೋಡಿರಿ ! ಆನಂದಿಸಿರಿ ! ಈ ದಿನ ನೆಹರೂ ಮೈದಾನದಲ್ಲಿ ಏರ್ಪಡಿಸಿದ ಅಮೋಘ......” ಎಂಬ ಒಂದು (ಅರ್ಧ ?) ಮಾತು ‘ಮೈಕಿನಲ್ಲಿ’ ಹೆದ್ದಾರಿ ಕಡೆಯಿಂದ ಕೇಳಿಸಿತ್ತು. ಶಬ್ದ ಹೊರಡಿಸಿದ್ದ ಮೈಕ್ರೋಫೋನ್ ಕಟ್ಟಿದ ಕಾರ್ ಚಲಿಸಿ ಹೋದ ಕಾರಣ, ಘೋಷಣೆಯ ವಾಕ್ಯ ಸಂಪೂರ್ಣವಾಗಿ ಕೇಳಿಸಿರಲಿಲ್ಲ.

ಪಂಡಿತರೇ, ಮೊನ್ನೆ ಆ ರಸ್ತೆಯಿಂದ ಕೇಳಿ ಬಂದ ಘೋಷಣೆ ಏನಿದ್ದೀತು? ಎಂದು ನಾಲ್ಕು ದಿನ ಕಳೆದು ಪ್ರಶ್ನೆ ಹಾಕಿದ್ದೆ.

ಏನಿದ್ದೀತು ಸುಡುಗಾಡು ? ಯಾವುದೋ ಆಟ ಅಥವಾ ಎಕ್ಸಿಬಿಷನ್ ನ ಎಡ್ವಟೈಸ್‍ಮೆಂಟು ಇರಬೇಕು - ಎತ್ತರದಿಂದ ಹೇಳಿದರೆ ಎಲ್ಲರಿಗೂ ಕೇಳ್ತದೆ ಅಂತ ಹೇಳಿರಬೇಕು..... ಪಂಡಿತರು ತೋರಿಸಿದ ಅತೃಪ್ತಿ ಯಾಕೆಂದು ಅರ್ಥವಾಗಲಿಲ್ಲ. ಏನಾಯ್ತು ಪಂಡಿತರೆ ? ಯಾಕಿಷ್ಟು ನಿರಾಶೆ ? ಎಂದೆ.

ಮತ್ತಿನ್ನೇನು? ಕಾರ್ ಒಂದು ಕಡೆ ನಿಲ್ಲಿಸಿ ಹೇಳುವುದನ್ನೆಲ್ಲಾ ಹೇಳಿ ಮುಂದೆ ಹೋಗಬಾರದೆ ? ಸುಮ್ಮನೆ ಮೂಕರ ಎದುರಿಗೆ ಮೂಗು ತುರಿಸಿ ಹೋದ ಹಾಗೆ ಮಾಡಿದರೆ ಏನು ಪ್ರಯೋಜನ ? ಎಂದರು.

ಅವರು ಎಲ್ಲಾ ಕಡೆಯೂ ಹಾಗೆ ಮಾಡುವುದಿಲ್ಲ. ಹೆಚ್ಚಾಗಿ, ಕಾರ್ ಅಥವಾ ರಿಕ್ಷಾವನ್ನು ಒಂದು ಕಡೆ ನಿಲ್ಲಿಸಿ - ಹೊಡೆಸುವ ಬೊಬ್ಬೆಯನ್ನು ಸಂಪೂರ್ಣ ಹೊಡೆಸಿದ ನಂತರವೇ, ಮುಂದೆ ಹೋಗುತ್ತಾರೆ. ನಮ್ಮ ಕೃಷ್ಣಪ್ಪಣ್ಣ ಮಾಡುತ್ತಿದ್ದರಲ್ಲಾ,ಹಾಗೆ -ಎಂದ ಕೂಡಲೆ “ಯಾವ ಕೃಷ್ಣಪ್ಪಣ್ಣ ? ಆ ಎಡ್ವಟೈಸ್ ಕೃಷ್ಣಪ್ಪನ ಕಥೆಯೋ ನೀವು ಹೇಳುವುದು ?” ಪ್ರಶ್ನೆ ಸಿಡಿದುಬಂತು.

ಹೌದೌದು ಅವರನ್ನು ನೀವು ನೋಡಿದ್ದೀರಾ ? (ಇಲ್ಲ, ನೋಡಿಲ್ಲ - ಬೇರೆಯವರು ಹೇಳಿದ್ದನ್ನು ಕೇಳಿದ್ದು ಮಾತ್ರ.)

ಹಾಗಾದರೆ, ಅವರ ಕಥೆಯನ್ನೂ ಕೇಳಿ. ನೋಡಿ, ಸರಿ ಸುಮಾರು ೧೯೫೦ ರಲ್ಲಿ ಹಂಪನಕಟ್ಟೆ ,ಬಾವಟೆಗುಡ್ಡೆ ಇತ್ಯಾದಿ ಸ್ಥಳಗಳಲ್ಲಿ ಡಬ್ಬಿಯಿಂದ ಮಾಡಿದ ಒಂದು ‘ಸ್ಪೀಕರ್’ ಹಿಡಿದುಕೊಂಡು, “ಬನ್ನಿರಿ ನೋಡಿರಿ - ಆನಂದ ಪಡೆಯಿರಿ, ಎಲ್ಲಿ ಗೊತ್ತೆ? ಸೆಂಟ್ರಲ್ ಮೈದಾನಿನಲ್ಲಿ !” ಎಂದು ಆ ‘ಸ್ಪೀಕರ್’ ಒಳಗಿನಿಂದಲೇ ಬೊಬ್ಬೆ ಹೊಡೆದು ಹೇಳುತ್ತಾ ತಿರುಗುತ್ತಿದ್ದ ಕೃಷ್ಣಪ್ಪ ಎಂಬವರ ಜಾಹೀರಾತು ವೈಖರಿಯ ನೆನಪು ನನಗೆ ಚೆನ್ನಾಗಿ ಇದೆ.

ತಮ್ಮ ಅಂಗಡಿಯ ಜಾಹೀರಾತುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಅಭ್ಯಾಸ ಹೆಚ್ಚಿನ ಅಂಗಡಿಗಳವರಿಗೆ ಆಗ ಇರಲಿಲ್ಲ. ಅಂಥವರು ಕೂಡಾ ದಿನಗೂಲಿ ನಿರ್ಧರಿಸಿ, ತಮ್ಮ ಜಾಹೀರಾತನ್ನು ಕೃಷ್ಣಪ್ಪನವರ ಮೂಲಕವೇ ಮಾಡಿಸುತ್ತಾ ಇದ್ದರು.

ಕ್ರಮೇಣ ಜಾಹೀರಾತಿನ ಹೊಸ ಹೊಸ ವಿಧಾನಗಳು, ಸೌಕರ್ಯಗಳು ಬಳಕೆಗೆ ಬಂದವು. ಕೃಷ್ಣಪ್ಪನೂ ತೀರಿ ಹೋದರು. ಪತ್ರಿಕೆಗಳಿಗೆ ಜಾಹೀರಾತು ಕೊಡುವುದೂ ಅಭ್ಯಾಸವಾಯಿತು. ಟೇಪ್‍ರೆಕಾರ್ಡರಿಗೆ ಮೈಕ್ ಜೋಡಿಸಿ ವಾಹನಗಳಿಂದ ಜಾಹೀರಾತು ಗೀತೆಗಳ ಪ್ರಸಾರ, ವಾಹನದಲ್ಲೇ ಕುಳಿತು ಜಾಹೀರು ಘೋಷಣೆ ಇತ್ಯಾದಿಗಳೆಲ್ಲ ಬಂದುವು. ಈಗಲೂ ಬರುತ್ತಿವೆ....

ಅದೆಲ್ಲ,ಜಾಹೀರಾತು ಚರಿತ್ರೆ ಸರಿ. ನೀವು ಈ ವಿಷಯದ ಪ್ರಸ್ತಾಪ ಯಾಕೆ ಮಾಡಿದಿರಿ ?

ಮತ್ಯಾಕೂ ಇಲ್ಲ. ಜಾಹೀರು ಮಾಡುವ ಯಾರಲ್ಲೂ ಸತ್ಯ ಹೇಳುವ ಪ್ರವೃತ್ತಿ ಮಾತ್ರ ಇರುವುದಿಲ್ಲ ಅನ್ನುವ ಭಾವನೆ ಬೆಳೆಸಿಕೊಂಡಿದ್ದೆ. ಆ ಬಗ್ಗೆ ಕೃಷ್ಣಪ್ಪಣ್ಣನಲ್ಲೂ ಒಮ್ಮೆ ಪ್ರಶ್ನಿಸಿದ್ದೆ. “ಅದೇನು ಕೇಳ್ತೀರಿ ರಾಯರೆ ? ನಮ್ಮ ಕೂಲಿ ನಮಗೆ ಸಿಕ್ಕಿದ ಕೂಡಲೆ ನಾವು ಸತ್ಯಹರಿಶ್ಚಂದ್ರರೇ ಆಗುತ್ತೇವೆ, ಗೊತ್ತಲ್ಲ ?” ಎಂಬ ಉತ್ತರವೂ ಸಿಕ್ಕಿತು.

ನಾವು ನಡೆಸುವುದು ಮಾತ್ರವೇ ಅಮೋಘ ಪ್ರದರ್ಶನ ಎಂದು ಹೇಳುವುದಾಗಲಿ, ಈವತ್ತಿನದ್ದೇ ಕಡೇ ಆಟ ಎನ್ನುವುದಾಗಲಿ, ನಮ್ಮಲ್ಲಿಯ ಮಾಲು ಲೋಕದಲ್ಲೇ ಅತ್ಯುತ್ತಮ ಎಂದು ಸಾರುವುದಾಗಲಿ, ನಾವು ಏಳು ವರ್ಷಗಳ ಗ್ಯಾರಂಟಿ ಸೇವೆ ಕೊಡುತ್ತೇವೆ ಎಂಬ ಆಶ್ವಾಸನೆಯೇ ಆಗಲಿ -

ಜಾಹೀರಾಗಿ ಬರುವಾಗ, ಅದರಲ್ಲಿ ಸತ್ಯದ ಅಂಶ ಶೇಕಡಾ ಹದಿನೈದು -ಉಳಿದ ಎಂಬತ್ತೈದು ಉತ್ಪ್ರೇಕ್ಷೆ - ಎಂಬ ತೀರ್ಮಾನಕ್ಕೆ ನಾನು ನಲ್ವತ್ತೈದು ವರ್ಷಗಳ ಹಿಂದೆ ಬಂದಾಗ, ನನ್ನಿಂದಲೂ ಹಿಂದಿನವರು ಆ ಮಾತನ್ನು ಹೇಳುವುದನ್ನು ಕೇಳಿದ್ದೆ.

ಉತ್ಪ್ರೇಕ್ಷೆಯೇ ಇಲ್ಲದೆ ಮಾಡುವ ವ್ಯವಹಾರ ಯಾವುದೂ ಇಲ್ಲ ಎನ್ನುತ್ತೀರಾ ಹಾಗಾದರೆ ? ಎಂಬ ನಿರೀಕ್ಷಿತ ಪ್ರಶ್ನೆ ಪಂಡಿತರಿಂದ ಬಂದೇ ಬಂತು.

ಇರಬಹುದು ಪಂಡಿತರೇ, ಬೇಕಾದರೆ ‘ಇದೆ’ ಎಂದೇ ಹೇಳೋಣ. ಅಂಥಾ ಕ್ರಮ ಕೋರ್ಟು ಕಚೇರಿ ವ್ಯವಹಾರಕ್ಕೆ ಸಂಬಂಧಿಸಿದ ಅಥವಾ ಇತರ ಅಧಿಕೃತ ಮೂಲಗಳ ಪ್ರಕಟಣೆಗಳಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ವಾಣಿಜ್ಯ ವ್ಯವಹಾರದ ಪ್ರಕಟಣೆಗಳಿಗೆ ಅನ್ವಯವಾಗುವುದಿಲ್ಲ.

ಅತಿರಂಜಿತ ಪ್ರಕಟಣೆಗಳು ಮಾತ್ರವೇ ಜನರನ್ನು ಆಕರ್ಷಿಸುತ್ತವೆ ಎಂದು ಧೃಢವಾಗಿ ನಂಬಿರುವ ಒಂದು ವರ್ಗ ಬಹಳ ಹಿಂದಿನಿಂದಲೂ ಇದೆ. ಹಾಗೆಯೇ ಅಂಥಾ ಪ್ರಕಟಣೆಗಳನ್ನು ಸಾರಾಸಗಟಾಗಿ ನಂಬಬಾರದು -ಜೊಳ್ಳಿನಿಂದ ಕಾಳು ಪ್ರತ್ಯೇಕಿಸಲೇಬೇಕು ಎಂದೂ ನಂಬಿರುವ ಇನ್ನೊಂದು ವರ್ಗವೂ ಇದೆ.

“ಅವರವರ ನಂಬಿಕೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ - ಆಗುವುದೂ ಇಲ್ಲ”

ಆ ಮಾತು ಗುಡ್ಡದಿಂದ ಇಳಿದು ಬರುವಾಗ ಆಡಿದ್ದು.

ಪಂಡಿತರ ಪ್ರತಿಕ್ರಿಯೆ - ಇಳಿಯವಾಗ ಹಿಂತಿರುಗಿ ನೋಡಿದರೆ ಕಾಲು ಜಾರಿ ಬಿದ್ದೇನು ಭಯದಿಂದಾಗಿ, ನೋಡುವ ಧೈರ್ಯ ಬಾರದ ಕಾರಣ, ಕೂಡಲೇ ಗೊತ್ತಾಗಲಿಲ್ಲ.

ಅವರು ನನ್ನ ಮಾತನ್ನು ಒಪ್ಪಿದ್ದಿರಲೇಬೇಕು.

ನೀವೂ ! !
------
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
----------
ಶೀರ್ಷಿಕೆಯ ೧೯೯೦ರ ದಶಕದ ಛಾಯಾಚಿತ್ರ:

ದಿನಾಂಕ ೨೩ ಡಿಸೆಂಬರ್ ೧೯೯೩ ರಂದು ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆ ವಿಭಾಗದ ಮಂಗಳೂರಿನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶ್ರೀ. ಪ. ಗೋಪಾಲಕೃಷ್ಣ. ಅಂದಿನ ಹಿರಿಯ ಪತ್ರಕರ್ತ ಶ್ರೀ. ಪ.ಗೋ ಅವರ ಸಮೀಪದಲ್ಲಿ ಕುಳಿತಿರುವ, ಅವರ ಶೈಲಿಯನ್ನು ಅನುಕರಿಸುತ್ತಿರುವವರು ಶ್ರೀ. ಚಿದಂಬರ ಬೈಕಂಪಾಡಿ
-----
ಕೃಪೆ: ಗಲ್ಫ್ ಕನ್ನಡಿಗ

Thursday, April 16, 2009

’ನೋ ಚೇಂಜ್ ಕಥೆಗಳು’ - ೧೩..ಪರಿಹಾರಭ್ರಮೆಯ ವೆಂಕಷ್ಟರಮಣರು





















{ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿಮೂರನೇ ಅಂಕಣ.}



ಪರಿಹಾರಭ್ರಮೆಯ ವೆಂಕಷ್ಟರಮಣರು


ಸಂಕಟ ಮತ್ತು ಸಂಕಷ್ಟ ಒಂದೇ ಅರ್ಥ ಕೊಡುವ ಎರಡು ಶಬ್ದಗಳು ಅಲ್ವಾ ಪಂಡಿತರೇ ?

ಆ ಪ್ರಶ್ನೆ ಹಾಕಲೆಂದೇ ನಿನ್ನೆ ಅವರ ಮನೆಗೆ ಹೋಗಿದ್ದೆ. ಅವರು ಮನೆಯಲ್ಲಿದ್ದ ಕಾರಣ, ಕೇಳಿದ್ದೆ.

“ಇರಬೇಕು, ಬಹುಶಃ ಸಂಕಷ್ಟದ ತದ್ಭವ ಸಂಕಟಾಂತ.....” ಪಂಡಿತರು ಕಡೆಗೆ ಯಾಕೆ ರಾಗ ಎಳೆದರು ಅಂತ ಗೊತ್ತಾಗಲಿಲ್ಲ. (ಇದು ಬರೇ ವಿಷಯ ತಿಳಿದುಕೊಳ್ಳಲು ಕೇಳಿದ ಪ್ರಶ್ನೆ ಅಲ್ಲ - ಏನೋ ಬೇರೆ ಕುಹಕ ಇದೆ ಅಂತ ನನ್ನ ಮುಖ ಎಲ್ಲಾದರೂ ತೋರಿಸಿತೆ ? ಆದರೂ, ನೋಡೋಣ.) “ನಾನು ಕೇಳಿದ್ದು ಬೇರೆ ಯಾವ ಉದ್ದೇಶದಿಂದಲೂ ಅಲ್ಲ - ಅವೆರಡೂ ಸಮಾನ ಅರ್ಥದ ಪದಗಳು ಅಂತಾದ್ರೆ, ಸಂಕಟ ಬಂದಾಗ ವೆಂಕಟರಮಣಾಂತ ಹೇಳುವ ಹಾಗೆ ಸಂಕಷ್ಟಕ್ಕೆ ವೆಂಕಷ್ಟರಮಣಾಂತಲೂ ಹೇಳ್ಬಹುದಾಂತ ತಿಳಕೊಳ್ಳಲಿಕ್ಕೆ ಕೇಳಿದೆ” ಎಂದು ವಿವರಿಸಿದೆ.

“ಭಾಷೆಗೆ -ಶಬ್ದಗಳಿಗೆ -ಯಾವುದೇ ಬೆಲೆ ಕೊಡದೆ ಸ್ವತಂತ್ರವಾಗಿ, ಇಷ್ಟಬಂದ ಹಾಗೆ ಮಾತನಾಡುವ, ಬರೆಯುವ ಈ ಕಾಲದಲ್ಲಿ ಹೇಗೆ ಹೇಳಿದರೂ ನಡೆಯುತ್ತದೆ.” (ಪಂಡಿತರ ಉದ್ವೇಗ ಹೆಚ್ಚುತ್ತಾ ಇದೆ. ಜಾಗ್ರತೆ!)

ನಾನಂತೂ ಅಂಥ ಸ್ವಾತಂತ್ರ್ಯ ವಹಿಸುವವರ ಕಾಲದವನಲ್ಲ, ನಿಮಗೆ ಗೊತ್ತಲ್ಲ ? ನನಗೆ ಈಗ ಒಂದು ಸಮಸ್ಯೆ ಹುಟ್ಟಿದೆ, ಸಂಕಷ್ಟ ಬಂದಾಗ ದಾರಿಯೇ ಕಾಣದೆ ದೇವರ ಮೊರೆಹೋಗುವವರು ಇದ್ದಾರೆ, ನಿಜ. ಆದರೆ, ನಿಮ್ಮ ಸಂಕಷ್ಟ ಪರಿಹರಿಸುತ್ತೇವೆ ಎಂದು ಕಷ್ಟಕ್ಕೆ ಒಳಗಾದವರನ್ನು ನಂಬಿಸುವ, ಆ ನಂಬಿಕೆ ಬೆಳೆಸಲು ಭರ್ಜರಿ ಪ್ರಚಾರವನ್ನೂ ಮಾಡುವ ಮನುಷ್ಯರು ಇದ್ದಾರಲ್ಲಾ ಅವರನ್ನು ಯಾವ ಹೆಸರಿನಿಂದ ಕರೀಬೇಕು ಅಂತ ಗೊತ್ತಾಗುತ್ತಾ ಇಲ್ಲ, ಆದ್ದರಿಂದ ನಿಮ್ಮಲ್ಲಿ ಆ ಪ್ರಶ್ನೆ ಎತ್ತಿದ್ದು.

“ಸರಿ, ಈಗ ಒಪ್ಪಿದೆ, ನಿಮಗೆ ಸಾಧ್ಯವಿದ್ದರೆ, ಅವರಿಗೆ ವೆಂಕಷ್ಟರಮಣರು ಅಂತಲೇ ನಾಮಕರಣ ಮಾಡಿ. ನನ್ನದೇನೂ ಅಭ್ಯಂತರವಿಲ್ಲ” ಎಂದರು. ಅವರ ಆ ಅನುಮತಿ ಸಿಕ್ಕಿದ ಕೂಡಲೆ ಅಲ್ಲಿಂದ ಹೊರಡಲು ತಯಾರಾದೆ.

ಓಯ್ -ಓಯ್ ಸ್ವಲ್ಪ ನಿಲ್ಲಿ -ಅಷ್ಟು ಅವಸರ ಬೇಡ. ಈ ನಿಮ್ಮ ವೆಂಕಷ್ಟರಮಣರ ಒಂದೆರಡು ಕಥೆಯನ್ನಾದರೂ ಹೇಳದೆ ಹಾಗೇ ಹೊರಟು ಹೋಗುವುದು ಯಾವ ನ್ಯಾಯ ? ಎಂದು ಅವರು ನನ್ನನ್ನು ನಿಲ್ಲಿಸಿದಾಗ -

ಹೇಗೂ ಇವರು ನನ್ನ ಖಾಯಂ ಓದುಗರಲ್ಲಿ ಒಬ್ಬರು.ಇನ್ನೆಷ್ಟೋ ದಿನ ಕಳೆದು ಕಥೆ ಪೇಪರಿನಲ್ಲಿ ಬರುವವರೆಗೆ, ಅವರನ್ನು ಯಾಕೆ ಕಾಯಿಸಬೇಕು, ಎಂದು ಕಥೆ ಆರಂಭಿಸಿದೆ.

ತ್ರಿಕ್ಕರಪುರದ ನೀರಿನ ಮಂತ್ರವಾದಿಯ ಕಥೆಯನ್ನು ಮೊದಲಾಗಿ ಕೇಳಿ.

ಸುಮಾರು ೧೯೩೬ ರಲ್ಲಿ ಒಂದು ದಿನ -‘......ರು ಮಂತ್ರಿಸಿ ಕೊಟ್ಟ ನೀರಿಗೆ ಯಾವ ರೋಗವನ್ನಾದರೂ ಗುಣಪಡಿಸುವ ಶಕ್ತಿ ಇದೆ. ಸ್ನಾನ ಮಾಡಿ ಶುದ್ಧದಲ್ಲಿ ಮೂರು ಹೊತ್ತು ಸೇವಿಸಿದರೆ ಸಾಕು’ ಎಂಬ ಸುದ್ದಿ ಊರಿಂದೂರಿಗೆ ಹಬ್ಬಿತು. ಸುದ್ದಿಯನ್ನು ‘ಕೇಳಿದ್ದ’ವರು ಇನ್ನೊಬ್ಬರಿಗೆ ಅದನ್ನು ‘ಹೇಳುವಾಗ’ ಸೇರಿಸುತ್ತಾ ಹೋದ ತಲೆ - ಬಾಲಗಳಿಂದಾಗಿ ‘ಯಾವ ವೈದ್ಯರಿಂದಲೂ ಗುಣಪಡಿಸಲು ಸಾಧ್ಯವಾಗದ ರೋಗವೂ ಆ ನೀರಿನಿಂದ ಗುಣವಾಗುತ್ತದೆ’ ಎನ್ನುವ ಖ್ಯಾತಿಯನ್ನೂ ಪಡೆಯಿತು.

‘ನಮ್ಮ ಒಬ್ಬ ಸಂಬಂಧಿಕರ ಸಂಧಿವಾತ ಆ ನೀರಿನಿಂದಾಗಿ ಸಂಪೂರ್ಣ ವಾಸಿಯಾಗಿದೆ’ - ‘ನನ್ನ ನೆರೆಮನೆಯವರ ಗೂರಲು ಈಗ ಗುಣವಾಗಿದೆ’ -‘ಯಾವಾಗಲೂ ಅಲುಗಾಡುತ್ತಲೇ ಇದ್ದ ನಮ್ಮ ಚಿಕ್ಕಮ್ಮನ ತಲೆ ಆ ತೀರ್ಥದ ನೀರು ಕುಡಿದ ಮೇಲೆ ಅಲುಗಾಟ ನಿಲ್ಲಿಸಿದೆ’ ಎಂಬ ಪ್ರಶಂಸಾವಾಕ್ಯಗಳೂ ಬಹುಬೇಗ ಕೇಳಿಬರತೊಡಗಿದವು.

ದಕ್ಷಿಣ ಕನ್ನಡದ ಪುತ್ತೂರು -ಕಾಸರಗೋಡು ತಾಲೂಕುಗಳಿಂದ ಕೇರಳದ ತ್ರಿಕ್ಕರಪುರಕ್ಕೆ ಸಾವಿರ ಸಂಖ್ಯೆಯಲ್ಲಿ ಜನಯಾತ್ರೆ ಆರಂಭವಾಗಲು ಹೆಚ್ಚು ದಿನ ಹಿಡಿಯಲಿಲ್ಲ. ‘ನೀರು ಪಡೆಯಲು ಬಾಟ್ಲಿಗಳು ಅಲ್ಲಿ ಸಿಕ್ಕುವುದಿಲ್ಲವಂತೆ’ ಎಂಬ ವದಂತಿಯಿಂದ, ಊರಿನಿಂದಲೇ ಔಷಧದ ಬಾಟ್ಲಿಗಳನ್ನು ಒಯ್ದವರು ಎಷ್ಟೋ ಮಂದಿ. ತ್ರಿಕ್ಕರಪುರದ ಬಾಟ್ಲಿ ಅಂಗಡಿಗಳವರಿಗಂತೂ ಹಣದ ಸುಗ್ಗಿ. ಬಸ್ಸಿನ ಸೌಕರ್ಯ ಹೆಚ್ಚಿಲ್ಲದ ಆ ಕಾಲದಲ್ಲಿ ಕಾಲ್ನಡಿಗೆ ಪ್ರಯಾಣ ಮಾಡಿದವರು, ಅನಿವಾರ್ಯವಾಗಿ ಆಶ್ರಯಿಸುತ್ತಿದ್ದ ದಾರಿಬದಿಯ ಹೋಟೆಲು (ಅಥವಾ ಆಹಾರವಸ್ತು ವ್ಯಾಪಾರಿ)ಗಳಿಗೆ ಹಣದ ಹೊಳೆ. ಎಲ್ಲರ ಬಾಯಲ್ಲೂ ‘ತ್ರಿಕ್ಕರಪುರದ ಪವಾಡ ತೀರ್ಥ’ ಸುಮಾರು ಒಂದು ತಿಂಗಳವರೆಗೆ ಹರಿಯತ್ತಲೇ ಇತ್ತು.

ಆ ಮೇಲೆ ಪವಾಡ ಪ್ರಸ್ತಾಪ ತನ್ನಿಂದ ತಾನೇ ನಿಂತುಹೋಯಿತು. ಕಾಯಿಲೆ ಗುಣವಾದವರ ಸರ್ಟಿಫಿಕೇಟ್‍ಗಳೂ ಇಲ್ಲವಾದುವು. ನೀರಿನ ಜಾತ್ರೆಗಾಗಿಯೇ ತ್ರಿಕ್ಕರಪುರದಲ್ಲಿ ಡೇರೆ ಹೊಡೆದಿದ್ದ ಸಂತೆಯಂಗಡಿಗಳೂ ಗಂಟುಮೂಟೆ ಕಟ್ಟಿದವು......

ಅದಕ್ಕಿಂತಲೂ ಆಧುನಿಕ ರೀತಿಯ ಒಂದು ಪವಾಡಶಕ್ತಿಯ ಪ್ರದರ್ಶನ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ೧೯೭೩ ರಲ್ಲಿ ನಡೆದಿತ್ತು.

ಮತಧರ್ಮ ಪ್ರಚಾರಕ್ಕಾಗಿ ಪ್ರವಾಸ ಮಾಡುತ್ತಿದ್ದ ಒಬ್ಬ ವ್ಯಕ್ತಿ, ಮಾನಸಿಕ ಭರವಸೆ ಚಿಕಿತ್ಸೆಯ (ಫೆಯಿತ್ ಹೀಲಿಂಗ್) ಮೂಲಕ ‘ಯಾವ ರೋಗವನ್ನೂ ಗುಣಪಡಿಸುವ ಶಕ್ತಿಯನ್ನು ದೇವಮೂಲದಿಂದ ನಾನು ಪಡೆದಿದ್ದೇನೆ’ ಎಂದು ಸಾರಿ ‘ರೋಗಿಗಳೆಲ್ಲರೂ ನನ್ನ ಪ್ರವಚನದ ಸ್ಥಳಕ್ಕೆ ಬನ್ನಿ - ನಿಮ್ಮ ವ್ಯಾಧಿಗಳಿಂದ ಮುಕ್ತಿ ಪಡೆಯಿರಿ’ ಎಂದು ಇತ್ತ ಬಹಿರಂಗ ಆಹ್ವಾನ, ವ್ಯಾಪಕವಾಗಿ ಪ್ರಚಾರ ಪಡೆಯಿತು.

ಆ ಪ್ರಚಾರದ ಆಕರ್ಷಣೆ, ಎಷ್ಟೋ ಮಂದಿಯನ್ನು ಆ ದಿನಗಳಲ್ಲಿ ನೆಹರೂ ಮೈದಾನದತ್ತ ಸೆಳೆಯಿತು. ತನ್ನ ಜೊತೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ತಾನಿತ್ತ ಭರವಸೆಯನ್ನು ಏನೂ ಶಂಕೆಯಿಲ್ಲದೆ ನಂಬಿದವರು ಸಂಪೂರ್ಣ ಗುಣ ಹೊಂದುತ್ತಾರೆ ಎಂಬ ಆ ವ್ಯಕ್ತಿಯ ಮಾತಿನಂತೆ ನಡೆದುಕೊಂಡವರ ಸಂಖ್ಯೆ ನೂರಾರು. ಲಕ್ವ (ಪಾರಾಲಿಸಿಸ್ ಸ್ಟ್ರೋಕ್) ಹೊಡೆದು ಬಳಲಿದ್ದ, ಕೇಂದ್ರ ಸರಕಾರದ ಅಧೀನ ಸಂಸ್ಥೆಯೊಂದರ ಒಬ್ಬ ಹಿರಿಯ ಅಧಿಕಾರಿಯೂ ಆ ನೂರಾರು ಮಂದಿಯಲ್ಲಿ ಒಬ್ಬರು.

ಯಾವ ಚಿಕಿತ್ಸೆಯಿಂದಲೂ ಗುಣ ಸಿಗಲಿಲ್ಲ. ಇದರಿಂದಲಾದರೂ ಸಿಗುವುದಾದರೆ ಸಿಗಲಿ ಎಂಬ ‘ಕೊನೆಯ ಆಸೆ’ ಪೀಡಿತರಲ್ಲಿ ಇರುವುದು ಸ್ವಾಭಾವಿಕ. ಆ ಆಸೆಯ ಲಾಭ ಪಡೆಯಲು ಹೊಂಚುಹಾಕುವ ಜನರೂ ‘ಸ್ವಾಭಾವಿಕ’ ವಾಗಿಯೇ ಇದ್ದಾರೆ. ಬಹಳ ಹಿಂದಿನಿಂದಲೂ ಇದ್ದರು - ಇನ್ನು ಮುಂದೆಯೂ ಇರುತ್ತಾರೆ.

ಹುಡುಕುತ್ತಾ ಹೋದರೆ, ಅಂಥ ‘ಚಿಕಿತ್ಸಾರಹಿತ ರೋಗನಿರ್ಮೂಲನ’ ಕೇಂದ್ರಗಳನ್ನು ಹಲವಾರು ಕಡೆಗಳಲ್ಲಿ ನೀವು ಇಂದೂ ಕಾಣಬಹುದು. “ಅವನ್ನೆಲ್ಲ ಹೆಸರಿಸುವ ಕೆಲಸ ನನ್ನ ವ್ಯಾಪ್ತಿಗೆ ಮೀರಿದ್ದು, ಇನ್ನು ಹೊರಡುವ ಅಪ್ಪಣೆ ಕೊಡ್ತೀರಾ ?”

-ಎಂದು ಅಪ್ಪಣೆಗೂ ಕಾಯದೆ, ಪಂಡಿತರಲ್ಲಿಂದ ನಾನು ಹೊರಬಿದ್ದಾಗ “ನಂಬಿ ಕೆಡದವರಿಲ್ಲವೋ....” ಎಂದು ತಾಳಬದ್ಧವಾಗಿ ಪಂಡಿತರು ಹಾಡಲು ಆರಂಭಿಸಿದ್ದು -ಯಾವ ದಾಸರ ಪದ ? ಗೊತ್ತೇ ಆಗಲಿಲ್ಲ.



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)




ಶ್ರೀ. ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.


ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
------------
ಸಮೂಹ ಮಾಧ್ಯಮದ ಬೆಂಗಳೂರಿನ ಮಿತ್ರನ ಪ್ರತಿಸ್ಪಂದನ


ಎಂದಿಗೂ ಚೇಂಜ್ ಆಗದ ಪ.ಗೋ

ಒಬ್ಬರು ಗೋಪಾಲಕೃಷ್ಣ. ಇನ್ನೊಬ್ಬರು ನರಸಿಂಹರಾಯರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ.

ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ಪ ಗೋಪಾಲಕೃಷ್ಣ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿಯಾದರೆ, ನರಸಿಂಹ ರಾಯರು ದಿ ಹಿಂದೂ ಪ್ರತಿನಿಧಿ. 'ಪಾಕೀಟು ಪತ್ರಿಕೋದ್ಯಮ' ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಬಡಿದಾಡಿದವರು.

ಈ ಇಬ್ಬರಲ್ಲಿ ಗೋಪಾಲಕೃಷ್ಣರದ್ದು ತುಂಟ ಮನಸ್ಸು. ಎಷ್ಟು ಖಡಕ್ ಆಗಿ ಇರುತ್ತಿದ್ದರೋ ಅಷ್ಟೇ ನಗು ಉಕ್ಕಿಸುವಷ್ಟು ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಕಥೆಗಳನ್ನೂ ಬರೆದವರು. ತಮ್ಮ ಪತ್ರಿಕಾ ವೃತ್ತಿಯ ಅನುಭವದ ಬಗೆಗೂ ಅಂಕಣ ಬರೆದರು.

ಈ ಎಲ್ಲಾ ನೆನಪಿಗೆ ಬಂದದ್ದು "ಗಲ್ಫ್ ಕನ್ನಡಿಗ"ದಲ್ಲಿ ಮರು ಪ್ರಕಟಿಸುತಿರುವ ಪ.ಗೋ. ಅವರು ಬರೆದ ೨೪ ಅಂಕಣಗಳ ಪುಸ್ತಕ "ನೋ ಚೇಂಜ್ ಕಥೆಗಳು" ಅಂತರ್ಜಾಲದ ಲಿಂಕ್-ನಿಂದ.
- ಜಿ.ಎನ್. ಮೋಹನ್, ಬೆಂಗಳೂರು.














ಶ್ರೀ. ಜಿ.ಎನ್. ಮೋಹನ್ ಅವರು ಪ್ರಸ್ತುತ "ಮೇಫ್ಲವರ್ ಮೀಡಿಯ ಹೌಸ್" ಬೆಂಗಳೂರು ಇದರ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿದ್ದು, ಈ ಮೊದಲು " ಈ ಟೀವಿ - ಕನ್ನಡ"ದ ಕಾರ್ಯನಿರ್ವಹಣೆ ವಿಭಾಗದ ಪ್ರಮುಖರು ಆಗಿದ್ದರು. ಶ್ರೀಯುತರು ಪ್ರಜಾವಾಣಿ ಕನ್ನಡ ದಿನ ಪತ್ರಿಕೆಯ ವರದಿಗಾರರಾಗಿ ಮಂಗಳೂರು, ಬೆಂಗಳೂರು ಹಾಗೂ ಗುಲ್ಬರ್ಗ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಒಂಬತ್ತು ವರ್ಷದ ಅವಧಿಯ 'ಪ್ರಜಾವಾಣಿ -ಮಂಗಳೂರು ಪ್ರತಿನಿಧಿ'ಯಾಗಿದ್ದ ಶ್ರೀ. ಮೋಹನ್ ರವರು ಶ್ರೀ. ಪ.ಗೋ. ಅವರನ್ನು ಸಮೀಪದಿಂದ ಬಲ್ಲವರು.
-------
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-5058.html

Friday, April 10, 2009

’ನೋ ಚೇಂಜ್ ಕಥೆಗಳು’ - ೧೨..ಪ್ರಯೋಗಪಶು ಪರಂಪರೆ














ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹನ್ನೆರಡನೇ ಅಂಕಣ.

ಪ್ರಯೋಗಪಶು ಪರಂಪರೆ


ನೆರೆಮನೆ ಪಂಡಿತರು, ಯಾರ ಸುದ್ದಿಗೂ ಹೋಗದೆ ತನ್ನಷ್ಟಕ್ಕೆ ತಾನಿರಲು ತೊಡಗಿ, ಹಲವಾರು ದಿನಗಳು ಕಳೆದಿದ್ದವು.

ಹಾಗೆಂದು ನಾನು ಸುಮ್ಮನಿರಲಾಗುತ್ತದೆಯೆ ? ಲೋಕದ ಡೊಂಕು ತಿದ್ದುವ ಮಹತ್ಕಾರ್ಯ - ಮಾಡಲು ಬೇರೇನೂ ಕೆಲಸವಿಲ್ಲದ ನಿವೃತ್ತ ಮುದುಕರ ಹೊರತು - ಬೇರೆ ಯಾರಿಂದ ಸಾಧ್ಯ ?

ಪಂಡಿತರಲ್ಲಿಗೇ ಹೋದೆ. ಯಾವುದೊ ಪುಸ್ತಕ ಓದುತ್ತಿದ್ದ ಅವರನ್ನು ಮಾತಿಗೆ ಎಳೆದೆ. (ಪ್ರಾಥಮಿಕ ಶಿಕ್ಷಣವಂತೂ ಅವರ ಪ್ರೀತಿಯ ವಿಷಯವೆಂದು ಗೊತ್ತೇ ಇತ್ತು.)

ಪಂಡಿತ್‍ಜಿ! ನಿಮ್ಮ ವಿದ್ಯಾಭ್ಯಾಸ ಶುರುವಾದ್ದೆಲ್ಲಿ - ಐಗಳ ಮಠದಲ್ಲೋ ? ಎಂಬ (ಅವರ ಮಟ್ಟಿಗೆ) ಅನಿರೀಕ್ಷಿತ ಪ್ರಶ್ನೆಯಿಂದ ಮಾತು ತೊಡಗಿದೆ.

‘ಛೆ -ಛೆ, ಇಲ್ಲಪ್ಪ ! ನಮ್ಮ ಕಾಲಕ್ಕೆ ಐಗಳ ಮಠ ಅಳಿದೇ ಹೋಗಿತ್ತು. ನಾವೆಲ್ಲ ಹಳ್ಳಿ ಶಾಲೆಗಳಲ್ಲಿ ವಿದ್ಯೆ ಕಲಿತವರು - ಗುರುಭಕ್ತಿಯನ್ನೂ ಬೆಳೆಸಿಕೊಂಡವರು’

‘ಅಂದರೆ, ಹೊಯಿಗೆಯಲ್ಲೊ ಅಕ್ಕಿಯಲ್ಲೊ ಸರಸ್ವತಿ ಪೂಜೆಯ ದಿನ ಬೆರಳು ಆಡಿಸಿ ಆರಂಭಿಸಿದ್ದ ‘ಅರ -ಆಡು’ ಕಾಲದವರು ಎನ್ನಿ’
ಹೌದೌದು, ನೀವೂ ಅದೇ ಕಾಲದವರಲ್ವಾ ?

ಪೂರ್ತಿಯಾಗಿ ಅಲ್ಲ. ಐದಾರು ವರ್ಷ ನಂತರದವನು. ಆದರೆ ಈಗಿನ ಪ್ರಶ್ನೆ ಅದಲ್ಲ. ಮಕ್ಕಳಿಗೆ ವಿದ್ಯೆ ಹೇಳಿಕೊಡುವ ವಿಧಾನ ರೂಪಿಸಿದವರು ಯಾರು ?

“ನಮ್ಮನ್ನು ಆಳುತ್ತಿದ್ದ ಬ್ರಿಟಿಷರೇ. ಮತ್ಯಾರು ?”

“ನಿಜ. ಬ್ರಿಟಿಷರು ತಮಗೆ ಬೇಕಾದ ಅಗ್ಗದ ಆಳುಗಳನ್ನು ತಯಾರಿಸಿಕೊಳ್ಳಲಿಕ್ಕೆ ಆ ವಿಧಾನವನ್ನು ನಮ್ಮ ಮೇಲೆ ಹೇರಿದರು.ಒಪ್ಪಿದೆ. ಆದರಿಂದ ಒಳ್ಳೆಯದಾದರೂ ಕೆಟ್ಟದಾದರೂ ಅದನ್ನು ಆಳುವವರ ಗಮನಕ್ಕೆ ತರುವವರು ಯಾರು ಇರಲಿಲ್ಲ ಎನ್ನುವುದೂ ಒಪ್ಪಬೇಕಾದ ಮಾತು.”

“ಆದರೆ ಸ್ವಾತಂತ್ರ್ಯ ಬಂದ ಮೇಲೆ ಬ್ರಿಟಿಷ್ ವಿಧಾನ ಸರಿಯಾದ್ದಲ್ಲ ಎಂಬ ತಿಳುವಳಿಕೆ ಮೂಡಿತ್ತಲ್ಲ -? ಆದರಿಂದ ಏನಾದರೂ ಪ್ರಯೋಜನವಾಯಿತೇ ?”

“ಆಗಲಿಲ್ಲ ಎನ್ನುತ್ತೀರಾ ?” ಪಂಡಿತರ ಧ್ವನಿ ಏರತೊಡಗಿತು. ದಾರಿಗೆ ಬರುತ್ತಿದ್ದಾರೆ ಎಂದುಕೊಂಡು, ಕೆಣಕು ಮಾತು ಮುಂದುವರಿಸಿದೆ.

.... ಹಿಂದಿನದು ಸರಿಯಲ್ಲ. ಅದನ್ನು ಬದಲಾಯಿಸಲೇಬೇಕು ಎಂದವರು ನಮ್ಮನ್ನು ಆಳುವ ವರ್ಗಕ್ಕೆ ಏರಿದ್ದವರು. ಅವರ ಅಪ್ಪಣೆ ಪಾಲಿಸಲು ಹೊರಟ ಅಧಿಕಾರಿಗಳು ಹಿಂದಿನ ಪೀಳಿಗೆಯವರು. ಆಳುವವರು ಹೇಳಿದ್ದ ಪ್ರಯೋಗವನ್ನು ಅನುಷ್ಠಾನಗೊಳಿಸಬೇಕೆಂಬ ಆಜ್ಞೆಯನ್ನು ರಾಜ್ಯಗಳಿಗೆ ಕಳುಹಿಸಿದ್ದರಿಂದ ಅಮಾಯಕ ಹಸುಳೆಗಳನ್ನು ಪ್ರಯೋಗಪಶುಗಳಾಗಿ ಮಾಡುವ ಪರಂಪರೆಗೆ ನಾಂದಿಯಾಯಿತು.

“ಹೂಂ. ಮುಂದುವರಿಯಲಿ ನಿಮ್ಮ ಕಥೆ - ನನಗೂ ವಿಷಯ ನೆನಪಾಗ್ತದೊ ನೋಡುವ”

ಮಕ್ಕಳು ಮಧ್ಯಾಹ್ನವೇ ಮನೆಗೆ ಹೋಗಬೇಕಾದರೆ ಬೆಳಗ್ಗೆ ಎಂಟು ಗಂಟೆಗೆ ಶಾಲೆಗೆ ಬರಬೇಕು - ಮಧ್ಯಾಹ್ನದ ನಂತರ ಬೇಸಾಯವೊ ಅಥವಾ ಇನ್ನೊಂದು ಕಸುಬೊ ಕಲಿತು ಹೆತ್ತವರಿಗೆ ಸಹಾಯ ಮಾಡಬೇಕು ಎನ್ನುವ ಪ್ರಯೋಗ, ಚಕ್ರವರ್ತಿ ರಾಜಗೋಪಾಲಾಚಾರಿಯವರು ಸ್ವಲ್ಪ ಸಮಯ ಮುಖ್ಯಮಂತ್ರಿಯಾಗಿದ್ದಾಗ ನಡೆದಿತ್ತು ಎನ್ನುವುದನ್ನು ಮೊದಲು ನೆನಪು ಮಾಡಿಕೊಳ್ಳಿ. ಆ ನಂತರ ಆಗುತ್ತಾ ಬಂದ ಪ್ರಯೋಗಗಳು ನೆನಪು ಆಗುವುದಾದರೆ ಮತ್ತೆ ಹೇಳಿ.

“ಹಾಂ ! ನೆನಪಾಯಿತು. ಆ ನಂತರದ್ದು ಒಂದನೆ ಕ್ಲಾಸಿನಿಂದ ಎಂಟರವರೆಗೂ ಇದ್ದ ಪಠ್ಯಪುಸ್ತಕಗಳ ಬದಲಾವಣೆ ಅಲ್ವೊ ?”

ಹೌದು, ಒಂದನೆ ತರಗತಿಯ ಅಕ್ಷರ ಕಲಿಸುವ ಪುಸ್ತಕದಲ್ಲಿ ‘ಅರ’ -‘ಆಡು’ ಗಳು ಚಿತ್ರಗಳ ಸಮೇತ ಬರುತ್ತಿದ್ದುವು. ಇತರ ಎಲ್ಲಾ ಪಾಠಗಳ ಬೋಧನೆಯ ಕ್ರಮದಲ್ಲೂ ವ್ಯತ್ಯಾಸ ಮಾಡಲಾಗಿತ್ತು.

ಪ್ರಯೋಗಗಳನ್ನು ಪದೇಪದೇ ಬದಲಾಯಿಸುವ ‘ರೋಗ’ ತಗಲಲು ಹೆಚ್ಚು ಸಮಯ ಕಾಯಬೇಕಾಗಿರಲಿಲ್ಲ. ಯಾರ ತೀಟೆ ತೀರಿಸಲಿಕ್ಕೊ ಏನೋ ? ವಿಧಾನಗಳು ಬದಲಾಗತೊಡಗಿದವು.

ಅಕ್ಷರ ಮಾಲೆಯಲ್ಲಿ ಆಟ -ಊಟ -ಓಟಗಳಿಗೆ ಪ್ರೋತ್ಸಾಹ ದೊರೆಯಿತು. ಅದೇ ಮತ್ತೆ ಕಮಲ -ಬಸವರ ಕಡೆಗೆ ವಾಲಿತು.
ಈಗ ಏನಿದೆಯಪ್ಪಾ ಎಂದು ಯಾರಾದರೊಬ್ಬ ಪಟ್ಟಣಿಗ (ಎಳೆಯ ) ಹುಡುಗನನ್ನು ವಿಚಾರಿಸಿದರೆ ಅವನ ಬೆನ್ನಿನ ಕತ್ತೆಮೂಟೆಯನ್ನು ಸರಿಮಾಡಿಕೊಳ್ಳುತ್ತಾನೆ. “ಅದೇನೊ ಎಲ್ಕೇಜಿಯಲ್ಲಿ ಹೇಳ್ತಾ ಇದ್ರು,ಈಗ ಮರ್ತು ಹೋಗಿದೆ” ಎನ್ನುವ ಉತ್ತರ ಕೊಟ್ಟರೂ ಆಶ್ಚರ್ಯವಿಲ್ಲ.

“ಅದರ ಎಡೆಯಲ್ಲಿ, ಐವತ್ತು ವರ್ಷ ಹಳೆಯ ಪಾಠಮಾಲೆಯನ್ನೇ ಹೊಸ ಹೆಸರು ಹಾಕಿ ಹುಡುಗರ ಮೇಲೆ ಪ್ರಯೋಗ ಮಾಡಿದ್ದನ್ನು ನೆನಪು ಮಾಡಿ”

ಅಷ್ಟೇ ಅಲ್ಲ ಪಂಡಿತರೇ. ಆದರಿಂದ ಹೆಚ್ಚಿನ ಪ್ರಯೋಜನಗಳೂ ಆಗಿವೆ -ಆಗುತ್ತಾ ಇವೆ.

ಪ್ರಯೋಗಗಳಿಂದ ಆಗಬಹುದಾದ ದೀರ್ಘಕಾಲದ ಪರಿಣಾಮಗಳನ್ನು ತಿಳಿದುಕೊಳ್ಳುವ ಯಾವ ವ್ಯವಸ್ಥೆಯೂ ನಮ್ಮಲ್ಲಿ ಇಲ್ಲವಾಗಿದೆ. ಮೂಲಭೂತ ಬದಲಾವಣೆಯೇ ಬೇಡವಾದಂಥ ಧೋರಣೆ ರೂಪಿಸುವ ಗಟ್ಟಿ ‘ಬೆನ್ನೆಲುಬೂ’ ಕಾಣೆಯಾಗಿದೆ.

“ಹಾಗಾದರೆ ನಮ್ಮ ಎಳೆ ಮಕ್ಕಳೆಲ್ಲ ಪ್ರಯೋಗಪಶುಗಳಾಗಿಯೇ ಬದುಕಬೇಕೆ ? ಬೇರೆ ಯಾವ ದಾರಿಯೂ ಇಲ್ಲವೆ ?”

ಸದ್ಯಕ್ಕಂತೂ ಕಾಣಿಸುತ್ತಿಲ್ಲ, ಮುಂದಿನ ಚುನಾವಣೆಯ ಹೊತ್ತಿಗಾದರೂ ಕಾಣಿಸುವ ಸಾಧ್ಯತೆ ? ಅದೂ ಇದ್ದಂತಿಲ್ಲ. (ಕೊನೆಯ ವಾಕ್ಯ ನನ್ನದು.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.
----

ಶೀರ್ಷಿಕೆಯ ೧೯೮೦ರ ದಶಕದ ಛಾಯಾಚಿತ್ರ:

ಕರ್ನಾಟಕ ಕಲಾ ಕೇಂದ್ರ ಮಂಗಳೂರು ಮತ್ತು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ ಆಯೋಜಿಸಿದ ಪತ್ರಿಕೋದ್ಯಮ ತರಬೇತಿ ಶಿಬಿರದ ಉದ್ಘಾಟನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಉದಯವಾಣಿ ಹಿರಿಯ ವರದಿಗಾರರಾದ ಶ್ರೀ. ಎ. ವಿ. ಮಯ್ಯರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯ ಅತಿಥಿ ಖ್ಯಾತ ಕೊಂಕಣಿ ಕವಿ, ಸಾಹಿತಿ ,ಸಂಗೀತಕಾರ ಶ್ರೀ ಎರಿಕ್ ಓಸಾರಿಯೋ , ಕರ್ನಾಟಕ ಕಲಾ ಕೇಂದ್ರದ ಸಂಚಾಲಕ ಶ್ರೀ. ಹೆನ್ರಿ ಡಿ'ಸೋಜ ಹಾಗೂ ಉದಯವಾಣಿ ವರದಿಗಾರ ಶ್ರೀ. ಎಂ. ಮನೋಹರ ಪ್ರಸಾದ್ ಅವರೊಂದಿಗೆ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಪ.ಗೋಪಾಲಕೃಷ್ಣ.

-----
ಕೃಪೆ: ಗಲ್ಫ್ ಕನ್ನಡಿಗ

ಲಿಂಕ್: http://www.gulfkannadiga.com/news-4773.html

Thursday, April 2, 2009

’ನೋ ಚೇಂಜ್ ಕಥೆಗಳು’ - ೧೧ .. ಕಡಿತ ಬೆಲೆಯ ಕರಾಮತ್ತು














ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.)ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹನ್ನೊಂದನೇ ಅಂಕಣ.


ಕಡಿತ ಬೆಲೆಯ ಕರಾಮತ್ತು

“ಏನಮ್ಮಾ ಊಟ ಆಯಿತಾ?”

ಮಧ್ಯಾಹ್ನ ಕಳೆದು ಮೂರು ಗಂಟೆ ಆಗಿತ್ತು. ಈ ಹೊತ್ತಿಗೆ ಊಟ ಮಾಡಿದ್ದೀರಾ ಎನ್ನುವವರು ಯಾರಪ್ಪಾ ಎಂದುಕೊಂಡೆ. ಹೊರಗೆ ಇಣಿಕಿ ನೋಡಿದೆ.

ವಿಚಾರಿಸಿದ್ದು ನನ್ನನ್ನಲ್ಲ, ನಮ್ಮ ಗೃಹಮಂತ್ರಿಯವರನ್ನು ಅಂತ ಗೊತ್ತಿತ್ತು. ಬಾಗಿಲು ಮೆಟ್ಟಲಲ್ಲೆ ಕುಳಿತಿದ್ದ ಅವಳು ಉತ್ತರ ಕೂಡಾ ಕೊಡುತ್ತಾಳೆ ಎಂದೂ ತಿಳಿದಿತ್ತು. ಆದರೂ (ಏನೂ ಕೆಲಸ ಇಲ್ಲದೆ ಕಾಲ ಕಳೆಯುವ) ಇಳಿವಯಸ್ಸಿನ ಕುತೂಹಲ ನೋಡಿ, ಮನಸ್ಸು ಕೇಳಿರಲಿಲ್ಲ. ಇಣಿಕಿ ನೋಡಿದರೆ,

ಊಟದ ವಿಚಾರಣೆ ನೆಪದಲ್ಲಿ ಮಾತುಕತೆಗೆ (ಹೆಂಗಸರ ಹರಟೆಗೆ ಎನ್ನಬಾರದಲ್ಲ ) ಬಂದಿದ್ದವರು ಶ್ರೀಮತಿ ‘ತ್ರಿಪಾಠಿ’! ಹಿಡಿದುಕೊಂಡು ಬಂದಿದ್ದ ಒಂದು ಕಟ್ಟನ್ನು ನಿಧಾನವಾಗಿ ಬಿಚ್ಚಿ ನನ್ನವಳಿಗೆ ತೋರಿಸಲು ತೊಡಗಿದ್ದರು.

ಆಗ, ನಾನೇನಾದರೂ ಅವರಿಬ್ಬರ ಎದುರು ಕಾಣಿಸಿಕೊಂಡರೆ, ನನ್ನ ಕಿಸೆಗೆ ಕತ್ತರಿ ಬೀಳದೆ ಉಳಿಯುವುದಿಲ್ಲವೆಂದು ಗೊತ್ತೇ ಇತ್ತು. ಮಾತು ಕೇಳಿಸಿಕೊಂಡು ಮರೆಯಾಗಿಯೇ ಉಳಿದೆ. ( ಕಟ್ಟಿನೊಳಗೊಂದು ಸೀರೆಯೇ ಇದೆ, ಬೇರೇನೂ ಅಲ್ಲವೆಂದು ಖಚಿತವಾಗಿತ್ತು.)

ಓಹ್! ಎಷ್ಟು ಚೆನ್ನಾಗಿದೆ, ಎಲ್ಲಿಂದ ತಂದಿರಿ ? ಎಷ್ಟು ಕೊಟ್ಟಿರಿ ? ಪ್ರಶ್ನಾವಳಿ ‘ನಮ್ಮ’ ಕಡೆಯಿಂದ ಬಂದೇ ಬಂತು. ಉತ್ತರ ಅಸ್ಪಷ್ಟವಾಗಿತ್ತು. ಆದರೆ ಮತ್ತೆ ಹೊರಟ ಸಿಡಿಗುಂಡುಗಳು ಉತ್ತರದ ಸ್ಪಷ್ಟ ರೂಪ ಕೊಟ್ಟವು.

ಛೆ -ಛೆ -ಛೆ ! ಆ‍ ‍ಆಷ್ಟು ಕೊಟ್ರಾ..... ಬಹಾಳ ಜಾಸ್ತಿಯಾಯಿತು. ನಾನು ಓ ಮೊನ್ನೆ ಇದೇ ಬಾರ್ಡರ್ -ಅದೇ ಸೆರಗು -ಕಲರ್‍ನಲ್ಲಿ ಸ್ವಲೂಪ ವ್ಯತ್ಯಾಸ - ಇದ್ದದ್ದು ತೆಕ್ಕೊಂಡಿದ್ದೇನೆ. ಬರೇ ೧೯೭ ರೂಪಾಯಿಗೆ. ಈಗ ಪೆಟ್ಟಿಗೆಯಲ್ಲುಂಟು, ಬೇಕಾದರೆ ತಂದು ತೋರಿಸುತ್ತೇನೆ. ನೀವು ಅದರ ಡಬ್ಬಲ್ ಕೊಟ್ರಲ್ಲಾ...

ಗುಂಡುಗಳು ಗುರಿ ಮುಟ್ಟುತ್ತಾ ಇದ್ದವು. ಇನ್ನೊಮ್ಮೆ ಇಣುಕಿದೆ.

ನೆರೆಮನೆಯಾಕೆಯ ಪೆಚ್ಚುಮುಖ ಕಾಣಿಸಿ ‘ ಪಾ......ಪ’ ನನ್ನನ್ನು ಮೆಟ್ಟಿಲ ಬಳಿ ಎಳೆದೊಯ್ಯಿತು.

ಸೀರೆ ಖರೀದಿಯ ಪ್ರಕರಣದ ಬಗ್ಗೆ ನಾನೇನಾದರೂ ಮಾತೆತ್ತಿದರೆ, ನಮ್ಮಿಬ್ಬರೊಳಗೆ ಖಂಡಿತವಾಗಿಯೂ ಜಗಳ ಹುಟ್ಟಿಕೊಳ್ಳುತ್ತದೆ ಅಂತ ಗೊತ್ತಿದ್ದರೂ -

ಗಂ-ಹೆಂ ಜಗಳ ಪರ್ಮನೆಂಟ್ ಅಲ್ಲ ಅನ್ನುವ ಧೈರ್ಯದಿಂದ “ಮನೆಯೊಳಗೆ ಬಂದು ಮಾತನಾಡಿಯಮ್ಮ” ಆಹ್ವಾನವನ್ನು ಶ್ರೀಮತಿ ತ್ರಿಪಾಠಿಯವರಿಗಿತ್ತೆ.

ನಿರೀಕ್ಷಿಸಿದ್ದಂತೆ ಒಂದು ಕೆಂಗಣ್ಣು ನೋಟ ಯಜಮಾನಿಯಿಂದ ನನ್ನ ಕಡೆಗೆ ಹಾರಿತು.(ನಾನೂ ಕೇರ್ ಮಾಡದವನ ಹಾಗೆ ನಟಿಸಿದೆ.) ಆದರೆ ಶ್ರೀಮತಿ ತ್ರಿ ಒಳಗೆ ಬಂದದ್ದರಿಂದ ಹೆಚ್ಚಿನ ಅನಾಹುತವೇನೂ ಆಗಲಿಲ್ಲ ಬಿಡಿ.

ನೋಡಿಯಮ್ಮಾ, ಇವಳು ೧೯೭ ರೂಪಾಯಿಗೆ ಸೀರೆ ತಂದದ್ದೇನೋ ನಿಜ. ಅದನ್ನು ಪೆಟ್ಟಿಗೆಯಿಂದ ತೆಗೆದು ಉಪಯೋಗಿಸಲು ಸಾಧ್ಯವಿಲ್ಲವೆನ್ನುವ ಸತ್ಯ ಕೂಡಾ ನಿಮಗೆ ಹೇಳಿದ್ದಾಳಾ ? ಎಂದ ಕೇಳಿಯೇ ಬಿಟ್ಟೆ.

“ಇಲ್ಲ -ಇಲ್ಲ, ನಾನು ಹೇಳಿಲ್ಲ, ಹೇಳುವುದೂ ಇಲ್ಲ. ನೀವೇ ಎಲ್ಲ ಗೊತ್ತಿದ್ದವರಲ್ವಾ, ಹೇಳಿ ಬಿಡಿ” ಮುನಿಸಿನ ಗುಂಡು ಇನ್ನೊಮ್ಮೆ ಸಿಡಿಯಿತು.

ಅವಳ ಮಾತು ಕೇಳಿಸಿಯೇ ಇಲ್ಲವೆನ್ನುವವನ ಹಾಗೆ -

“ಆ ಸೀರೆ ‘ಸೇಲ್’ ನಲ್ಲಿ ಖರೀದಿ ಮಾಡಿದ್ದು. ಸೀರೆ ‘ಕುಂಬು’ ಆಗಿದೆ -ಡ್ಯಾಮೇಜ್ ಆಗಿದೆ - ಬಣ್ಣ ಕೂಡಾ ಉಳಿಯುವುದು ಸಂಶಯ ಅಂತೆಲ್ಲ ಅವಳಿಗೆ ಗೊತ್ತಾದ್ದು ಮನೆಗೆ ಬಂದು ಗಡದ್ದಾಗಿ ಉಟ್ಟು ಟ್ರಯಲ್ ನೋಡಿದ ಮೇಲೆ -

(ಯಜಮಾನಿ ಅವಡುಗಚ್ಚುತ್ತಾ ಇದ್ದಳು)

-ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ‘ಪರ್ರ್’ ಶಬ್ದ ಕೇಳಿದ ನಂತರ ”-

“ಹೌದಾ ? ? ?” ಬಂದವರು ಕೇಳಿದ್ದು ಪ್ರಶ್ನೆಯಲ್ಲ. ಮಾಡಿದ್ದು ಅಚ್ಚರಿಯ ಉದ್ಗಾರ.

“ಕಡಿತ ಬೆಲೆಯ” ಮಾರಾಟದ ಸುದ್ದಿ ಕೇಳಿದರೂ ಸಾಕು. ಅಂಗಡಿಗೆ ಓಡುವ ಅಭ್ಯಾಸ - ಎಲ್ಲಾ ಊರುಗಳ ಮಹಿಳೆಯರಿಗೂ ಇದೆ. ಮಂಗಳೂರಿನವರಿಗೂ ಇರಲೇಬೇಕಲ್ಲ! ಇತ್ತು.

ಸಂಗ್ರಹ ತೀರಿಸುವ ಮಾರಾಟ (ಸ್ಟಾಕ್ ಕ್ಲಿಯರಿಂಗ್ ಸೇಲ್) ಅಂತ ಪೇಪರ್‍ನಲ್ಲಿ ದೊಡ್ಡ ಎಡ್ವಟಾಯಿಸ್‍ಮೆಂಟ್ ಕಂಡ ಕೂಡಲೇ ಅಂಗಡಿಗೆ ಓಡುವ ಅಭ್ಯಾಸ ೧೯೬೨ ರ ಚೀನೀ ಧಾಳಿಯ ಸಮಯದಲ್ಲೇ ಇವಳಿಗಿತ್ತು.

ಸೇಲ್ ಶುರುವಾಗುವ ಹಿಂದಿನ ರಾತ್ರಿ, ೧೩೦ ರೂಪಾಯಿ ಬೆಲೆಯ ಬಟ್ಟೆಗೆ ೩೭೦ ರ ಚೀಟಿ ಅಂಟಿಸಿ, ಬೆಲೆಯನ್ನು ೧೪೫ ಕ್ಕೆ ಇಳಿಸಿದ ಹಾಗೆ ತಿದ್ದುವ ಅಂಗಡಿಯವರ ಕ್ರಮ, ಅಂದಿನದು.

ಹಾಗೆಯೇ, ಸೇಲ್‍ನ ಸಮಯದಲ್ಲಿ ಅಂಗಡಿಯಲ್ಲಿ ತುಂಬಿದ್ದ ಹೆಂಗಸರ ಗುಂಪುಗಳ ಫೋಟೊ ಪೇಪರ್‍ನ ಜಾಹಿರಾತಿನಲ್ಲಿ ಬಂದರೆ ‘ನಾನೆಲ್ಲಿ ಇದ್ದೇನೆ ಈ ಫೋಟೊದಲ್ಲಿ ?’ ಎಂದು ಹುಡುಕುವ ಅಭ್ಯಾಸವೂ ಆ ಸಮಯದ್ದೇ.

ಕಡಿತ ಮಾರಾಟದ ಖರೀದಿಗೆ ಬಂದವರು ಖರೀದಿಸಿದ ವಸ್ತುವಿನ ಜೊತೆಗೆ ‘ಬಹುಮಾನ’ ಕೊಡುವ ಕ್ರಮ ಮುಂದಿನ ವರ್ಷಗಳಲ್ಲಿ ಜಾರಿಗೆ ಬಂತು. ಆಗಲೂ ‘ಸೇಲ್’ ನಲ್ಲಿ ಬಟ್ಟೆಕೊಳ್ಳುವುದು, ಕೊಂಡ ಮೇಲೆ ‘ಮೋಸವಾಯಿತೆಂದು’ ಪರಿತಪಿಸುವುದೂ ನಡೆದೇ ಇತ್ತು.

ಈಗಂತೂ ಬೆಲೆ ಕಡಿತದ ಮಾರಾಟಕ್ಕೆ ದೂರದೂರದ ಊರುಗಳ ವ್ಯಾಪಾರಿಗಳೇ ಮಂಗಳೂರಿಗೆ ಬರುತ್ತಾರೆ. (ಸ್ಥಳೀಯರನ್ನು ಮೀರಿಸುವ ರೀತಿಯ ವ್ಯಾಪಾರವನ್ನೂ ಮಾಡುತ್ತಾರೆ.)

‘ಮಿಲ್ಲಿನ ಗೋದಾಮಿಗೆ ಮಳೆ ಸುರಿದು ಹಾಳಾದ ಬಟ್ಟೆಯ ಸಂಗ್ರಹ’ - ‘ಆದಾಯ ತೆರಿಗೆಯ ಹೊರೆ ತೀರಿಸಲು ನಷ್ಟದಲ್ಲಿ ನಡೆಸುವ ವ್ಯಾಪಾರ’ - ‘ಪಾಲುದಾರರ ಬಾಕಿ ತೀರಿಸುವ ಒಂದೇ ದಾರಿ’ - ಎಂದೆಲ್ಲಾ ಹೇಳಿ ಶೇ. ೭೫ರ ಬೆಲೆ ಕಡಿತವೂ ಇದೆ ಎನ್ನುತ್ತಾರೆ. ಕೊಂಡ ಕಳಪೆ ಮಾಲಿನ ಬಗ್ಗೆ ದೂರುವ ಗಿರಾಕಿ ಬರುವ ಮೊದಲೇ ಊರನ್ನೂ ಬಿಟ್ಟಿರುತ್ತಾರೆ.

ಆದರೂ ಇವಳಿಗೆ ‘ಸೇಲ್’ ಖರೀದಿಯ ಅಭ್ಯಾಸ ಬಿಟ್ಟಿಲ್ಲ. ನಿಮಗೆ ಹೇಗೆ ? ಅಭ್ಯಾಸವೇನಾದರೂ ಇದೆಯಾ ?

“ ಇಲ್ಲಪ್ಪ - ನಾನು ಹಾಗೆಲ್ಲಾ ಹೋಗುವುದೇ ಇಲ್ಲ” ಎಂದ ಶ್ರೀಮತಿ ತ್ರಿಪಾಠಿಯವರ ಉತ್ತರ ಅರ್ಧಸತ್ಯವೆ ? ಇನ್ನೊಮ್ಮೆ ಕಂಡಾಗ ಅವರನ್ನೇ ಕೇಳಬೇಕು. (ಅದಕ್ಕೆ ಮೊದಲು ನಮ್ಮ ಗಂ. ಹೆಂ. ಜಗಳವೂ ಗುಟ್ಟಿನಲ್ಲಿ ರಾಜಿಯಾಗಬೇಕು).


-----------------

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.



ಶೀರ್ಷಿಕೆಯ ೧೯೯೦ರ ದಶಕದ ವರ್ಣಚಿತ್ರ:

ಮಂಗಳೂರು ನಗರದ ಮೂರನೆಯ ದೂರವಾಣಿ ಎಲೆಕ್ಟ್ರೋನಿಕ್ ವಿನಿಮಯ ಕೇಂದ್ರ - ಕಂಕನಾಡಿಯ "ತಾಂತ್ರಿಕ ವರ್ಗಾವಣೆ" ಕಾರ್ಯಾರಂಭದ ಸಂಕೇತವಾಗಿ ದೀಪ ಬೆಳಗಿಸಿದ ದಕ್ಷಿಣ ಕನ್ನಡ ದೂರವಾಣಿ ಸಲಹಾ ಸಮಿತಿಯ ಸದಸ್ಯ, ಮಂಗಳೂರು ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಶ್ರೀ ಪ.ಗೋಪಾಲಕೃಷ್ಣ ಜೊತೆ ದ.ಕ.ಟೆಲಿಕಾಂ ಜನರಲ್ ಮ್ಯಾನೇಜರ್ ಶ್ರೀ. ಕೆ. ರಾಮ ಮತ್ತು ದ.ಕ. ಟೆಲಿಕಾಂ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಟಿ. ಮಹಾಬಲ ಭಟ್ .

------

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-4481.html


Wednesday, April 1, 2009

೧೯೯೦ರ ದಶಕದ ಮಂಗಳೂರಿನ ಕಾರ್ಯನಿರತ ಪತ್ರಕರ್ತರು















ಮಂಗಳೂರಿನ ಭಾರತೀಯ ವಿದ್ಯಾಭವನ, ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರ ಜೊತೆಗಿರುವ ಯುವ ಪತ್ರಕರ್ತರೊಂದಿಗೆ "ದಿ ಹಿಂದೂ" ಪ್ರತಿನಿಧಿ ಶ್ರೀ. ಯು. ನರಸಿಂಹ ರಾವ್,ಪತ್ರಿಕಾ ಛಾಯಾಗ್ರಾಹಕ ಶ್ರೀ.ಯಜ್ಞ, ಮುಂಗಾರು ಪತ್ರಿಕೆಯ ಶ್ರೀ. ಚಿದಂಬರ ಬೈಕಂಪಾಡಿಯವರು. ಹಿಂದಿನ ಸಾಲಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಶ್ರೀ.ಪ.ಗೋಪಾಲಕೃಷ್ಣ, ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶ್ರೀ. ಎ.ವಿ.ಮಯ್ಯ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಪತ್ರಿಕೆಗಳ ಪ್ರತಿನಿಧಿ ಶ್ರೀ.ಎನ್. ಆರ್. ಉಭಯ, ಉದಯವಾಣಿ ವರದಿಗಾರ ಶ್ರೀ. ಎಮ್. ಮನೋಹರ ಪ್ರಸಾದ್, ಹೊಸದಿಗಂತ ವರದಿಗಾರರಾದ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ಮಂಗಳೂರಿನ ಪಿ.ಟಿ.ಐ. ಪ್ರತಿನಿಧಿ ಶ್ರೀ.ರಾಮಚಂದ್ರ ರಾವ್.


ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-3981.html

Visitors to this page